ಕೊರೊನಾ ವೈರಸ್ ಸಂಕಷ್ಟ: 50 ಲಕ್ಷ ರೂ ದೇಣಿಗೆ ನೀಡಿ ಔದಾರ್ಯ ಮೆರೆದ ಪುನೀತ್ ರಾಜ್ಕುಮಾರ್
ಕೊರೊನಾ ವೈರಸ್ ಮಹಾಮಾರಿಯನ್ನು ನಿಯಂತ್ರಿಸಲು ಲಾಕ್ಡೌನ್ ನಿರ್ಧಾರ ತೆಗೆದುಕೊಂಡಿರುವುದರಿಂದ ಲಕ್ಷಾಂತರ ಜನರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಜನರಿವೆ ನೆರವಾಗಲು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮುಂದೆ ಬಂದಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪುನೀತ್ ಉದಾರ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದುಡಿಮೆ ಇಲ್ಲದೆ ಕಂಗಾಲಾಗಿರುವ ಸಿನಿಮಾ ರಂಗದ ಕಾರ್ಮಿಕರು ಹಾಗೂ ಇತರರಿಗೆ ಜನರು ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಚಿತ್ರರಂಗದ ಕೆಲವು ನಟರು ಪರಿಹಾರ ನಿಧಿಗಳಿಗೆ ದೊಡ್ಡ ಮೊತ್ತದ ದೇಣಿಗೆ ಹಣ ನೀಡುತ್ತಿದ್ದಾರೆ. ಇನ್ನು ಅನೇಕರು ತಮ್ಮ ಅಭಿಮಾನಿ ಸಂಘಗಳ ಮೂಲಕ ಜನರಿಗೆ ಆಹಾರ, ಧಾನ್ಯಗಳನ್ನು ತಲುಪಿಸುವ ಕಾರ್ಯ ನಡೆಸುತ್ತಿದ್ದಾರೆ. ಅವರ ಸಾಲಿಗೆ ಪುನೀತ್ ಸೇರಿಕೊಂಡಿದ್ದಾರೆ.

50 ಲಕ್ಷ ರೂ ದೇಣಿಗೆ ನೀಡಿದ ಪುನೀತ್
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಮಂಗಳವಾರ ಬೆಳಿಗ್ಗೆ ಅವರ ನಿವಾಸದಲ್ಲಿ ಭೇಟಿಯಾದ ನಟ ಪುನೀತ್ ರಾಜ್ಕುಮಾರ್, ಕೋವಿಡ್ 19ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆಯ ಚೆಕ್ಅನ್ನು ಹಸ್ತಾಂತರಿಸಿದರು.

ಸರ್ಕಾರ ಹೇಳುವುದನ್ನು ಪಾಲಿಸಿ
ಸರ್ಕಾರ ಹೇಳುವ ಪ್ರತಿ ಸಂಗತಿಯನ್ನೂ ದಯವಿಟ್ಟು ಕೇಳಿ ಪಾಲಿಸಿ. ಸರ್ಕಾರ ಹೇಳುತ್ತಿರುವುದು ನಮ್ಮ ಒಳ್ಳೆಯದಕ್ಕೆ. ಅಭಿಮಾನಿಗಳಲ್ಲಿ ಕೇಳಿಕೊಳ್ಳುವುದು ಇದನ್ನೇ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ನಾವೂ ವಿಡಿಯೋಗಳನ್ನು ಮಾಡಿ ಹೇಳಿದ್ದೇವೆ ಎಂದು ಪುನೀತ್ ತಿಳಿಸಿದ್ದಾರೆ.

