ಪುನೀತ್ ಮಾಲೆ ಧರಿಸಿ "ಅಪ್ಪು ಸ್ವಾಮಿಯೇ ನಮ್ಮ ಪರಮಾತ್ಮ" ಎಂದ ಫ್ಯಾನ್ಸ್:"ನಾನು ಅಪ್ಪು ತರ ಬದುಕೇತ್ತೇನೆ" ಎಂದ ರಾಘಣ್ಣ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮೇಲಿನ ಅಭಿಮಾನಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲೆಡೆ ಅಪ್ಪು ಬಗ್ಗೆ ಅಭಿಮಾನಿಗಳು ಜಪ ಮಾಡುತ್ತಿದ್ದಾರೆ. ಅದರಲ್ಲೂ ಹೊಸಪೇಟೆಯ ಅಭಿಮಾನಿಗಳು ಪುನೀತ್ ಮಾಲೆ ಧರಿಸಿ ಬೆಂಗಳೂರಿನಲ್ಲಿರುವ ಪುಣ್ಯಭೂಮಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.
ಇಂದು(ಮಾರ್ಚ್ 18) ಹೊಸಪೇಟೆಯಲ್ಲಿರುವ ಪುನೀತ್ ರಾಜ್ಕುಮಾರ್ ಪುತ್ಥಳಿ ಮುಂದೆ ಪೂಜೆ ಸಲ್ಲಿಸಿ, ಅಭಿಮಾನಿಗಳು ಅಪ್ಪು ಮಾಲೆ ಧರಿಸಿ ಅಲ್ಲಿಂದ ಬೆಂಗಳೂರಿಗೆ ಹೊರಟಿದ್ದರು. ಸಂಜೆ ಸುಮಾರಿಗೆ ಬೆಂಗಳೂರಿ ತಲುಪಿ ಸಮಾಧಿ ಪೂಜೆ ಸಲ್ಲಿಸಿದ್ದಾರೆ.
"ಅಪ್ಪು ಸ್ವಾಮಿಯೇ ನಮ್ಮ ಪರಮಾತ್ಮ"
ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಹೊಸಪೇಟೆಯ ಅಭಿಮಾನಿಗಳು ಪುನೀತ್ ಮಾಲೆ ಧರಿಸಿದ್ದರು. ಅಪ್ಪುನೇ ತಮ್ಮ ದೇವರು ಎಂದು ನಂಬಿ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕಾವಿ ಬಟ್ಟೆ ಧರಿಸಿ, ಮಾಲೆ ತೊಟ್ಟು ಪುನೀತ್ ಪುಣ್ಯಭೂಮಿಗೆ ಬಂದಿದ್ದರು. ಈ ವೇಳೆ "ಅಪ್ಪು ಸ್ವಾಮಿಯೇ ನಮ್ಮ ಪರಮಾತ್ಮ" ಎನ್ನುತ್ತಾ ಅಭಿಮಾನ ಮರೆದಿದ್ದಾರೆ.

