ವಿಷ್ಣುವರ್ಧನ್ ಮೇಲಿನ ಅಭಿಮಾನ ಎಲ್ಲಾ ವಿಚಾರದಲ್ಲೂ ಇರಲಿ
ಸಾಹಸಸಿಂಹ ಡಾ. ವಿಷ್ಣುವರ್ಧನ್ ನಮ್ಮನ್ನು ಅಗಲಿ ಐದುವರೆ ವರ್ಷದ ಮೇಲಾಯಿತು. ಅವರ ಸ್ಮಾರಕಕ್ಕಾಗಿ ವಿಷ್ಣು ಕುಟುಂಬ ಮತ್ತು ಅವರ ಅಭಿಮಾನಿಗಳು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ.
ಕೊನೆಗೂ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕಕ್ಕೆ ನೀಡಬೇಕಾಗಿರುವ ಜಾಗಕ್ಕೆ ಸಂಬಂಧಪಟ್ಟ ಕುಟುಂಬ ಕಲಹ ಒಂದು ಹಂತಕ್ಕೆ ತಹಬದಿಗೆ ಬಂದಿದೆ.
ಸ್ಮಾರಕಕ್ಕೆ ಎರಡು ಎಕರೆ ಜಮೀನು ನೀಡಲು ನನ್ನದೇನೂ ತಕರಾರಿಲ್ಲ ಎಂದು ಜಾಗದ ಮಾಲೀಕರಲ್ಲೊಬ್ಬರಾದ ಗೀತಾಬಾಲಿ ಒಪ್ಪಿಗೆ ಸೂಚಿಸಿದ್ದಾರೆ. (ಬದುಕಿದ್ದಾಗ, ಸತ್ತಮೇಲೂ ವಿಷ್ಣುಗೆ ಅನ್ಯಾಯ: ಅಂಬಿ)
ಕೇಸಿಗೆ ಸಂಬಂಧಿಸಿದ ಮುಂದಿನ ಹಿಯರಿಂಗ್ ನಲ್ಲಿ ಅಂದರೆ ಜೂನ್ ಅಥವಾ ಜುಲೈ ತಿಂಗಳಲ್ಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದೇನೆಂದು ಬಾಲಕೃಷ್ಣ ಪುತ್ರಿಯೂ ಆಗಿರುವ ಗೀತಾಬಾಲಿ ಹೇಳಿದ್ದಾರೆ.
ವಿಷ್ಣು ಸ್ಮಾರಕದ ವಿಚಾರದಲ್ಲಿ ಚಿತ್ರೋದ್ಯಮದಿಂದ ನಿರೀಕ್ಷಿತ ಬೆಂಬಲ ಸಿಗದೇ ಇದ್ದದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅವರ ಅಭಿಮಾನಿಯಾಗಿ ಬೆಳ್ಳಿತೆರೆ ಮೇಲೆ ನಮ್ಮ ನಟರು ರಾರಾಜಿಸಿದ ಉದಾಹರಣೆಗಳಿವೆ.
ಈಗ ನಾಯಕ ವಿಷ್ಣು ಅಭಿಮಾನಿಯಾಗಿರುವ ಇನ್ನೊಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಅಭಿನಯ ಭಾರ್ಗವ ವಿಷ್ಣುವರ್ಧನ್ ಮೇಲಿನ ಅಭಿಮಾನದ ಹೊಳೆ ಎಲ್ಲಾ ವಿಚಾರದಲ್ಲೂ ಮುಂದುವರಿಯಲಿ..

ಅನಿರುದ್ದ್ ನೋವಿನ ಮಾತು
ವಿಷ್ಣು ಸ್ಮಾರಕ ನಿರ್ಮಾಣದ ವಿಚಾರದಲ್ಲಿನ ಗೊಂದಲ ಮತ್ತು ಆಗುತ್ತಿರುವ ವಿಳಂಬವನ್ನು ಕಂಡು ಅವರ ಅಳಿಯ ಮತ್ತು ನಟನೂ ಆಗಿರುವ ಅನಿರುದ್ದ್ ತೀವ್ರ ನೋವಿನ ಮಾತನ್ನಾಡಿದ್ದರು.

