220 ಮಕ್ಕಳಿಗೆ 'ಗಂಧದ ಗುಡಿ' ಉಚಿತ ಶೋ: ಥಿಯೇಟರ್ ಒಳಗೆ ಅಪ್ಪು ಪುತ್ಥಳಿ ಸ್ಥಾಪನೆಗೆ ಮುಂದಾದ ಫ್ಯಾನ್ಸ್!
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕೊನೆಯ ಸಿನಿಮಾ 'ಗಂಧದ ಗುಡಿ' ರಿಲೀಸ್ ಆಗಿದೆ. ಅಪ್ಪು ಅಭಿಮಾನಿಗಳು ಕೊನೆಯ ಬಾರಿಗೆ ಪವರ್ಸ್ಟಾರ್ ಅನ್ನು ಪುನೀತ್ ರಾಜ್ಕುಮಾರ್ ಆಗಿಯೇ ಕಣ್ತುಂಬಿಕೊಂಡಿದ್ದಾರೆ. ಬಿಡುಗಡೆಯಾದ ಕಡೆಯಲ್ಲೆಲ್ಲಾ 'ಗಂಧದ ಗುಡಿ'ಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
'ಗಂಧದ ಗುಡಿ' ಕೇವಲ ಸಿನಿಮಾ ಅಲ್ಲ. ಎಲ್ಲಾ ವರ್ಗವೂ ಕಣ್ತುಂಬಿಕೊಳ್ಳಲೇಬೇಕಾದ ಸಿನಿಮಾ. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಪುನೀತ್ ರಾಜ್ಕುಮಾರ್ ತಮ್ಮ ಜರ್ನಿ ಮೂಲಕ ಕನ್ನಡಿಗರಿಗೆ ತೋರಿಸುವುದಕ್ಕೆ ಮುಂದಾಗಿದ್ದರು. ಅಪ್ಪು ಪ್ರಯತ್ನಕ್ಕೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ.
'ಗಂಧದ ಗುಡಿ' ಶಾಲಾ ವಿದ್ಯಾರ್ಥಿಗಳೂ ಕೂಡ ಈ ಸಿನಿಮಾವನ್ನು ನೋಡಲೇಬೇಕಾದ ಸಿನಿಮಾ. ಹೀಗಾಗಿ ಅಪ್ಪು ಅಭಿಮಾನಿಗಳು 'ಗಂಧದ ಗುಡಿ' ಸಿನಿಮಾವನ್ನು ಸರ್ಕಾರಿ ಶಾಲಾ ಮಕ್ಕಳಿಗೂ ತೋರಿಸುತ್ತಿದ್ದಾರೆ. ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಸಿನಿಮಾ ತೋರಿಸಿದ್ದಾರೆ.

ಉಚಿತವಾಗಿ 'ಗಂಧದ ಗುಡಿ' ತೋರಿಸಿದ ಫ್ಯಾನ್ಸ್
'ಗಂಧದ ಗುಡಿ' ಕೇವಲ ಸಿನಿಮಾವಾಗಿ ತೋರಿಸುತ್ತಿಲ್ಲ. ಬದಲಿಗೆ ಶೈಕ್ಷಣಿಕವಾಗಿಯೂ ವೀಕ್ಷಣೆ ಮಾಡಲಾಗುತ್ತಿದೆ. ಒಂದು ಕಡೆ ಇದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕಾಣಿಸಿಕೊಳ್ಳುತ್ತಿರುವ ಕೊನೆಯ ಸಿನಿಮಾ ಅನ್ನೋ ಭಾವನೆ. ಇನ್ನೊಂದು ಕಡೆ ನಮ್ಮ ನಾಡು-ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು ಅನ್ನೋ ಆಸೆ. ಇದರ ಜೊತೆಗೆ ಶೈಕ್ಷಣಿಕವಾಗಿ ಮಕ್ಕಳಿಗೂ ಈ ಸಿನಿಮಾ ಉಪಯೋಗ. ಈ ಕಾರಣಕ್ಕೆ ಅಪ್ಪು ಅಭಿಮಾನಿಗಳು ತಮ್ಮದೇ ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಸಿನಿಮಾ ತೋರಿಸಿದ್ದಾರೆ.

