'ವೀರ ಕಂಬಳ'ದ ಪರ ವಾದ ಮಂಡಿಸಿದ ಪ್ರಕಾಶ್ ರೈ: ಪ್ರತಿವಾದಿ ಮತ್ಯಾರೂ ಅಲ್ಲ ರವಿಶಂಕರ್!
'ವೀರ ಮದಕರಿ' ಸಿನಿಮಾ ಸ್ಥಗಿತಗೊಂಡ ಬಳಿಕ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು 'ವೀರ ಕಂಬಳ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಅಚ್ಚುಮೆಚ್ಚಿನ ಕಂಬಳದ ಕುರಿತಾದ ಸಿನಿಮಾವಿದು. ಈ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಪ್ರಕಾಶ್ ರೈ ಹಾಗೂ ರವಿಶಂಕರ್ 'ವೀರ ಕಂಬಳ' ತಂಡವನ್ನು ಸೇರಿಕೊಂಡಿದ್ದಾರೆ.
ಅಂದ್ಹಾಗೆ ಈ ಸಿನಿಮಾದಲ್ಲಿ ಪ್ರಕಾಶ್ ರಾಜ್ ಹಾಗೂ ರವಿಶಂಕರ್ ವಕೀಲರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಂಬಳದ ಪರವಾಗಿ ಪ್ರಕಾಶ್ ರಾಜ್ ವಾದ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಪ್ರತಿವಾದಿಯಾಗಿ ರವಿಶಂಕರ್ ಅಭಿನಯಿಸಿದ್ದಾರೆ. ವೀರ ಕಂಬಳದ ಈ ಕೋರ್ಟ್ ಸೀನ್ ಅನ್ನು ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ.
ಇದು ನನ್ನ ಮಣ್ಣಿಗೆ ಸಂಬಂಧಿಸಿದ ವಿಷಯ!
ಪ್ರಕಾಶ ರಾಜ್ ಈ ಹಿಂದೆ ಹಲವು ಸಿನಿಮಾಗಳಲ್ಲಿ ಕೋರ್ಟ್ ಸೀನ್ಗಳಲ್ಲಿ ಅಭಿನಯಿಸಿದ್ದಾರೆ. ಆದರೆ, 'ವೀರ ಕಂಬಳ' ಅವರ ವೃತ್ತಿ ಬದುಕಿಗೆ ವಿಶೇಷವಾದ ಸಿನಿಮಾ. "ಇದುವರೆಗೂ ಹಲವು ಕೋರ್ಟ್ ಸೀನ್ಗಳಲ್ಲಿ ನಟಿಸಿದ್ದರೂ ಇದು ಬೇರೆ. ಇದು ನನ್ನ ಮಣ್ಣಿನ ಒಂದು ವಿಷಯ. ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ. ಇಲ್ಲಿ ಸಂಭಾಷಣೆಯ ಮಾತುಗಳಿಗಿಂತ ನನ್ನ ಭಾವನೆಯೂ ಮುಖ್ಯವಾಗುತ್ತದೆ. ಇದು ನನಗೆ ಬಹಳ ಪರ್ಸನಲ್ ಸಿನಿಮಾ". ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

