"ಯಾರೂ ಶಾಶ್ವತ ಶತ್ರುಗಳಲ್ಲ.. ಯಾರೂ ಸ್ನೇಹಿತರಲ್ಲ"; ದರ್ಶನ್ ಜೊತೆಗಿನ ಸ್ನೇಹದ ಬಗ್ಗೆ ಉಮಾಪತಿ ಮಾತು!
ಸ್ಯಾಂಡಲ್ವುಡ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ದರ್ಶನ್ ಇಬ್ಬರೂ ಕಿತ್ತಾಡಿಕೊಂಡಿದ್ದರು. 25 ಕೋಟಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಉಮಾಪತಿ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಏಟಿಗೆ ಎದಿರೇಟು ಕೊಟ್ಟಿದ್ದರು.
ಈ ಪ್ರಕರಣಕ್ಕೂ ಮುನ್ನ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಆತ್ಮೀಯರಾಗಿದ್ದರು. ಕೇವಲ ನಟ-ನಿರ್ಮಾಪಕ ಅನ್ನೋದಷ್ಟೇ ಅಲ್ಲ. ವೈಯಕ್ತಿಕವಾಗಿ ಇಬ್ಬರಲ್ಲೂ ಉತ್ತಮ ಬಾಂಧವ್ಯ ಬೆಳೆದಿತ್ತು. ಆದರೆ, ಒಂದು ಘಟನೆ ವಿಚಾರವಾಗಿ ಇಬ್ಬರೂ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದರು. ಅಲ್ಲಿಂದ ಇಬ್ಬರೂ ಮುಖಾ ಮುಖಿ ಆಗಿದ್ದೇ ಇಲ್ಲ.

ಈಗ ಉಮಾಪತಿ ಶ್ರೀನಿವಾಸ್ ಗೌಡ ಕಾಮಿಡಿ ಕಿಂಗ್ ಚಿಕ್ಕಣ್ಣಗೆ 'ಉಪಾಧ್ಯಕ್ಷ' ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಇದೇ ತಿಂಗಳು (ಜನವರಿ 26) ಬಿಡುಗಡೆಯಾಗುತ್ತಿದೆ. ಹೀಗಾಗಿ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಹೀಗೆ ಫಸ್ಟ್ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ವಂಚನೆ ಆರೋಪ ಪ್ರಕರಣದ ಬಳಿಕ ಉಮಾಪತಿ ಹಾಗೂ ದರ್ಶನ್ ನಡುವಿನ ಸ್ನೇಹ ಹೇಗಿದೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
'ರಾಬರ್ಟ್' ಸಿನಿಮಾ ಬಳಿಕ ಉಮಾಪತಿ 'ಮದಗಜ', 'ಉಪಾಧ್ಯಕ್ಷ' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇಲ್ಲಿವರೆಗೂ ಸ್ಟಾರ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದವರು ಹಾಸ್ಯ ನಟ ಚಿಕ್ಕಣ್ಣನನ್ನು ಸ್ಟಾರ್ ಮಾಡುವುದಕ್ಕೆ ಹೊರಟಿದ್ದಾರೆ. ಈ ವೇಳೆ ಚಿಕ್ಕಣ್ಣನ ಸಿನಿಮಾಗೆ ದರ್ಶನ್ ಬೆಂಬಲ ಸೂಚಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

