"ಅಡ್ವಾನ್ಸ್ ಕೊಟ್ರೂ.. 8 ವರ್ಷದಿಂದ ಸಿನಿಮಾಗೆ ಕಾಲ್ಶೀಲ್ ಕೊಡ್ತಿಲ್ಲ": ಸುದೀಪ್ ವಿರುದ್ಧ ಕುಮಾರ್ ಆರೋಪ
ಕಿಚ್ಚ ಸುದೀಪ್ 46ನೇ ಸಿನಿಮಾ ಫಸ್ಟ್ ಲುಕ್ ಟೀಸರ್ ಹೊರಬಿದ್ದಿದೆ. 'ವಿಕ್ರಾಂತ್ ರೋಣ' ಬಳಿಕ ಕಿಚ್ಚನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ಕಾದು ಕೂತಿದ್ದ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. ಕಿಚ್ಚನ ಲುಕ್ ಕೂಡ ಅವರಿಗೆ ಕಿಕ್ ಕೊಟ್ಟಿದೆ.
ಇನ್ನೇನು ಕಿಚ್ಚ ಸುದೀಪ್ ಹೊಸ ಸಿನಿಮಾ ಅನೌನ್ಸ್ ಆಯ್ತು ಅನ್ನುವಾಗಲೇ ಹೊಸ ವಿವಾದವೊಂದು ಎದ್ದಿದೆ. ಕನ್ನಡದ ಹಿರಿಯ ನಿರ್ಮಾಪಕ ಎನ್ ಕುಮಾರ್ ಸ್ಯಾಂಡಲ್ವುಡ್ ಬಾದ್ಷಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎನ್ ಕುಮಾರ್ ತಿರುಗಿಬಿದ್ದಿದ್ದಾರೆ. ಸುದೀಪ್, ಫಿಲ್ಮ್ ಚೇಂಬರ್ ವಿರುದ್ಧ ಕಿಡಿಕಾರಿದ್ದಾರೆ. 8 ವರ್ಷದಿಂದ ಸುದೀಪ್ ಕಾಲ್ಶೀಟ್ ಕೊಡದೆ ಸತಾಯಿಸುತ್ತಿದ್ದಾರೆ ಅಂತ ಫಿಲ್ಮ್ ಚೇಂಬರ್ನಲ್ಲೇ ಅಸಮಧಾನ ಹೊರಹಾಕಿದ್ದಾರೆ. ಅಸಲಿಗೆ ನಿರ್ಮಾಪಕ ಎನ್ ಕುಮಾರ್ ಹಾಗೂ ಕಿಚ್ಚ ಸುದೀಪ್ ನಡುವಿನ ವ್ಯವಹಾರವೇನು? ಕಿಡಿ ಕಾರಿದ್ದು ಏಕೆ? ತಿಳಿಯೋಕೆ ಮುಂದೆ ಓದಿ.
ಎನ್. ಕುಮಾರ್ ಆರೋಪವೇನು?
ಸ್ಯಾಂಡಲ್ವುಡ್ನ ಹಿರಿಯ ನಿರ್ಮಾಪಕರಲ್ಲಿ ಎನ್. ಕುಮಾರ್ ಕೂಡ ಒಬ್ಬರು. ಕಿಚ್ಚ ಸುದೀಪ್ ಅಭಿನಯದ ಹಲವು ಸಿನಿಮಾಗಳನ್ನು ನಿರ್ಮಾಣದ ಜೊತೆಗೆ ವಿತರಣೆ ಕೂಡ ಮಾಡಿದ್ದಾರೆ. 2016ರಲ್ಲಿ'ಮುಕುಂದ ಮುರಾರಿ' ಅನ್ನೋ ರಿಮೇಕ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ, ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಅಂದುಕೊಂಡಷ್ಟು ಸದ್ದು ಮಾಡಿರಲಿಲ್ಲ.

