ಓಮೈಕ್ರಾನ್ ಆತಂಕ ಹೊಸ ನಿಯಮಾವಳಿ ಜಾರಿಗೆ ತಂದ ಕರ್ನಾಟಕ ಸರ್ಕಾರ: ಥಿಯೇಟರ್ಗಳ ಕಥೆಯೇನು?
ಕರ್ನಾಟಕದಲ್ಲಿ ಹೊಸದಾಗಿ 7 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಹೊಸ ಕೊವಿಡ್ ನಿಯಮಾವಳಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರಗಳಿಗೆ ಓಮೈಕ್ರಾನ್ ತಡೆಯಲು ಅಗತ್ಯ ಕ್ರಮಗಳನ್ನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ರಾಜ್ಯ ಭಾನುವಾರ (ಡಿಸೆಂಬರ್ 26) ಕೋವಿಡ್ ನಿಯಮಗಳನ್ನು ಜಾರಿಗೆ ಗೊಳಿಸಿದೆ.
ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಕೊವಿಡ್ ನಿಯಮಾವಳಿಯಲ್ಲಿ ನೈಟ್ ಕರ್ಫ್ಯೂವನ್ನು ಜಾರಿಗೆ ತರಲಾಗಿದೆ. ಡಿಸೆಂಬರ್ 28 ರಿಂದ ಜನವರಿ 7ರವರೆಗೆ 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತೆ ಎಂದು ತಿಳಿಸಲಾಗಿದೆ. ಅಲ್ಲದೆ, ಹೊಸ ವರ್ಷದ ಸೆಲೆಬ್ರೆಷನ್ ವೇಳೆ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಎಂಜಿ ರಸ್ತೆ ಹಾಗೂ ಬ್ರಿಗೆಡ್ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮ ಇಲ್ಲ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಕನ್ನಡ ಚಿತ್ರರಂಗಕ್ಕೆ ಆತಂಕ ಶುರುವಾಗಿದ್ದು, ಬಿಡುಗಡೆಯಾಗುತ್ತಿರುವ ಸಿನಿಮಾಗಳಿಗೆ ಆತಂಕ ಶುರುವಾಗಿದೆ. ರಾಜ್ಯ ಸರ್ಕಾರ ಕೊರೊನಾ ನಿಯಮಾವಳಿಯಲ್ಲಿ ಚಿತ್ರಮಂದಿರಕ್ಕೆ ಯಾವ ನಿಯಮ ವಿಧಿಸಲಾಗಿದೆ? ಎಂಬುದನ್ನು ತಿಳಿಯಲು ಮುಂದೆ ಓದಿ.

ಹೊಟೇಲ್, ಪಬ್ಗಳಿಗೆ ಶೇ.50ರಷ್ಟು ನಿರ್ಬಂಧ
ರಾಜ್ಯ ಸರ್ಕಾರ ಘೋಷಣೆ ಮಾಡಿದ ಹೊಸ ಗೈಡ್ಲೈನ್ಸ್ನಲ್ಲಿ ಹೊಟೇಲ್ಗಳು, ರೆಸ್ಟೋರೆಂಟ್ಗಳು, ಪಬ್ಗಳು, ಕ್ಲಬ್ಗಳು ಕೇವಲ ಶೇ.50 ರಷ್ಟು ಗ್ರಾಹಕರನ್ನು ಮಾತ್ರ ಒಳಗೆ ಬಿಟ್ಟುಕೊಳ್ಳಬೇಕು ಎಂದು ತಿಳಿಸಲಾಗಿದೆ. ಡಿಸೆಂಬರ್ 30 ರಿಂದ ಜನವರಿ 02ನೇ ತಾರೀಕಿನವರೆಗೂ ಈ ನಿಯಮ ಜಾರಿಯಲ್ಲಿ ಇರುತ್ತದೆ. ಹೊಸ ಗೈಡ್ಲೈನ್ ಬರುತ್ತಿದ್ದಂತೆ ಸಿನಿಮಾ ಮಂದಿರಗಳಿಗೂ ನಿಯಮಗಳನ್ನು ವಿಧಿಸಿರಬಹುದಾ? ಎಂಬ ಆತಂಕದಲ್ಲಿ ಇಡೀ ಚಿತ್ರರಂಗವಿದೆ.

