'ಧೂಮಂ'ಗೆ ಧ್ವನಿ ಕೊಡ್ತೀರಾ ಅಂತ ಕೇಳಿದ್ದೆ..ಅವರನ್ನೇ ಹಾಕೊಂಡು ಸಿನಿಮಾ ಮಾಡ್ಬಹುದಿತ್ತು" ಲೂಸಿಯಾ ಪವನ್
ಕನ್ನಡ ಚಿತ್ರರಂಗ ಅತ್ಯದ್ಭುತ ನಟ ದಿಲೀಪ್ ರಾಜ್ ಹಠಾತ್ತಾನೆ ಅಗಲಿದ್ದಾರೆ. ಇದು ಕೆಲವ ಸಿನಿಮಾ ಮಂದಿಗೆ ಕಾಡುತ್ತಿದೆ. ಒಳ್ಳೆಯ ನಟನನ್ನು ಕಳೆದುಕೊಂಡು ಗಿಲ್ಟ್ನಲ್ಲಿ ಇದ್ದಾರೆ. ಬದುಕಿದ್ದಾಗ ಅವರಿಗೆ ಸಿಗಬೇಕಾದ ಅವಕಾಶಗಳು ಸಿಗಲಿಲ್ಲ ಅಂತ ಮರುಕು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದ್ದಾಗ ಪ್ರೀತಿ ತೋರಿಸಬೇಕಿತ್ತು ಎಂದು ಪಶ್ಚಾತಾಪ ಪಡುತ್ತಿದ್ದಾರೆ. ಮತ್ತೆ ಕೆಲವರು ಅವರಿಗೆ ಸಿನಿಮಾ ಕೊಡುವುದಕ್ಕೆ ಸಾಧ್ಯವಾಗಲೇ ಇದ್ದಿದ್ದಕ್ಕೆ ಗಿಲ್ಟ್ ಕಾಡುತ್ತಿದೆ.
ಪವನ್ ಕುಮಾರ್ ಕೂಡ ದಿಲೀಪ್ ರಾಜ್ ಅವರ ಬಗ್ಗೆ ಸುದೀರ್ಘವಾಗಿ ಮಾತಾಡಿದ್ದಾರೆ. ಪವನ್ ಕುಮಾರ್ ಯೂಟ್ಯೂಬ್ ಚಾನೆಲ್ನಲ್ಲಿ 'ಯೂಟರ್ನ್' ವೇಳೆ ಆ ಪರಿಚಯ, ಆ ಪಾತ್ರದಲ್ಲಿ ಅವರು ನಟಿಸುವುದಕ್ಕೆ ಒಪ್ಪಿದ್ದು ಹೇಗೆ ಅನ್ನೋದೆಲ್ಲ ಮಾತಾಡಿದ್ದಾರೆ. ಅಷ್ಟೇ ಅಲ್ಲದೇ 'ಧೂಮಂ' ಕನ್ನಡ ಅವತರಣಿಕೆಗೆ ದಿಲೀಪ್ ರಾಜ್ ಅವರನ್ನು ಹಾಕಿಕೊಳ್ಳಬಹುದಿತ್ತು. ಆದರೆ, ಅಡ್ಡಿ ಬಂದಿದ್ದೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅದರ ಝಲಕ್ ಇಲ್ಲಿದೆ.

'ಧೂಮಂ'ಗೆ ಡಬ್ ಮಾಡಲಿಲ್ಲ
"ಪ್ರಪಂಚದಲ್ಲಿ ಏನೇನೋ ನಡೀತಿದೆ. ಆದರೆ, ಇವತ್ತು ಮನಸ್ಸಿಗೆ ಶಾಕ್ ಆಗಿದ್ದು, ದಿಲೀಪ್ ಅವರು ಹೋಗ್ಬಿಟ್ರು ಅನ್ನೋ ವಿಷಯ ಗೊತ್ತಾಗಿದ್ದು. ದಿಲೀಪ್ ಅವರ ಜೊತೆ 11 ವರ್ಷಗಳ ಹಿಂದೆ ಕೆಲಸ ಮಾಡಿದ್ವಿ. ಕೊನೆಯದಾಗಿ ಫೋನ್ನಲ್ಲಿ ಮಾತಾಡಿದ್ದು 2023ನಲ್ಲಿ. ಧೂಮಂ ಸಿನಿಮಾಗೆ ಫಹಾದ್ ವಾಯ್ಸ್ಗೆ ಕನ್ನಡ ಡಬ್ ಮಾಡುತ್ತೀರ ಎಂದು ಕೇಳಿದ್ದೆ. ಆದರೆ, ಅವತ್ತಿನ ದಿನ ರಾತ್ರಿನೇ ಅವರು ಫ್ಯಾಮಿಲಿ ಟ್ರಿಪ್ಗೆ ಹೊರಟಿದ್ದರು. ಇಲ್ಲ ಟೈಮ್ಲೈನ್ನಲ್ಲಿ ಆಗುವುದಿಲ್ಲ ಎಂದು ಮಾತಾಡಿದ್ದರು. ಇದು ನಿಜಕ್ಕೂ ದುರಂತ. ಯಾಕಂದ್ರೆ, ಅವರು ನನಗಿಂತ ಮೂರು ವರ್ಷ ದೊಡ್ಡವರು ಅಷ್ಟೇ." ಎಂದು ಪವನ್ ಹೇಳಿದ್ದಾರೆ.
