ಶ್ರೀರಂಗಪಟ್ಟಣದಲ್ಲಿ ಬಾಡೂಟ, ಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಓಟ!
ಸಿನಿಮಾ ಅಂದ್ಮೇಲೆ ಹಾಸ್ಯವಿರಬೇಕು. ಹಾಸ್ಯ ಹೇಗಿರಬೇಕು? ಎಷ್ಟು ಪ್ರಮಾಣದಲ್ಲಿರಬೇಕು? ಅದರ ಸ್ವರೂಪ ಯಾವ ರೀತಿ ಇರಬೇಕು? ಅನ್ನುವುದು ನಿರ್ದೇಶಕನಿಗೆ ಬಿಟ್ಟಿದ್ದು. ಡೈರೆಕ್ಟರ್ ಹಾಸ್ಯವನ್ನು ಯಾವುದೇ ರೂಪದಲ್ಲಿ ತೆರೆಮೇಲೆ ತಂದರೂ ಅದನ್ನು ನೋಡಿ ಇಷ್ಟ ಪಡೋದು ಪ್ರೇಕ್ಷಕರು ಮಾತ್ರ.
ಸ್ಯಾಂಡಲ್ವುಡ್ನಲ್ಲಿ 'ಪೆಟ್ರೋಮ್ಯಾಕ್ಸ್' ತಂಡ ಕೂಡ ಇಂತಹದ್ದೊಂದು ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿತ್ತು. ಹಾಸ್ಯವನ್ನು ಡಬಲ್ ಮೀನಿಂಗ್ ಡೈಲಾಗ್ ಬೆರೆಸಿ, ಪ್ರೇಕ್ಷಕರಿಗೆ ಬೋಲ್ಡ್ ಕಂಟೆಂಟ್ ಅನ್ನು ನೀಡುವುದಾಗಿತ್ತು. ಇದರ ಜೊತೆಗೆ ಚಿಕ್ಕದೊಂದು ಸಂದೇಶವನ್ನೂ ನೀಡಲು ನಿರ್ದೇಶಕ ವಿಜಯ್ ಪ್ರಸಾದ್ ಮುಂದಾಗಿದ್ದರು.
'ಪೆಟ್ರೋಮ್ಯಾಕ್ಸ್' ಟ್ರೈಲರ್ ಪ್ರೇಕ್ಷಕರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎನ್ನುವುದು ಥಿಯೇಟರ್ನಲ್ಲಿ ಗೊತ್ತಾಗುತ್ತಿದೆ. ಯಾಕಂದ್ರೆ, ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಸಂಭ್ರಮವನ್ನು ಪ್ರೇಕ್ಷಕರೊಂದಿಗೆ ಸವಿಯಲು ನೀನಾಸಂ ಸತೀಶ್, ವಿಜಯ್ ಪ್ರಸಾದ್ ಸೇರಿದಂತೆ ಅವರ ತಂಡ ಮಂಡ್ಯ, ಮೈಸೂರಿಗೆ ಪಯಣ ಬೆಳೆಸಿತ್ತು. ಅಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಮಂಡ್ಯದಿಂದ ಪೆಟ್ರೋಮ್ಯಾಕ್ಸ್
ನೀನಾಸಂ ಸತೀಶ್, ಹರಿಪ್ರಿಯಾ ಜೊತೆಯಾಗಿ ನಟಿಸಿದ 'ಪೆಟ್ರೋಮ್ಯಾಕ್ಸ್' ಸಿನಿಮಾ ಜುಲೈ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆದ ಮೂರು ದಿನನೇ ದಿನಕ್ಕೆ ಪೆಟ್ರೋಮ್ಯಾಕ್ಸ್ ತಂಡ ಮಂಡ್ಯ ಹಾಗೂ ಮೈಸೂರು ಕಡೆ ಪಯಣ ಬೆಳೆಸಿದೆ. ಥಿಯೇಟರ್ನಲ್ಲಿ ಪ್ರೇಕ್ಷಕರೊಂದಿಗೆ ಸಿನಿಮಾವನ್ನು ಎಂಜಾಯ್ ಮಾಡಿದೆ. ಮಾರ್ನಿಂಗ್ ಶೋ ಮಂಡ್ಯದ ಸಂಜಯ್ ಚಿತ್ರಮಂದಿರದಲ್ಲಿ ನೋಡಿದ ಬಳಿಕ ಮೈಸೂರು ಕಡೆ ಪಯಣ ಬೆಳೆಸಿತ್ತು.

