'ಭೀಮಾ ತೀರದಲ್ಲಿ' ಸಿನಿಮಾವನ್ನು ಈವಾಗ ಮಾಡಿದ್ರೆ ದರ್ಶನ್ ಕೈಯಲ್ಲಿ ಮಾಡಿಸ್ತಿದ್ದೆ"; ಓಂ ಪ್ರಕಾಶ್ ರಾವ್
2012ರಲ್ಲಿ ಕನ್ನಡದಲ್ಲಿ ತೆರೆಕಂಡ ವಿವಾದಾತ್ಮಕ ಸಿನಿಮಾ 'ಭೀಮಾ ತೀರದಲ್ಲಿ. ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ದುನಿಯಾ ವಿಜಯ್ಗೆ ಪ್ರಣೀತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆ ಬಳಿಕ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.
ಜನಪ್ರಿಯ ಲೇಖಕ, ಪತ್ರಕರ್ತರಾಗಿದ್ದ ರವಿ ಬೆಳಗರೆ ಬರೆದ 'ಭೀಮಾ ತೀರದಲ್ಲಿ' ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ವಿವಾದ ಎದ್ದಿತ್ತು. ಹೀಗಾಗಿ ರವಿಬೆಳಗರೆ ಹಾಗೂ ಭೀಮಾ ತೀರದಲ್ಲಿ ತಂಡದೊಂದಿಗೆ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಆ ಸಿನಿಮಾ ಈಗ ಮತ್ತೆ ಮರು ಬಿಡುಗೆಯಾಗುತ್ತಿದೆ.

ಈ ವೇಳೆ ಓಂ ಪ್ರಕಾಶ್ ರಾವ್ ಕೆಲವು ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ಹಾಗೂ ರವಿಬೆಳಗರೆ ನಡುವಿನ ವೈಮನಸ್ಸಿನ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ, ಈಗ 'ಭೀಮಾ ತೀರದಲ್ಲಿ' ಸಿನಿಮಾವನ್ನು ಮಾಡಿದ್ದರೆ, ದರ್ಶನ್ ಜೊತೆ ಮಾಡುತ್ತಿದ್ದೆ ಎಂದಿದ್ದಾರೆ. ಅವರ ಮಾತಿನ ಝಲಕ್ ಇಲ್ಲಿದೆ.
"ಅವರು ಇವತ್ತು ನಮ್ಮ ಜೊತೆಯಲ್ಲಿ ಇಲ್ಲ. ಅವರು ಗುರುಗಳು ನನಗೆ. ಅವರೊಂದಿಗೆ ನಾನು ತುಂಬಾನೇ ಒಡನಾಟವನ್ನು ಇಟ್ಟುಕೊಂಡಿದ್ದೇನೆ. ಅವರ ಭಾಷೆಗೆ ನಾನು ತುಂಬಾನೇ ದೊಡ್ಡ ಅಭಿಮಾನಿ. ಅವರಿಗೂ ಗೊತ್ತಿತ್ತು. ನಾನು ಅವರು ಸಣ್ಣ-ಪುಟ್ಟ ಜಗಳಗಳನ್ನು ಆಡಿದ್ದೀವಿ. ನಾನೇ ಹುಚ್ಚ ಅಂದುಕೊಂಡಿದ್ದೆ ಕಣೋ.. ನಿನ್ನ ನೋಡಿದ ಮೇಲೆ ಇನ್ನೊಬ್ಬ ಹುಚ್ಚ ಇದ್ದಾನೆ ಅಂತ ಗೊತ್ತಾಗಿದ್ದು. ಜೊತೆಯಲ್ಲಿ ಮುತ್ತಪ್ಪ ರೈ ಸರ್ ಮನೆಗೆ ಊಟಕ್ಕೆ ಹೋಗುತ್ತಿದ್ವಿ. ಬಹಳಷ್ಟು ಬಾರಿ 3 ಗಂಟೆವರೆಗೂ ಅವರ ಜೊತೆಗೆ ಇದ್ದು, ಮನೆವರೆಗೂ ಬಿಟ್ಟು ಹೋಗುತ್ತಿದ್ದೆ. ನಮ್ಮ ತಂದೆಯನ್ನೂ ಯಾವ ಜಾಗದಲ್ಲಿ ನೋಡುವುದಕ್ಕೆ ಇಷ್ಟ ಪಡುತ್ತೇನೆ ವಿನ: ಕೆಲಸ ಅಂತ ಬಂದಾಗ ಹತ್ತಿರ ತೆಗೆದುಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಕೆಲಸಕ್ಕೆ ಗೌರವ ಕೊಡುತ್ತೇನೆ. ಅದರಲ್ಲಿ ಸಣ್ಣ ಪುಟ್ಟ ಮಾತಾಗಿರಬಹುದು. ಅವರ ಬರವಣಿಗೆಗೆ ಒಬ್ಬ ಅಭಿಮಾನಿ ಅಂತ ಹೇಳುವುದಕ್ಕೆ ತುಂಬಾನೇ ಸಂತೋಷ ಆಗುತ್ತೆ. ಅದೊಂದು ಸಣ್ಣ ಘಟನೆ.. ಹೀಗೆ ಬಂದು ತೇಲಿಕೊಂಡು ಹೋಯ್ತು ಅಷ್ಟೇ." ಎಂದಿದ್ದಾರೆ.
ಆ ಸಂದರ್ಭದಲ್ಲಿ ದುನಿಯಾ ವಿಜಯ್ ಅವರನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ರಿ. ಈ ಸಂದರ್ಭದಲ್ಲಿ ಸಿನಿಮಾ ಮಾಡೋದಾಗಿದ್ದರೆ, ಯಾರನ್ನು ಹಾಕೊಂಡು ಸಿನಿಮಾ ಮಾಡುತ್ತೀರಾ? ಎಂದು ಪ್ರಶ್ನೆ ಮಾಧ್ಯಮದವರು ಹೇಳಿದ್ದರು. ಅದಕ್ಕೆ ಓಂ ಪ್ರಕಾಶ್ ರಾವ್ ಕೊಟ್ಟ ಉತ್ತರ ಹೀಗಿದೆ. "ದರ್ಶನ್ ಅವರ ಕೈಯಲ್ಲಿ ಮಾಡಿಸುತ್ತಿದ್ದೆ. ದರ್ಶನ್ ಅವರೊಂದಿಗೆ ಖಂಡಿತಾ ಸಿನಿಮಾ ಮಾಡುತ್ತಿದ್ದೆ" ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.

