ಒಂದು ದಿನ ಮುನ್ನವೇ ಅಭಿಮಾನಿಗಳಿಂದ ಪುನೀತ್ ಪುಣ್ಯಸ್ಮರಣೆ: ಅನ್ನಸಂತರ್ಪಣೆ
ವಿಶ್ವದ ಮೂಲೆ ಮೂಲೆಯಲ್ಲಿ ಎಲ್ಲೆಲ್ಲಿ ಕನ್ನಡಿಗರಿದ್ದಾರೋ ಅಲ್ಲೆಲ್ಲಾ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಯಾವುದೇ ಕಡೆ ಹೋದರೂ ಅಸಂಖ್ಯಾತ ಅಪ್ಪು ಅಭಿಮಾನಿಗಳು ಸಿಗುತ್ತಾರೆ. ಪುನೀತ್ ನಿಧನದ ನೋವಿನಿಂದ ಹೊರಬರಲಾಗದಿದ್ದರು, ಅಭಿಮಾನಿಗಳಾಗಿ ತಮ್ಮ ನೆಚ್ಚಿನ ನಟನಿಗೆ ಗೌರವ ಸೂಚಿಸಲು ಮುಂದಾಗಿದ್ದಾರೆ. ಕಾಣದಂತೆ ಅದೆಷ್ಟೋ ಅಸಹಾಯಕರಿಗೆ ಸಹಾಯ ಹಸ್ತ ಚಾಚಿರುವ ಪುನೀತ್ ರಾಜ್ಕುಮಾರ್ 11ನೇ ದಿನದ ಪುಣ್ಯಸ್ಮರಣೆ ಮಾಡಲು ಮುಂದಾಗಿದ್ದಾರೆ.
ರಾಜ್ಯದ ಮೂಲೆ ಮೂಲೆಯಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗ ಒಂದಲ್ಲ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತುಮಕೂರಿನಲ್ಲಿ ಅಭಿಮಾನಿಗಳು ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ. 11ನೇ ದಿನದಂದು ಪುನೀತ್ ರಾಜ್ಕುಮಾರ್ ಸಮಾಧಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ. ಇನ್ನೊಂದು ಕಡೆ ಮಂಡ್ಯದ ಅಪ್ಪು ಅಭಿಮಾನಿಗಳು ಒಂದು ದಿನ ಮುನ್ನವೇ ಅನ್ನಸಂತರ್ಪಣೆ ಮಾಡಲು ಮುಂದಾಗಿದ್ದಾರೆ. ಈ ಕಾರ್ಯಕ್ರಮ ಎಲ್ಲಿ ನಡೆಯುತ್ತಿದೆ? ಈ ಕಾರ್ಯಕ್ರಮದ ಆಯೋಜಕರು ಯಾರು? ವಿಶೇಷ ಅತಿಥಿಯಾಗಿ ಯಾರು ಬರುತ್ತಿದ್ದಾರೆ? ಇಲ್ಲಿದೆ ಹೆಚ್ಚಿನ ವಿವರ.
