ಶರ್ಮಿಳಾ ಮಾಂಡ್ರೆ ಪ್ರಕರಣ ಗಂಭೀರ: ರಾಜಕಾರಣಿಗಳ ಮಕ್ಕಳೂ ಭಾಗಿ?
ಕೊರೊನಾ ಲಾಕ್ಡೌನ್ ಉಲ್ಲಂಘಿಸಿ ಜಾಲಿ ರೈಡ್ ಮಾಡುವ ವೇಳೆ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಅಪಘಾತಕ್ಕೆ ಈಡಾಗಿರುವ ಘಟನೆಯನ್ನು ಬೆಂಗಳೂರು ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ನಟಿ ಶರ್ಮಿಳಾ ಮಾಂಡ್ರೆ ಅವರ ಐಶಾರಾಮಿ ಜಾಗ್ವಾರ್ ಕಾರು ಶನಿವಾರ ಬೆಳ್ಳಂಬೆಳಿಗ್ಗೆ ವಸಂತನಗರ ಫ್ಲೈಓವರ್ ಬಳಿ ಮೆಟ್ರೋ ಪಿಲ್ಲರ್ ಗೆ ಢಿಕ್ಕಿ ಹೊಡೆದಿದೆ.
ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತರಿಗೆ ಗಾಯಗಳಾಗಿವೆ, ಕಾರು ಜಖಂಗೊಂಡಿದೆ. ಮೆಟ್ರೋ ಪಿಲ್ಲರ್ ಗೆ ಅಲ್ಪ-ಸ್ವಲ್ಪ ಹಾನಿಯಾಗಿದೆ.
ಲಾಕ್ಡೌನ್ ಉಲ್ಲಂಘಿಸಿ ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತರು ಹೊರಗೆ ಬಂದಿದ್ದು ಹೇಗೆ, ಪಾರ್ಟಿ ಮಾಡಿದ್ದು ಹೇಗೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.

ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು
ಶರ್ಮಿಳಾ ಮಾಂಡ್ರೆ ಹಾಗೂ ಆಕೆಯ ಗೆಳೆಯರ ವಿರುದ್ಧ ಈಗಾಗಲೇ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಅಪಘಾತದ ಪ್ರಕರಣ ಹೊರತುಪಡಿಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯೂ ದೂರು ದಾಖಲಾಗುತ್ತದೆ ಎಂದು ಸಂಚಾರಿ ವಿಭಾಗ ಜಂಟಿ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ.

ಪಾರ್ಟಿ ಮುಗಿಸಿ ಜಾಲಿ ರೈಡ್?
ಶರ್ಮಿಳಾ ಮಾಂಡ್ರೆ ಮತ್ತು ಗೆಳೆಯರು ರಾತ್ರಿ ಪಾರ್ಟಿ ಮುಗಿಸಿ ಜಾಲಿ ರೈಡ್ ಹೋಗಿ, ಮೂರು ಗಂಟೆ ಸುಮಾರಿಗೆ ಕಾರಿನಲ್ಲಿ ತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಹೊರಗೆ ಓಡಾಡಲು ಕೆಲವರಿಗೆ ನೀಡಲಾಗಿದ್ದ ಪಾಸ್ ಸಹ ಲಭ್ಯವಾಗಿದೆ. ಇದರ ಕುರಿತಾಗಿ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಸುಳ್ಳು ಹೇಳಿದ್ದು ಏಕೆ?
ಅಪಘಾತ ವಸಂತ್ ನಗರ ಬಳಿ ಆಗಿದ್ದರೂ ಸಹ ಶರ್ಮಿಳಾ ಮಾಂಡ್ರೆ ಮತ್ತು ಲೋಕೇಶ್ ಆಸ್ಪತ್ರೆಯಲ್ಲಿ ಜಯನಗರದ ಬಳಿ ಅಪಘಾತವಾಗಿದೆ ಎಂದು ಸುಳ್ಳು ಹೇಳಿದ್ದು ಏಕೆ ಎಂಬ ಅನುಮಾನ ಸಹ ಕಾಡುತ್ತಿದೆ. ಅವರು ಕನ್ನಿಂಗ್ ಹ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದ್ದಾರೆ.

ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ
ರವಿಕಾಂತೇಗೌಡ ಅವರು ನಿನ್ನೆ ಹೇಳಿದ್ದ ಪ್ರಕಾರ, ಶರ್ಮಿಳಾ ಮಾಂಡ್ರೆ ಮತ್ತು ಲೋಕೇಶ್ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಸಿಕ್ಕಿದ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ. ಶರ್ಮಿಳಾ ಮಾಂಡ್ರೆ ಗೆಳೆಯರಿಗೆ ರಾಜಕೀಯದ ಲಿಂಕ್ ಇದ್ದು, ರಾಜಕೀಯ ಕುಟುಂಬ ಒಂದಕ್ಕೆ ಸೇರಿದಾತ ಎನ್ನಲಾಗುತ್ತಿದೆ.


Click it and Unblock the Notifications











