'ಮಠ' ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಮಿಸ್ಸಿಂಗ್: ಕರೆದರೂ ಬರಲಿಲ್ಲವೇಕೆ?
ಸುಮಾರು 16 ವರ್ಷಗಳ ಹಿಂದೆ ನವರಸ ನಾಯಕ ಜಗ್ಗೇಶ್ ಅಭಿನಯದ 100ನೇ ಸಿನಿಮಾ ರಿಲೀಸ್ ಆಗಿತ್ತು. ಗುರುಪ್ರಸಾದ್ ನಿರ್ದೇಶಿಸಿದ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಕೊಟ್ಟ ಸಿನಿಮಾ. ಜಗ್ಗೇಶ್ ಮೀಸೆ ತೆಗೆದು ಹೊಸ ಲುಕ್ನಲ್ಲಿ ತೆರೆಮೇಲೆ ಕಂಡಿದ್ದ ಸಿನಿಮಾ ಗಳಿಕೆಯಲ್ಲಿಯೂ ಮೇಲುಗೈ ಸಾಧಿಸಿತ್ತು. ಈಗ 16 ವರ್ಷಗಳ ಬಳಿಕ ಮತ್ತೆ ಇದೇ 'ಮಠ' ಅನ್ನುವ ಟೈಟಲ್ ಇಟ್ಟುಕೊಂಡು ಮತ್ತೊಂದು ಸಿನಿಮಾ ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ, ಜಗ್ಗೇಶ್ ಮಾತ್ರ ಮಿಸ್ಸಿಂಗ್.
ಗುರು ಪ್ರಸಾದ್ ನಿರ್ದೇಶನ. ಜಗ್ಗೇಶ್ ಮ್ಯಾನರಿಸಂ. ಇವೆರಡೂ ಸೇರಿ ಹೊಸ ಟ್ರೆಂಡ್ ಸೃಷ್ಟಿಯಾಗಿತ್ತು. ಜಗ್ಗೇಶ್ ಹಾಗೂ ಗುರು ಪ್ರಸಾದ್ ಜುಗಲ್ಬಂದಿಯ ಈ ಚಿತ್ರ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿತ್ತು. ಇದೀಗ ಮತ್ತೆ 'ಮಠ' ಟೈಟಲ್ ಇಟ್ಟುಕೊಂಡ ಸಿನಿಮಾ ಬರುತ್ತಿದೆ. ವಿಶೇಷ ಅಂದರೆ, ಹಳೆ 'ಮಠ' ಚಿತ್ರದಲ್ಲಿದ್ದ ಪಾತ್ರಗಳೇ ಇಲ್ಲೂ ಕಾಣಿಸಿಕೊಂಡಿವೆ. ಹಾಗಂತ ಹಳೇ 'ಮಠ'ಗೂ, ಹೊಸ 'ಮಠ'ಗೂ ಸಂಬಂಧವಿಲ್ಲ.
ಯುವ ನಿರ್ದೇಶಕ ರವೀಂದ್ರ ವೆಂಶಿ ನಿರ್ದೇಶಿಸಿದ ಹೊಸ 'ಮಠ'ದಲ್ಲಿ ಹಾಸ್ಯಕಲಾವಿದರ ದಂಡೇ ಇದೆ. 25 ಜಿಲ್ಲೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾ ಸತ್ಯ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗಿದೆ. ಕಾಮಿಡಿ ಜೊತೆಗೆ ಸತ್ಯ ಘಟನೆಯಾಧಾರಿತ 'ಮಠ' ಸಿನಿಮಾದಲ್ಲಿ ಬರೋಬ್ಬರಿ 82 ಜನ ಕಲಾವಿದರು ನಟಿಸಿದ್ದಾರೆ. ಈ ಚಿತ್ರದಲ್ಲಿ ಗುರು ಪ್ರಸಾದ್, ತಬಲನಾಣಿ, ಮಂಡ್ಯ ರಮೇಶ್, ಬಿರಾದಾರ್ ಸೇರಿದಂತೆ ಹಾಸ್ಯಕಲಾವಿದರ ದಂಡೇ ಇದೆ. ಆದರೆ, ಜಗ್ಗೇಶ್ ಮಾತ್ರ ಮಿಸ್ಸಿಂಗ್ ಯಾಕೆ?

