'ಉಪೇಂದ್ರ' ರಿ-ರಿಲೀಸ್; ಸಿನಿಮಾ ನೋಡಿದ ಪ್ರೇಕ್ಷಕರಿಗೆ ₹1 ಕೋಟಿ ಗೆಲ್ಲೋ ಚಾನ್ಸ್.. 25ನೇ ದಿನ ಸಿಗುತ್ತೆ ಹಣ
ರಿಯಲ್ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಅವರದ್ದೇ ಹೆಸರಿನ ಸಿನಿಮಾ 'ಉಪೇಂದ್ರ' ಮರು ಬಿಡುಗಡೆಯಾಗುತ್ತಿದೆ. ಕನ್ನಡದ ಚಿತ್ರರಂಗದ ಸೂಪರ್ಸ್ಟಾರ್ಗಳು ನಾಪತ್ತೆ ಆಗಿರುವ ಹಿನ್ನೆಲೆಯಲ್ಲಿ ಹಿಂದೆ ಸದ್ದು ಮಾಡಿದ ಸಿನಿಮಾಗಳು ಒಂದೊಂದಾಗಿ ಪೆಟ್ಟಿಗೆಯಿಂದ ಹೊರ ಬರುತ್ತಿವೆ. ಅದರಲ್ಲಿ ಉಪ್ಪಿ 'ಉಪೇಂದ್ರ' ಸಿನಿಮಾ ಕೂಡ ಒಂದು.
ಎರಡು ವರ್ಷಗಳ ಹಿಂದಷ್ಟೇ 'ಉಪೇಂದ್ರ' ರಿಲೀಸ್ ಆಗಿ 27 ವರ್ಷಗಳನ್ನು ಪೂರೈಸಿತ್ತು. 1999ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಬಿಡುಗಡೆಯಾಗಿ ಈಗ 27 ವರ್ಷಗಳನ್ನು ಪೂರೈಸಿದೆ. ಈ ಬೆನ್ನಲ್ಲೇ ಮತ್ತೆ ಇಂದಿನ ಪೀಳಿಗೆಗೆ ಈ ಸಿನಿಮಾವನ್ನು ತೋರಿಸುವುದಕ್ಕೆ ಪರಮೇಶ್ವರ್ ಬಿ ಎಂಬುವವರು ಮುಂದೆ ಬಂದಿದ್ದಾರೆ.

ಈಗಾಗಲೇ ಹಲವು ಬಾರಿ ಕಿರುತೆರೆಯಲ್ಲಿ ಪ್ರಸಾರ ಕಂಡಿರುವ ಈ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡುವ ಮಜಾನೇ ಬೇರೆ. ಆದರೂ, ಇಂದಿನ ಪೀಳಿಗೆಯನ್ನು ಥಿಯೇಟರ್ಗೆ ಕರೆದುಕೊಂಡು ಬರುವುದೇ ಒಂದು ಸವಾಲು. ISH MYRA Producer ಕಂಪನಿ ಮೂಲಕ ಪರಮೇಶ್ವರ್ ಬಿ ಕನ್ನಡದ ಪ್ರೇಕ್ಷಕರಿಗೆ ಒಂದು ಆಫರ್ ಕೊಟ್ಟಿದ್ದಾರೆ. ಇವರು ಥೇಟ್ ಉಪ್ಪಿಯಂತೆಯೇ ತಲೆ ಉಪಯೋಗಿಸಿ, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅದೂ ಒಂದು ಕೋಟಿ ಆಫರ್ ನೀಡುವ ಮೂಲಕ. ಅದೂ ಸಿನಿಮಾ ನೋಡಿದರೆ, ಒಂದು ಕೋಟಿ ಹೇಗೆ ಸಿಗುತ್ತೆ? ತಿಳಿಯುವುದಕ್ಕೆ ಮುಂದೆ ಓದಿ.
'ಉಪೇಂದ್ರ' ಸಿನಿಮಾಗೆ ಒಂದು ಫ್ಯಾನ್ ಫಾಲೋವಿಂಗ್ ಇದೆ. ಈ ಸಿನಿಮಾ ಯಾವಾಗ ರಿ-ರಿಲೀಸ್ ಆದರೂ ಅಷ್ಟೇ, ಥಿಯೇಟರ್ಗೆ ಹೋಗಿ ನೋಡುವ ಜನರಂತೂ ಇದ್ದಾರೆ. ಆದರೂ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಪರಮೇಶ್ವರ್ ಬಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅಸಾಧ್ಯ ಅನ್ನೋದನ್ನ ಸಾಧ್ಯ ಮಾಡ್ತೀವಿ ನಂಬಿ ಅಂತ ವಿಶ್ವಾಸದಿಂದ ತಮ್ಮ ಯೋಜನೆಯನ್ನು ಹಂಚಿಕೊಂಡಿದ್ದಾರೆ.
ರಿ-ರಿಲೀಸ್ ಆಗುತ್ತಿರುವ 'ಉಪೇಂದ್ರ ಸಿನಿಮಾವನ್ನು ನೋಡಬೇಕು. ಆ ನಂತರ ಕೇಳುವ ಪ್ರಶ್ನೆಗೆ ಉತ್ತರ ನೀಡುವವರಿಗೆ ಬರೊಬ್ಬರಿ 1 ಕೋಟಿ ರೂಪಾಯಿ ಗೆಲ್ಲುವ ಅವಕಾಶ ನೀಡಲಾಗಿದೆ. ಇದೂವರೆಗೂ ಪ್ರೇಕ್ಷಕರಿಗೆ ಸಿನಿಮಾತಂಡವೊಂದು ಕೊಡುತ್ತಿರುವ ಅತೀ ದೊಡ್ಡ ಆಫರ್ ಎಂದೇ ಹೇಳಬಹುದು. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಇಂತಹ ದುಬಾರಿ ಆಗಿದ್ದು ತೀರಾ ವಿರಳ.

