ಎರಡು ವರ್ಷ.. ಎರಡು ಸಿನಿಮಾ.. ಇಬ್ಬರು ಶಿವ: ಏನಿದು ಭೋಲೆನಾಥನ ಮಹಿಮೆ?
ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆದರೆ ಮುಗೀತು. ಅದಕ್ಕೆ ಬೇರೆ ಸರ್ಟಿಫಿಕೇಟ್ ಬೇಕಿಲ್ಲ. ಕನ್ನಡ ಚಿತ್ರರಂಗಕ್ಕೂ ಕಳೆದ ಎರಡು ವರ್ಷಗಳಿಂದ ಶುಕ್ರದೆಸೆ ಬಂದಿದೆ. ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುವಂತಹ ಸಿನಿಮಾ ರಿಲೀಸ್ ಆಗಿವೆ. ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿವೆ.
ಬಾಕ್ಸಾಫೀಸ್ ಜೊತೆಗೆ ಮತ್ತೆ ಕೆಲವು ಸಿನಿಮಾಗಳು ವಿಶ್ವದಾದ್ಯಂತ ಗಮನ ಸೆಳೆದಿವೆ. ಅದರಲ್ಲಿ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನ 'ಗರುಡ ಗಮನ ವೃಷಭ ವಾಹನ' ಹಾಗೂ ನಿನ್ನೆಯಷ್ಟೇ (ಸೆಪ್ಟೆಂಬರ್ 30) ತೆರೆಕಂಡ 'ಕಾಂತಾರ'. ಈ ಎರಡೂ ಸಿನಿಮಾಗಳೂ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೆ ಹೋದರೂ, ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿವೆ.
ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯವಿದೆ. ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್ನಲ್ಲಿ ಬಂದ ಎರಡೂ ಸಿನಿಮಾಗಳೂ ಶಿವ ಅನ್ನೋ ಪಾತ್ರವಿದೆ. ಈ ಪಾತ್ರಗಳ ಸ್ವರೂಪ ಎರಡೂ ಸಿನಿಮಾಗಳಲ್ಲೂ ಬೇರೆ ಬೇರೆ. ಆದರೆ, ಇಬ್ಬರೂ ಶಿವ ಕೂಡ ಕನ್ನಡಿಗರ ಮನಗೆದ್ದಿರೋದು ವಿಶೇಷ. ಅಸಲಿಗೆ ಸ್ಯಾಂಡಲ್ವುಡ್ನಲ್ಲಿ ಭೋಲೆನಾಥನ ಮಹಿಮೆ ಏನು? ತಿಳಿಯಲು ಮುಂದೆ ಓದಿ.

ಎರಡು ವರ್ಷ.. ಇಬ್ಬರು ಶಿವ !
ಎರಡು ವರ್ಷಗಳ ಅಂತರದಲ್ಲಿ ಶೆಟ್ಟರ ಗ್ಯಾಂಗ್ನಿಂದ ಎರಡು ಸಿನಿಮಾ ರಿಲೀಸ್ ಆಗಿದೆ. ಒಂದು ರಾಜ್ ಬಿ ಶೆಟ್ಟಿ ನಿರ್ದೇಶನ 'ಗರುಡ ಗಮನ ವೃಷಭ ವಾಹನ'. ಇನ್ನೊಂದು ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ'. ಈ ಎರಡೂ ಸಿನಿಮಾಗಳಲ್ಲೂ ಶಿವ ಅನ್ನೋ ಪಾತ್ರವಿದೆ. ಆ ಎರಡೂ ಪಾತ್ರಗಳು ಪ್ರೇಕ್ಷಕರನ್ನುಕಾಡುತ್ತಿವೆ. ಹಾಗಂತ ಗರುಡ ಗಮನದಲ್ಲಿ ಶಿವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ರಾಜ್ ಬಿ ಶೆಟ್ಟಿ. 'ಕಾಂತಾರ'ದಲ್ಲಿ ಶಿವನಾಗಿದ್ದೂ ರಿಷಬ್ ಶೆಟ್ಟಿ. ಈ ಎರಡೂ ಪಾತ್ರಗಳಲ್ಲಿ ವಿಭಿನ್ನ ಛಾಯೆ ಇದ್ದರೂ, ಸಿನಿಪ್ರಿಯರ ಮನ ಗೆಲ್ಲುವಲ್ಲಿ ಸೋತಿಲ್ಲ.