ಒಂದು ನೆಗೆಟಿವ್ ವಿಷಯವನ್ನೂ ಕೇಳಿದ್ದೆ
"ಕನ್ನಡ ಚಿತ್ರರಂಗಕ್ಕೆ ಬರುವುದಕ್ಕೂ ಮುಂಚೆ ಅವರ ಬಗ್ಗೆ ಕೇಳುತ್ತಿದ್ದೆ. ಚೆನ್ನಾಗಿ ನಟನೆ ಮಾಡುತ್ತಾರೆ ಅಂತ ಕೇಳಿದ್ದೆ. 2009ರಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅವರು ಲೀಡ್ ಆಕ್ಟರ್ ಆಗಿ ಮಾಡುತ್ತಿದ್ದರು. ಲೀಡ್ ಆಕ್ಟರ್ ಆಗಿ ಅವರ ಬಗ್ಗೆ ಯಾರದ್ದೇ ಹತ್ತಿರ ಹೇಳಿದರೂ ಅವರೊಬ್ಬರು ಅದ್ಭುತ ಮನುಷ್ಯ ಎಂದು ಹೇಳುತ್ತಿದ್ದರು. ಆದರೆ, ಅವರ ಬಗ್ಗೆ ಒಂದು ನೆಗೆಟಿವ್ ವಿಷಯವನ್ನೂ ಹೇಳಿದ್ದೆ." ಎಂದು ಹೇಳುತ್ತಾ ದಿಲೀಪ್ ರಾಜ್ ಬಗ್ಗೆ ಚಿತ್ರರಂಗದಲ್ಲಿ ಆಡುತ್ತಿದ್ದ ನೆಗೆಟಿವ್ ಮಾತುಗಳ ಬಗ್ಗೆ ಹೇಳಿದ್ದಾರೆ.
ಒಳ್ಳೆಯ ನಟ, ಆದರೆ, ಬ್ಯುಸಿನೆಸ್ ಕಷ್ಟ
"ತುಂಬಾನೇ ದುರಂತ.. ಅದು ಅವರ ಬಗ್ಗೆ ನೆಗೆಟಿವ್ ಅಲ್ಲ. ಅದು ನಮ್ಮ ಬಗ್ಗೆ ಆಗುತ್ತೆ. ಅಷ್ಟು ಒಳ್ಳೆಯ ನಟ ಅಲ್ವಾ? ಅವರನ್ನು ಹಾಕಿಕೊಂಡು ಸಿನಿಮಾ ಮಾಡೋಣ ಅಂದರೆ, ಮಾರ್ಕೆಟ್ ಇಲ್ಲ ಅನ್ನೋ ಮಾತು ಕೇಳಿ ಬರುತ್ತಿತ್ತು. ಅದು ಯಾವುದೇ ರೀತಿ ದಿಲೀಪ್ ಅವರನ್ನು ಪ್ರತಿಬಿಂಬಿಸಲ್ಲ. ಅದು ನಮ್ಮನ್ನು ಪ್ರತಿಬಿಂಬಿಸುತ್ತದೆ. ತುಂಬಾ ಒಳ್ಳೆಯ ನಟ, ಆದರೆ, ಬ್ಯುಸಿನೆಸ್ ಕಷ್ಟ ಇದನ್ನು ಕೇಳಿದ್ದೀನಿ." ಎಂದು ಪವನ್ ಹೇಳಿದ್ದಾರೆ.

