"ಸಿದ್ಧರಾಮಯ್ಯನವರೇ, ಈ ಹೋರಾಟ ನಿಮ್ಮನ್ನು ಇಳಿಸುವುದಕ್ಕೆ ಕಾರಣ ಆಗಬೇಡಿ"; ಪ್ರಕಾಶ್ ರಾಜ್
ದೇವನಹಳ್ಳಿಯಲ್ಲಿ ರೈತರ ಭೂ ಸ್ವಾಧೀನ ವಿರೋಧಿಸಿ ದೇವನಹಳ್ಳಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. 'ದೇವನಹಳ್ಳಿ ಚಲೋ' ಪ್ರತಿಭಟನಾ ಸಭೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಭಾಗವಹಿಸಿದ್ದರು. ಈ ವೇಳೆ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ರೈತರ ಭೂಮಿಯಲ್ಲಿ ಕಾರ್ಖಾನೆಗಳನ್ನು ನಿರ್ಮಾಣ ಮಾಡುವುದನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ವಿರೋಧಿಸಿದ್ದಾರೆ.
ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೂ, ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಸಿದ್ಧರಾಮಯ್ಯ, ಎಂ.ಬಿ ಪಾಟೀಲ್ ವಿರುದ್ಧವೂ ಗುಡುಗಿದ್ದಾರೆ. ವಿರೋಧ ಪಕ್ಷದಲ್ಲಿ ನೀವೇ ಮಾತು ಕೊಟ್ಟಿದ್ರಿ. ಈಗ ಏನಾಯ್ತು? ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ. ಬಹುಭಾಷಾ ನಟ ಪ್ರಕಾಶ್ ಭಾಷಣದ ತುಣುಕು ಇಲ್ಲಿವೆ.

ಮೂರು ವರ್ಷ ಬಾಯಿ ಬಡ್ಕೊಳ್ಬೇಕಾ?
"ನಾವಿಲ್ಲ ಸೇರಿರೋದು ಒಬ್ಬರನ್ನೊಬ್ಬರು ಉದ್ದೇಶಿ ಮಾತಾಡುವುದಕ್ಕೆ ಅಲ್ಲ. ನಮ್ಮ ಮಾತು ಇವತ್ತಿನ ಕಾಂಗ್ರೆಸ್ ಸರ್ಕಾರಕ್ಕೆ. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರೇ, ಎಂಬಿ ಪಾಟೀಲರೇ.. ಏನು ಮಾಡುತ್ತಿದ್ದೀರಿ. ಒಬ್ಬ ಮನುಷ್ಯನಿಗೆ ಒಂದು ಸಲ ಹೇಳಬಹುದು. ಎರಡು ಸಲ ಹೇಳಬಹುದು. ಮೂರು ವರ್ಷ ಬಾಯಿ ಬಡ್ಕೊಳ್ಬೇಕೆನ್ರಿ. ನಿಮಗೆ ಒಂದು ಅರ್ಥ ಆಗಬೇಕು. ನೀವು ಗೆದ್ದಿಲ್ಲ. ಭಾರತದ ರಾಜಕಾರಣದಲ್ಲಿ ಪಕ್ಷಗಳು, ವ್ಯಕ್ತಿಗಳು ಗೆಲ್ಲಲ್ಲ. ಜನ ಗೆಲ್ಲಿಸುತ್ತಾರೆ. ನೀವು ಆಳ್ವಿಕೆ ಮಾಡುವುದಕ್ಕೆ ಬಂದಿಲ್ಲ. ಪ್ರತಿನಿಧಿಸುವುದಕ್ಕೆ ಬಂದಿದ್ದೀರಿ." ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ನಿಮ್ಮನ್ನು ಧಿಕ್ಕಾರ ಮಾಡುವಂತಹ ಕಾಲ ದೂರವಿಲ್ಲ
"13 ಹಳ್ಳಿಯ ಹೆಣ್ಣು ಮಕ್ಕಳು, ಆ ಹಳ್ಳಿಯ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಬಂದು. ಅದನ್ನು ಒಂದು ಗಿಡಕ್ಕೆ ಹಾಕಿ, ನಾವು ಮಣ್ಣು ಮಾರಲ್ಲ ಅಂತಿದ್ದಾರೆ. ಇದನ್ನು ತುಂಬಾ ಸೂಕ್ಷ್ಮವಾಗಿ ನಿಮ್ಮನ್ನು ಧಿಕ್ಕಾರ ಮಾಡುವಂತಹ ಕಾಲ ದೂರವಿಲ್ಲ ಎಂದು ವಾರ್ನಿಂಗ್ ಮಾಡುತ್ತಿದ್ದೇವೆ. ಬೇಕಾ ಸಿದ್ರಾಮಣ್ಣ ನಿಮಗೆ? ಕರ್ನಾಟಕದ ರೈತರ ಬಾಯಿಯಿಂದ ಧಿಕ್ಕಾರ ಕೂಗಿಸಿಕೊಳ್ಳುವ ಪರಿಸ್ಥಿತಿಗೆ ನೀವು ಬರಬೇಕಾ? ಕಿವಿಯಿಲ್ವಾ? ಹೃದಯ ಇಲ್ವಾ? ಮನ:ಸಾಕ್ಷಿ ಇಲ್ವಾ? ಅಹಿಂದಾ ಅಂತೀರಿ.. ಜನಪರ ಅಂತೀರಿ.. ರೈತರ ಪರ ಅಂತೀರಿ. ಇದೇ ಹೋರಾಟದ ಮಧ್ಯ ವಿರೋಧ ಪಕ್ಷದಲ್ಲಿ ಇದ್ದಾಗ ಬಂದು ನೀವೇ ತಾನೇ ಮಾತು ಕೊಟ್ಟಿದ್ರಿ. ಮಾತಿಗೆ ನಿಲ್ತೀರಾ? ಮಾತಿಗೆ ತಪ್ಪುತ್ತೀರಾ?" ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ.

