"ಬಾ ನಲ್ಲೆ ಮಧುಚಂದ್ರಕೆ ಕಥೆ ನನ್ನ ಹತ್ರ ಇತ್ತು"; ಕೆ ಶಿವರಾಂ ಅಂತಿಮ ದರ್ಶನದ ಬಳಿಕ ಸಾರಾ ಗೋವಿಂದು ಹೇಳಿದ್ದೇನು?
ಕನ್ನಡಿಗರು ಮೆಚ್ಚಿದ ಐಎಎಸ್ ಅಧಿಕಾರಿ ಕೆ ಶಿವರಾಂ ನಿನ್ನೆ (ಫೆಬ್ರವರಿ 29) ಅಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಟ ಶಿವರಾಂ ಕರ್ನಾಟಕದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದರು. ಸರ್ಕಾರಿ ಅಧಿಕಾರಿಯಾಗಿಯೂ, ಸಿನಿಮಾ ನಟನಾಗಿಯೂ ಜನಪ್ರಿಯತೆಯನ್ನು ಗಳಿಸಿದ್ದರು.
ಐಎಎಸ್ ಅಧಿಕಾರಿಯಾಗಿದ್ದುಕೊಂಡೇ ಸಿನಿಮಾರಂಗಕ್ಕೆ ಕಾಲಿಟ್ಟ ಕೆ ಶಿವರಾಂ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದು ಗೊತ್ತೇ ಇದೆ. 'ಬಾ ನಲ್ಲೆ ಮಧುಚಂದ್ರಕೆ' ಒಂದೇ ಒಂದು ಸಿನಿಮಾ ಅವರನ್ನು ಇಡೀ ಕರ್ನಾಟಕವೇ ಗುರುತಿಸುವಂತೆ ಮಾಡಿತ್ತು. ಈಗ ಅವರ ನಿಧನದ ಬಳಿಕ ಒಂದೊಂದು ಇಂಟ್ರೆಸ್ಟಿಂಗ್ ವಿಷಯಗಳನ್ನು ಸಿನಿಮಾ ಮಂದಿ ಹೊರಹಾಕುತ್ತಿದ್ದಾರೆ.

ಕೆ ಶಿವರಾಂ ಅವರ ಅಂತಿಮ ದರ್ಶನ ಪಡೆದ ಬಳಿಕ ನಿರ್ಮಾಪಕ ಹಾಗೂ ಹೋರಾಟಗಾರ ಸಾ ರಾ ಗೋವಿಂದು 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ. ಕೆ ಶಿವರಾಂ ಜೊತೆಗಿನ ಒಡನಾಟ ನೆನೆದಿದ್ದಾರೆ. ಕೆ ಶಿವರಾಂ ಅವರ ಅಂತಿಮ ದರ್ಶನದ ಬಳಿಕ ಸಾರಾ ಗೋವಿಂದು ಏನು ಹೇಳಿದ್ರು? ಅನ್ನುವುದನ್ನು ತಿಳಿಯಲು ಮುಂದೆ ಓದಿ.
"ಕೆ ಶಿವರಾಂ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ"
ಕೆ ಶಿವರಾಂ ಅಂತಿಮ ದರ್ಶನದ ಬಳಿಕ ಸಾರಾ ಗೋವಿಂದು ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. "ಕರ್ನಾಟಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿ ಮಾಡಿದಂತಹವರು ಶಿವರಾಂ. ಕನ್ನಡದಲ್ಲಿಯೇ ಐಎಎಸ್ ಬರೆದು ಕರ್ನಾಟಕದಲ್ಲಿ ಕನ್ನಡಿಗರ ಮನಸ್ಸನ್ನು ಗೆದ್ದವರು. ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ನಮ್ಮೆಲ್ಲರಿಗೂ ಹೆಮ್ಮೆ. ಆ ಕಾಲದಲ್ಲಿ ನಾನು ಹೆಚ್ಚು ಕಮ್ಮಿ 50 ರಿಂದ 75 ಕಾರ್ಯಕ್ರಮಗಳಲ್ಲಿ ಶಿವರಾಂ ಅವರೊಂದಿಗೆ ಭಾಗವಹಿಸಿದ್ದೇನೆ. ಕನ್ನಡದಲ್ಲಿ ಐಎಎಸ್ ಬರೆದು ಪಾಸ್ ಆಗಿದ್ದಕ್ಕೆ ಅವರಿಗೆ ಅನೇಕ ಕನ್ನಡ ಪರ ಸಂಘಟನೆಗಳು ಸನ್ಮಾನ ಮಾಡಿದ್ದು ನನ್ನ ಕಣ್ಮುಂದೆ ಬರುತ್ತಿದೆ." ಎಂದು ಹೇಳಿದ್ದಾರೆ.