ಶ್ರದ್ಧಾ ಬಾಯ್ಫ್ರೆಂಡ್ಗೆ ದಿಲೀಪ್ ಬೇಕಿತ್ತು
"ನಾನು ಯೂಟರ್ನ್ ಬರೆದಾಗ ಮಹಿಳಾ ಪಾತ್ರ ಶ್ರದ್ಧಾ ಶ್ರೀನಾಥ್ ಅವರು ಮಾಡಿದ ಪಾತ್ರದ ಬಗ್ಗೆ ಬರೆದಿದ್ವಿ. ಸಿನಿಮಾ ಶ್ರದ್ಧಾ ಅವರ ಸುತ್ತಲೇ ತಿರುಗುತ್ತಿತ್ತು. ಅವರಿಗೆ ಬಾಯ್ಫ್ರೆಂಡ್ ಅಂತ ಯೋಚನೆ ಮಾಡಿದಾಗ, ಹೊಸ ಪ್ರತಿಭೆ ಕಡೆ ಹೋಗಬೇಕು. ಇಂತಹ ಅನುಭವಿ ನಟರನ್ನು ಕೇಳಿದಾಗ, ಪೂರ್ತಿ ಕಥೆ ಅವರ ಮೇಲೆ ಇರುತ್ತೆ. ಅವರಿಗೆ ನಾನು ಬಾಯ್ಫ್ರೆಂಡ್ ಆಗ್ಬೇಕು ಅಂದರೆ, ತುಂಬಾ ಜನ ಒಪ್ಪಲ್ಲ ಅಂತ ಹೇಳ್ತಾರೆ. ಅದಕ್ಕೆ ನಾನು ತುಂಬಾ ತಲೆ ಕೆಡಿಸಿಕೊಂಡಿದ್ದೆ. ಯಾರನ್ನು ಮಾಡೋದು. ಹೊಸಬರನ್ನು ತಂದರೆ, ಪೂರ್ತಿ ಸಿನಿಮಾ ಹೊಸಬರದ್ದು ಆಗುತ್ತಲ್ಲ ಅನ್ನೋ ಗೊಂದಲದಲ್ಲಿ ಇದ್ವಿ ನಾವು." ಎಂದು ಯೂಟರ್ನ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಯೂಟರ್ನ್ ಪಾತ್ರ ಒಪ್ಪಿಕೊಂಡ್ರು
"ನಾನು ನನ್ನ ಪತ್ನಿ ಸೌಮ್ಯ ಸಂಗಮ್ ಸರ್ಕಲ್ನಲ್ಲಿ ಪಾಸಾಗುತ್ತಿದ್ವಿ. ಆಗ ಸೌಮ್ಯಾ ಗಾಡಿ ಓಡಿಸುತ್ತಿದ್ದರು. ಆಗ ನಾನು ದಿಲೀಪ್ ರಾಜ್ ಅಂತಹವರು ಬೇಕಲ್ಲ ಅಂದೆ. ಅದಕ್ಕೆ ಸೌಮ್ಯಾ ಅಲ್ಲೇ ನಿಂತಿದ್ದಾರಲ್ಲ ಅಂದರು. ಆಶ್ಚರ್ಯ ಆಯ್ತು. ನಾನು ಹೋಗಿ ಅವರಿಗೆ ನನ್ನ ಪರಿಚಯ ಮಾಡಿಕೊಂಡೆ. ಹೀಗೆ ಯೂಟರ್ನ್ ಅಂತ ಸಿನಿಮಾ ಮಾಡುತ್ತಿದ್ದೇನೆ. ನಿಮ್ಮೊಂದಿಗೆ ಮಾತಾಡಬಹುದಾ? ಅಂತ ಕೇಳಿದೆ. 2-3 ದಿನ ಆದ್ಮೇಲೆ ಆಫೀಸ್ಗೆ ಬಂದರು. ನನಗೆ ಆ ಪಾತ್ರವನ್ನು ಮಾಡುತ್ತಾರಾ? ಅನ್ನೋ ಭಯವಿತ್ತು. ಪೊಲೀಸ್ ಪಾತ್ರವನ್ನು ಕೇಳುತ್ತಾರಾ? ಅನ್ನೋ ಪ್ರಶ್ನೆಯಿತ್ತು. ಆದರೆ, ಅವರು ಇಲ್ಲ ನನಗೆ ಇಷ್ಟ ಆಯ್ತು. ಈ ಪಾತ್ರ ಮಾಡುತ್ತೇನೆ ಅಂದರು. ಆಗಲೇ ಅವರು ನಿಜವಾದ ಆರ್ಟಿಸ್ಟ್ ಅಂತ ಅನಿಸಿದರು" ಎಂದು ಪವನ್ ಕುಮಾರ್ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ದಿಲೀಪ್ ಅವರನ್ನು ಬಳಸಿಕೊಳ್ಳಲು ತಡೆದವರು ಯಾರು?