ಹೆಚ್ಚು ಕಡಿಮೆ ಈ ಸಿನಿಮಾ ವೇಳೆನೇ ಸುದೀಪ್ ಹಾಗೂ ಎನ್. ಕುಮಾರ್ ನಡುವೆ ಆಗಿದ್ದ ಒಡಂಬಡಿಕೆ ಈಗ ವಿವಾದಕ್ಕೆ ತಿರುಗಿದೆ. ಇವರ ನಿರ್ಮಾಣದಲ್ಲಿ ಕಿಚ್ಚ ಸುದೀಪ್ ಸಿನಿಮಾ ಮಾಡಲು ಒಪ್ಪಿ ಈಗ ಸತಾಯಿಸುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
8 ವರ್ಷದಿಂದ ಕಾಲ್ಶೀಟ್ ಕೊಡುತ್ತಿಲ್ಲ
ಸುಮಾರು 8 ವರ್ಷಗಳ ಹಿಂದೆ ಎನ್ ಕುಮಾರ್ ಸಿನಿಮಾ ಮಾಡುವ ದೃಷ್ಟಿಯಿಂದ ಕಿಚ್ಚ ಸುದೀಪ್ಗೆ ಮುಂಗಡ ಹಣ ಪಾವತಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಕಾಲ್ಶೀಟ್ ಕೊಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಅಲ್ಲದೆ ಇವತ್ತು-ನಾಳೆ ಅಂತ ಹೇಳುತ್ತಿದ್ದಾರೆ. ನಿಮ್ಮದೇ ಮುಂದಿನ ಸಿನಿಮಾ ಅಂದು ಬೇರೆಯವರಿಗೆ ಕಾಲ್ಶೀಟ್ ಕೊಡುತ್ತಾರೆ ಎಂದು ಹಿರಿಯ ನಿರ್ಮಾಪಕ ಎನ್.ಕುಮಾರ್ ಆರೋಪ ಮಾಡಿದ್ದಾರೆ.
ಈ ಸಂಬಂಧ ನಿರ್ಮಾಪಕ ಎನ್.ಕುಮಾರ್ ಫಿಲ್ಮ್ ಚೇಂಬರ್ಗೆ ಪತ್ರವನ್ನು ಬರೆದಿದ್ದರು. ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಚ್ಚ ಸುದೀಪ್ ಜೊತೆ ಫಿಲ್ಮ್ ಚೇಂಬರ್ ವಿರುದ್ಧವೂ ಆರೋಪ ಮಾಡಿದ್ದಾರೆ.
"ಫುಲ್ ಹಣ ಕೊಟ್ಟಿದ್ದೇನೆ"
200ಕ್ಕೂ ಹೆಚ್ಚು ಸಿನಿಮಾ ವಿತರಣೆ ಮಾಡಿದ್ದೇನೆ. ಹೀಗಿರುವಾಗ ನಮ್ಮಂತಹ ನಿರ್ಮಾಪಕರಿಗೆ ತೊಂದರೆಯಾಗಬಾರದು. ಸುದೀಪ್ ನನ್ನಿಂದ ಬೇರೆಯವರಿಗೆ ಹಣ ಕೊಡಿಸಿದ್ದಾರೆ. ಅವರೂ ಬಂದು ಹೇಳಿಕೆ ಕೊಡುವುದಕ್ಕೂ ರೆಡಿಯಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಿಚ್ಚ ಸುದೀಪ್ ಸಿಗದೇ ಇರೋ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ. ಫಿಲ್ಮ್ ಚೇಂಬರ್ 6 ಬಾರಿ ಪತ್ರ ಬರೆದರೂ ಪ್ರತಿಕ್ರಿಯೆ ಇಲ್ಲ. ಅಲ್ಲದೆ ಈಗ ಸಾಕ್ಷಿ ಇದೆಯಾ? ಅಂತ ಕೇಳುತ್ತಿದ್ದಾರೆ. ನಂಬಿಕೆಯಿಂದ ಕೊಟ್ಟ ಹಣಕ್ಕೆ ಈಗ ಸಾಕ್ಷಿ ಕೇಳುತ್ತಿದ್ದರೆಂದು ಬೇಸರ ಹೊರಹಾಕಿದ್ದಾರೆ.
'ಮುತ್ತತ್ತಿ ಸತ್ಯರಾಜ್' ಟೈಟಲ್ ಇಟ್ಟು ಸಿನಿಮಾ
ಎನ್. ಕುಮಾರ್ 'ಮುತ್ತತ್ತಿ ಸತ್ಯರಾಜ್' ಅನ್ನೋ ಟೈಟಲ್ ಅನ್ನು ರಿಜಿಸ್ಟರ್ ಮಾಡಿಟ್ಟುಕೊಂಡಿದ್ದಾರೆ. ನಂದ ಕಿಶೋರ್ ಸ್ಕ್ರಿಪ್ಟ್ ಕೂಡ ಮಾಡಿದ್ದಾರಂತೆ. ಆದರೆ, ಸುದೀಪ್ ಅವರೇ ಕೈಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ನಿರ್ಮಾಪಕ ಎನ್. ಕುಮಾರ್ ಮಾಡಿರೋ ಈ ಆರೋಪಕ್ಕೆ ಕಿಚ್ಚ ಸುದೀಪ್ ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ. ಇಬ್ಬರ ನಡುವೆ ಆದ ಒಡಂಬಡಿಕೆ ಏನು? ಕಿಚ್ಚ ಸುದೀಪ್ ವರ್ಷನ್ ಏನು? ಅನ್ನೋದು ಗೊತ್ತಾಗಬೇಕಿದೆ.


Click it and Unblock the Notifications











