Puneeth Rajkumar: 102 ಕವಿಗಳಿಂದ ಕವನ ಸಂಗ್ರಹಿಸಿ ಬಿಡುಗಡೆಗೆ ಮುಂದಾದ ಅಪ್ಪು ಫ್ಯಾನ್ಸ್
ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಇನ್ನೂ ತಮ್ಮ ನೆಚ್ಚಿನ ನಟನ ಅಗಲಿಕೆಯ ನೋವನ್ನು ಮರೆತಿಲ್ಲ. ಅಪ್ಪು ನೆನಪಿನಲ್ಲಿಯೇ ಅಭಿಮಾನಿಗಳು ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ವಿಶೇಷ ನಮನ ಸಲ್ಲಿಸಲು ಮುಂದಾಗಿದ್ದಾರೆ. 102 ಕವಿಗಳಿಂದ ಕವನಗಳನ್ನು ಸಂಗ್ರಹಿಸಿ, 'ರಾಜರತ್ನ ಕವಿ ನಮನ ಕವನ ಸಂಕಲನ' ಹಾಗೂ 'ರಾಜರತ್ನ ಗೀತ ನಮನ' ಧ್ವನಿ ಮುದ್ರಿಕೆಯನ್ನು ಹೊರತರಲು ಮುಂದಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಅಪ್ಪಟ ಅಪ್ಪು ಅಭಿಮಾನಿ ಜೆ.ಡಿ.ದನ್ನೂರ್ ಹಾಗೂ ಅವರ ತಂಡ ಇಂತಹದ್ದೊಂದು ಸಾಹಸಕ್ಕೆ ಮುಂದಾಗಿದೆ. ಮೈಸೂರು, ಕಲಬುರ್ಗಿ, ಬೆಂಗಳೂರು, ಮಂಡ್ಯ, ಕಾರವಾರ, ಗದಗ, ರಾಯಚೂರ್, ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿರುವ 102 ಕವಿಗಳಿಂದ ಪುನೀತ್ ರಾಜಕುಮಾರ್ ಬಗ್ಗೆ ಬರೆದ ಕವನಗಳನ್ನು ಸಂಗ್ರಹಿಸಿದ್ದಾರೆ. ಈ ಕವನಗಳನ್ನು 'ರಾಜರತ್ನ ಕವಿ ನಮನ ಕವನ' ಸಂಕಲನದಲ್ಲಿ ಸಂಗ್ರಹಿಸಿ, 5 ಸಾವಿರ ಪ್ರತಿಗಳನ್ನು ಮುದ್ರಿಸಿ ಅಭಿಮಾನಿಗಳಿಗೆ ಹಂಚಲಿದ್ದಾರೆ.
ಈ ಕವನ ಸಂಕಲನ ಅಭಿಮಾನಿಗಳಿಗೆ ಉಚಿತ
ಅಪ್ಪು ಅಭಿಮಾನಿಗಳು ಈ ಕವನ ಸಂಕಲನವನ್ನು ಅಭಿಮಾನಿಗಳಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಅಪ್ಪು ಅಭಿಮಾನಿಗಳ ಜೊತೆ ನಾಡಿನ ಗ್ರಂಥಾಲಯಕ್ಕೆ ಉಚಿತವಾಗಿ ಈ ಕವನ ಸಂಕಲನ ನೀಡಲಿದ್ದಾರೆ. ವಿಶೇಷ ಅಂದ್ರೆ, ಈ ಕವನ ಸಂಕಲನ ಪ್ರತಿ ಪುಟದಲ್ಲೂ ಪುನೀತ್ ರಾಜ್ಕುಮಾರ್ ಅವರ ವಿಭಿನ್ನವಾದ ಭಾವಚಿತ್ರವನ್ನು ಬಳಸಲಿದ್ದಾರೆ.

ಕವನ ಸಂಕಲನದ ಜೊತೆಗೆ ಪುನೀತ್ ರಾಜ್ಕುಮಾರ್ಗೆ ಸಂಬಂಧಿಸಿದ ಎಂಟು ಗೀತೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಜಮಖಂಡಿಯ ಜೆ.ಡಿ.ದನ್ನೂರ್, ನಿ.ಶ್ರೀಶೈಲ, ಕಲಬುರಗಿಯ ಗಿರಿಜಾ ಇಟಗಿ, ಕೊಪ್ಪಳದ ರಂಗನಾಥ ಅಂಬಿಗೇರ ಸೇರಿದಂತೆ ಹಲವು ಸಾಹಿತ್ಯ ರಚಿಸಿದ್ದಾರೆ. ಮೃತ್ಯೂಂಜಯ ದೊಡವಾಡ ಈ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಬೆಂಗಳೂರಿನ ಖ್ಯಾತ ಗಾಯಕರಾದ ಅಜಯ್ ವಾರಿಯರ್, ಪ್ರಭಾ ಇನಾಂದಾರ ಉಷಾ ಕಸ್ತೂರಿ ಶಂಕರ ಧ್ವನಿ ನೀಡಿದ್ದಾರೆ.
ರಾಜರತ್ನ ಕವಿ ನಮನ, ಗೀತ ನಮನ ರಿಲೀಸ್ ಯಾವಾಗ?
ಬೆಂಗಳೂರಿನ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಮಾರ್ಚ್ 30 ರಂದು ರಾಜರತ್ನ ಕವಿ ನಮನ ಹಾಗೂ ಗೀತ ನಮನವನ್ನು ಬಿಡುಗಡೆ ಮಾಡಲಿದ್ದಾರೆ. ಹಿರಿಯ ಚಿತ್ರನಟಿ ಡಾ. ಜಯಮಾಲಾ ಕವನ ಸಂಕಲನ ಹಾಗೂ ಹಾಡುಗಳನ್ನು ರಿಲೀಸ್ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಮನು ಬಳಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಪವರ್ಸ್ಟಾರ್ ಪುನೀತ್ ರಾಜಕುಮಾರ್ ಸಿನಿಮಾದಲ್ಲಿ ಅಷ್ಟೇ ಅಲ್ಲ. ರಿಯಲ್ ಲೈಫ್ನಲ್ಲೂ ಹೀರೊ ಎಂಬುದು ಸಾಬೀತು ಮಾಡಿದ್ದಾರೆ. ಅಪ್ಪು ಅದೆಷ್ಟೋ ಕನ್ನಡಿಗರಿಗೆ ಸ್ಪೂರ್ತಿಯಾಗಿದ್ದಾರೆ. ಅಪ್ಪು ಅಗಲಿದ ಬಳಿಕ ಅವರ ಮಾಡಿದ ಸಾಮಾಜಿಕ ಕಾರ್ಯಗಳು ಲೋಕಕ್ಕೆ ಗೊತ್ತಾಗಿತ್ತು. ಈಗ ಅವರ ಅಭಿಮಾನಿಗಳು ಅವರ ನೆನೆಪಿನಲ್ಲಿಯೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ.


Click it and Unblock the Notifications