"ನನಗೆ ಇರ್ಫಾನ್ ಖಾನ್ ಅವರು ಹೋದಾಗ ಅವರೊಂದಿಗೆ ಒಂದು ದಿನ ಸಿನಿಮಾ ಮಾಡುತ್ತಿದ್ದೆ ಅನಿಸಿತ್ತು. ಪುನೀತ್ ಅವರು ಹೋದಾಗಲೂ ಹಾಗೇ ಆಯ್ತು. ಆದರೆ, ಅವರೊಂದಿಗೆ ಸಿನಿಮಾ ಮಾಡುತ್ತಿದ್ದೆ. ಪ್ರತಿಬಾರಿ ಇಂತಹ ನಟರು ಅಗಲಿದಾಗ ಪ್ರೇಕ್ಷಕರು ಎಚ್ಚೆತ್ತುಕೊಳ್ತಾರೆ. ಅದೇ ದೊಡ್ಡ ದುರಂತ. ಯಾಕಂದ್ರೆ, ಆ ನಟರಿಗೆ ಅದು ಗೊತ್ತಾಗುವುದಿಲ್ಲ. ನಟರು ಹೋದಾಗ ಅವರನ್ನು ಬಳಸಿಕೊಳ್ಳಬಹುದಿತ್ತು ಅಂತಾರೆ. ದಿಲೀಪ್ ರಾಜ್ 30 ವರ್ಷಗಳ ಕಾಲ ಚಿತ್ರರಂಗದಲ್ಲಿ ಇದ್ದರು. ಅವರನ್ನು ಬಳಸಿಕೊಳ್ಳುವುದಕ್ಕೆ ಯಾರು ತಡೆದಿದ್ದರು. ಅವರು ಒಳ್ಳೆಯ ಸಿನಿಮಾಗಾಗಿ ಕಾಯುತ್ತಿದ್ದರು ಅಂತ ನನಗೆ ಗೊತ್ತು. ಅದಕ್ಕೆ ಪ್ರೀತಿಯನ್ನು ತೋರಿಸುವುದಕ್ಕೆ ಅವರು ಸಾಯುವವರೆಗೂ ಕಾಯಬಾರದು" ಎಂದು ಪವನ್ ಕುಮಾರ್ ಹೇಳಿದ್ದಾರೆ.
ದಿಲೀಪ್ ರಾಜ್ಗೆ 'ಧೂಮಂ' ಮಾಡಬಹುದಿತ್ತು
"ನಾನು ಧೂಮಂ ಮಾಡಿದಾಗ ನಾವು ತುಂಬಾ ಧ್ವನಿಯನ್ನು ಟ್ರೈ ಮಾಡುತಿದ್ವಿ. ಫಹಾದ್ಗೆ ಕನ್ನಡದಲ್ಲಿ ಯಾರು ಡಬ್ಬಿಂಗ್ ಮಾಡಬಹುದು ಅಂತ. ದಿಲೀಪ್ ರಾಜ್ ಅವರಿಗೆ ಫೋನ್ ಮಾಡಿ ಫಹಾದ್ ಅವರಿಗೆ ಡಬ್ ಮಾಡುತ್ತೀರಾ ಅಂತ ಕೇಳಿದಾಗ ಮುಜುಗರ ಆಗಿತ್ತು. ನನಗೆ ಗಿಲ್ಟ್ ಇತ್ತು. ದಿಲೀಪ್ ಅವರನ್ನೇ ಇಟ್ಕೊಂಡು ಸಿನಿಮಾ ಮಾಡಬಹುದಿತ್ತಲ್ಲ. ಅದರ ಬದಲು ಇಂತಹ ಒಳ್ಳೆಯ ನಟನ ಹಾಕೊಂಡೆ ಧೂಮಂ ಅನ್ನು ಕನ್ನಡದಲ್ಲಿ ಮಾಡಬಹುದಿತ್ತಲ್ಲ ಅಂತ ಅನಿಸಿತ್ತು." ಈ ಗಿಲ್ಡ್ನಲ್ಲಿ ಪವನ್ ಕುಮಾರ್ ಇದ್ದಾರೆ.


Click it and Unblock the Notifications
