ಅಪ್ಪು ಶಿವಣ್ಣ ನಟಿಸಬೇಕಿದ್ದ ಈ ಸಿನಿಮಾ ಇತಿಹಾಸವನ್ನೇ ಸೃಷ್ಟಿಸಿಬಿಡುತ್ತಿತ್ತು: ವಿಧಿ ಬಿಡಲಿಲ್ಲ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನೀಟಾಗಿ ಪ್ಲಾನ್ ಮಾಡಿದ್ದರು. ವರ್ಷಕ್ಕೆ ಎರಡು ಸಿನಿಮಾ ಅಭಿಮಾನಿಗಳಿಗೆ ಕೊಡಲು ಸಜ್ಜಾಗಿದ್ದರು. ನಿರ್ಮಾಪಕ ಜಯಣ್ಣ ಮಾಡಿಕೊಂಡಿದ್ದ ಈ ಮನವಿಗೆ ಪುನೀತ್ ಮನ:ಪೂರ್ವಕವಾಗಿ ಒಪ್ಪಿಕೊಂಡಿದ್ದರು. ಈಗಾಗಲೇ ಅಪ್ಪು ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಅವರು ಡಿಸೆಂಬರ್ ತಿಂಗಳಿನಿಂದ ಒಂದೊಂದಾಗೇ ಸೆಟ್ಟೇರಬೇಕಿತ್ತು. ಅಷ್ಟರಲ್ಲೇ ಪುನೀತ್ ಬಾಳಲ್ಲಿ ವಿಧಿ ಆಟ ಆಡಿಬಿಟ್ಟಿತ್ತು.
ಯುವರತ್ನ ಬಳಿಕ ಪುನೀತ್ ನಟಿಸಬೇಕಿದ್ದ ಒಂದೊಂದು ಸಿನಿಮಾ ಪಾತ್ರವೂ ವಿಭಿನ್ನವಾಗಿತ್ತು. ಚೇತನ್ ನಿರ್ದೇಶನದ 'ಜೇಮ್ಸ್', ಪವನ್ ಕುಮಾರ್ 'ದ್ವಿತ್ವ', ಜೇಕಬ್ ವರ್ಗೀಸ್ ಸಿನಿಮಾ ಇವೆಲ್ಲವೂ ಪವರ್ಸ್ಟಾರ್ಗೆ ಮತ್ತಷ್ಟು ಪವರ್ ತುಂಬುತ್ತಿದ್ದವು. ಇವುಗಳ ಮಧ್ಯೆ ಸದ್ದಿಲ್ಲದೆ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಪ್ರಚಂಡ ಕಾಂಬಿನೇಷನ್ ಬಗ್ಗೆ ಮಾತುಕಥೆ ನಡೆಯುತ್ತಿತ್ತು. ಆ ಸಿನಿಮಾವೇನಾದರೂ ಸೆಟ್ಟೇರಿದ್ದರೆ, ಸ್ಯಾಂಡಲ್ವುಡ್ ಬಾಕ್ಸಾಫೀಸ್ ಚಿಂದಿಯಾಗಿಬಿಡುತ್ತಿತ್ತು.

ಶಿವಣ್ಣ-ಪುನೀತ್ ಒಟ್ಟಿಗೆ ಒಂದು ಸಿನಿಮಾ ಮಾಡಬೇಕಿತ್ತು
ಪುನೀತ್ ಹಾಗೂ ಶಿವಣ್ಣ ಇಬ್ಬರ ಕಾಂಬಿನೇಷನ್ನಲ್ಲಿ ಒಂದು ಸಿನಿಮಾ ಬರಬೇಕು. ಅಣ್ಣಾವ್ರ ಮಕ್ಕಳನ್ನು ಒಟ್ಟಿಗೆ ನೋಡಬೇಕು ಅಂತ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದಕ್ಕೆ ವೇದಿಕೆನೂ ಸಿದ್ಧವಾಗಿತ್ತು. ಶಿವಣ್ಣ ಹಾಗೂ ಪುನೀತ್ ಒಂದೇ ಸಿನಿಮಾದಲ್ಲಿ ನಟಿಸುವುದಕ್ಕೆ ಸದ್ದಿಲ್ಲದೆ ಮಾತುಕತೆ ನಡೆಯುತ್ತಿತ್ತು. ಅಷ್ಟರಲ್ಲೇ ಪುನೀತ್ ರಾಜ್ಕುಮಾರ್ ದಿಢೀರ್ ನಿಧನ ಈ ಎಲ್ಲಾ ಯೋಜನೆಗಳು ತಲೆಕೆಳಗಾಗುವಂತೆ ಮಾಡಿತ್ತು. ಅಂದಹಾಗೆ ಈ ಚಿತ್ರವನ್ನು ವಿಲನ್ ಸಿನಿಮಾ ನಿರ್ಮಾಪಕ ಸಿ.ಆರ್ ಮನೋಹರ್ ನಿರ್ಮಾಣ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಲೇ ಇಲ್ಲ.