"ಒಬ್ಬ ಕನ್ನಡಿಗನಾಗಿ ನನಗೊಂದು ಜವಾಬ್ದಾರಿ ಇರುತ್ತದೆ. ಒಬ್ಬ ತುಳುವನಾಗಿ, ಆ ಮಣ್ಣಿನ ವಿಷಯದ ಚಿತ್ರ ಮಾಡಿದಾಗ, ಅದರ ಪರವಾಗಿ ವಾದಿಸುವಂತಹ, ಅದರ ಕುರಿತಾಗಿ ಇರುವ ಊಹಾಪೋಹಗಳನ್ನು, ಅಪಪ್ರಚಾರಗಳನ್ನು ನೀಗಿಸುವಂತಹ ಕೆಲಸ ಮಾಡಬೇಕಾಗುತ್ತೆ. ಯಾರೋ ಒಬ್ಬರು ಕಂಬಳದ ನೀರು ಕೆಸರು ಎಂದಾಗ, ಇಲ್ಲ ಅದು ಕೆಸರಲ್ಲ, ಅದು ತೀರ್ಥ ಅಂತ ಹೇಳುವ ದೃಶ್ಯಗಳಿವೆ." ಎಂದು ಸಿನಿಮಾದಲ್ಲಿ ವಾದ ಮಂಡಿಸಿದ ಬಳಿಕ ಪ್ರಕಾಶ್ ರೈ ಹೇಳಿದ್ದಾರೆ.
ತುಳು ಭಾಷೆಯಲ್ಲಿ ನಟಿಸುವ ಆಸೆಯಿತ್ತು
ಪ್ರಕಾಶ್ ರೈ ಕಂಬಳದ ಪರ ವಾದ ಮಂಡಿಸಿದರೆ, ರವಿಶಂಕರ್ ಪ್ರತಿವಾದ ಮಂಡಿಸಿದ್ದಾರೆ. ಈ ಕಾರಣಕ್ಕೆ ಪ್ರಕಾಶ್ ರೈ ಹಾಗೂ ರವಿಶಂಕರ್ ಕಾಂಬಿನೇಷನ್ನಲ್ಲಿ ಕೋರ್ಟ್ ಸೀನ್ ನೋಡುವುದಕ್ಕೆ ಪ್ರೇಕ್ಷಕರಿಗೆ ಮಜಾ ನೀಡಲಿದೆ. "ನಾನು ಈ ಚಿತ್ರದಲ್ಲಿ ನಟಿಸಲು ಮೂರು ಕಾರಣಗಳಿವೆ. ಮೊದಲು ನನಗೆ ತುಳು ಭಾಷೆಯ ಚಿತ್ರದಲ್ಲಿ ನಟಿಸುವ ಆಸೆಯಿತ್ತು. ನಾನು ರಾಜೇಂದ್ರ ಸಿಂಗ್ ಬಾಬು ಅವರ ಅಭಿಮಾನಿ. ಭಾರತದ ಶ್ರೇಷ್ಠ ನಟ ಪ್ರಕಾಶ್ ರಾಜ್ ಅವರೊಂದಿಗೆ ನಟಿಸುವ ಅವಕಾಶ. ಈ ಎಲ್ಲಾ ಕಾರಣಕ್ಕೆ 'ವೀರ ಕಂಬಳ. ನನಗೆ ವಿಶೇಷ" ಎಂದಿದ್ದಾರೆ ರವಿಶಂಕರ್.
'ವೀರ ಕಂಬಳ' ಸಿನಿಮಾಗಾಗಿ ರಾಜೇಂದ್ರ ಸಿಂಗ್ ಬಾಬು ಹಾಗೂ ತಂಡ ಎರಡು ವರ್ಷ ಕೆಲಸ ಮಾಡಿದೆ. ಅಲ್ಲದೆ ಟಿ ಎನ್ ಸೀತಾರಾಮ್ ಅವರಿಂದಲೂ ಸಾಕಷ್ಟು ವಿಷಯಗಳನ್ನು ಕಲೆಹಾಕಿದ್ದಷ್ಟೇ ಅಲ್ಲದೆ, ಒಂಬತ್ತು ತಿಂಗಳಿನಿಂದ ಇದೊಂದು ಸೀನ್ ಮೇಲೆ ಕೆಲಸ ಮಾಡಿದ್ದಾಗಿ ನಿರ್ದೇಶಕ ರಾಜೇಂದ್ರ ರಾಜೇಂದ್ರ ಸಿಂಗ್ ಬಾಬು ಹೇಳಿಕೊಂಡಿದ್ದಾರೆ.

ಪ್ರಕಾಶ್ ರಾಜ್ ಹಾಗೂ ರವಿಶಂಕರ್ರಿಂದ ಮೌಲ್ಯ ಹೆಚ್ಚಿದೆ
"ನಾವೇನೇ ಬರೆದಿಟ್ಟುಕೊಂಡರೂ ಪ್ರಕಾಶ್ ರಾಜ್ ಮತ್ತು ರವಿಶಂಕರ್ ಅಭಿನಯಿಸಿದ್ದು, ಸಿನಿಮಾ ದೃಶ್ಯದ ಮೌಲ್ಯ ಹೆಚ್ಚಿಸಿದೆ. ಇಬ್ಬರೂ ಅಪ್ಪಟ ಪ್ರತಿಭಾವಂತರು. ಪ್ರಕಾಶ್ ರಾಜ್ ಈ ಹಿಂದೆ 'ಮುತ್ತಿನ ಹಾರ' ಚಿತ್ರದಲ್ಲಿ ನಟಿಸಿದ್ದರು. ಎರಡು ಫೋನ್ ಮಾಡಿದೆ ಅಷ್ಟೇ. ಹೈದರಾಬಾದ್ನಿಂದ ನೇರವಾಗಿ ಚಿತ್ರೀಕರಣಕ್ಕೆ ಬಂದರು. ಇನ್ನು ರವಿಶಂಕರ್ ಬಹಳ ಒಳ್ಳೆಯ ಪಾತ್ರಗಳನ್ನು ಮಾಡುತ್ತಿದ್ದಾರೆ." ಎಂದಿದ್ದಾರೆ ರಾಜೇಂದ್ರ ಸಿಂಗ್ ಬಾಬು.
10-15 ಕಂಬಳಗಳಿಗೆ ಹೋಗಿ, ನೋಡಿ, ಅಲ್ಲಿಯ ತಜ್ಞರು, ಮಾಲೀಕರು ಮತ್ತು ಜಾಕಿಗಳನ್ನು ಮಾತಾಡಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಸುಮಾರು ವರ್ಷ ಸ್ಟ್ರಿಪ್ ಮಾಡಿದ್ದಾರಂತೆ ರಾಜೇಂದ್ರ ಸಿಂಗ್ ಬಾಬು. 800 ವರ್ಷಗಳ ಕ್ರೀಡೆಗೆ ಚ್ಯುತಿ ಬಾರದಂತೆ ಸಿನಿಮಾ ಮಾಡಲಾಗಿದೆ. ಇಲ್ಲಿ ಎಲ್ಲಾ ನೈಜ. ಯಾವುದು ಕೃತಕವಲ್ಲ ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.


Click it and Unblock the Notifications











