7 ತಿಂಗಳ ಬಳಿಕ ಪವಿತ್ರಾ ಗೌಡಗೆ ಜಾಮೀನು; ರೇಣುಕಾಸ್ವಾಮಿ ಕೇಸ್ ಕತೆಯೇನು?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡರನ್ನು ಎ1 ಮಾಡಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪವಿತ್ರಾ ಗೌಡ, ದರ್ಶನ್ ಹಾಗೂ ಅವರ ಸಂಗಡಿಗಳನ್ನು ಬಂಧಿಸಲಾಗಿತ್ತು. ಕಳೆದ ಏಳು ತಿಂಗಳಿನಿಂದ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಜಾಮೀನಿಗಾಗಿ ಎದುರು ನೋಡುತ್ತಿದ್ದರು. ಕೊನೆಗೂ ಹೈ ಕೋರ್ಟ್ನಲ್ಲಿ ಜಾಮೀನು ಮಂಜೂರು ಆಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲನೇ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಹೆಚ್ಚು ಕಡಿಮೆ ಏಳು ತಿಂಗಳು ಜೈಲಿನಲ್ಲಿ ಕಾಲ ಕಳೆದಿದ್ದ ಪವಿತ್ರಾ ಗೌಡಗೆ ಇಂದು (ಡಿಸೆಂಬರ್ 13) ಜಾಮೀನು ಮಂಜೂರು ಆಗಿದೆ. ಕಳೆದ ಕೆಲವು ದಿನಗಳಿಂದ ಪವಿತ್ರಾ ಗೌಡ ಪರ ವಕೀಲರು ಜಾಮೀನು ಕೊಡಿಸುವುದಕ್ಕೆ ಶತ ಪ್ರಯತ್ನ ನಡೆಸುತ್ತಲೇ ಇದ್ದರು. ಕೊನೆಗೂ ಪವಿತ್ರಾ ಗೌಡ ನಿಟ್ಟುಸಿರು ಬಿಡುವಂತೆ ಆಗಿದೆ.

ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಸೆಷನ್ ಕೋರ್ಟ್ನಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಸೆಷನ್ ಕೋರ್ಟ್ ಜಾಮೀನನ್ನು ನಿರಾಕರಿಸಿತ್ತು. ಬಳಿಕ ಹೈ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಸುಮಾರು ಆರೂವರೆ ಏಳು ತಿಂಗಳ ಬಳಿಕ ಪವಿತ್ರಾ ಗೌಡಗೆ ನ್ಯಾಯಾಲಯ ಜಾಮೀನನ್ನು ಮಂಜೂರು ಮಾಡಲಾಗಿದೆ.
ಪವಿತ್ರಾ ಗೌಡ ಪರ ವಕೀಲರು ಹೈಕೋರ್ಟ್ನಲ್ಲಿ ಜಾಮೀನಿಗಾಗಿ ವಾದವನ್ನು ಮಂಡಿಸಿದ್ದರು. ಪವಿತ್ರಾ ಗೌಡ ಈ ಹಿಂದೆ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿಲ್ಲ. ರೇಣುಕಾಸ್ವಾಮಿ ಹತ್ಯೆಯಾಗುವಾಗ ಅಲ್ಲಿ ಪವಿತ್ರಾ ಗೌಡ ಇರಲಿಲ್ಲ. ಪವಿತ್ರಾ ಗೌಡರನ್ನು ಪಟ್ಟಣಗೆರೆ ಶೆಡ್ಗೆ ದರ್ಶನ್ ಕರೆದಕೊಂಡು ಹೋಗಿದ್ದರು. ಅಲ್ಲಿ ಚಪ್ಪಲಿಯಲ್ಲಿ ಒಂದೇಟು ಹಾಕಿ ವಾಪಸ್ ಹಿಂತಿರುಗಿದ್ದರು. ಆ ಬಳಿಕ ಏನಾಯ್ತು ಅನ್ನೋದು ಪವಿತ್ರಾ ಗೌಡಗೆ ಗೊತ್ತಿರಲಿಲ್ಲ ಎಂದು ವಾದ ಮಂಡಿಸಿದ್ದರು.