ಒಳ್ಳೆಯ ಪ್ರಯತ್ನಗಳು ಆಗುತ್ತಿವೆ
ಮನೆಯಲ್ಲಿ ಇರಿ ಎಂದಾಗ ಕಷ್ಟ ಆಗಬಹುದು. ನಮಗೂ ಆಗುತ್ತಿದೆ. ಆದರೆ ಸಣ್ಣ ಸಣ್ಣ ಮನೆಗಳಲ್ಲಿ, ಸ್ಲಂಗಳಲ್ಲಿ, ಗುಡಿಸಲುಗಳಲ್ಲಿ ಇರುವವರಿಗೆ ತೊಂದರೆಯಾಗುತ್ತದೆ. ಅವರಿಗೆ ಆಹಾರಗಳನ್ನು ಇತರೆ ಅಗತ್ಯ ವಸ್ತುಗಳನ್ನು ಒದಗಿಸುವ ಕೆಲಸವನ್ನು ಬಿಬಿಎಂಪಿ, ಪೊಲೀಸರು, ಸ್ವಯಂ ಕಾರ್ಯಕರ್ತರು ಮುಂತಾದವರ ಮೂಲಕ ಒಳ್ಳೆಯ ಪ್ರಯತ್ನಗಳು ನಡೆಯುತ್ತಿವೆ, ಕರ್ನಾಟಕದ ಎಲ್ಲ ಮೂಲೆಯಲ್ಲೂ ಮಾಡುತ್ತಿದ್ದಾರೆ. ಹೀಗಾಗಿ ನಾವು ಅವರನ್ನು ಬೆಂಬಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ನಾವೆಲ್ಲರೂ ಸೇರಿ ಕಟ್ಟೋಣ
ಡಾಕ್ಟರ್ ನರ್ಸ್ ಏನೇನು ಹೇಳುತ್ತಾರೋ ಕೇಳಿ ಅದನ್ನು ಪಾಲಿಸಬೇಕು. ಸ್ವಲ್ಪ ದಿನ ತಡೆದುಕೊಳ್ಳಬೇಕು. ನಮ್ಮ ಭಾರತ, ಕರ್ನಾಟಕವನ್ನು ಕಟ್ಟಬೇಕು ಎಂದರೆ ನಾವೆಲ್ಲರೂ ಕೈ ಜೋಡಿಸಬೇಕು. ಈ ಕೋವಿಡ್ ಸಮಸ್ಯೆ ಖಂಡಿತಾ ಬಗೆಹರಿಯುತ್ತದೆ ಎಂದು ಪುನೀತ್ ಆಶಾವಾದ ವ್ಯಕ್ತಪಡಿಸಿದ್ದಾರೆ.
ಸಂತೋಷ್ ಆನಂದರಾಮ್ ಟ್ವೀಟ್
ಕೋವಿಡ್-19 ನಿಂದ ಬಳಲುತ್ತಿರುವ ದೇಶ ಹಾಗು ರಾಜ್ಯದ ಹಿತಕ್ಕಾಗಿ ನಮ್ಮ ಪುನೀತ್ ರಾಜಕುಮಾರ್ ಸರ್ 50 ಲಕ್ಷ ವನ್ನೂ ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ "ಆಕಾಶ ನೋಡದ ಕಯ್ಯಿ ನಿಮದು ಪ್ರೀತಿ ಕಾಳಜಿ ಹೊಂದಿರುವ ನಮ್ಮ ರಾಜರತ್ನ ನೀವು" ನಿಮ್ಮ ನಡೆ ನಮಗೆ ಸ್ಫೂರ್ತಿ..ನಿಮ್ಮನು ಪಡೆದ ನಾವು ಪುನೀತ- ಸಂತೋಷ್ ಆನಂದರಾಮ್.
ಅಶ್ವತ್ಥ್ ನಾರಾಯಣ್ ಧನ್ಯವಾದ
ಮುಖ್ಯಮಂತ್ರಿ ಪರಿಹಾರ ನಿಧಿಗೆ ಪವರ್ ನೀಡಿದ ಪವರ್ ಸ್ಟಾರ್. #COVID19 ಸಂಕಷ್ಟದ ಸಮಯದಲ್ಲಿ ನಾಡಿನ ಹಿತಕ್ಕಾಗಿ ಸರ್ಕಾರದೊಂದಿಗೆ ಕೈಜೋಡಿಸಿ 50 ಲಕ್ಷ ರೂ. ನೀಡಿದ ಪುನೀತ್ ರಾಜ್ಕುಮಾರ್ ಅವರಿಗೆ ಧನ್ಯವಾದಗಳು. ಸರ್ಕಾರಿ ನಿಯಮಗಳನ್ನು ಪಾಲಿಸಿ, ನೀವೂ ನಮ್ಮೊಂದಿಗೆ ಸಹಕರಿಸಿ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಹಾಯ ಮಾಡಬಯಸುವವರು ಆನ್ ಲೈನ್ ಪಾವತಿಸಿ.- ಅಶ್ವತ್ಥ್ ನಾರಾಯಣ್
ಸಂಕಷ್ಟದ ಸಮಯದಲ್ಲಿ ನೆರವು
ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿ ನಾಡಿನ ಸಂಕಷ್ಟದ ಸಮಯದಲ್ಲಿ ನೆರವಾಗಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ನಿಮ್ಮ ಈ ಕೊಡುಗೆ, ಜನರಿಗೆ ಸರ್ಕಾರದೊಂದಿಗೆ ಸಹಕರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸ್ಫೂರ್ತಿಯಾಗಲಿ. ಸರ್ಕಾರದ ಶ್ರಮ ನಮ್ಮ ಸುರಕ್ಷತೆಗಾಗಿ- ವಿಜಯ್ ಕಿರಗಂದೂರ್.


Click it and Unblock the Notifications