ಹೊಸ 'ಮಠ'ದಲ್ಲಿ ಜಗ್ಗೇಶ್ ಯಾಕಿಲ್ಲ
ಹೊಸ 'ಮಠ' ಸಿನಿಮಾವನ್ನು ಸುಮಾರು 3 ವರ್ಷಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕೊನೆಗೂ ಸಿನಿಮಾ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ. ಈ ಮಧ್ಯೆ 2006ರಲ್ಲಿದ್ದ 'ಮಠ' ಸಿನಿಮಾದ ಎಲ್ಲಾ ಪಾತ್ರಗಳೂ ಇವೆ. ಆದರೆ, ನವರಸ ನಾಯಕ ಜಗ್ಗೇಶ್ ಮಾತ್ರ ಕಾಣಿಸುತ್ತಿಲ್ಲ. ಅಷ್ಟಕ್ಕೂ 'ಮಠ' ಸಿನಿಮಾದಲ್ಲಿ ಜಗ್ಗೇಶ್ ಇರದೆ ಹೋದರೆ ಹೇಗೆ? ಊಹಿಸಿಕೊಳ್ಳುವುದಕ್ಕೂ ಅಸಾಧ್ಯ. ಆದರೆ, ಹೊಸ ಮಠ ಸಿನಿಮಾದ ನಿರ್ದೇಶಕ ರವೀಂದ್ರ ವೆಂಶಿ ನವರಸ ನಾಯಕ ಸಿನಿಮಾದಲ್ಲಿ ಯಾಕಿಲ್ಲ ಅನ್ನುವುದನ್ನು ರಿವೀಲ್ ಮಾಡಿದ್ದಾರೆ. "ಇದು ಸದ್ಯ ಘಟನೆಗಳನ್ನು ಆಧರಿಸಿದ ಸಿನಿಮಾ. ಹೀಗಾಗಿ ಜಗ್ಗೇಶ್ ಅವರಿಗೆ ಹೊಂದಿಕೊಳ್ಳುವಂತಹ ಪಾತ್ರ ಇರಲಿಲ್ಲ. ಅದಾಗಿಯೂ ಅವರನ್ನು ಕರೆತರುವ ಪ್ರಯತ್ನ ಮಾಡಿದ್ದೆವು. ಅವರು ಒಪ್ಪಿಕೊಳ್ಳಲಿಲ್ಲ." ಎಂದು ಫಿಲ್ಮಿಬೀಟ್ಗೆ ತಿಳಿಸಿದ್ದಾರೆ.

ಕರೆದರೂ ಬರಲಿಲ್ಲವೇಕೆ ಜಗ್ಗೇಶ್?
"ನವರಸ ನಾಯಕ ಜಗ್ಗೇಶ್ ಇದ್ದಿದ್ದರೆ, ಇನ್ನೊಂದಿಷ್ಟು ಕಾಮಿಡಿ ಇರುತ್ತಿತ್ತು ಅಂತ ಊಹೆ ಮಾಡಬಹುದು. ಜಗ್ಗೇಶ್ ಅವರಿಗೆ ಹೊಂದಿಕೊಳ್ಳುವ ಪಾತ್ರವಿರಲಿಲ್ಲ. ಆದರೂ, ಅವರನ್ನು ನಮ್ಮ ಸಿನಿಮಾಗೆ ಕರೆದುಕೊಂಡು ಬರಬೇಕು ಎಂದು ಅಂದುಕೊಂಡೆವು. ಹೀಗಾಗಿ ಹಾಡೊಂದರಲ್ಲಿ ನಟಿಸುವಂತೆ ಕೇಳಿಕೊಂಡೆವು. ಆದರೆ ಅವರು ಅಗ್ರಿಮೆಂಟ್ ಆಗಿದೆ. ಹಾಡಿನಲ್ಲಿ ನಾನು ನಟಿಸುವಂತಿಲ್ಲ ಎಂದು ಹೇಳಿದರು." ಈ ಕಾರಣಕ್ಕೆ ಜಗ್ಗೇಶ್ ಅವರು ಈ ಸಿನಿಮಾದಲ್ಲಿ ಕಾಣಿಸುವುದಿಲ್ಲ ಎನ್ನುತ್ತಾರೆ ನಿರ್ದೇಶಕರು.