ಶ್ರೀರಂಗಪಟ್ಟಣದಲ್ಲಿ ಬಾಡೂಟ
ಮಂಡ್ಯದ ಬಳಿಕ ಶ್ರೀರಂಗಪಟ್ಟಣ ಹಾಗೂ ಮೈಸೂರು ಕಡೆ ಪಯಣ ಬೆಳೆಸಿದ ಚಿತ್ರತಂಡ ಶ್ರೀರಂಗಪಟ್ಟಣದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದೆ. ನೀನಾಸಂ ಸತೀಶ್ ಜೊತೆ ನಿರ್ದೇಶಕ ವಿಜಯ್ ಪ್ರಸಾದ್, ಮದಗಜ ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಪೆಟ್ರೋಮ್ಯಾಕ್ಸ್ ನಿರ್ಮಾಪಕರಲ್ಲಿಒಬ್ಬರಾದ ಸುಧೀರ್ ಕೂಡ ಭರ್ಜರಿ ಬಾಡೂಟ ಮಾಡಿ ಮುಂದೆ ಸಾಗಿದ್ದಾರೆ. ಸಿನಿಮಾದ ಹಾಗೇ ಎಂಜಾಯ್ ಮಾಡುತ್ತಾ ಥಿಯೇಟರ್ ಟೂರ್ ಮುಂದುವರೆಸಿದೆ.

ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ
ಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿನ ಗಾಯತ್ರಿ ಚಿತ್ರಮಂದಿರಕ್ಕೆ ಇಡೀ ತಂಡ ಭೇಟಿ ನೀಡಿತ್ತು. ಈ ವೇಳೆ ಸಿನಿಮಾ ತುಂಬಿದ ಪ್ರದರ್ಶನ ಕಂಡಿದ್ದನ್ನು ನೋಡಿ ಖುಷಿ ಪಟ್ಟಿದ್ದಾರೆ. ಅಲ್ಲದೆ ನೀನಾಸಂ ಸತೀಶ್ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಪ್ರೇಕ್ಷಕರು ಮಳೆಯಲ್ಲೂ 'ಪೆಟ್ರೋಮ್ಯಾಕ್ಸ್' ಸಿನಿಮಾ ನೋಡಲು ಬಂದಿದ್ದು, ಚಿತ್ರತಂಡಕ್ಕೆ ಹೊಸ ಹುರುಪು ಸಿಕ್ಕಂತಾಗಿದೆ.

ನಿರ್ದೇಶಕರು ಹೇಳೋದೇನು?
ವಿಜಯ್ ಪ್ರಸಾದ್ ಡಬಲ್ ಮೀನಿಂಗ್ ಡೈಲಾಗ್ಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಾರೆ ಎಂಬ ಆರೋಪವಿದೆ. ಸಿನಿಮಾ ಬಿಡುಗಡೆಗೂ ಮುನ್ನ ಈ ಬಗ್ಗೆ ನಿರ್ದೇಶಕರು ಕ್ಲಾರಿಟಿ ನೀಡಿದ್ದರು. "ಪ್ರೇಕ್ಷಕರನ್ನು ರಂಜಿಸಲು ಹಾಸ್ಯವನ್ನೇ ಪ್ರಧಾನ ವಿಷಯವಾಗಿ ನೋಡುತ್ತೇನೆ. ಹಾಸ್ಯದ ಜೊತೆ ಸಾಮಾಜಿಕ ಸಮಸ್ಯೆಯನ್ನು ಬೆರೆಸುತ್ತೇನೆ. ತುಂಬಾನೇ ಬೋಲ್ಡ್ ಕಂಟೆಂಟ್ ಅನ್ನು ವಿರೋಧಿಸುವ ಜನರು ಥಿಯೇಟರ್ಗೆ ಬಂದ ಬಳಿಕ ತಮ್ಮ ಅಭಿಪ್ರಾಯ ಬದಲಿಸಿಕೊಳ್ಳುತ್ತಾರೆ." ಎಂದು ಹೇಳಿದ್ದರು.


Click it and Unblock the Notifications











