"ಪ್ರಮೋಷನ್ಗೆ ಬರಲು ಲಕ್ಷ ಲಕ್ಷ ಹಣ ಕೇಳ್ತಾರೆ"; ರವಿಶಂಕರ್ ವಿರುದ್ಧ ನಿರ್ಮಾಪಕನ ಗಂಭೀರ ಆರೋಪ
ಕನ್ನಡದ 'ನಾಟ್ ಔಟ್' ಸಿನಿಮಾ ತಂಡ ಪ್ರೇಕ್ಷಕರನ್ನು ಥಿಯೇಟರ್ಗೆ ಸೆಳೆಯುವುದಕ್ಕೆ ಹೊಸ ಪ್ರಯತ್ನ ಮಾಡಿತ್ತು. ಫಸ್ಟ್ ಹಾಸ್ ಉಚಿತವಾಗಿ ಸಿನಿಮಾ ನೋಡಿ, ಇಷ್ಟ ಆದರೆ, ಸೆಕೆಂಡ್ ಹಾಫ್ ದುಡ್ಡು ಕೊಡಿ ಅಂದಿತ್ತು. ಇದೇ ತಂಡದ ಕಾರ್ಯಕಾರಿ ನಿರ್ಮಾಪಕರೊಬ್ಬರು ಈಗ ಆ ಸಿನಿಮಾದಲ್ಲಿ ನಟಿಸಿರುವ ರವಿಶಂಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
'ನಾಟ್ ಔಟ್' ಸಿನಿಮಾದಲ್ಲಿ ರವಿಶಂಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೂ ಈ ಸಿನಿಮಾದ ಪ್ರಚಾರದ ಮೇಲೆ ಎಲ್ಲೂ ರವಿಶಂಕರ್ ಕಾಣಿಸಿಕೊಂಡಿಲ್ಲ ಅನ್ನೋದು ಚಿತ್ರತಂಡದ ಗಂಭೀರ ಆರೋಪ. ಅಸಲಿಗೆ ಏನಿದು ವಿವಾದ? ರವಿಶಂಕರ್ ಯಾಕೆ ಸಿನಿಮಾ ಪ್ರಚಾರಕ್ಕೆಬಂದಿಲ್ಲ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರವಿಶಂಕರ್ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ, ಪೋಷಕ ಕಲಾವಿದನಾಗಿ, ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಇದೂವರೆಗೂ ಯಾವುದೇ ಚಿತ್ರತಂಡದಿಂದ ಇಂತಹದ್ದೊಂದು ಗಂಭೀರ ಆರೋಪವನ್ನು ಎದುರಿಸಿಲ್ಲ. ಆದ್ರೀಗ ತಮ್ಮದೇ ಸಿನಿಮಾವನ್ನು ಪ್ರಚಾರ ಮಾಡುವುದಕ್ಕೆ ಲಕ್ಷ ಲಕ್ಷ ಹಣ ಕೇಳಿತ್ತಾರೆ ಎಂದು 'ನಾಟ್ಔಟ್' ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಎಚ್.ಕುಮಾರ್ ಆರೋಪಿಸಿದ್ದಾರೆ.
'ನಾಟ್ ಔಟ್' ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ನ ಸೆಲೆಬ್ರೆಟಿಗಳಿಗಾಗಿ ಪ್ರೀಮಿಯರ್ ಶೋವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಿನಿಮಾ ನೋಡಿದ ಸೆಲೆಬ್ರೆಟಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಸಂದರ್ಭದಲ್ಲಿ "ಆರ್ಟಿಸ್ಟ್ಗಳು ಲಕ್ಷಗಟ್ಟಲೆ ದುಡ್ಡು ಕೇಳ್ತಾರೆ. ಪ್ರಮೋಷನ್ಗೆ ಒಬ್ಬರೂ ಬರುವುದಿಲ್ಲ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕನ್ನಡ ಸಿನಿಮಾಗಳನ್ನು ನೋಡುವುದಕ್ಕೆ ಜನರು ಥಿಯೇಟರ್ಗೆ ಬರುತ್ತಿಲ್ಲ. ಒಳ್ಳೆಯ ಸಿನಿಮಾ ಮಾಡಿ ಅಂತಾರೆ. ಹಾಗಾಗಿ ಕಂಟೆಂಟ್ ಇರುವ ಸಿನಿಮಾವನ್ನು ಮಾಡಿದ್ದು, ಪ್ರೇಕ್ಷಕರು ಬಂದು ಸಿನಿಮಾ ನೋಡಬೇಕೆಂದು ಕಾರ್ಯಕಾರಿ ನಿರ್ಮಾಪಕ ಎಚ್ ಕುಮಾರ್ ಹೇಳಿದ್ದಾರೆ. "ಕನ್ನಡ ಸಿನಿಮಾ ಮಾಡಿ, ಒಳ್ಳೆಯ ಸಿನಿಮಾ ಮಾಡಿ ಅಂತಾರೆ. ಒಳ್ಳೆಯ ಸಿನಿಮಾ ಮಾಡಿದ್ದೀವಿ. ಜನ ಥಿಯೇಟರ್ಗೆ ಬಂದು ಸಿನಿಮಾ ನೋಡಿಲ್ಲ ಅಂತಾರೆ ಬಂದು ನೋಡಿ. ತುಂಬಾ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ" ಎಂದಿದ್ದಾರೆ.

ಇದೇ ವೇಳೆ ಕಲಾವಿದರು ಪ್ರಚಾರಕ್ಕೆ ಬರುವುದಿಲ್ಲ. ಕರೆದರೆ ಲಕ್ಷ ಲಕ್ಷ ಹಣ ಕೇಳುತ್ತಾರೆಂದು ಆರೋಪಿಸಿದ್ದಾರೆ. "ಆರ್ಟಿಸ್ಟ್ಗಳು ಲಕ್ಷಗಟ್ಟಲೆ ದುಡ್ಡು ಕೇಳ್ತಾರೆ. ಪ್ರಮೋಷನ್ಗೆ ಒಬ್ಬರೂ ಬರುವುದಿಲ್ಲ. ನಾನು ನಮ್ಮ ಬಾಸ್ (ನಿರ್ಮಾಪಕ) ಈಗ ಸಿನಿಮಾ ಮಾಡಬಾರದು ಅಂತ ನಿಲ್ಲಿಸಿಬಿಟ್ಟಿದ್ದೇವೆ." ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.
ಅದರಲ್ಲೂ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರವಿಶಂಕರ್ ವಿರುದ್ಧ ನೇರವಾಗಿ ಗಂಭೀರ ಆರೋಪ ಮಾಡಿದ್ದಾರೆ. "ರವಿಶಂಕರ್ ಸರ್ ಪ್ರಮೋಷನ್ಗೆ ಬಂದಿಲ್ಲ. ಟ್ರೈಲರ್ ಲಾಂಚ್ಗೆ ಬಂದಿಲ್ಲ. ಸೆಲೆಬ್ರೆಟಿ ಶೋಗೆ ಬಂದಿಲ್ಲ. ಎಲ್ಲಿಗೆ ಪ್ರಮೋಷನ್ಗೆ ಫೋನ್ ಮಾಡಿದರೂ ಬಂದಿಲ್ಲ. ಲಕ್ಷಗಟ್ಟಲೆ ದುಡ್ಡು ಕೇಳುತ್ತಾರೆ. ಇದು ನಿರ್ಮಾಪಕರ ಕರ್ಮ." ಎಂದು ಕಿಡಿಕಾರಿದ್ದಾರೆ.


Click it and Unblock the Notifications