ಚಿತ್ರಮಂದಿರಕ್ಕೆ ನಿರ್ಬಂಧವಿಲ್ಲ
ಹೊಟೇಲ್, ಪಬ್ ಹಾಗೂ ಕ್ಲಬ್ಗಳಿಗೆ ಶೇ.50ರಷ್ಟು ನಿರ್ಬಂಧ ವಿಧಿಸಲಾಗಿದೆ. ಚಿತ್ರಮಂದಿರಗಳಿಗೂ ಶೇ.50ರಷ್ಟು ಸೀಟು ಭರ್ತಿ ಬಗ್ಗೆ ಪ್ರಸ್ತಾಪ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚಿತ್ರಮಂದಿರದ ಬಗ್ಗೆ ಸರ್ಕಾರ ತನ್ನ ನಿಯಮಾವಳಿಯಲ್ಲಿ ಏನನ್ನೂ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ನಿಟ್ಟುಸಿರು ಬಿಟ್ಟಿದೆ. ಮುಂದಿನ ವಾರ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿದ್ದು, ನಿರ್ಮಾಪಕರಿಗೆ ಆತಂಕ ಹೆಚ್ಚಾಗಿತ್ತು.

ಸಿನಿಮಾಗಳಿಗೆ ನೈಟ್ ಕರ್ಪ್ಯೂ ಆತಂಕ
2021ರ ಕೊನೆಯ ತಿಂಗಳಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿವೆ. ಇನ್ನೊಂದು ಕಡೆ ಹೊಸ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡಲು ಕಾದು ಕೂತಿವೆ. ಈ ವೇಳೆ ಒಮಿಕ್ರಾನ್ ಆತಂಕ ಹೆಚ್ಚಾಗಿದ್ದು, ಸಿನಿಮಾ ಮಂದಿ ಕೂಡ ದೊಡ್ಡ ಗೊಂದಲದಲ್ಲಿ ಇದ್ದಾರೆ. ಈಗಾಗಲೇ ನೈಟ್ ಕರ್ಪ್ಯೂ ಬಗ್ಗೆ ಪ್ರಸ್ತಾಪ ಮಾಡಿದ್ದರಿಂದ, ಅನಿವಾರ್ಯವಾಗಿ ನೈಟ್ ಶೋಗಳನ್ನು ಕ್ಯಾನ್ಸಲ್ ಮಾಡಲೇ ಬೇಕಾಗಿದೆ. ಡಿಸೆಂಬರ್ 28 ರಿಂದ 10 ದಿನಗಳ ಕಾಲ ನೈಟ್ ಶೋಗಳು ಕ್ಯಾನ್ಸಲ್ ಆಗಬೇಕಿದೆ. ಈ ಬಗ್ಗೆ ಚಿತ್ರರಂಗ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನುವುದನ್ನ ನೋಡಬೇಕಿದೆ.

ಗೊಂದಲದಲ್ಲಿ ಕನ್ನಡ ಚಿತ್ರರಂಗ
ರಾಜ್ಯ ಸರ್ಕಾರ ಹೊಸ ಕೊವಿಡ್ ನಿಯಾಮಾವಳಿಯನ್ನು ಬಿಡುಗಡೆ ಮಾಡುತ್ತಿದ್ದಂತೆ ಚಿತ್ರರಂಗ ಸಹಜವಾಗಿಯೇ ಗೊಂದಲಕ್ಕೆ ಬಿದ್ದಿದೆ. ಈಗಾಗಲೇ ಎರಡು ಕನ್ನಡ ಸಿನಿಮಾಗಳು ಬಡವ ರಾಸ್ಕಲ್ ಹಾಗೂ ರೈಡರ್ ಬಿಡುಗಡೆಯಾಗಿವೆ. ಚಿತ್ರಮಂದಿರದಲ್ಲಿ ಈ ಎರಡೂ ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿವೆ. ಇನ್ನು ಡಿಸೆಂಬರ್ 31ರಂದು ರಚಿತಾ ರಾಮ್ ಹಾಗೂ ಅಜಯ್ ರಾವ್ ನಟನೆಯ 'ಲವ್ ಯು ರಚ್ಚು', ದಿವಂಗತ ರಾಮು ನಿರ್ಮಾಣದ 'ಅರ್ಜುನ್ ಗೌಡ', ದಿಗಂತ್ ನಟನೆಯ 'ಹುಟ್ಟುಹಬ್ಬದ ಶುಭಾಶಯಗಳು' ಬಿಡುಗಡೆಗೆ ಸಜ್ಜಾಗಿವೆ. ಆದ್ರೀಗ ಹೊಸ ನಿಯಾಮಾವಳಿ ಈ ಮೂರು ಸಿನಿಮಾಗಳ ನಿರ್ಧಾರದಲ್ಲಿ ಬದಲಾವಣೆಯಾಗುತ್ತಾ ಅನ್ನುವುದನ್ನು ನೋಡಬೇಕಿದೆ.


Click it and Unblock the Notifications











