'ನನ್ನ ಹೆಸರು ಹೇಳಿ ಗಳಿಸಿದ ಹಣವನ್ನು ಆಸ್ಪತ್ರೆಗೆ ಸೇರಿಸುತ್ತೇನೆ'; ದೈವ ಈ ಹೇಳಿಕೊಟ್ಟಿಲ್ಲ.. ಸ್ಪಷ್ಟನೆ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ ಚಾಪ್ಟರ್ 1' ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ಒಂದು ಕಡೆ ಬಾಕ್ಸಾಫೀಸ್ನಲ್ಲಿ ಕೋಟಿ ಲೆಕ್ಕದಲ್ಲಿ ಬಾಚಿಕೊಳ್ಳುತ್ತಿದೆ. ಅದೇ ಇನ್ನೊಂದು ಕಡೆ ವಿವಾದಗಳು ಕೂಡ ಸುತ್ತಿಕೊಂಡಿವೆ. ತುಳುನಾಡಿನಲ್ಲಿಯೇ ಕೆಲವರು ಈ ಸಿನಿಮಾದಲ್ಲಿ ದೈವವನ್ನು ಬಳಸಿಕೊಂಡಿದ್ದಾರೆಂದು ಆರೋಪ ಮಾಡಿದ್ದರು. ಹೀಗಾಗಿ ರಿಷಬ್ ಶೆಟ್ಟಿ, ಜೊತೆಗೆ ಸಿನಿಮಾವನ್ನು ಟೀಕೆ ಮಾಡಲಾಗಿತ್ತು.
ಇದರಲ್ಲಿ 'ಕಾಂತಾರ ಚಾಪ್ಟರ್ 1' ಸಿನಿಮಾ ಬಗ್ಗೆ ಶ್ರೀ ಕ್ಷೇತ್ರ ಪೇರಾರ ಜಾತ್ರೆಯಲ್ಲಿ ದೈವ ನುಡಿದಿದೆ. "ದೈವದ ಹೆಸರಿನಲ್ಲಿ ಹಣ ಮಾಡಿಕೊಂಡವರ ಹಣವನ್ನು ಆಸ್ಪತ್ರೆಗೆ ಸೇರಿಸುತ್ತೇನೆ" ಎಂದು ಹೇಳಿದೆ ಎಂದು ಕೆಲವರು ಹೇಳಿದ್ದರು. ಈ ಹೇಳಿಕೆಗಳು ಹಲವೆಡೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಟೀಕೆಗಳು, ವಿವಾದಗಳು ಹುಟ್ಟಿಕೊಂಡಿದ್ದವು. ಈಗ ಈ ವಿವಾದಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಪೇರಾರದಿಂದ ಸ್ಪಷ್ಟನೆ ಸಿಕ್ಕಿದೆ.

ಶ್ರೀಕ್ಷೇತ್ರ ರಿಲೀಸ್ ಮಾಡಿದ ಪತ್ರಿಕಾ ಹೇಳಿಕೆ ನೀಡಿದೆ. "ಮೊನ್ನೆ ಪೆರಾರ ಕ್ಷೇತ್ರದಲ್ಲಿ ದೈವ ಕಾಂತಾರದ ಬಗ್ಗೆ ಯಾವ ಮಾತು ಆಡಿಲ್ಲ" ಎಂದಿದೆ. ಹೀಗಿದ್ದರೂ ಒಂದಿಷ್ಟು ಜನ ನಕಲಿ ಹೋರಾಟಗಾರರು ಮಾಧ್ಯಮದ ಎದುರು "ಕಾಂತಾರಕ್ಕೆ ದೈವದ ಎಚ್ಚರಿಕೆ ನೀಡಿದೆ", "ನನ್ನ ಹೆಸರಲ್ಲಿ ಹಣ ಮಾಡಿಕೊಂಡವರನ್ನು ಆಸ್ಪತ್ರೆಗೆ ಸೇರಿಸುತ್ತೇನೆ", "ಕಾಂತಾರಕ್ಕೆ ದೈವ ಒಪ್ಪಿಗೆ ಕೊಟ್ಟಿಲ್ಲ" ಎಂದು ಹೇಳಿದ್ದರು. ಈ ಬಗ್ಗೆ ಪೇರಾರ ಆಡಳಿತ ಮಂಡಳಿಯೇ ಸ್ಪಷ್ಟನೆ ನೀಡಿದೆ.
