ಅಪ್ಪು ಬಾಸ್ 'ಗಂಧದ ಗುಡಿ'ಯೇ ಕೊನೆ: ಮತ್ತೆಂದೂ ಥಿಯೇಟರ್ಗೆ ಹೋಗಿ ಸಿನಿಮಾ ನೋಡಲ್ಲ
ತಮ್ಮ ನೆಚ್ಚಿನ ಸೂಪರ್ಸ್ಟಾರ್ಗಳಿಗಾಗಿ ಪ್ರಾಣವನ್ನ ಬೇಕಾದರೂ ನೀಡುವ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾ, ನಟನೆಯಿಂದ ಹಿಡಿದು ಪ್ರತಿಯೊಂದು ಹೆಜ್ಜೆಯನ್ನೂ ಅನುಕರಿಸುತ್ತಾರೆ. ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಅಷ್ಟೇ. ಅಪ್ಪು ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಥಿಯೇಟರ್ ಮುಂದೆ ಹಬ್ಬ ಮಾಡುತ್ತಿದ್ದರು. ಅಭಿಮಾನಿಗಳ ಜೊತೆ ಸೇರಿಕೊಂಡು ಪುನೀತ್ ಕೂಡ ಸಂಭ್ರಮಿಸುತ್ತಿದ್ದರು. ಈ ನೆನೆಪು ಅಭಿಮಾನಿಗಳ ಮಾನಸ್ಸಿನಿಂದ ಇನ್ನು ಮೆರೆಯಾಗಿಲ್ಲ.
ಪುನೀತ್ ರಾಜ್ಕುಮಾರ್ ಅಗಲಿಕೆ ಅದೆಷ್ಟೋ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಅಭಿಮಾನಿಗಳಿಂದ ದೂರವಾದಲ್ಲಿಂದ ಪ್ರತಿದಿನ ಪವರ್ಸ್ಟಾರ್ ಅನ್ನು ನೆನೆಯುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಅವರನ್ನು ದೇವರಂತೆ ಕಾಣುತ್ತಿದ್ದಾರೆ. ಅಪ್ಪು ಅಗಲಿಕೆಯ ನೋವಿನಿಂದ ಹೊರಬಾರದ ಕೆಲವು ಅಭಿಮಾನಿಗಳು ಥಿಯೇಟರ್ಗಳಲ್ಲಿ ಸಿನಿಮಾವನ್ನು ನೋಡುವುದಿಲ್ಲ ಅಂತ ಹೇಳುತ್ತಿದ್ದಾರೆ. ಅಷ್ಟಕ್ಕೂ ಅಪ್ಪು ಅಭಿಮಾನಿಗಳು ಈ ನಿರ್ಧಾರಕ್ಕೆ ಬಂದಿದ್ದು ಯಾಕೆ ಅಂತ ತಿಳಿಯಲು ಮುಂದೆ ಓದಿ.

'ಗಂಧದ ಗುಡಿ' ಕೊನೆ ಎಂದ ಅಪ್ಪು ಫ್ಯಾನ್ಸ್
ಪುನೀತ್ ರಾಜ್ಕುಮಾರ್ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ'. ಕರ್ನಾಟಕದ ಪ್ರಕೃತಿಯ ಸೌಂದರ್ಯವನ್ನು ಕನ್ನಡದ ಜನತೆಗೆ ತೋರಿಸಬೇಕು ಅಂತ ಅಪ್ಪು ಕನಸು ಕಂಡಿದ್ದರು. ಅದೇ ಕನಸಿನ ಅನಾವರಣ ಸದ್ಯದಲ್ಲೇ ಆಗಲಿದೆ. ಸಾಕ್ಷ ಚಿತ್ರವಾಗಿ ಹೊರಬರಬೇಕಿತ್ತು. ಆದರೆ, ಅಪ್ಪು ಅಗಲಿಕೆ ಬಳಿಕ ಅವರ ಕನಸನ್ನು ಅಭಿಮಾನಿಗಳಿಗೆ ಬೆಳ್ಳಿಪರೆದೆ ಮೇಲೆ ತೋರಿಸಲು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದಾಗಿದ್ದರು. ಅದೇ ನಾವು ಚಿತ್ರಮಂದಿರಕ್ಕೆ ಹೋಗಿ ನೋಡುವ ಕೊನೆಯ ಸಿನಿಮಾ ಅಂತಿದ್ದಾರೆ ಅಪ್ಪು ಅಭಿಮಾನಿಗಳು.

