ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಅಣ್ಣಾವ್ರ ಬಗ್ಗೆ ಅವರ ತಂದೆ ನುಡಿದದ್ದು ಎಷ್ಟು ಸತ್ಯವಾಯಿತು
ವರನಟ ಡಾ.ರಾಜ್ಕುಮಾರ್ ಅವರ ಸಿನಿಮಾ, ಹಾಡು, ಚಿತ್ರಗಳ ಸಂಭಾಷಣೆ ಇಂದಿಗೂ ಪ್ರಸ್ತುತ. ಯಾಕೆಂದರೆ, ಅವರ ಕೆಲವೊಂದು ಸಿನಿಮಾಗಳು ನೀಡಿದ್ದ ಸಾಮಾಜಿಕ ಸಂದೇಶ.
Recommended Video
ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಿ ಗೌಡ ಮತ್ತು ಲಕ್ಷ್ಮಮ್ಮ ದಂಪತಿಗಳ ಮಗನಾದ ರಾಜ್ಕುಮಾರ್, ಹಲವು ವೇದಿಕೆಯಲ್ಲಿ ತಮ್ಮ ತಂದೆಯನ್ನು ನೆನೆಪಿಸಿಕೊಂಡಿದ್ದರು.
ರೌದ್ರ ಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಿ ಗೌಡ್ರು, ಗುಬ್ಬಿ ಕಂಪನಿ ಯಲ್ಲಿ ಕಲಾವಿದರಾಗಿದ್ದರು. ನನ್ನ ಜೀವನದಲ್ಲಿ ನನ್ನ ತಂದೆ ಬೀರಿರುವ ಪ್ರಭಾವ ಅಪಾರ ಎಂದು ಡಾ.ರಾಜ್ಕುಮಾರ್ ಹೇಳುತ್ತಿದ್ದರು.
ಡಾ.ರಾಜ್ ಒಮ್ಮೆ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಹೋಗಿದ್ದಾಗ, ನಡೆದ ವಿದ್ಯಮಾನವೊಂದನ್ನು ಖ್ಯಾತ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದು ಹೀಗೆ:

ಅಣ್ಣಾವ್ರು ಮತ್ತು ಅವರ ತಂದೆ ಪುಟ್ಟಸ್ವಾಮಯ್ಯ
ಅಣ್ಣಾವ್ರ ತಮ್ಮ ತಂದೆ ಪುಟ್ಟಸ್ವಾಮಯ್ಯ ಜೊತೆ ಮದರಾಸ್ ನಲ್ಲಿದ್ದರಂತೆ. ನಿರ್ಮಾಪಕರೊಬ್ಬರ ಬಳಿ, ಮಗನಿಗೆ ಸಿನಿಮಾದಲ್ಲಿ ಎಂಟ್ರಿ ಕೊಡಿಸಲು ಪುಟ್ಟಸ್ವಾಮಯ್ಯ, ರಾಜ್ ಅವರನ್ನು ಕರೆದುಕೊಂಡು ಹೋಗಿದ್ದರಂತೆ. ಅಲ್ಲಿಂದ, ಅವರು ತಿರುಪತಿ ವೆಂಕಟೇಶ್ವರಸ್ವಾಮಿಯ ದರ್ಶನಕ್ಕೆ ಹೋಗಿದ್ದರು.

ತಿಮ್ಮಪ್ಪನ ದರ್ಶನ ಮಾಡಿ ಹೊರಬರಬೇಕಾದರೆ
ತಿಮ್ಮಪ್ಪನ ದರ್ಶನ ಮಾಡಿ ಹೊರಬರಬೇಕಾದರೆ, ಭಕ್ತರ ದಟ್ಟಣೆ ವಿಪರೀತವಾಗಿತ್ತಂತೆ. ಆಗ, ಪುಟ್ಟಸ್ವಾಮಯ್ಯ, "ಏ ಮುತ್ತಪ್ಪ (ಆಗ ಇನ್ನೂ ರಾಜ್ಕುಮಾರ್ ಆಗಿರಲಿಲ್ಲ) ಬಾ ಇಲ್ಲಿ.. ದರ್ಶನ ಮಾಡಿಕೊಂಡು ಬಂದು ಈ ಮಾತು ಹೇಳುತ್ತಿದ್ದೇನೆ, ಬರೆದಿಟ್ಟುಕೋ ಇದನ್ನಾ.."

ನಿನ್ನ ನೋಡೋಕೆ ಇದೇ ರೀತಿ ಜನ ಬರುತ್ತಾರೆ
"ತಿಮ್ಮಪ್ಪನನ್ನು ನೋಡಲು ಜನಸ್ತೋಮ ಹರಿದು ಬರುತ್ತಿದೆಯೋ, ಅದೇ ರೀತಿ..ಒಂದಲ್ಲಾ ಒಂದು ದಿವಸ, ನಿನ್ನ ನೋಡೋಕೆ ಇದೇ ರೀತಿ ಜನ ಬರುತ್ತಾರೆ ಕಣಯ್ಯಾ" ಎಂದು ದೇವಸ್ಥಾನದ ಸನ್ನಿಧಿಯಲ್ಲೇ ಪುಟ್ಟಸ್ವಾಮಯ್ಯ, ರಾಜ್ ಕುಮಾರ್ ಬಗ್ಗೆ ಹೇಳಿದ್ದ ಮಾತನ್ನು ಚಿನ್ನೇಗೌಡ್ರು ಸ್ಮರಿಸಿಕೊಂಡಿದ್ದಾರೆ.

ನಾನು ನಿನ್ನ ಯಶಸ್ಸನ್ನು ನೋಡುತ್ತೀನೋ ಇಲ್ಲವೋ ಗೊತ್ತಿಲ್ಲ
"ನಾನು ನಿನ್ನ ಯಶಸ್ಸನ್ನು ನೋಡುತ್ತೀನೋ ಇಲ್ಲವೋ ಗೊತ್ತಿಲ್ಲ"ಎಂದು ಪುಟ್ಟಸ್ವಾಮಯ್ಯ ಹೇಳಿದ್ದರು. ಏನು ದೂರದೃಷ್ಟಿ ಇಟ್ಟುಕೊಂಡು ಅವರು ಈ ಮಾತನ್ನು ಹೇಳಿರಬಹುದು ಎನ್ನುವುದಕ್ಕೆ ಅಣ್ಣಾವ್ರ ಮುಂದಿನ ಸಿನಿಮಾ ಜೀವನವೇ ಸಾಕ್ಷಿ ಎಂದು ಚಿನ್ನೇಗೌಡ್ರು ಹೇಳಿದ್ದರು.


Click it and Unblock the Notifications