'ಮಠ' ಟೈಟಲ್ ಸಿಕ್ಕಿದ್ದೇಗೆ?
'ಮಠ' ಅನ್ನುವುದು ಎವರ್ಗ್ರೀನ್ ಸಿನಿಮಾ. ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾವಿದು. ಆದರೂ ಇದೇ ಟೈಟಲ್ ಯಾಕೆ ಬೇಕಿತ್ತು? ಅಷ್ಟಕ್ಕೂ ಈ ಬೇಡಿಕೆಯ ಟೈಟಲ್ ಸಿಕ್ಕಿದ್ದೇಗೆ? ಅನ್ನುವ ಪ್ರಶ್ನೆಗೆ ನಿರ್ದೇಶಕರು ಉತ್ತರ ನೀಡಿದ್ದಾರೆ. " ರಿಯಲ್ ಮಠಗಳನ್ನು ಆಧರಿಸಿ ಮಾಡಿದ ಸಿನಿಮಾವಿದು. ಈ ಕಾರಣಕ್ಕೆ ಗುರುಪ್ರಸಾದ್ ಅವರಿಗೆ ಕೇಳಿದ್ದೆವು. ಅವರು ಓಕೆ ಎಂದರು. ಬಳಿಕ ಫಿಲ್ಮ್ ಚೇಂಬರ್ನಲ್ಲೂ ಈ ಟೈಟಲ್ ನಮ್ಮ ಅದೃಷ್ಟಕ್ಕೆ ಇತ್ತು. ಒಂದು ಸಿನಿಮಾಗೆ ಇಟ್ಟ ಟೈಟಲ್ ಅನ್ನು 10 ವರ್ಷಗಳ ಬಳಿಕ ಮರು ಬಳಕೆ ಮಾಡಬಹುದು ಅಂತಿದೆ. ಹಳೆ ಸಿನಿಮಾ ಬಂದು 16 ವರ್ಷ ಆಗಿದೆ. ಹೀಗಾಗಿ ಆರಾಮಾಗಿ ಟೈಟಲ್ ಸಿಕ್ಕಿತು." ಅಂತ ನಿರ್ದೇಶಕ ರವೀಂದ್ರ ವೆಂಶಿ ಹೇಳಿದ್ದಾರೆ.

ದಾಖಲೆಗಳನ್ನಿಟ್ಟು ಮಾಡಿದ ಸಿನಿಮಾ
"ಈ ಸಿನಿಮಾದಲ್ಲಿ ಸುಮಾರು 25 ರಿಂದ 30 ಮಂದಿ ಸ್ವಾಮೀಜಿಗಳು ಬರುತ್ತಾರೆ. ಅವರೆಲ್ಲರ ಪಾತ್ರಗಳೂ ಕೂಡ ರಿಯಲ್ ಲೈಫ್ಗೆ ಸಂಬಂಧಿಸಿದ ಪಾತ್ರಗಳೇ ಆಗಿವೆ. ಮುಂದೆ ವಿವಾದಗಳಾದರೂ, ನಮ್ಮ ಬಳಿ ದಾಖಲಾತಿಗಳಿವೆ. ಕಾಂಟ್ರವರ್ಸಿ ಆದರೂ, ನಮ್ಮ ಬಳಿ ಅವರು ಮಾಡಿದ ಹಗರಣಗಳ ಬಗ್ಗೆ ದಾಖಲೆಗಳಿವೆ. ಆದರೆ, ಈ ಸಿನಿಮಾದಲ್ಲಿ ಒಳ್ಳೆಯ ಮಠಾಧೀಶರು ಹಾಗೂ ಕೆಟ್ಟ ಮಠಾಧೀಶರು ಇಬ್ಬರನ್ನೂ ತೋರಿಸಿದ್ದೇವೆ. ಜನರು ಎಲ್ಲವನ್ನೂ ಡಿಸೈಡ್ ಮಾಡುತ್ತಾರೆ." ಅಂತಾರೆ ರವೀಂದ್ರ ವೆಂಶಿ ಹೇಳಿದ್ದಾರೆ.


Click it and Unblock the Notifications