ಇದೇ ವೇಳೆ ಪವಿತ್ರಾ ಗೌಡ ಒಬ್ಬ ಮಗಳು ಇದ್ದಾಳೆ. ಆಕೆಗೆ ತಾಯಿ ಅಗತ್ಯವಿರುವುದರಿಂದ ಮಾನವೀಯತೆ ದೃಷ್ಟಿಯಿಂದ ಜಾಮೀನು ನೀಡಬೇಕು ಎಂದು ವಕೀಲರು ನ್ಯಾಯಾಧೀಶರ ಮುಂದೆ ಮನವಿಯನ್ನು ಮಾಡಿಕೊಂಡಿದ್ದರು. ಈ ವೇಳೆ ಎಸ್ಪಿಪಿ ಪ್ರಸನ್ನ ಕುಮಾರ್ ಜಾಮೀನು ನೀಡಬಾರದು ಎಂದು ಪ್ರಬಲವಾದ ವಾದವನ್ನು ಮಂಡಿಸಿದ್ದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಕೈವಾದವಿದೆ ಎಂಬುದಕ್ಕೆ ಸಾಕ್ಷ್ಯಗಳು ಇವೆ. ರೇಣುಕಾಸ್ವಾಮಿ ಜೊತೆ ಕೆಲವು ದಿನಗಳಿಂದ ಚಾಟ್ ಮಾಡಿದ್ದಾರೆ. ಸಹಾಯಕನಿಗೆ ಚಾಟ್ ಮಾಡುವಂತೆ ಹೇಳಿ ರೇಣುಕಾಸ್ವಾಮಿ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ರೇಣುಕಾಸ್ವಾಮಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬರುವುದಕ್ಕೆ ಪ್ರಮುಖ ಕಾರಣವೇ ಪವಿತ್ರಾ ಗೌಡ ಎಂದು ಪ್ರತಿವಾದ ಮಂಡಿಸಿದ್ದರು. ವಾದ ಹಾಗೂ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಪವಿತ್ರಾ ಗೌಡಗೆ ಜಾಮೀನು ಮಂಜೂರು ಮಾಡಿದ್ದಾರೆ.
ಪವಿತ್ರಾ ಗೌಡ ಜೊತೆಗೆ ಎರಡನೇ ಆರೋಪಿಯಾಗಿರುವ ದರ್ಶನ್ ಅವರ ಸಂಗಡಿಗರಾದ ನಾಗರಾಜ್, ಲಕ್ಷ್ಮಣ್, ಪ್ರದೋಷ್, ಜಗದೀಶ್, ಅನುಕುಮಾರ್ಗೂ ಇಂದು (ಡಿಸೆಂಬರ್ 13) ಹೈಕೋರ್ಟ್ ಜಾಮೀನು ನೀಡಿದೆ. ದರ್ಶನ್ಗೆ ಈಗಾಗಲೇ ಅನಾರೋಗ್ಯ ಹಿನ್ನೆಲೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಈಗ ರೆಗ್ಯೂಲರ್ ಬೇಲ್ ನೀಡಲಾಗಿದೆ. ಈ ಕೇಸ್ ಈಗ ಮುಂದೆ ಯಾವ ಹಾದಿಯಲ್ಲಿ ಸಾಗುತ್ತೆ. ರೇಣುಕಾಸ್ವಾಮಿ ಕೇಸ್ ತನಿಖೆ ನಡೆಸಿದೆ ಪೊಲೀಸ್ ಅಧಿಕಾರಿಗಳ ಮುಂದಿನ ನಡೆಯೇನು? ಅನ್ನೋದನ್ನು ಕುತೂಹಲ ಕೆರಳಿಸಿದೆ.


Click it and Unblock the Notifications