"ಬಾ ನಲ್ಲೆ ಮಧುಚಂದ್ರಕೆ ನನ್ನ ಬಳಿ ಇತ್ತು"
ಕೆ ಶಿವರಾಂ ಅವರಿಗೆ ಹೊಸ ಇಮೇಜ್ ಕೊಟ್ಟ ಸಿನಿಮಾ 'ಬಾ ನಲ್ಲೆ ಮಧುಚಂದ್ರಕೆ'. ಈ ಸಿನಿಮಾದ ಕಥೆ ತಮ್ಮ ಬಳಿ ಇತ್ತು ಎಂದು ಹೇಳಿದ್ದಾರೆ. "ಅವರ ಪ್ರಪ್ರಥಮ ಚಿತ್ರ ಬಾ ನಲ್ಲೆ ಮಧುಚಂದ್ರಕೆ ನನ್ನ ಬಳಿ ಇದ್ದಂತಹ ಒಂದು ಸಬ್ಜೆಕ್ಟ್ ಅದು. ಅದನ್ನು ನಾಗತಿಹಳ್ಳಿಯವರು ಕೇಳಿದ್ರು. ಆ ಪಾತ್ರವನ್ನು ಶಿವರಾಂ ಅವರು ಸಿನಿಮಾ ಮಾಡುತ್ತಾರೆ ಅಂತ ಹೇಳಿದಾಗ ನಾನು ಅವರಿಗೆ ಬಿಟ್ಟು ಕೊಟ್ಟೆ. ಆ ಸ್ನೇಹ ನಮ್ಮದು. " ಎಂದು ಸ್ನೇಹದ ಬಗ್ಗೆ ಮಾತಾಡಿದ್ದಾರೆ.
"ಅವರದ್ದು ಸುಲಭದ ಹಾದಿಯಾಗಿರಲಿಲ್ಲ"
ಇದೇ ಸಂದರ್ಭದಲ್ಲಿ ಶಿವರಾಂ ನಡೆದು ಬಂದ ಹಾದಿ ಸುಲಭದ್ದಾಗಿರಲಿಲ್ಲ ಎಂದು ಹೇಳಿದ್ದಾರೆ. "ಇವತ್ತು 71 ವರ್ಷಕ್ಕೆ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ಅವರ ಸಮಾಜಕ್ಕೆ ಇದು ತುಂಬಾ ನಷ್ಟ ಆಗಿದೆ. ಅದನ್ನು ನಾವೆಲ್ಲರೂ ತಿಳಿದು ಕೊಳ್ಳಲೇಬೇಕು. ಸಿನಿಮಾರಂಗದಲ್ಲಿ ಹಾಗೂ ಸರ್ಕಾರ ಎರಡರಲ್ಲೂ ಸೇವೆ ಸಲ್ಲಿಸಿದ್ದರು. ಅವರು ನಡೆದು ಬಂದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. " ಎಂದು ಸಾರಾ ಗೋವಿಂದು ಹೇಳಿದ್ದಾರೆ.
ಕೆ ಶಿವರಾಂ ಪ್ರಾಮಾಣಿಕ ವ್ಯಕ್ತಿ
ಸಾರಾ ಗೋವಿಂದು ಜೊತೆ ಅಂತಿಮ ದರ್ಶನ ಪಡೆದ ಕರ್ನಾಟಕ ಚಲನ ಚಿತ್ರವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್ ಎಂ ಸುರೇಶ್ ಅಗಲಿದ ಕೆ ಶಿವರಾಂ ಅವರ ಗುಣಗಾನ ಮಾಡಿದ್ದಾರೆ. "ಶಿವರಾಂ ಅವರು ಕನ್ನಡ ನಾಡಿನ ನಿಷ್ಠಾವಂತ ಅಧಿಕಾರಿ. ಅವರದ್ದೇ ಧ್ಯೇಯಗಳನ್ನು, ಗುರಿಗಳನ್ನು, ಶ್ರದ್ಧೆ, ಪ್ರಾಮಾಣಿಕತೆ, ಹಾಗೇ ಜನಪರ ಕಾರ್ಯಗಳನ್ನು ಮಾಡುವಂತಹ ಧೀಮಂತ ವ್ಯಕ್ತಿ. ಬಡವರಿಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಇವತ್ತು ಬಡವರ ಮನೆಯಲ್ಲಿ ದೀಪ ಬೆಳಗುತ್ತಿದೆ ಅಂದ್ರೆ ಅದಕ್ಕೆ ಶಿವರಾಂ ಕಾರಣ. ನಾನು ಅಧ್ಯಕ್ಷನಾದಾಗ ಅವರು ನನ್ನನ್ನು ಕರೆಸಿ ಬಹಳ ವಿಚಾರಗಳನ್ನು ಹೇಳಿದ್ರು. ಆ ವಿಚಾರಗಳನ್ನು ನನ್ನ ಮನದಲ್ಲಿ ಇಟ್ಟುಕೊಂಡಿದ್ದೀನಿ. ಆ ಕೆಲಸಗಳನ್ನು ನಾನು ಮಾಡುತ್ತೇನೆ." ಎಂದು ಹೇಳಿದ್ದಾರೆ.


Click it and Unblock the Notifications