ಶಿವಣ್ಣ-ಪುನೀತ್ ಜೊತೆ ಮಾತುಕತೆ ನಡೆದಿತ್ತು
"ದಿ ವಿಲನ್ ಸಿನಿಮಾ ಬಳಿಕ ಶಿವಣ್ಣ ಮತ್ತು ಅಪ್ಪು ಸರ್ ಕಾಂಬಿನೇಷನ್ನಲ್ಲಿ ಬರಬೇಕು ಅಂತ ಎಲ್ಲಾ ಮಾತುಕತೆ ಆಗಿತ್ತು. ಆ ಸಿನಿಮಾಗೆ ನಮ್ಮ ಯೋಗರಾಜ್ ಭಟ್ ಡೈರೆಕ್ಟರ್ ಆಗಿದ್ದರು. ಆದರೆ, ನಮ್ಮ ಕನಸು ಇವತ್ತು ನನಸು ಮಾಡಲು ಆಗಲಿಲ್ಲ. ಆ ದೇವರು ನನ್ನ ಆಸೆಯನ್ನು ಈಡೇರಿಸಲಿಲ್ಲ ಅನ್ನುವ ಒಂದು ನೋವು ನನಗಿದೆ." ಎಂದು ಸಿ.ಆರ್ ಮನೋಹರ್ ಅಪ್ಪು-ಶಿವಣ್ಣ ಪ್ರಾಜೆಕ್ಟ್ ಬಗ್ಗೆ ಹೇಳಿದ್ದಾರೆ.

ಅಪ್ಪುಗೆ 'ಪರಮಾತ್ಮ'.. ಶಿವಣ್ಣನಿಗೊಂದು ಸಿನಿಮಾ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ಈಗಾಗಲೇ ಯೋಗರಾಜ್ 'ಪರಮಾತ್ಮ' ಸಿನಿಮಾ ಮಾಡಿದ್ದರು. ಲಾಕ್ಡೌನ್ಗೂ ಮುನ್ನ ಶಿವಣ್ಣನಿಗೂ ಒಂದು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ಗ್ಯಾಪ್ನಲ್ಲೇ ಯೋಗರಾಜ್ ಭಟ್ ಶಿವಣ್ಣ ಹಾಗೂ ಪುನೀತ್ ರಾಜ್ಕುಮಾರ್ಗಾಗಿ ಕಥೆಯೊಂದನ್ನು ಸಿದ್ಧಪಡಿಸಿದ್ದರು. ಆ ಕಥೆ ಇಬ್ಬರಿಗೂ ಇಷ್ಟ ಆಗಿತ್ತು. ಈಗಾಗಲೇ ಒಪ್ಪಿಕೊಂಡ ಸಿನಿಮಾ ಮುಗಿಸಿ, ಶಿವಣ್ಣ, ಪುನೀತ್, ಯೋಗರಾಜ್ ಭಟ್ ಒಂದಾಗಬೇಕಿತ್ತು.
ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ
ರೇಮೊ ಚಿತ್ರದ ಕಾರ್ಯಕ್ರಮದಲ್ಲಿ ಸಿ. ಆರ್ ಮನೋಹರ್ ತಮ್ಮ ಡ್ರೀಮ್ ಪ್ರಾಜೆಕ್ಟ್ ರಿವೀಲ್ ಮಾಡಿದ್ದರು. "ಇವತ್ತು ಅಂತಹ ಒಬ್ಬ ಮಹಾನ್ ವ್ಯಕ್ತಿಯನ್ನ ನಾವು ಇವತ್ತು ಕಳೆದುಕೊಂಡು ಇಡೀ ಕರ್ನಾಟಕ ದು:ಖದಲ್ಲಿದೆ. ಆದರೆ, ಏನೂ ಮಾಡಲಿಕ್ಕೆ ಆಗುವುದಿಲ್ಲ. ಆ ವಿಧಿಯ ಮುಂದೆ ನಾವೆಲ್ಲಾ ನಗಣ್ಯ. ಈ ಸಂದರ್ಭದಲ್ಲಿ ಅಪ್ಪು ಸರ್ ಮತ್ತೆ ಹುಟ್ಟಿ ಬರಲಿ ಅಂತ ಬಯಸುತ್ತೇನೆ." ಎಂದಿದ್ದಾರೆ ನಿರ್ಮಾಪಕ ಸಿ.ಆರ್ ಮನೋಹರ್.


Click it and Unblock the Notifications