'ಮೊನ್ನೆ ಪೆರಾರ ಕ್ಷೇತ್ರದಲ್ಲಿ ದೈವವು ರಿಷಬ್ ಶೆಟ್ಟಿಯವರ ನಿರ್ದೇಶನದ ಕಾಂತಾರ ಹಾಗೂ ಕಾಂತಾರ ಚಾಪ್ಟರ್ 1' ಸಿನಿಮಾದ ಬಗ್ಗೆ ಯಾವ ಮಾತೂ ಆಡಿಲ್ಲ. ಆದರೂ ಒಂದಿಷ್ಟು ಜನರು 'ಹೋರಾಟಗಾರರ' ಹೆಸರಲ್ಲಿ ಮಾಧ್ಯಮದ ಎದುರು ಬಂದು 'ಕಾಂತಾರಕ್ಕೆ ದೈವದ ಎಚ್ಚರಿಕೆ' ಎಂದೆಲ್ಲಾ ಸುದ್ದಿ ಕೊಟ್ಟಿದ್ದಾರೆ.
ದೈವದ ಹೆಸರಿನಲ್ಲಿ ಹಣ ಮಾಡಿಕೊಂಡವರ 'ಹಣವನ್ನು ಆಸ್ಪತ್ರೆಗೆ ಸೇರಿಸುತ್ತೇನೆ' ಎಂದು ದೈವ ಹೇಳಿದೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದೆ. ಇದೇ ವೇಳೆ, ಕಾಂತಾರಕ್ಕೆ ದೈವ ಒಪ್ಪಿಗೆ ಕೊಟ್ಟಿಲ್ಲ ಎನ್ನುವಂತಾ ಮಾತನಾಡಿದ್ದು ದೊಡ್ಡ ವಿವಾದವಾಗಿ ರಾಜ್ಯ, ರಾಷ್ಟ್ರದ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು, ದೈವದ ನುಡಿಯ ಬಗ್ಗೆಯೇ ಆಕ್ಷೇಪ ಎದ್ದಿತ್ತು. ಆದರೆ, ಆದರೆ ಅದು ಸುಳ್ಳು ಸುದ್ದಿ ಎಂದು ಇವತ್ತು ಅಲ್ಲಿನವರು ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ.

ಮಂಗಳೂರು ತಾಲೂಕು ಶ್ರೀ ಬ್ರಹ್ಮ ದೇವರು ಇಷ್ಟ ದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನ ಪಡುಪರಾರ ಕ್ಷೇತ್ರದಲ್ಲಿ ನಡೆದ ಬಲವಾಂಡಿ ಪಿಲಿಚಾಂಡಿ ದೈವಗಳ ಪುದ್ರರ್ -ಮೆಚ್ಚಿ ಜಾತ್ರೆ ಸಮಯದ ದೈವನಾತ್ರಿ ದರ್ಶನ ದೈವದ ನಡೆ-ನುಡಿಗಳ ಬಗೆ, ಉಂಟಾದ ಗೊಂದಲ ಭಿನ್ನಾಭಿಪ್ರಾಯ ವಿಚಾರದಲ್ಲಿ ಆಡಳಿತ ಮಂಡಳಿಯ ಸೃಷ್ಟಿಕರಣ.
ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ -ಪಿಲಿಚಾಂಡಿ ದೈವಸ್ಥಾನ ಪಡುಪೆರಾರ ಕ್ಷೇತ್ರದಲ್ಲಿ ಶತಮಾನದ ಕಾಲದ ಕಟ್ಟು ಕುಳೆಯಂತೆ, ಗುತ್ತು-ಬರ್ಕ ಮಹನೀಯರು ಹಾಗೂ ಗ್ರಾಮಸ್ಥರು, ಸಾರ್ವಜನಿಕರ ಕೂಡವಿಕೆಯಿಂದ ನಡೆಸಲ್ಪಡುವ ಪುದ್ರರ್-ಮೆಚ್ಚಿ, ಜಾತ್ರೆಯು ಇತ್ತೀಚಿಗೆ ಕ್ಷೇತ್ರದಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ದೈವದ ಪಾತ್ರಿ-ದೈವವು ನೀಡಿದ ಅಭಯ -ನಡೆ-ನುಡಿಗಳ ವಿಚಾರದಲ್ಲಿ ಗೊಂದಲ ಭಿನ್ನಾಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿರುತ್ತದೆ.
