ಅಣ್ಣಾವ್ರ ಹುಟ್ಟುಹಬ್ಬಕ್ಕೆ ಮುನ್ನ ರಾಘಣ್ಣ ಹೊಸ ಅಭಿಯಾನ
ಏಪ್ರಿಲ್ 24 ವರನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬ, ಕರುನಾಡ ಸಂಭ್ರಮ. ಈ ಬಾರಿ ಅಪ್ಪಾಜಿಯ ಹುಟ್ಟು ಹಬ್ಬವನ್ನು ಅವರ ಪುತ್ರ ರಾಘವೇಂದ್ರ ರಾಜಕುಮಾರ್ ವಿಶಿಷ್ಟವಾಗಿ ಆಚರಿಸಲು ಮುಂದಾಗಿದ್ದಾರೆ.
ಅಣ್ಣಾವ್ರ ಹುಟ್ಟುಹಬ್ಬವನ್ನು ಸಂಘ ಸಂಸ್ಥೆಗಳು, ಅಭಿಮಾನಿಗಳು ಅನ್ನದಾನ, ರಕ್ತದಾನ ಹೀಗೆ ಹಲವು ರೀತಿಯಲ್ಲಿ ಆಚರಿಸುತ್ತಾರೆ.
ರಾಘವೇಂದ್ರ ರಾಜಕುಮಾರ್ ತಂದೆಯ 86ನೇ ಹುಟ್ಟುಹಬ್ಬಕ್ಕೆ ಮುನ್ನ ಅವರ ಅಪೇಕ್ಷೆಯಂತೆ ಪರಿಸರ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

ಗಿಡ ನೆಡಬೇಕು, ಆ ಮೂಲಕ ಭೂಮಿ ತಾಯಿಗೆ ನಮ್ಮ ಕಿರುಸೇವೆ ಸಲ್ಲುವಂತಾಗಬೇಕು ಎನ್ನುವುದು ಅಪ್ಪಾಜಿಯ ಅಪೇಕ್ಷೆಯಾಗಿತ್ತು,
ಈ ಬಾರಿಯ ಅಪ್ಪಾಜಿಯ ಹುಟ್ಟುಹಬ್ಬಕ್ಕೆ ಮುನ್ನ (2015) ಕನಿಷ್ಠ ಹತ್ತು ಸಾವಿರ ಬೇವಿನ ಗಿಡವನ್ನು ನೆಡಲು ನಿರ್ಧರಿಸಲಾಗಿದೆ.
ಮುಂದಿನ ವರ್ಷದ ಅಪ್ಪಾಜಿಯ ಹುಟ್ಟುಹಬ್ಬಕೆ ಮುನ್ನ ಒಂದು ಲಕ್ಷ ಗಿಡವನ್ನು ನೆಡಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದೇವೆ ಎಂದು ರಾಘವೇಂದ್ರ ರಾಜಕುಮಾರ್ 'ಫಿಲ್ಮೀಬೀಟ್' ಗೆ ತಿಳಿಸಿದ್ದಾರೆ.
ಈಗಾಗಲೇ ಈ ಅಭಿಯಾನಕ್ಕೆ ಗಿಡನೆಡುವ ಮೂಲಕ ಚಾಲನೆ ನೀಡಿರುವ ರಾಘಣ್ಣ, ಅಪ್ಪಾಜಿಯ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಲು ಬರುವವರು ಗಿಡವೊಂದನ್ನು ನೆಡಲಿ ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದಾರೆ.


Click it and Unblock the Notifications











