"ಸರಸ್ವತಿ ಜೊತೆಗಿದ್ದಾಗ ಲಕ್ಷ್ಮಿ ಹಿಂದೆ ಹೋದೆ.. ಹೊಗೆ ಹಾಕಿಸಿಕೊಂಡೆ": ದರ್ಶನ್ಗೆ ಬಾಸ್ ಆಗಿದ್ದ ಅಣಜಿಯ ಬದುಕಿನ ಪಾಠ!
ಕನ್ನಡದ ಕೆಲವು ನಿರ್ಮಾಪಕರನ್ನು ಮರೆಯೋ ಹಾಗಿಲ್ಲ. ಯಾಕಂದ್ರೆ, ಅವರೆಲ್ಲ ಒಂದು ಸಿನಿಮಾ ಮಾಡಿ ಹೋದವರಲ್ಲ. ಸಿನಿಮಾದಲ್ಲಿ ಗೆದ್ದರೂ, ಸೋತರೂ ಚಿತ್ರರಂಗವನ್ನೇ ಕರ್ಮಭೂಮಿಯಾಗಿಸಿಕೊಂಡವರು. ಇಂತಹವರಲ್ಲಿ ಹಿರಿಯ ನಿರ್ಮಾಪಕ ಅಣಜಿ ನಾಗರಾಜ್ ಕೂಡ ಒಬ್ಬರು.
ಅಣಜಿ ನಾಗರಾಜ್ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ. ಆದರೆ, ಸಿನಿಮಾ ನಿರ್ಮಾಣಕ್ಕಿಂತಲೂ ಮುನ್ನ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಗೌರಿಶಂಕರ್, ಮಧು ಅಂತಹ ಲೆಜೆಂಡರಿ ಛಾಯಾಗ್ರಾಹಕರೊಂದಿಗೆ ಕೆಲಸ ಮಾಡಿದ ಅನುಭವ ಇವರದ್ದು.

ಗೌರಿಶಂಕರ್ ಅಂತಹ ಛಾಯಾಗ್ರಾಹಕರಿಗೆ ಸಹಾಯಕರಾಗಿದ್ದ ದರ್ಶನ್ಗೆ ಬಾಸ್ ಆಗಿದ್ದೇ ಅಣಜಿ ನಾಗರಾಜ್. ಇದೇ ಆತ್ಮೀಯತೆಯಿಂದಲೇ ದರ್ಶನ್ ಹಾಗೂ ಅಣಜಿ ನಾಗರಾಜ್ ಇಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಅಣಜಿ ನಾಗರಾಜ್ ಹಲವು ಸಿನಿಮಾಗಳಿಗೆ ಹಣ ಹೂಡಿ ನಷ್ಟ ಅನುಭವಿಸಿದ್ದರು. ಈಗ ಮತ್ತೆ ಛಾಯಾಗ್ರಾಹಕರಾಗಿರೋ ಅಣಜಿ ನಾಗರಾಜ್ ತಮ್ಮ ಬದುಕಿನ ಪಾಠವನ್ನು ಮಾರ್ಮಿಕವಾಗಿ ಹೇಳಿದ್ದಾರೆ.
25 ವರ್ಷದಿಂದ ಛಾಯಾಗ್ರಹಣ
ಅಣಜಿ ನಾಗರಾಜ್ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಅದರಲ್ಲಿ 25 ವರ್ಷಗಳ ಕಾಲ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಅನುಭವ ಇವರದ್ದು. ಈಗ ಪ್ರಥಮ್ ನಟಿಸಿರುವ ಕರ್ನಾಟಕದ ಅಳಿಯ ಸಿನಿಮಾ ಮೂಲಕ ಮತ್ತೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಈ ವೇಳೆ ಅಣಜಿ ನಾಗರಾಜ್ ತಾವು ಎಡವಿದ್ದೆಲ್ಲಿ ಅನ್ನೋದನ್ನು ಹೇಳಿದ್ದಾರೆ. ಅವರು ರಿವೀಲ್ ಮಾಡಿದ ವಿಷಯಗಳು ಝಲಕ್ ಇಲ್ಲಿದೆ.

