ಒಬ್ಬ ಅಂಡರ್ವರ್ಲ್ಡ್ ಡಾನ್ ಬಗ್ಗೆ ಸ್ಯಾಂಡಲ್ ವುಡ್ನಲ್ಲಿ ಒಟ್ಟಿಗೇ ಎರಡೆರಡು ಸಿನಿಮಾ!
ಒಂದೇ ಕಥೆಯನ್ನು ಇಟ್ಟುಕೊಂಡು ಎರಡೆರೆಡು ಸಿನಿಮಾ ಮಾಡುವುದು ಹೊಸತಲ್ಲ. ಒಂದೇ ಹೆಸರಿನ ಸಿನಿಮಾಗಳೂ ಕೂಡ ಅಪರೂಪವಲ್ಲ. ಇತ್ತೀಚೆಗೆ ಮದಕರಿ ನಾಯಕನ ಕುರಿತು ಎರಡು ಸಿನಿಮಾಗಳ ನಡುವೆ ವಿವಾದ ಸೃಷ್ಟಿಯಾಗಿತ್ತು. ಈಗ ಒಂದೇ ಕಥೆಯನ್ನಾಧರಿಸಿದ ಎರಡು ಚಿತ್ರಗಳು ಒಟ್ಟಿಗೆ ಸೆಟ್ಟೇರುತ್ತಿವೆ.
Recommended Video
ಮುಂಬೈನಲ್ಲಿ ಮತ್ತು ಮಂಗಳೂರಿನಲ್ಲಿ ಡಾನ್ ಆಗಿದ್ದ ಅಮರ್ ಆಳ್ವಾ ನಿಜ ಜೀವನ ಆಧರಿಸಿದ ಸಿನಿಮಾ ಸೆಟ್ಟೇರುತ್ತಿದ್ದು, ಅದರಲ್ಲಿ ಅಮರ್ ಆಳ್ವಾ ಪಾತ್ರವನ್ನು ರಿಷಬ್ ಶೆಟ್ಟಿ ನಿಭಾಯಿಸಲಿದ್ದಾರೆ ಎನ್ನುವುದು ಸುದ್ದಿಯಾಗಿತ್ತು. ನಿತೇಶ್ ಎಂಬ ಹೊಸ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...

ಲೋಕೇಶ್ ಶೆಟ್ಟಿ ಸಿನಿಮಾ
ಆದರೆ ಈ ನಡುವೆ ಅಮರ್ ಆಳ್ವಾ ಅವರ ಕುರಿತು ಸ್ಯಾಂಡಲ್ ವುಡ್ನಲ್ಲಿ ಮತ್ತೊಂದು ಸಿನಿಮಾ ಕೂಡ ಸಿದ್ಧವಾಗುತ್ತಿದೆ ಎಂಬ ಮಾಹಿತಿ ಹೊರಬಂದಿದೆ. ಜಗತ್ತಿನ ಗಮನ ಸೆಳೆದಿದ್ದ ಕಂಬಳ ಶ್ರೀನಿವಾಸ ಗೌಡ ಕುರಿತು ಚಿತ್ರ ಮಾಡುವುದಾಗಿ ತಿಳಿಸಿದ್ದ ನಿರ್ಮಾಪಕ ಲೋಕೇಶ್ ಶೆಟ್ಟಿ, ಅಮರ್ ಆಳ್ವಾ ಕುರಿತು ಸಿನಿಮಾ ಮಾಡುತ್ತಿದ್ದಾರೆ.

ಎರಡು ವರ್ಷಗಳಿಂದ ತಯಾರಿ
ನಿರ್ದೇಶಕರೂ ಆಗಿರುವ ಲೋಕೇಶ್ ಶೆಟ್ಟಿ, ಲೆಮನ್ ಗ್ರಾಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಭೂಗತ ಲೋಕದ ಡಾನ್ ಅಮರ್ ಆಳ್ವಾ ಬಗ್ಗೆ ಕಥೆ ಸಿದ್ಧಪಡಿಸಿದ್ದಾರಂತೆ. ಎರಡು ವರ್ಷಗಳ ಹಿಂದೆಯೇ ಅವರು ಈ ಚಿತ್ರ ಮಾಡಲು ಯೋಜಿಸಿದ್ದರಂತೆ.

ಎರಡು ಭಾಷೆಗಳಲ್ಲಿ ಚಿತ್ರ
ಈ ಚಿತ್ರಕ್ಕಾಗಿ ಅವರು ಈ ಹಿಂದೆಯೇ '1992' ಎಂಬ ಶೀರ್ಷಿಕೆ ನೋಂದಣಿ ಮಾಡಿಸಿದ್ದರು. ಅದಕ್ಕೆ 'ಒನ್ಸ್ ಅಪಾನ್ ಎ ಟೈಮ್ ಇನ್ ಮಂಗಳೂರು' ಎಂಬ ಟ್ಯಾಗ್ ಲೈನ್ ಕೊಟ್ಟಿದ್ದರು. ನೈಜ ಘಟನೆಗಳನ್ನು ಆಧರಿಸಿದ ಚಿತ್ರವಾಗಿದ್ದು, ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ತೆರೆಗೆ ತರಲು ಅವರು ಬಯಸಿದ್ದಾರಂತೆ.

ಅಜಿತ್ ಜಯರಾಜ್ ನಾಯಕ
1992ರಲ್ಲಿ ಅಮರ್ ಆಳ್ವಾ ಹತ್ಯೆಯಾಗಿತ್ತು. ಈ ಕಾರಣದಿಂದ ಅವರು ಚಿತ್ರಕ್ಕೆ ಆ ಇಸವಿಯನ್ನೇ ಶೀರ್ಷಿಕೆಯನ್ನಾಗಿ ಇರಿಸಿದ್ದಾರಂತೆ. ಮತ್ತೊಂದು ವಿಶೇಷವೆಂದರೆ ಭೂಗತ ಲೋಕದಲ್ಲಿ ಹೆಸರು ಮಾಡಿದ್ದ ಎಂಪಿ ಜಯರಾಜ್ ಅವರ ಮಗ, ನಟ ಅಜಿತ್ ಜಯರಾಜ್ ಈ ಚಿತ್ರದಲ್ಲಿ ಅಮರ್ ಆಳ್ವಾ ಪಾತ್ರ ನಿರ್ವಹಿಸುತ್ತಿರುವುದು.

ಎರಡು ಸಿನಿಮಾ ಕ್ಲ್ಯಾಶ್
ರಿಷಬ್ ಶೆಟ್ಟಿ ಅವರ ಬಳಿ ಸಹಾಯಕರಾಗಿದ್ದ ನಿತೇಶ್, ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳಲು ಅಮರ್ ಆಳ್ವಾ ಕುರಿತ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಕಥೆ ರೂಪಿಸುವಲ್ಲಿ ಅವರಿಗೆ ರಿಷಬ್ ಶೆಟ್ಟಿ ಕೂಡ ನೆರವಾಗುತ್ತಿದ್ದಾರೆ. ಆದರೆ ಒಬ್ಬನೇ ವ್ಯಕ್ತಿಯ ಕುರಿತು ಏಕಕಾಲದಲ್ಲಿ ಎರಡು ಸಿನಿಮಾಗಳು ಶುರುವಾಗುತ್ತಿರುವುದು ಅವುಗಳ ನಡುವೆ ಸಂಘರ್ಷಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.


Click it and Unblock the Notifications











