ಸಿನಿಪ್ರಿಯರಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಿಸಲಿದ್ದಾರೆ 'ರಾಬರ್ಟ್' ನಿರ್ಮಾಪಕ ಉಮಾಪತಿ
ಕರ್ನಾಟಕಕ್ಕೆ ತನ್ನದೇ ಆದ ಫಿಲಂ ಸಿಟಿ ಬೇಕು ಎನ್ನುವುದು ಹಲವು ವರ್ಷಗಳ ಕೂಗು. ಆದರೆ ಫಿಲಂ ಸಿಟಿಯನ್ನು ಎಲ್ಲಿ ಮಾಡಬೇಕು ಎನ್ನುವುದೇ ವಿವಾದವಾಗಿದೆ. ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಉತ್ತರ ಕರ್ನಾಟಕ ಹೀಗೆ ಅನೇಕ ಸ್ಥಳಗಳಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಬೇಡಿಕೆ ಇದೆ. ಹಾಗೆಯೇ ಪರಿಪೂರ್ಣ ವಾಣಿಜ್ಯ ಚಟುವಟಿಕೆಯಾದ ಚಿತ್ರರಂಗಕ್ಕೆ ಸರ್ಕಾರ ಏಕೆ ಫಿಲಂ ಸಿಟಿ ನಿರ್ಮಸಬೇಕು? ಚಿತ್ರರಂಗವೇ ನಿರ್ಮಿಸಿಕೊಳ್ಳಲಿ ಎಂಬ ಅಭಿಪ್ರಾಯವೂ ಇದೆ.
ಇತ್ತೀಚೆಗೆ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಫಿಲಂ ಸಿಟಿ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡಿದ ಬಳಿಕ ಈ ಚರ್ಚೆ ಮತ್ತೆ ಮುನ್ನೆಲೆ ಬಂದಿತ್ತು. ಆದರೆ ಇಂತಹ ಭರವಸೆಗಳನ್ನು ನೋಡುತ್ತಾ ಬಂದಿರುವ ಸಿನಿ ಪ್ರಿಯರಿಗೆ ಇದು ಸದ್ಯಕ್ಕೆ ಕೈಗೂಡುವ ಕಾರ್ಯವಲ್ಲ ಎನ್ನುವುದು ಅರಿವಾಗಿದೆ. ಇದರ ನಡುವೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಮ್ಮದೇ ಮಿನಿ ಫಿಲಂ ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಉಮಾಪತಿ ಫಿಲಂ ಸಿಟಿ
'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬೆಂಗಳೂರಿನ ಹೊರವಲಯದಲ್ಲಿ ಸಾಧ್ಯವಾದಷ್ಟು ಎಲ್ಲ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಮಿನಿ ಫಿಲಂ ಸಿಟಿಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಇದು ಚಿತ್ರರಂಗದ ಚಟುವಟಿಕೆಗಳಿಗೆ ಪೂರಕವಾಗಿರಲಿದೆ.

16 ಎಕರೆ ಭೂಮಿಯಲ್ಲಿ ಫಿಲಂ ಸಿಟಿ
ಕನಕಪುರ ರಸ್ತೆಯಲ್ಲಿ 16 ಎಕರೆ ಭೂಮಿಯನ್ನು ಕಾಯ್ದಿರಿಸಿರುವ ಉಮಾಪತಿ, ಸಿನಿಮಾ ಚಿತ್ರೀಕರಣ ನಡೆಸುವ ತಂಡಗಳಿಗೆ ಎಲ್ಲ ರೀತಿ ಸೌಲಭ್ಯಗಳನ್ನು ಒಂದೇ ಕಡೆ ಒದಗಿಸುವ ತುಡಿತ ಹೊಂದಿದ್ದಾರೆ. ರವಿಶಂಕರ್ ಅವರ ಅರ್ಟ್ಸ್ ಆಫ್ ಲಿವಿಂಗ್ ಸಮೀಪದಲ್ಲಿ ಈ ಫಿಲಂ ಸಿಟಿ ನಿರ್ಮಾಣವಾಗಲಿದೆ.

ಒಂದೇ ಸ್ಥಳದಲ್ಲಿ ಲಭ್ಯ
ಈ ಫಿಲಂ ಸಿಟಿಯಲ್ಲಿ ಆಸ್ಪತ್ರೆ, ರೈಲ್ವೆ ಸ್ಟೇಷನ್, ಹಳ್ಳಿ, ರಸ್ತೆ, ಐಷಾರಾಮಿ ಬಂಗಲೆ, ಹೀಗೆ ಸಿನಿಮಾಗಳ ಚಿತ್ರೀಕರಣಕ್ಕೆ ಏನೇನು ಅಗತ್ಯವಿದೆಯೋ ಅವೆಲ್ಲವನ್ನೂ ಒಂದೇ ಸ್ಥಳದಲ್ಲಿ ಒದಗಿಸಲು ಅವರು ಯೋಜನೆ ರೂಪಿಸಿದ್ದಾರೆ. ಫಿಲಂ ಸಿಟಿ ನಿರ್ಮಾಣಕ್ಕೆ ಅವರು ಬಹಳ ಹಿಂದೆಯೇ ಆಲೋಚಿಸಿದ್ದರು. ಅದೀಗ ಸಾಕಾರಗೊಳ್ಳುವ ಸಮಯ ಬಂದಿದೆ.

ರಾಮೋಜಿ ಫಿಲಂ ಸಿಟಿಗೆ ಹೋಗಬೇಕು
ಕರ್ನಾಟಕದಲ್ಲಿ ಸಿನಿಮಾ ನಿರ್ಮಾಣಕ್ಕೆ ಸರಿಯಾದ ಸೌಕರ್ಯಗಳಿಲ್ಲ. ಹೀಗಾಗಿ ಹೆಚ್ಚಿನ ಸಿನಿಮಾಗಳಿಗಾಗಿ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಗೆ ಹೋಗುವುದು ಅನಿವಾರ್ಯ. ಶೂಟಿಂಗ್ಗೆ ಹೋಗುವ ಚಿತ್ರತಂಡ ಅಲ್ಲಿಗೆ ತನ್ನ ಚಿತ್ರತಂಡವನ್ನು ಕರೆದೊಯ್ಯಬೇಕು ಮತ್ತು ಅನೇಕ ಕೆಲಸಗಳಿಗೆ ಅಲ್ಲಿನ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಅರ್ಥಿಕ ಹೊರೆಯಾಗುತ್ತದೆ. ಬೆಂಗಳೂರಿನಲ್ಲಿಯೇ ಫಿಲಂ ಸಿಟಿ ನಿರ್ಮಾಣವಾದರೆ ಈ ಸಮಸ್ಯೆ ಕಡಿಮೆಯಾಗಲಿದೆ.


Click it and Unblock the Notifications