ಆದರೆ, ಕ್ಷೇತ್ರದ ಬಲವಾಂಡಿ -ಪಿಲಿಚಾಂಡಿ ದೈವದ ಸಮಸ್ತ ನರ್ತನದ ಬಳಿಕ ನಡೆಯುವ ನಡೆ-ನುಡಿಗಳ ಸಂದರ್ಭದಲ್ಲಿ ಕೆಲವೊಂದು ಯುವಕರುಗಳು ದೈವ-ದೇವರ ಆಚಾರ-ವಿಚಾರದಲ್ಲಿ ಆಗುತ್ತಿರುವ ಅಪಪ್ರಚಾರ ವಿಚಾರದಲ್ಲಿ ದೈವದ ಸಮಕ್ಷಮ ನಿವೇದನೆ ಮಾಡಿ ಕೊಂಡಿರುತ್ತಾರೆ. ಈ ಬಗ್ಗೆ, ದೈವವು ಸೂಕ್ತ ಅಭಯವನ್ನು ನೀಡಿರುತ್ತದೆ. ವಿನ:ಯಾವುದೇ ಚಲನಚಿತ್ರ ಅದರಲೂ ಮುಖ್ಯವಾಗಿ ಪ್ರಕೃತ ಪ್ರಚಾರದಲ್ಲಿರುವ 'ಕಾಂತರ-1' ಬಗ್ಗೆ ಯಾವುದೇ ಅಭಯ ನುಡಿಯನ್ನು ದೈವವು ನೀಡಿರುವುದಿಲ್ಲ.
ಆದರೆ ದೈವವು ನಿವೇದನೆಗೆ ಸಂಬಂಧಿಸಿ ನೀಡಿದ ಅಭಯ-ನುಡಿಯನ್ನು ನಿವೇದಿಸಿಕೊಂಡ ಯುವಕರು ಮಾದ್ಯಮಗಳಿಗೆ ಬಿಡುಗಡೆ ಮಾಡಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವುದಕ್ಕೆ ಶ್ರೀಕ್ಷೇತ್ರದ ಭಕ್ತರು ಗ್ರಾಮಸ್ಥರು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿರುವುದರಿಂದ ಈ ಸ್ಪಷ್ಟಿಕರಣವನ್ನು ಆಡಳಿತ ಮಂಡಳಿಯು ನೀಡುತ್ತಿರುವುದಾಗಿದೆ. ಮೇಲಿನಂತೆ ಶ್ರೀ ಕ್ಷೇತ್ರ ಪೆರಾರದದಲ್ಲಿ ನಡೆದ ಜಾತ್ರೆ ಸಂದರ್ಭದಲ್ಲಿನ ದೈವ ನಡೆ-ನುಡಿಯಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಗಳು /ಚಲನಚಿತ್ರದ ಬಗ್ಗೆ ಯಾವುದೇ ಅಭಯ-ನುಡಿ ನೀಡುವ ಸಂದರ್ಭ ಬಂದಿರುವ ಕಾರಣ, ಪ್ರಕೃತ ಈ ವಿಚಾರದಲ್ಲಿನ ಗೊಂದಲ ಭಿನ್ನಾಭಿಪ್ರಾಯಗಳಿಗೆ ಅಲ್ಲದೇ ಈ ಗೊಂದಲ ಶ್ರೀ ಕ್ಷೇತ್ರದ ದೈವ-ದೇವರು-ಆಡಳಿತ ಮಂಡಳಿಯು ಹೊಣೆಗಾರರಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ." ಎಂದು ಸ್ಪಷ್ಟೀಕರಣ ನೀಡಿದೆ.


Click it and Unblock the Notifications