ಇಲ್ಲಿ ಯಾರು ಮುಖ್ಯಮಂತ್ರಿಗಳು?
"ಒಳಗಡೆ ಏನಾದರೂ ಮಸಲತ್ತು ನಡೆಯುತ್ತಿದೆಯಾ? ಇಲ್ಲಿ ಯಾರು ಮುಖ್ಯಮಂತ್ರಿಗಳು? ಏನು ನಾಲ್ಕು ನೂರು ಎಕರೆ ಬಿಡುತ್ತೀರಾ? ಒಂದಿಷ್ಟು ಕಮರ್ಷಿಯಲ್ ಲ್ಯಾಂಡ್ ಕೊಡುತ್ತೀರಾ? ಅಂದರೆ ಅರ್ಥ, ಭೂಮಿ ಬೆಲೆ ಜಾಸ್ತಿಯಾಗುತ್ತಾ? ಮನುಷ್ಯರಿಗೆ ಬೆಲೆ ಕೊಡ್ರಿ. ಭೂಮಿಗೆ ಬೆಲೆ ಕೊಟ್ಟರೆ, ನಿಮ್ಮ ಬೊಕ್ಕಸ ತುಂಬುತ್ತೆ. ನಿಮ್ಮ ಜೊತೆ ಹುನ್ನಾರ ಮಾಡುವವರ ಜೇಬು ತುಂಬುತ್ತೆ. ಸಮಾಜ ಬೆಳೆಯುತ್ತಿಲ್ಲ. ಈ ಹೋರಾಟ ನಿಲ್ಲುವುದಿಲ್ಲ. ಇದು ಅಂತ:ಕರಣದ ಹೋರಾಟ." ಎಂದಿದ್ದಾರೆ.
ನಿಮ್ಮನ್ನು ಇಳಿಸುವುದಕ್ಕೆ ಕಾರಣ ಆಗಬೇಡಿ
"ಏನ್ಮಾಡ್ತೀರಾ ಕಾರ್ಖಾನೆಗಳನ್ನು ಮಾಡಿ. ಅದು ಕೆಲಸ ಕೊಡುತ್ತಾ? ಬದುಕು ಕೆಟ್ಟಿದೆ ಅಂತ ಗೊತ್ತಿಲ್ವಾ? 6 ಸಾವಿರ ಎಕರೆ ರೀ- ಸೆಟಲ್ಮೆಂಟ್ ಮಾಡಿದ್ವಿ. ರಸ್ತೆಯಲ್ಲಿ ಬಿದ್ದು ಅಲೆಯುತ್ತಿದ್ದಾರೆ. ನಮ್ಮ ರೈತರನ್ನು ತೆಗೆದುಕೊಂಡು ಏನು ಮಾಡುತ್ತೀರಿ? ಕಾರ್ಖಾನೆಗಳನ್ನು ಮಾಡಿ ವಾಚ್ಮ್ಯಾನ್ಗಳನ್ನಾಗಿ ಮಾಡುತ್ತೀರಾ? ಕಸ ಮುಸುರೆ ತಿಕ್ಕಿಸುತ್ತೀರಾ? ನಿಮ್ಮಂಥ ಬುದ್ಧಿವಂತರಿಗೆ ಹೊಟ್ಟೆ ತುಂಬಿಸುವವರು ನಾವು. ದಯವಿಟ್ಟು ಸಿದ್ಧರಾಮಯ್ಯನವರೇ, ಇದು ಇನ್ನೊಂದು ಹೋರಾಟವಾಗುವುದೋ? ನಿಮ್ಮನ್ನು ಇಳಿಸುವುದಕ್ಕೋ ಕಾರಣ ಆಗಬೇಡಿ. ರೈತರನ್ನು ಅರ್ಧ ಮಾಡಿಕೊಳ್ಳಿ. ನಾವು ಮಾರಲ್ಲ ಅಂದರೆ ಮಾರಲ್ಲ. ಹಾಗೇನಾದರೂ ಆದರೆ, ಇವರ ಜೊತೆ ನಾನೂ ಇಲ್ಲೇ ಮಲಗುತ್ತೇನೆ. ಜೈಲಿಗೆ ಹಾಕುತ್ತೀರಾ? ನಾನು ಜಾಮೀನೇ ತೆಗೆದುಕೊಳ್ಳುವುದಿಲ್ಲ." ಎಂದು ಪ್ರಕಾಶ್ ರಾಜ್ ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











