Exclusive: ಉಮಾಪತಿ ಕೈಯಲ್ಲಿ ಶಿವಣ್ಣನ ಟೈಟಲ್: 'ದೊರೆ' ಆಗಬೇಕಿತ್ತು ಪುನೀತ್!
'ದೊರೆ'.. ಸ್ಯಾಂಡಲ್ವುಡ್ನ ಪವರ್ಫುಲ್ ಟೈಟಲ್ನಲ್ಲಿ ಇದೂ ಒಂದು. 27 ವರ್ಷಗಳ ಹಿಂದೆ ಶಿವರಾಜ್ಕುಮಾರ್ ಅಭಿನಯಿಸಿದ್ದ 'ದೊರೆ' ಸ್ಯಾಂಡಲ್ವುಡ್ನ ಎವರ್ಗ್ರೀನ್ ಸಿನಿಮಾಗಳಲ್ಲೊಂದು. ಹೆಚ್ಚು ಕಡಿಮೆ ಮೂರು ದಶಕಗಳ ಹಿಂದೆ ಸದ್ದು ಮಾಡಿದ್ದ 'ದೊರೆ' ಈಗ ಮತ್ತೆ ಸುದ್ದಿಯಲ್ಲಿದೆ.
Recommended Video

ಶಿವರಾಜ್ಕುಮಾರ್, ಹೇಮ ಪಂಚಮುಖಿ, ಭಾರತಿ ವಿಷ್ಣುವರ್ಧನ್ ನಟಿಸಿದ್ದ ಈ ಸಿನಿಮಾವನ್ನು ಶಿವಮಣಿ ನಿರ್ದೇಶಿಸಿದ್ದರು. ಕುಂ. ವೀರಭದ್ರಪ್ಪ ಅವರ ಕಾದಂಬರಿ 'ಬೇಲಿಯ ಹೂಗಳು' ಕಥೆಯನ್ನು ಆಧರಿಸಿ ನಿರ್ಮಿಸಲಾಗಿತ್ತು. ಈಗ ಸ್ಯಾಂಡಲ್ವುಡ್ನಲ್ಲಿ ಮತ್ತೆ 'ದೊರೆ' ಸದ್ದು ಕೇಳಿಸುತ್ತಿದೆ.
'ರಾಬರ್ಟ್' ಸಿನಿಮಾದ ನಿರ್ಮಾಪಕ ಉಮಾಪತಿ ಗೌಡ ಬಳಿಕ 'ದೊರೆ' ಸಿನಿಮಾದ ಟೈಟಲ್ ಇದೆ. ಇದೇ ಟೈಟಲ್ ಇಟ್ಟು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಸಿನಿಮಾ ಮಾಡಲು ಮುಂದಾಗಿದ್ದರು. ಅಷ್ಟರಲ್ಲಿಯೇ ಪುನೀತ್ ರಾಜ್ಕುಮಾರ್ ಅಗಲಿದ್ದರಿಂದ ಆ ಸಿನಿಮಾವನ್ನು ಅಲ್ಲಿಗೆ ನಿಲ್ಲಿಸಬೇಕಾಯ್ತು. ಈಗ ಉಮಾಪತಿ 'ದೊರೆ' ಟೈಟಲ್ ಇಟ್ಟು ಯಾರಿಗೆ ಸಿನಿಮಾ ಮಾಡುತ್ತಾರೆ? ಮತ್ತೆ ಶಿವಣ್ಣ 'ದೊರೆ' ಆಗುತ್ತಾರಾ? ಈ ಎಲ್ಲಾ ಪ್ರಶ್ನೆ ಹುಟ್ಟಿಕೊಂಡಿದೆ. 'ದೊರೆ' ಟೈಟಲ್ ಬಗ್ಗೆ ನಿರ್ಮಾಪಕ ಉಮಾಪತಿ ಫಿಲ್ಮಿಬೀಟ್ ಜೊತೆ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಚಿಕ್ಕಂದಿನಿಂದಲೂ 'ದೊರೆ' ಟೈಟಲ್ ಇಷ್ಟ
ಚಿಕ್ಕಣ್ಣ ಹೀರೊ ಆಗಿ ನಟಿಸುತ್ತಿರುವ 'ಉಪಾಧ್ಯಕ್ಷ' ಸಿನಿಮಾ ಇಂದು ( ಜೂನ್ 16) ಸೆಟ್ಟೇರಿದೆ. ನಿರ್ಮಾಪಕ ಉಮಾಪತಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ ಈ ವೇಳೆ 'ದೊರೆ' ಟೈಟಲ್ ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಶಿವಣ್ಣ ಅಭಿನಯದ 'ದೊರೆ' ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿದ್ದು ಯಾಕೆ? ಅನ್ನು ಸೀಕ್ರೆಟ್ ಅನ್ನು ಫಿಲ್ಮಿಬೀಟ್ಗೆ ತಿಳಿಸಿದ್ದಾರೆ. "ನನಗೆ ಚಿಕ್ಕಂದಿನಿಂದಲೂ 'ದೊರೆ' ಅನ್ನುವ ಟೈಟಲ್ ತುಂಬಾನೇ ಇಷ್ಟ. 'ದೊರೆ' ಸಿನಿಮಾನೂ ಇಷ್ಟಪಟ್ಟಿದ್ದೇನೆ. ಅದಕ್ಕೆ ಈ ಟೈಟಲ್ ಅನ್ನು ನನ್ನ ಬ್ಯಾನರ್ನಲ್ಲಿ ರಿಜಿಸ್ಟರ್ ಮಾಡಿಸಿಟ್ಟುಕೊಂಡಿದ್ದೇನೆ." ಎನ್ನುತ್ತಾರೆ ನಿರ್ಮಾಪಕ ಉಮಾಪತಿ.