'ಗಂಧದ ಗುಡಿ' ಉಚಿತ ಪ್ರದರ್ಶನ
ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳು 'ಗಂಧದ ಗುಡಿ' ಸಿನಿಮಾವನ್ನು ಮಕ್ಕಳಿಗೆ ಉಚಿತವಾಗಿ ತೋರಿಸಿದ್ದಾರೆ. ಅಪ್ಪು ಯುವಸೇನೆ ಬನಶಂಕರಿಯ ಅಭಿಮಾನಿ ಬಳಗ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿತ್ತು. ಈ ಮೂಲಕ ಸುಮಾರು 220 ಸರ್ಕಾರಿ ಶಾಲೆಯ ಮಕ್ಕಳು ಉಚಿತವಾಗಿ ಸಿನಿಮಾ ವೀಕ್ಷಿಸಿದ್ದಾರೆ. "ಕುಮಾರಸ್ವಾಮಿ ಲೇ ಔಟ್ ಸರ್ಕಾರಿ ಹಿಡಿಯ ಪ್ರಾಥಮಿಕ ಶಾಲೆಯ ಸುಮಾರು 220 ಮಕ್ಕಳಿಗೆ ಉಚಿತವಾಗಿ ಸಿನಿಮಾ ತೋರಿಸಿದ್ದೇವೆ. ಹಾಗೇ 220 ಮಂದಿಗೆ ಬ್ಯಾಡ್ಜ್ ಕೇಳಿದ್ದರು. ಅದನ್ನು ಕೊಟ್ಟಿದ್ದೇವೆ. ಹಾಗೇ ಡ್ರಮ್ಸ್ ಬೇಕು ಅಂದಿದ್ದರು. ಅದನ್ನೂ ಕೊಟ್ಟಿದ್ದೇವೆ." ಎನ್ನುತ್ತಾರೆ ಅಪ್ಪು ಯುವಸೇನೆ ಸದಸ್ಯ.

ಥಿಯೇಟರ್ನಲ್ಲಿ ಪುನೀತ್ ಪುತ್ಥಳಿ ಅನಾವರಣ
'ಗಂಧದ ಗುಡಿ' ಬಿಡುಗಡೆಯಾಗಿರುವ ಇದೇ ಸಂದರ್ಭದಲ್ಲಿ ಶ್ರೀನಿವಾಸ ಚಿತ್ರಮಂದಿರದಲ್ಲಿ ಅಪ್ಪು ನೆನಪಿಗಾಗಿ ಪುತ್ಥಳಿಯನ್ನು ನಿರ್ಮಿಸಿದೆ. ಈ ಪುತ್ಥಳಿಯನ್ನು ಇದೇ ಭಾನುವಾರ (ನವೆಂಬರ್ 6) ಅನಾವರಣ ಮಾಡಲು ಅಪ್ಪು ಯುವಸೇನೆ ನಿರ್ಧರಿಸಿದೆ. "ಗೌಡನ ಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಭಾನುವಾರ ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನು ಅನಾವರಣ ಮಾಡುತ್ತಿದ್ದೇವೆ. ಇದೂವರೆಗೂ ಥಿಯೇಟರ್ನಲ್ಲಿ ಯಾವುದೇ ಸೂಪರ್ಸ್ಟಾರ್ ಪುತ್ಥಳಿ ಇಲ್ಲ." ಎಂದು ಅಪ್ಪು ಯುವಸೇನೆ ಮಾಹಿತಿ ನೀಡಿದೆ.

ಅಪ್ಪು ಪತ್ನಿ ಅಶ್ವಿನಿ ಹಾಗೂ ಯುವ ಉಪಸ್ಥಿತಿ
" ಶ್ರೀನಿವಾಸ ಥಿಯೇಟರ್ನಲ್ಲಿ ಪುನೀತ್ ರಾಜ್ಕುಮಾರ್ ಪುತ್ಥಳಿ ಅನಾವರಣಕ್ಕೆ ಅಶ್ವಿನಿ ಮೇಡಂ ಹಾಗೂ ಯುವರಾಜ್ಕುಮಾರ್ ಅವರು ಬರುತ್ತೇನೆ ಎಂದು ಹೇಳಿದ್ದಾರೆ. ಭಾನುವಾರ ಅವರ ಸಮ್ಮುಖದಲ್ಲಿ ಪುತ್ಥಳಿಯನ್ನು ಅನಾವರಣ ಮಾಡುತ್ತೇವೆ. ಬೇರೆ ಎಲ್ಲೂ ಥಿಯೇಟರ್ ಒಳಗೆ ಪುತ್ಥಳಿ ಇಲ್ಲ. ಇವರೊಬ್ಬರದ್ದೇ ಇರೋದು. " ಎನ್ನುತ್ತಾರೆ ಅಪ್ಪು ಯುವಸೇನೆ.


Click it and Unblock the Notifications