ರಾಜ್ ಬಿ ಶೆಟ್ಟಿಗೆ ಶಿವನ ಕೋಪ
'ಗರುಡ ಗಮನ ವೃಷಭ ವಾಹನ' ಇದೊಂದು ಗ್ಯಾಂಗ್ಸ್ಟರ್ ಸಿನಿಮಾ ಆಗಿದ್ದರೂ, ಶಿವ ಹಾಗೂ ಹರಿ ಪಾತ್ರಗಳು ಹೈಲೆಟ್ ಆಗಿದ್ದವು. ಪೌರಾಣಿಕ ಪಾತ್ರಗಳನ್ನು ಗ್ಯಾಂಗ್ಸ್ಟರ್ ಸಿನಿಮಾದಲ್ಲಿ ತೂರಿಸಿದ್ದಕ್ಕೆ ಕೆಲವರ ಕಣ್ಣುಗಳು ಕೆಂಪಾಗಿದ್ದೂ ಇದೆ. ಆದರೂ, ಬಹುತೇಕ ಮಂದಿಗೆ ಶಿವನ ಪಾತ್ರ ತುಂಬಾನೇ ಇಷ್ಟ ಆಗಿತ್ತು. ಶಿವನ ಕೋಪವನ್ನು ಮೈ ಮೇಲೆ ಎಳೆದುಕೊಂಡಂತೆ ರಾಜ್ ಬಿ ಶೆಟ್ಟಿ ನಟಿಸಿದ್ದರು. ಶಿವ ಗುಣಗಳನ್ನು ಸ್ಪೂರ್ತಿಯಾಗಿ ಪಡೆದು ಈ ಪಾತ್ರವನ್ನು ಹೆಣೆಯಲಾಗಿತ್ತು. ಕೋಪ ಮತ್ತು ಮುಗ್ಧತೆಯ ಪ್ರತೀಕನಾಗಿ ಶಿವ ಕಂಡಿದ್ದ.

ಶಿವನಾಗಿ ಅಬ್ಬರಿಸಿದ್ದ ರಿಷಬ್ ಶೆಟ್ಟಿ
'ಕಾಂತಾರ' ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಸಿನಿಮಾ. ಈಗಾಗಲೇ ತೆರೆಕಂಡು ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ. ವಿಶೇಷ ಅಂದ್ರೆ, ಗರುಡ ಗಮನ ಸಿನಿಮಾದಲ್ಲಿ ಹರಿಯಾಗಿದ್ದ ರಿಷಬ್ ಶೆಟ್ಟಿ ಇಲ್ಲಿ ಶಿವ ಅಲಿಯಾಸ್ ಶಿವಣ್ಣ. ಹೇಗೆ ಬೇಕಾದೂ ಕರೆಯಬಹುದು. 'ಕಾಂತಾರ' ಶಿವನಿಗೂ ಗರುಡ ಗಮನ ವೃಷಭ ವಾಹನ' ಶಿವನಿಗೂ ಕಿಂಚಿತ್ತೂ ಸಾಮ್ಯತೆಯಿಲ್ಲ. ಆದರೆ, ಅದೇ ಶಿವನ ಗುಣಗಳು ರಿಷಬ್ ಶೆಟ್ಟಿಯ ಪಾತ್ರದಲ್ಲಿಯೂ ಕಾಣಬಹುದು. ಈ ಶಿವನಿಗೂ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ.

'ಬ್ರಹ್ಮಾಸ್ತ್ರ'ದಲ್ಲೂ ಶಿವನ ಮಹಿಮೆ
ಹಾಗಂತ ಶಿವ ಅಬ್ಬರ ಕೇವಲ ಸ್ಯಾಂಡಲ್ವುಡ್ನಲ್ಲಿ ಅಷ್ಟೇ ಅಲ್ಲ. ಬಾಲಿವುಡ್ನಲ್ಲೂ ಈ ಅಬ್ಬರ ಜೋರಾಗಿಯೇ ಇದೆ. 'ಬ್ರಹ್ಮಾಸ್ತ್ರ' ಸಿನಿಮಾದಲ್ಲೂ ರಣ್ಬೀರ್ ಕಪೂರ್ ಪಾತ್ರ ಶಿವ. ಬಳಲಿ ಬೆಂಡಾಗಿದ್ದ ಬಾಲಿವುಡ್ಗೆ ಇದೇ ಶಿವ ಆಸೆಯಾಗಿದ್ದ. 'ಬ್ರಹ್ಮಾಸ್ತ್ರ' ಬಾಕ್ಸಾಫೀಸ್ ಧೂಳೆಬ್ಬಿಸಿತ್ತು. ಉತ್ತರ ಭಾರತದ ಪ್ರೇಕ್ಷಕರಿಗೆ ಶಿವ ಇಷ್ಟ ಆಗಿದ್ದ. ಮತ್ತೆ ಸ್ಯಾಂಡಲ್ವುಡ್ಗೆ ಬರೋದಾರೆ, ಎರಡು ವರ್ಷದಲ್ಲಿ ಇಬ್ಬರು ಶಿವ ಎರಡು ವಿಭಿನ್ನ ಸಿನಿಮಾ ಮೂಲಕ ರಂಜಿಸಿದ್ದು ಇತಿಹಾಸವಾಗಿ ಉಳಿಯಲಿದೆ.


Click it and Unblock the Notifications