ನವೆಂಬರ್ 8 ರಂದು ಪುನೀತ್ ರಾಜ್ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ನೆರವೇರಲಿದೆ. ಹೀಗಾಗಿ ಅಪ್ಪು ಅಭಿಮಾನಿಗಳು ಕೂಡ ಸಮಾಜಮುಖಿ ಕೆಲಸಗಳ ಮೂಲಕ ಗೌರವ ಸೂಚಿಸುತ್ತಿದ್ದಾರೆ. ಅಪ್ಪು ಅಗಲಿಕೆಯ ನೋವಿನಿಂದ ಹೊರಬಾರದೆ ಇದ್ದರೂ, ತಾವೇ ಜವಾಬ್ದಾರಿ ಹೊತ್ತುಕೊಂಡು ತಮ್ಮ ತಮ್ಮ ಊರಿನಲ್ಲೇ 11ನೇ ದಿನದ ಪುಣ್ಯಸ್ಮರಣೆಗೆ ಮುಂದಾಗಿದ್ದಾರೆ. ಮಂಡ್ಯದ ಚಂದಗಿರಿ ಕೊಪ್ಪಲು ಊರಿನ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕುಟುಂಬಸ್ಥರಿಗಿಂತ ಮುನ್ನವೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭಾನುವಾರವೇ (ನವೆಂಬರ್ 7) ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಭಾನುವಾರ ಮಧ್ಯಾಹ್ನ 12 ಗಂಟೆಯಿಂದ ಮಂಡ್ಯದ ಚಂದಗಿರಿ ಕೊಪ್ಪಲು ಎಂಬಲ್ಲಿ ಅನ್ನಸಂತರ್ಪಣೆ ಆರಂಭ ಆಗಲಿದೆ. ಈ ಕಾರ್ಯಕ್ರಮಕ್ಕೆ ಕೆಜಿಎಫ್ ಖ್ಯಾತಿಯ ಖಳನಾಯಕ ಗರುಡ ರಾಮ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆಯ ನೋವಿನಲ್ಲೇ ಮಂಡ್ಯ ಬಾಯ್ಸ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಈ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ನವೆಂಬರ್ 8, 11ನೇ ದಿನದ ಪುಣ್ಯ ಸ್ಮರಣೆಯಂದು ಪುನೀತ್ ರಾಜ್ಕುಮಾರ್ ಸಮಾಧಿಯಲ್ಲಿ ಅಣ್ಣಾವ್ರ ಕುಟುಂಬ ಪೂಜೆ ಸಲ್ಲಿಸಲಿದೆ. ಬಳಿಕ ಮನೆಯಲ್ಲೇ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಇಟ್ಟುಕೊಂಡಿದೆ. ಅಪ್ಪು ನೆನಪಿಗಾಗಿ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗಾಗಿ 12ನೇ ದಿನ ಅನ್ನದಾನ ಕಾರ್ಯ ನಡೆಯಲಿದೆ. ನವೆಂಬರ್ 9 ರಂದು ಅಣ್ಣಾವ್ರ ಕುಟುಂಬದ ವತಿಯಿಂದ ಪ್ಯಾಲೇಸ್ ಗ್ರೌಂಡ್ನಲ್ಲಿ ಈ ಕಾರ್ಯ ಜರುಗಲಿದೆ.

ಪುನೀತ್ ರಾಜ್ಕುಮಾರ್ ದಿಢೀರನೇ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿರಬಹುದು. ಆದರೆ, ಅಭಿಮಾನಿಗಳು ಮಾತ್ರ ಸಾಯೋವರೆಗೂ ಪವರ್ ಸ್ಟಾರ್ ಫ್ಯಾನ್ ಆಗಿಯೇ ಇರುತ್ತೇವೆ ಎಂದಿದ್ದಾರೆ. ಪ್ರೀತಿಯಲ್ಲಿ ಜೇನು.. ಕನಸಿನಲ್ಲಿ ಮೂನು.. ಸಾಯೋವರೆಗೂ ಪವರ್ಸ್ಟಾರ್ ಫ್ಯಾನ್ ಅಂತ ಪುನೀತ್ ಪುಣ್ಯಸ್ಮರಣೆ ಮಾಡಲು ಸಜ್ಜಾಗುತ್ತಿದ್ದಾರೆ. 11ನೇ ದಿನದ ಪುಣ್ಯ ಸ್ಮರಣೆಯಂದು ಕೇವಲ ಮಂಡ್ಯದಲ್ಲಿ ಅಷ್ಟೇ ಅಲ್ಲದೆ, ಕರ್ನಾಟಕದಾದ್ಯಂತ ಪುನೀತ್ ಅಭಿಮಾನಿಗಳು ತಮಗೆ ತೋಚಿದಂತೆ ಪುಣ್ಯ ಸ್ಮರಣೆ ಮಾಡಲು ನಿರ್ಧರಿಸಿದ್ದಾರೆ.


Click it and Unblock the Notifications