"ಸಿನಿಮಾಗೆ ಬಂಡವಾಳ ಹಾಕಿ ಪ್ರಾಬ್ಲಮ್ ಆಯ್ತು"
"25 ವರ್ಷ ಕ್ಯಾಮರಾಮ್ಯಾನ್ ಆಗಿದ್ದೆ.. ಚಿತ್ರರಂಗಕ್ಕೆ ಬಂದು 33 ವರ್ಷ ಆಯ್ತು. ನನ್ನ ಜೀವನದ 70 ರಿಂದ 80 ಭಾಗ ಸಿನಿಮಾದಲ್ಲೇ ಇಟ್ಟಿದ್ದೀನಿ. ಸಿನಿಮಾ ಎಲ್ಲವನ್ನೂ ಕೊಟ್ಟಿದೆ. ನಾನು ಕೆಲವೊಂದು ತಪ್ಪು ಮಾಡಿದ್ದೇವೆ ಅಷ್ಟೇನೆ. ಫೋಟೊಗ್ರಫಿ ಮಾಡಿದ್ದರೆ, ನಾನು ರಾಜನ ಹಾಗೆನೇ ಇರುತ್ತಿದೆ. ಸಿನಿಮಾಗೆ ಬಂಡವಾಳ ಹಾಕಿದಾಗಲೇ ಸ್ವಲ್ಪ ಪ್ರಾಬ್ಲಮ್ ಆಗಿದ್ದು. 25 ವರ್ಷದಲ್ಲಿ ತಪ್ಪು ಸರಿ ಎಲ್ಲವನ್ನೂ ನೋಡಿಕೊಂಡು ಬಂದಿದ್ದೇವೆ." ಎಂದು ಅಣಜಿ ನಾಗರಾಜ್ ಹೇಳಿದ್ದಾರೆ.
"ಸರಸ್ವತಿ ಬಿಟ್ಟು ಲಕ್ಷ್ಮಿ ಹಿಂದೆ ಹೋದೆ"
"ಸಿನಿಮಾಗಿಂತ ನನಗೆ ಫೋಟೊಗ್ರಫಿ ಆಸೆ. ಕೆಲವು ತಪ್ಪು ಏನು ಮಾಡಿದ್ದೇವೆ ಅಂದರೆ, ಸರಸ್ವತಿ ನಮ್ಮೊಂದಿಗೆ ಇದ್ದಾಗ ಲಕ್ಷ್ಮಿ ಹಿಂದೆ ಓಡಿ ಹೋದೆ. ಸರಸ್ವತಿ ಕೈ ಕೊಟ್ಟಳು. ಈ ಜೀವನದಲ್ಲಿ ಸರಸ್ವತಿ ನಂಬಿದವರು ಯಾರಿಗೂ ಲಾಸ್ ಆಗೋದಿಲ್ಲ ಅನ್ನೋದು ಅನುಭವ ಆಯ್ತು. ಲಕ್ಷ್ಮಿ ಹಿಂದೆ ಹೋದವರೇ ಆಗಾಗ ಹೊಗೆ ಹಾಕಿಕೊಳ್ಳೋದು. ನಾನು ಸ್ವಲ್ಪ ಹೊಗೆ ಹಾಕಿಕೊಂಡೆವು." ಎಂದು ಅಣಜಿ ಹೇಳಿದ್ದಾರೆ.
ಅಣ್ಣಾವ್ರಿಂದ ಈಗಿನವರವರೆಗೂ ಕೆಲಸ
ಅಣಜಿ ನಾಗರಾಜ್ ಕನ್ನಡ ಚಿತ್ರರಂಗದ ದಿಗ್ಗಜರಿಂದ ಹಿಡಿದು ಇಂದಿನ ಯುವಪೀಳಿಗೆಯ ಹೀರೊವರೆಗೂ ಕೆಲಸ ಮಾಡುತ್ತಿದ್ದಾರೆ. ಅದನ್ನೇ ಮತ್ತೆ ನೆನಪಿಸಿಕೊಂಡಿದ್ದಾರೆ. "ಅಣ್ಣಾವ್ರಿಂದ ಹಿಡಿದು ಇಲ್ಲಿವರೆಗೂ ಎಲ್ಲರೊಂದಿಗೆ ಕೆಲಸ ಮಾಡಿದ್ದೇನೆ. ಯಾರಿಗೆ ಖುಷಿ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನು ಮಾತ್ರ ಎಂಜಾಯ್ ಮಾಡಿದ್ದೇನೆ. ಅಂದರೆ, ಸಿನಿಮ್ಯಾಟೋಗ್ರಫರ್ ಆಗಿ ಜಗತ್ತನ್ನೇ ನೋಡಿದ್ದೇನೆ." ಎಂದು ಹೇಳಿದ್ದಾರೆ.


Click it and Unblock the Notifications











