Darshan-Pavithra Gowda: ಪವಿತ್ರಾ ಗೌಡಗೆ ಜಾಮೀನು ಇಲ್ಲ; ದರ್ಶನ್ ಕೇಸ್ನಲ್ಲಿ ಬಿಗ್ ಟ್ವಿಸ್ಟ್..ಬಳ್ಳಾರಿಗೆ ಶಿಫ್ಟ್ ಸಾಧ್ಯತೆ?
ದರ್ಶನ್ ಹಾಗೂ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆಂಬಿಡದೆ ಕಾಡುತ್ತಿದೆ. ಅವರು ನಿರೀಕ್ಷೆ ಮಾಡದಷ್ಟು ಅವರ ಬದುಕನ್ನು ಡ್ಯಾಮೇಜ್ ಮಾಡುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ಸಂಗಡಿಗರ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಈ ಏಳು ಮಂದಿಗೆ ಸದ್ಯಕ್ಕಂತೂ ಜಾಮೀನು ಸಿಗುವ ಸಾಧ್ಯತೆಯಿಲ್ಲ ಅಂತ ನುರಿತ ವಕೀಲರು ಭವಿಷ್ಯ ನುಡಿದ್ದಿದ್ದರು. ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರದಲ್ಲಿ ಅದರಂತೆ ನಡೆದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲನೆ ಆರೋಪಿಯಾಗಿರುವ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಬೆನ್ನಲ್ಲೇ ಮತ್ತೆ ಜೈಲು ಸೇರಿರುವ ಆರೋಪಿ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದ್ರೀಗ ಮತ್ತೆ ಹಿನ್ನಡೆಯಾಗಿದ್ದು, ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ಇದು ಪವಿತ್ರಾ ಗೌಡ ವಿಷಯ ಆಗಿದ್ದರೆ, ಅತ್ತ ದರ್ಶನ್ ಪರ ವಕೀಲರು ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ದಿನಗಳ ಹಿಂದೆ ದರ್ಶನ್ ಹಾಸಿಗೆ-ದಿಂಬು-ಮನೆ ಊಟಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂಬ ಸುದ್ದಿ ಹರಿದಾಡಿತ್ತು. ಈ ಹಿನ್ನಲೆಯಲ್ಲಿ ಅವರ ವಕೀಲರು ಮೂಲ ಸೌಕರ್ಯಗಳಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ವಿಷಯದ ಬಗ್ಗೆ ವಿಚಾರಣೆ ನಡೆಯಬೇಕಿದೆ.
ಪವಿತ್ರಾ ಗೌಡ ಪರ ವಕೀಲರ ವಾದವೇನಾಗಿತ್ತು?
ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್ನಲ್ಲಿ ನಡೆದಿತ್ತು. ಆದರೆ, ಪವಿತ್ರಾ ಗೌಡ ಪರ ವಕೀಲರ ವಾದವನ್ನು ನ್ಯಾಯಾಧೀಶರು ಮಾನ್ಯ ಮಾಡಿಲ್ಲ. ಪವಿತ್ರಾ ಗೌಡ ಪರ ವಕೀಲರು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಅನ್ನು ಈಗಾಗಲೇ ಸಲ್ಲಿಕೆ ಮಾಡಲಾಗಿದೆ. ಇದರಲ್ಲಿ ಪವಿತ್ರಾ ಗೌಡ ಮೇಲೆ ಮಾನ್ಯವೇ ಇಲ್ಲದೆ ಇರುವ ಐಪಿಸಿ, ಸಿಆರ್ ಪಿಸಿ ಸೆಕ್ಷನ್ಗಳನ್ನು ಹಾಕಿ ಅವರನ್ನು ಬಂಧಿಸಲಾಗಿದೆಂದು ವಾದ ಮಾಡಿದ್ದರು. ಆದರೆ, ನ್ಯಾಯಾಲಯ ಈ ವಾದದ ಬಳಿಕ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿದೆ.
ದರ್ಶನ್ಗೆ ಮೂಲಭೂತ ಸೌಕರ್ಯ ಕೊಡಿ
ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾ ಆದ ಬೆನ್ನಲ್ಲೇ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇಲ್ಲಿ ಅವರಿಗೆ ಮೂಲಭೂತ ಸೌಕರ್ಯ ಸಿಗುತ್ತಿಲ್ಲ ದರ್ಶನ್ ಪರ ವಕೀಲರಾದ ಸುನೀಲ್ ಕುಮಾರ್ ವಾದ ಮಂಡನೆ ಮಾಡಿದ್ದಾರೆ. ಜೈಲಿನ ಅಧಿಕಾರಿಗಳು ಅವರನ್ನು ಮೃಗದಂತೆ ನಡೆಸಿಕೊಳ್ಳುತ್ತಿದ್ದಾರೆ. ಜೈಲಿನಲ್ಲಿ ಶೂ ಬಿಚ್ಚಿ ಹೋಗಿ ಅಂತಿದ್ದಾರೆ, ಬೆಡ್ಶೀಟ್ ತೊಳೆಯುವುದಕ್ಕೆ ಬಿಡುತ್ತಿಲ್ಲ. ಬ್ಯಾರಕ್ನಲ್ಲಿ ಗಲೀಜು ಇದೆ. ಅಲ್ಲಿಯೇ ಮಲಗುವಂತೆ ಹೇಳುತ್ತಾರೆ. ಇದರಿಂದ ದರ್ಶನ್ ತುಂಬಾನೇ ಕಷ್ಟ ಪಡುತ್ತಿದ್ದಾರೆ ಎಂದು ದರ್ಶನ ಪರ ವಕೀಲರು ವಾದ ಮಂಡಿಸಿದ್ದಾರೆ.
ಮಾನವ ಹಕ್ಕುಗಳ ಆಯೋಗಕ್ಕೆ ದೂರು
ದರ್ಶನ್ಗೆ ಮೂಲಭೂತ ಸೌಕರ್ಯಗಳು ನೀಡುತ್ತಿಲ್ಲ. ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಖುದ್ದಾಗಿ ಹೋಗಿ ಜೈಲಿನಲ್ಲಿ ಪರಿಸ್ಥಿತಿಯನ್ನು ನೋಡಿ ಬಂದಿದ್ದೇನೆ. ಹೀಗೆ ಆದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ನೀಡಬೇಕಾಗುತ್ತೆ ಎಂದೂ ಹೇಳಿದ್ದಾರೆ. ದರ್ಶನ್ ಜಾಮೀನು ಅರ್ಜಿಯನ್ನು ಇನ್ನೂ ಸಲ್ಲಿಸಿಲ್ಲ. ಆದರೆ, ಮೂಲಭೂತ ಸೌಕರ್ಯಗಳಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.

ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ?
ದರ್ಶನ್ ಪರ ವಕೀಲರು ಮೂಲಭೂತ ಸೌಕರ್ಯಗಳನ್ನು ಕೊಡಿ ಎಂದು ಅರ್ಜಿ ಸಲ್ಲಿಸಿದ್ದರೆ, ಇನ್ನೊಂದು ಕಡೆ ಪೊಲೀಸರು ದರ್ಶನ್ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಎರಡು ಅರ್ಜಿಗಳ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಧೀಶರ ಸೂಚನೆ ಇನ್ನೂ ಹೊರಬಿದ್ದಿಲ್ಲ. ಈಗಾಗಲೇ ದರ್ಶನ್ ಪರ ವಕೀಲ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡದೇ ಇರುವಂತೆ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