'ಉಪೇಂದ್ರ' ಸಿನಿಮಾ ಜೂನ್ 4ನೇ ರಂದು ರಿ-ರಿಲೀಸ್ ಮಾಡುವುದಕ್ಕೆ ಪ್ರಯತ್ನ ನಡೆಯುತ್ತಿದೆ. ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ಗೆ ಪರಮೇಶ್ವರ್ ಬಿ ಮುಂದಾಗಿದ್ದಾರೆ. ವಿಶೇಷ ಅಂದ್ರೆ, ಅದು ಬರೀ ಸಿಂಗಲ್ ಸ್ಕ್ರೀನ್ಗಳಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ಹೀಗಾಗಿ ಅಲ್ಲಿ ಪ್ರತಿ ಥಿಯೇಟರ್ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಶೋ ಮುಗಿದ ಬಳಿಕ 10 ನಿಮಿಷ ಪ್ರಶ್ನೋತ್ತರ ಕಾರ್ಯಕ್ರಮ ಏರ್ಪಡಿಸಲಿದೆ. ಸರಿಯಾದ ಉತ್ತರ ನೀಡಿದ ಪ್ರೇಕ್ಷಕರಿಗೆ ಪ್ರಾಶಸ್ತ್ಯ ಮೇರೆಗೆ ಆ ಶೋನ ಸಂಪೂರ್ಣ ಕಲೆಕ್ಷನ್ ದುಡ್ಡನ್ನು ಬಹುಮಾನವಾಗಿ ನೀಡಲಾಗುತ್ತಿದೆ.
ಇಷ್ಟೇ ಅಲ್ಲದೇ "ಉಪೇಂದ್ರ ಸಿನಿಮಾ ರಿ-ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದ ಬಳಿಕ ಮತ್ತೊಂದು ಬಂಪರ್ ಆಫರ್ ಕೂಡ ಇದೆ. ಅದೇ ರೀತಿ 25ನೇ ದಿನ ಉತ್ತರ ನೀಡಿದ ಒಬ್ಬ ಪ್ರೇಕ್ಷಕನಿಗೆ 1 ಕೋಟಿ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗುತ್ತದೆ" ಎಂದು ಆಯೋಜಕ ಪರಮೇಶ್ವರ್ ಬಿ ಹೇಳಿದ್ದಾರೆ. ಅಷ್ಟಕ್ಕೂ ಈ ಬಂಪರ್ ಆಫರ್ನ ಉದ್ದೇಶವೇನು ಅಂದರೆ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಸಿನಿಮಾಗಳನ್ನು ಈ ಜನರೇಷನ್ನ ಸಿನಿಮಾ ಪ್ರೇಮಿಗಳಿಗೆ ತಿಳಿಸುವುದಾಗಿದೆ. ಹಾಗೇ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆಸಿ, ಸಿಂಗಲ್ ಸ್ಕ್ರೀನ್ಗಳನ್ನು ಉಳಿಸಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.


Click it and Unblock the Notifications