ಮೈಸೂರಿಗೆ ಸ್ಥಳಾಂತರದ ಬಗ್ಗೆಯೂ ನಿರ್ಧಾರವಾಗಿತ್ತು
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಕಷ್ಟ ಎಂದರಿತ ಭಾರತಿ ವಿಷ್ಣುವರ್ಧನ್, ಸ್ಮಾರಕವನ್ನು ಮೈಸೂರಿಗೆ ಸ್ಥಳಾಂತರಿಸುವುದಾಗಿ ಅಧಿಕೃತ ಹೇಳಿಕೆ ನೀಡಿದ್ದರು. ನಂತರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ತನ್ನ ನಿರ್ಧಾರದಿಂದ ಭಾರತಿ ಹಿಂದಕ್ಕೆ ಸರಿದಿದ್ದರು.

ವಿಷ್ಣುವರ್ಧನ್ ಆಪ್ತಮಿತ್ರ ದ್ವಾರಕೀಶ್
ಬೆಳ್ಳಿತೆರೆಯ ಕಿಟ್ಟುಪುಟ್ಟು ಜೋಡಿಗಳೆಂದೇ ಹೆಸರಾದವರು ವಿಷ್ಣು ಮತ್ತು ದ್ವಾರಕೀಶ್. ಬೆಂಗಳೂರಿನ ಲಗ್ಗೆರೆಯಲ್ಲಿ ವಿಷ್ಣು ಪುತ್ಥಳಿಯನ್ನು ನಾಲ್ಕು ವರ್ಷದ ಹಿಂದೆ ದ್ವಾರಕೀಶ್ ಅನಾವರಣಗೊಳಿಸಿದ್ದರು. ಇದು ಬಿಟ್ಟರೆ ಸಾರ್ವಜನಿಕವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕದ ಪರವಾಗಿ ದ್ವಾರಕೀಶ್ ನಿಂತದ್ದು ಎಲ್ಲೂ ವರದಿಯಾಗಿಲ್ಲ.

ಒನ್ ಟು ತ್ರೀ ವಿಷ್ಣುವರ್ಧನ
ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ವಿಷ್ಣುವರ್ಧನ ಚಿತ್ರ ಟೈಟಲ್ ವಿಚಾರದಲ್ಲಿ ಭಾರೀ ಗೊಂದಲವೇ ಉಂಟಾಗಿತ್ತು. ಚಿತ್ರದ ನಿರ್ಮಾಪಕರಾಗಿದ್ದ ದ್ವಾರಕೀಶ್ ಮತ್ತು ಭಾರತಿ ವಿಷ್ಣುವರ್ಧನ್ ನಡುವೆ ಟೈಟಲಿಗೆ ಸಂಬಂಧಿಸಿದಂತೆ ವಾಕ್ಸಮರವೇ ನಡೆದಿತ್ತು. ಈ ಚಿತ್ರದಲ್ಲಿ ನಾಯಕ ವಿಷ್ಣು ಅವರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದರು.

ಬ್ಲಾಕ್ ಬಸ್ಟರ್ ರಾಮಾಚಾರಿ
ಯಶ್, ರಾಧಿಕಾ ಪಂಡಿತ್ ಅಭಿನಯದ, ಸಂತೋಶ್ ಆನಂದರಾಮ್ ನಿರ್ದೇಶನದ ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ ಚಿತ್ರ ಯಾವ ಪಾಟಿ ಬಾಕ್ಸಾಫೀಸ್ ಲೂಟಿ ಮಾಡಿತ್ತು ಎನ್ನುವುದನ್ನು ಮತ್ತೆ ವಿವರಿಸಬೇಕಾಗಿಲ್ಲ. ಈ ಚಿತ್ರದಲ್ಲಿ ನಾಯಕ ವಿಷ್ಣು ಸರ್ ಅವರ ಡೈಹರ್ಡ್ ಅಭಿಮಾನಿ.

ಲೊಡ್ಡೆ ಕೋಮಲ್
ಯಶಸ್ಸಿನ ಬೆನ್ನೇರಿರುವ ಕೋಮಲ್ ಈ ಹಿಂದೆ ಆಪ್ತರಕ್ಷಕ ಚಿತ್ರದಲ್ಲಿ ವಿಷ್ಣು ಜೊತೆ ನಟಿಸಿದ್ದರು. ಈಗ ಅವರೇ ನಾಯಕ ನಟನಾಗಿ 'ಲೊಡ್ಡೆ' ಹೆಸರಿನ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲೂ ನಾಯಕ ವಿಷ್ಣು ಅವರ ಪಕ್ಕಾ ಅಭಿಮಾನಿ. ಚಿತ್ರ ಇನ್ನೇನು ಬಿಡುಗಡೆಯಾಗಲಿದೆ.


Click it and Unblock the Notifications