ಪುನೀತ್ ರಾಜ್ಕುಮಾರ್ ಪುಣ್ಯಭೂಮಿಯಲ್ಲಿ ರಾಘವೇಂದ್ರ ರಾಜ್ಕುಮಾರ್ ಹೊಸಪೇಟೆಯಿಂದ ಬಂದ ಅಪ್ಪು ಅಭಿಮಾನಿಗಳಿಗೆ ಜೊತೆಯಾಗಿದ್ದರು. ಅವರೊಂದಿಗೆ ಅಪ್ಪು ಸಮಾಧಿಗೆ ಪೂಜೆಯನ್ನು ಸಲ್ಲಿಸಿದ್ದರು. ಅಭಿಮಾನಿಗಳ ಜೊತೆ ಕೆಲಕಾಲ ಕಳೆದರು.
"ಇನ್ಮುಂದೆ ನಾನು ಅಪ್ಪು ಆಗಿಯೇ ಬದುಕುತ್ತೇನೆ"
" ಒಳ್ಳೆಯ ಕೆಲಸ ಮಾಡಿ ಅವನು ಹೋಗಿದ್ದಾರೆ. ಇದೆಲ್ಲ ಮಾಡುವುದರಿಂದ ನನಗೆ ಗೌರವವಿದೆ. ಆದರೆ, ನಮ್ಮೆಲ್ಲರಲ್ಲೂ ಜವಾಬ್ದಾರಿಯಿದೆ. ಅದನ್ನೆಲ್ಲಾ ನಾವು ಮಾಡಬೇಕು. ನಮ್ಮ ರಾಜ್ಯವನ್ನು ಪ್ರಪಂಚವೇ ತಿರುಗಿ ನೋಡುವಂತೆ ಮಾಡಬೇಕು. ನಿಮ್ಮ ನಂಬಿ ಅವನು ಬೇಗ ಹೋಗಿದ್ದಾನೆ ಅಂತ ನಾನು ಭಾವಿಸುತ್ತೇನೆ." ಎಂದು ರಾಘವೇಂದ್ರ ರಾಜ್ಕುಮಾರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
"ನಾವು ಅವನಿಗೆ ಗೌರವ ಸಲ್ಲಿಸಬೇಕು ಅಂದ್ರೆ, ಅವನ ಆದರ್ಶಗಳನ್ನು ನಾವು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ನಿಮ್ಮ ಜೊತೆ ನನ್ನನ್ನು ಸೇರಿಸಿಕೊಳ್ಳಿ. ನಾನು ನಿಮ್ಮ ಜೊತೆ ಕೆಲಸ ಮಾಡುತ್ತೇನೆ. ನಾನು ರಾಘಣ್ಣ ಅಲ್ಲ. ನಾನೂ ಅಪ್ಪುನೇ. ಇನ್ಮೇಲೆ ನಾನು ಅವನಂತೆಯೇ ಬದುಕುತ್ತೇನೆ. ನನ್ನ ಜೀವ ಇರುವವರೆಗೂ ಅಪ್ಪು ಆಗಿಯೇ ಬದುಕುತ್ತೇನೆ." ಎಂದು ರಾಘಣ್ಣ ಪುನೀತ್ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ.
"ಮುಂದಿನ ಬಾರಿ ಮಾಲೆ ಹಾಕಿದಾಗ, ನಾನು ಹಾಕುತ್ತೇನೆ"
" ನೋಡಿ ಅವರನು ಹೋಗಿ ಎರಡು ವರ್ಷ ಆದರೂ, ನೀವು ಬಂದಿದ್ದೀರಾ ಅಂದ್ರೆ, ಅಪ್ಪು ನಿಮ್ಮ ಮನಸ್ಸಿನೊಳಗೆ ಇದ್ದಾನೆ. ನಿಜಕ್ಕೂ ಅವನು ಇವಾಗ ಜಾಸ್ತಿ ಬದುಕುತ್ತಿದ್ದಾನೆ. ಅವನು ಇದ್ದಾಗ ಬದುಕಲಿಲ್ಲ. ಈಗ ಬದುಕುತ್ತಿದ್ದಾನೆ. ಅವನನ್ನು ಜೀವಂತಾಗಿ ನೀವು ಇಟ್ಟುಕೊಂಡಿದ್ದೀರ." ಎಂದು ರಾಘಣ್ಣ ಅಭಿಮಾನಿಗಳಿಗೆ ಹೇಳಿದ್ದಾರೆ.

ಅವನ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗೋಣ. ಈ ವಿಷಯವನ್ನು ಹೇಳುವುದಕ್ಕೆ, ನಿಮ್ಮನ್ನು ನೋಡುವುದಕ್ಕೆ ಇಲ್ಲಿಗೆ ಬಂದೆ. ನಿಮ್ಮ ಆಶೀರ್ವಾದ ಪಡೆದುಕೊಂಡು ಹೋಗಲು ಇಲ್ಲಿ ಬಂದೆ. ಮುಂದಿನ ಬಾರಿ ಮಾಲೆ ಹಾಕಿದಾಗ, ನಾನು ಹಾಕುತ್ತೇನೆ. ನೀವು ಅಲ್ಲಿಂದ ಹಾಕೊಂಡು ಬನ್ನಿ. ನಾನು ಇಲ್ಲಿಂದ ಹಾಕಿಕೊಂಡು ಬರುತ್ತೇನೆ." ರಾಘಣ್ಣ ಅಭಿಮಾನಿಗಳಿಗೆ ಹೇಳಿದ್ದಾರೆ.


Click it and Unblock the Notifications