ಥಿಯೇಟರ್ಗೆ ಗುಡ್ ಬೈ ಹೇಳ್ತಾರಾ ಅಪ್ಪು ಫ್ಯಾನ್ಸ್?
ಪುನೀತ್ ರಾಜ್ಕುಮಾರ್ ನಟಿಸಿದ ಎರಡು ಸಿನಿಮಾಗಳು ರಿಲೀಸ್ ಆದರೆ, ಮತ್ತೆಂದೂ ಅವರ ಹೊಸ ಸಿನಿಮಾ ರಿಲೀಸ್ ಆಗುವುದಿಲ್ಲ. ಇದರಿಂದ ಕೆಲ ಅಪ್ಪು ಅಭಿಮಾನಿಗಳು ನಿರಾಶರಾಗಿದ್ದಾರೆ. ಕೊನೆಯದಾಗಿ ಬಿಡುಗಡೆಯಾಗುವ ಗಂಧದ ಗುಡಿಯೇ ಚಿತ್ರಮಂದಿರದಲ್ಲಿ ನೋಡುವ ಕೊನೆಯ ಸಿನಿಮಾ ಎನ್ನುತ್ತಿದ್ದಾರೆ. " ಇದು ಭವಿಷ್ಯದ ದುರಂತ ಸತ್ಯ. 'ಗಂಧದ ಗುಡಿ' ಸಿನಿಮಾದ ಬಳಿಕ ಶೇ. 85ಕ್ಕೂ ಹೆಚ್ಚು ಅಭಿಮಾನಿಗಳು ಚಿತ್ರಮಂದಿರಲ್ಲಿ ಸಿನಿಮಾ ನೋಡುವುದನ್ನು ನಿಲ್ಲಿಸುತ್ತಾರೆ. ಅಪ್ಪು ಬಾಸ್ ಕೊನೆಯ ಸಿನಿಮಾ 'ಗಂಧದ ಗುಡಿ' ಬಳಿಕ ಓಟಿಟಿನೇ ನಮ್ಮ ಮುಂದಿನ ಚಿತ್ರಮಂದಿರ. ವಿಶೇಷ ದಿನದಂದು ವಿಶೇಷ ಶೋಗಳನ್ನು ಹಾಕಿದರೆ. ಅಂದು ನಾನು ಸಂಭ್ರಮಿಸುತ್ತೇವೆ." ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ಗೆ ಅಪ್ಪು ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ.

ಅಪ್ಪು ಅಣ್ಣ ಹೋದ್ಮೇಲೆ ಸಿನಿಮಾ ನೋಡಿಲ್ಲ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಎರಡೂವರೆ ತಿಂಗಳುಗಳಾಗುತ್ತಿದೆ. ಅಲ್ಲಿಂದ ನಾವು ಯಾವುದೇ ಸಿನಿಮಾವನ್ನು ನೋಡಿಲ್ಲ. ಅಪ್ಪು ಅಣ್ಣ ಹೋದಲ್ಲಿಂದ ಯಾವ ಸಿನಿಮಾ ನೋಡಲೂ ಮನಸ್ಸಿಲ್ಲ. ಇನ್ನು ಥಿಯೇಟರ್ಗೆ ಹೋಗುವುದು ದೂರದ ಮಾತು. ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಮತ್ತೆ ಕೆಲವರು ಮನೆ ಮಂದಿ ಎಲ್ಲಾ ಕೂತು ಪುನೀತ್ ನಟಿಸಿದ 'ಅಭಿ' ಸಿನಿಮಾ ನೋಡಿದ್ವಿ ಅಂತ ಟ್ವೀಟ್ ಮಾಡಿದ್ದಾರೆ. ಚಿಕ್ಕದಾಗಿ ಆರಂಭ ಆಗಿರುವ ಅಭಿಪ್ರಾಯ ಪುನೀತ್ ಅಭಿಮಾನಿಗಳ ಮನಸ್ಸಿಗಾದ ನೋವನ್ನು ತೋರಿಸುತ್ತಿವೆ.

ಬರ್ತ್ಡೇಗೆ 'ಜೇಮ್ಸ್' ರಿಲೀಸ್
ಪುನೀತ್ ರಾಜ್ಕುಮಾರ್ ಇಷ್ಟ ಪಟ್ಟು ನಟಿಸುತ್ತಿದ್ದ ಸಿನಿಮಾ 'ಜೇಮ್ಸ್'. ಈ ಸಿನಿಮಾದ ಶೂಟಿಂಗ್ ಇನ್ನೂ ಬಾಕಿ ಇರುವಂತೆಯೇ ಪುನೀತ್ ಅಪಾರ ಅಭಿಮಾನಿಗಳನ್ನು ಅಗಲಿದ್ದರು. ಹೀಗಾಗಿ ನಿರ್ದೇಶಕ ಚೇತನ್ ಕುಮಾರ್ ಈ ಸಿನಿಮಾವನ್ನು ಅಪ್ಪು ಹುಟ್ಟು ಹಬ್ಬಕ್ಕೆ ಬಿಡುಗಡೆ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದೆನೇ ಅಡ್ಡಿ, ಆತಂಕಗಳು ಎದುರಾದರೂ, ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ರಿಲೀಸ್ ಆಗಲೇಬೇಕು ಅಂತ ನಿರ್ಧರಿಸಿದ್ದಾರೆ.


Click it and Unblock the Notifications