ಶಿವಣ್ಣನೇ ಈ ಸಿನಿಮಾಗೆ ಮೊದಲ ಆಯ್ಕೆ
ನಿರ್ಮಾಪಕ ಉಮಾಪತಿ ಬಳಿ 'ದೊರೆ' ಟೈಟಲ್ ಇದೆ. ಆದರೆ, ಈ ಟೈಟಲ್ ಇಟ್ಟುಕೊಂಡು ಯಾರಿಗೆ ಸಿನಿಮಾ ಮಾಡುತ್ತಾರೆ ಅನ್ನುವುದೇ ಪ್ರಶ್ನೆ. "ದೊರೆ ಟೈಟಲ್ ಅನ್ನು ನಾಲ್ಕು ವರ್ಷದ ಹಿಂದೆನೇ ರಿಜಿಸ್ಟರ್ ಮಾಡಿದ್ದೇನೆ. ಅಲ್ಲಿಂದಲೂ ಸಿನಿಮಾ ಮಾಡಬೇಕು ಅಂತಲೇ ಇದ್ದೇನೆ. ಅದ್ಯಾವಾಗ ಕೈಗೂಡುತ್ತೋ ಗೊತ್ತಿಲ್ಲ. 'ದೊರೆ' ಟೈಟಲ್ ಇಟ್ಟು ಸಿನಿಮಾ ಮಾಡುವುದಾದರೆ ಮೊದಲ ಆಯ್ಕೆ ಶಿವಣ್ಣನೇ ಆಗಿರುತ್ತಾರೆ. ಒಂದ್ವೇಳೆ ಅವರು ಒಪ್ಪದೆ ಇದ್ದರೆ ಮುಂದೆ ಬೇರೆ ಆಲೋಚನೆ ಮಾಡುತ್ತೇವೆ." ಎನ್ನುತ್ತಾರೆ ಉಮಾಪತಿ.

ಅಪ್ಪು ಸಿನಿಮಾಗೆ 'ದೊರೆ' ಟೈಟಲ್
ಪುನೀತ್ ರಾಜ್ಕುಮಾರ್ಗೆ ಉಮಾಪತಿ ಒಂದು ಸಿನಿಮಾ ನಿರ್ಮಾಣ ಮಾಡಬೇಕಿತ್ತು. ಅಪ್ಪು ಸಿನಿಮಾಗೆ 'ದೊರೆ' ಅಂತ ಟೈಟಲ್ ಇಡುವುದಕ್ಕೆ ಮುಂದಾಗಿದ್ದರು. ಆದರೆ, ಅಷ್ಟರಲ್ಲೇ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡಿದ್ದರಿಂದ ಸಿನಿಮಾ ಅಲ್ಲಿಗೆ ನಿಂತಿದೆ ಎನ್ನುತ್ತಾರೆ ಉಮಾಪತಿ. "ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗಾಗಿ ಮಾಡಬೇಕಿದ್ದ ಸಿನಿಮಾಗೆ 'ದೊರೆ' ಟೈಟಲ್ ಇಡಬೇಕು ಅಂದುಕೊಂಡಿದ್ದೆವು. ಆದರೆ, ನಾವು ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡೆವು. ಈಗ 'ದೊರೆ' ಟೈಟಲ್ ಹಾಗೇ ಉಳಿದಿದೆ. ಮುಂದೆ ನೋಡುತ್ತೇವೆ."

'ಸಿಂಧೂರ ಲಕ್ಷ್ಮಣ' ಯಾವಾಗ?
"ಸದ್ಯ 'ಉಪಾಧ್ಯಕ್ಷ' ಸಿನಿಮಾ ಸೆಟ್ಟೇರಿದೆ. ಮನೋರಂಜನೆ ನೀಡುವ ಸಿನಿಮಾವನ್ನು ಮಾಡುತ್ತಿದ್ದೇವೆ. ಈ ಸಿನಿಮಾದ ಬಳಿಕ 'ಸಿಂಧೂರ ಲಕ್ಷಣ' ಸಿನಿಮಾ ಸೆಟ್ಟೇರಲಿದೆ. ಮುಂದೆ ಒಂದೊಂದೇ ಸಿನಿಮಾಗಳು ಸೆಟ್ಟೇರಲಿವೆ." ಎನ್ನುತ್ತಾರೆ ನಿರ್ಮಾಪಕ ಉಮಾಪತಿ.


Click it and Unblock the Notifications