ಇನ್ನು 'ಭೀಮಾ ತೀರದಲ್ಲಿ' ಸಿನಿಮಾದ ಪ್ರಚಾರಕ್ಕೆ ದುನಿಯಾ ವಿಜಯ್ ಯಾಕೆ ಬಂದಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಾನು ದುನಿಯಾ ವಿಜಯ್ ಅವರನ್ನು ಕರಿಯಿರಿ ಎಂದು ಹೇಳಿದ್ದೆ. ಇವರಿಬ್ಬರು (ಅಣಜಿ ನಾಗರಾಜ್-ದುನಿಯಾ ವಿಜಯ್) ಏನು ಮಾತಾಡಿಕೊಂಡಿದ್ದಾರೋ ಗೊತ್ತಿಲ್ಲ. ಬೇಡ ಬಿಡು ನೀನು ಎಂದು ಹೇಳಿದ್ದಾರೋ ಏನೋ ಗೊತ್ತಿಲ್ಲ. ಅವರಿಬ್ಬರು ಕಲಾವಿದರನ್ನು ಕರೀ ಅಂತ ಅಣಜಿಗೆ ಹೇಳಿದ್ದೆ. ಅದೇನಾಗಿದೆಯೋ ಗೊತ್ತಿಲ್ಲ. ಡೈಲಾಗ್ ರೈಟರ್ ಎಂ ಎಸ್ ರಮೇಶ್ ಅವರನ್ನೂ ಕರೆಸು ಅಂತಾನೂ ಹೇಳಿದ್ದೆ. ಸಿನಿಮಾದಲ್ಲಿ ತುಂಬಾನೆ ಒಳ್ಳೆಯ ಡೈಲಾಗ್ ಬರೆದಿದ್ದಾರೆ." ಎಂದಿದ್ದಾರೆ.
ಹಾಗೇ 'ಭೀಮಾ ತೀರದಲ್ಲಿ' ರಿಲೀಸ್ ಬಗ್ಗೆನೂ ಮಾತಾಡಿದ್ದಾರೆ. "ಕೆಲವು ಸಲ ನಾವು ಸಿನಿಮಾ ಮಾಡಿದವರೇ ಯಾವುದಾದರೂ ಓಡದೇ ಇರುವ ಸಮಯದಲ್ಲಿ ನಮ್ಮ ಹಳೆಯ ಸಿನಿಮಾ ಹಾಕಿಕೊಂಡು ನೋಡಿದಾಗ ಏನೋ ಒಂಥರಾ ಚೆನ್ನಾಗಿ ಕಾಣಿಸುತ್ತೆ. ಚೆನ್ನಾಗಿದೆಯಲ್ಲ ಒಳ್ಳೆಯ ಕತೆ ಅಲ್ವಾ? ಆ ಟೈಮ್ನಲ್ಲಿ ಇವೆಲ್ಲ ಸಿಗ್ತಲ್ಲ ಅಂತ. ಕೆಲವೊಮ್ಮೆ ರಿ-ರಿಲೀಸ್ ತುಂಬಾನೇ ಸಿನಿಮಾ ಮಾಡಿದ್ದಾರೆ. ಥಿಯೇಟರ್ನಲ್ಲಿಯೂ ಒಳ್ಳೆಯ ಪ್ರಶಂಸೆ ಸಿಕ್ಕಿದೆ. ಅದನ್ನು ಮುಂದಿಟ್ಟುಕೊಂಡು ಅಣಜಿ ನಾಗರಾಜ್ ಅವರು ಆ ತೀರ್ಮಾನ ತೆಗೆದುಕೊಂಡಿದ್ದಾರೆ. ನಾನು ಮಾಡಿರೋ ಸಿನಿಮಾಗಳಲ್ಲಿ, ಅವರು ನಿರ್ಮಾಣ ಮಾಡಿರೋ ಸಿನಿಮಾಗಳಲ್ಲಿ ಇದೊಂದು ಅತ್ಯುತ್ತಮವಾದ ಸಿನಿಮಾ." ಎಂದು ಹೇಳಿದ್ದಾರೆ.


Click it and Unblock the Notifications