"ದರ್ಶನ್ ಸರ್ ನಮ್ಮ ಬ್ಯಾನರ್ಗೆ ಒಂದೊಳ್ಳೆ ಸಿನಿಮಾ ಮಾಡಿಕೊಟ್ಟಿದ್ದಾರೆ. ಚಿಕ್ಕಣ್ಣ ಅಂತ ಬಂದಾಗ ಅವರು ಎಲ್ಲರೊಂದಿಗೂ ಚೆನ್ನಾಗಿದ್ದಾರೆ. ಅವರದ್ದೊಂದು ಫ್ರೆಂಡ್ ಸರ್ಕಲ್ ಇದೆ. ಫ್ಯಾನ್ ಫಾಲೋವಿಂಗ್ ಇದೆ. ಚಿಕ್ಕಣ್ಣ ಪ್ರತಿಯೊಂದು ಸಿನಿಮಾಗೆ ಪ್ರತಿಯೊಬ್ಬರು ಹಾರೈಸುತ್ತಿದ್ದಾರೆ. ಶಿವಣ್ಣ ಸರ್ ಬಂದು ಸಿನಿಮಾ ನೋಡುತ್ತೇನೆ ಅಂತ ಹೇಳಿದ್ದಾರೆ. ದರ್ಶನ್ ಸರ್ ಬಂದು ಸಿನಿಮಾ ನೋಡುತ್ತೇನೆ ಅಂದಿದ್ದಾರೆ. ಧ್ರುವ ಸರ್ಜಾ ಅವರು ನೋಡುತ್ತೇನೆ ಅಂತ ಹೇಳಿದ್ದಾರೆ. ಶರಣ್ ಸರ್ ಸಿನಿಮಾದಲ್ಲಿದ್ದಾರೆ. ಅವರೂ ಸಿನಿಮಾ ನೋಡುತ್ತಾರೆ." ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.
ಇನ್ನು ಇದೇ ಸಂದರ್ಶನದಲ್ಲಿ ದರ್ಶನ್ ಜೊತೆಗಿನ ತಮ್ಮ ಸಂಬಂಧ ಈಗ ಹೇಗಿದೆ? ಇಬ್ಬರ ನಡುವಿನ ಮನ:ಸ್ತಾಪಕ್ಕೆ ಅಂತ್ಯ ಕಂಡಿದೆಯಾ? ಇಲ್ವಾ? ಅನ್ನೋದಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. "ಆಗಲೇ ಹೇಳಿದ ಹಾಗೆ ಯಾರೂ ಶಾಶ್ವತ ಶತ್ರುಗಳಲ್ಲ.. ಯಾರೂ ಶಾಶ್ವತ ಸ್ನೇಹಿತರಲ್ಲ. ಸ್ನೇಹನಾ, ವೈರತ್ವನ ಸಂದರ್ಭ ನೋಡಿಕೊಂಡು ಮಾಡೋಕೆ ಆಗಲ್ಲ. ಪರಿಸ್ಥಿತಿ, ಸಂದರ್ಭ ಹೇಗಿತ್ತೋ ಹಾಗೆ ಅವರು ಪ್ರತಿಕ್ರಿಯಿಸಿದ್ದಾರೆ. ನಾನು ಪ್ರತಿಕ್ರಿಯೆ ನೀಡಿದ್ದೇನೆ." ಎಂದು ಪ್ರತಿಕ್ರಿಯಿಸಿದ್ದಾರೆ.
ಇಷ್ಟೇ ಅಲ್ಲದೆ ದರ್ಶನ್ ಬಗ್ಗೆ ಗೌರವ ಇನ್ನೂ ಇಟ್ಟುಕೊಂಡಿದ್ದೇನೆ ಅಂತನೂ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. "ಇಷ್ಟು ವರ್ಷದಲ್ಲಿ ಯಾವ ಸಿನಿಮಾ ಮಾಡಿದ್ದೀರಿ ಅಂತ ಕೇಳಿದ್ರೆ, ರಾಬರ್ಟ್ ಬಿಟ್ಟು ಹೇಳುತ್ತಾರಾ? ನನ್ನನ್ನು ಕೇಳಿದರೆ ರಾಬರ್ಟ್ ಬಿಟ್ಟು ಬಿಡುತ್ತೇನಾ? ಏನು ಮಾಡೋಕೆ ಆಗಲ್ಲ. ಸಮಯ, ಸಂದರ್ಭ ಹಾಗೆ ಮಾಡ್ತು. ಎಂಡ್ ಆಫ್ ದಿ ಡೇ ನಾನೇನು ಗೌರವ ಇಟ್ಟುಕೊಳ್ಳಬೇಕೋ ಅದನ್ನು ಇಟ್ಟುಕೊಂಡಿದ್ದೇನೆ." ಎಂದು ಉಮಾಪತಿ ಫಸ್ಟ್ ಡೇ ಫಸ್ಟ್ ಶೋಗೆ ಹೇಳಿದ್ದಾರೆ.


Click it and Unblock the Notifications











