ಸಿನಿಮಾ ಕಟೌಟ್ ಕಲಾವಿದರ ಮುರಿದ ಬದುಕಿಗೆ ಹೆಗಲು ನೀಡಿದ ಪವರ್ ಸ್ಟಾರ್

ಕೊರೊನಾ ವೈರಸ್ ಕಾರಣದಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ. ಸಿನಿಮಾವನ್ನೇ ನೆಚ್ಚಿಕೊಂಡಿದ್ದ ಕಾರ್ಮಿಕರ ಬದುಕು ಕೂಡ ಇದರಿಂದ ಹೊರತಲ್ಲ. ನೋಂದಾಯಿತ ಕಾರ್ಮಿಕರಿಗೆ ಸಹಾಯ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಆದರೆ ಚಿತ್ರರಂಗವನ್ನು ನೆಚ್ಚಿಕೊಂಡಿರುವ ಅಸಂಘಟಿತ ಕಾರ್ಮಿಕರ ಬವಣೆಯನ್ನು ಕೇಳುವವರಿಲ್ಲ.

ಸಿನಿಮಾಗಳಲ್ಲಿ ಅಭಿಮಾನಿಗಳನ್ನು ಸೆಳೆಯುವುದು ಬೃಹದಾಕಾರದ ಕಟೌಟ್‌ಗಳು. ನಾಯಕ ನಾಯಕಿಯ ಕಟೌಟ್ ಚಿತ್ರಮಂದಿರದ ಮುಂದೆ ನಿಂತರೇನೇ ಸಿನಿಮಾಕ್ಕೆ ಘನತೆ ಸಿಕ್ಕಂತೆ. ಆದರೆ ಆ ಕಟೌಟ್‌ಗಳನ್ನು ಮಾಡುವವರು ಯಾರು? ಗೋಡೆ ಮೇಲೆ ಅಂಟಿಸುವ ಸಿನಿಮಾ ಪೋಸ್ಟರ್‌ಗಳನ್ನು ಸಿದ್ಧಪಡಿಸುವವರು ಯಾರು? ಅವರೂ ಕಲಾವಿದರು. ತೆರೆಮರೆಯಲ್ಲಿಯೇ ಸಿನಿಮಾಕ್ಕಾಗಿ ದುಡಿಯುವವರು. ಹೀಗೆ ಪೋಸ್ಟರ್, ಕಟೌಟ್‌ಗಳನ್ನು ಬರೆಯುವ ಕುಟುಂಬವೊಂದು ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಅದರ ಬಗ್ಗೆ ತಿಳಿದ ನಟ ಪುನೀತ್ ರಾಜ್‌ಕುಮಾರ್ ಯಾವ ಪ್ರಚಾರವೂ ಇಲ್ಲದೆ ಅವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಮುಂದೆ ಓದಿ...

ಮೋಡಿ ಮಾಡಿದ್ದ ಕಲಾವಿದ ಚಿನ್ನಪ್ಪ

ಮೋಡಿ ಮಾಡಿದ್ದ ಕಲಾವಿದ ಚಿನ್ನಪ್ಪ

ಕೈಬರಹದಲ್ಲಿ ಪೋಸ್ಟರ್, ಚಿತ್ರಗಳನ್ನು ಬರೆಯುವ 'ಕುಂಚ ಕಲಾವಿದರು' ಕಂಪೆನಿಯನ್ನು ಹುಟ್ಟು ಹಾಕಿದವರು ಹಿರಿಯ ಕಲಾವಿದ ಚಿನ್ನಪ್ಪ. ಅವರ ಮಗ ಕೃಷ್ಣ ಅದೇ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. 9 ವರ್ಷದವರಿದ್ದಾಗ ಸಿನಿಮಾ ರಂಗದ ಈ ಕಲಾ ಕಾಯಕಕ್ಕಾಗಿ ಬ್ರಷ್ ಹಿಡಿದ ಚಿನ್ನಪ್ಪ ಅವರಿಗೀಗ 83 ವರ್ಷ. ಅಂದರೆ ಸುಮಾರು 74 ವರ್ಷದಿಂದ ಅವರು ಇದೇ ವೃತ್ತಿ ನಡೆಸುತ್ತಿದ್ದಾರೆ. ಕಾಲ ಒಂದೇ ರೀತಿ ಇರುವುದಿಲ್ಲ. ಒಂದು ಸಮಯದಲ್ಲಿ ಈ ಕಲಾ ಕಾಯಕವನ್ನೇ ನೆಚ್ಚಿಕೊಂಡ ಹತ್ತಾರು ಕಂಪೆನಿಗಳಿದ್ದವು. ಅವೆಲ್ಲವೂ ನಾಶವಾಗಿ ಈಗ ಇದೊಂದೇ ಕಂಪೆನಿ ಉಳಿದಿದೆ. ಅವರ ಬದುಕೂ ದುಸ್ತರವಾಗಿದೆ.

ಕೋರಿದರೂ ಸಹಾಯ ಸಿಕ್ಕಿಲ್ಲ

ಕೋರಿದರೂ ಸಹಾಯ ಸಿಕ್ಕಿಲ್ಲ

ಕಳೆದ ಆರೇಳು ತಿಂಗಳಿಂದ ಅವರು ಸರಿಯಾದ ದುಡಿಮೆ ಕಂಡಿರಲಿಲ್ಲ. ಹಾಗೂ ಹೀಗೂ ಕೆಲವು ಕೆಲಸ ಸಿಕ್ಕಿದ್ದರಿಂದ ಬದುಕು ಸಾಗಿತ್ತು. ಆದರೆ ಚಿತ್ರರಂಗ ಸಂಪೂರ್ಣ ಬಂದ್ ಆಗಿ ತಿಂಗಳಾಯ್ತು. ಈ ಕಲಾವಿದರಿಗೆ ಈಗ ಕೆಲಸವೂ ಇಲ್ಲ, ಆದಾಯವೂ ಇಲ್ಲ. ಈ ಪರಿಸ್ಥಿತಿಯಲ್ಲಿ ಜೀವ ಅಸಾಧ್ಯ ಎಂಬ ಸ್ಥಿತಿ ಉಂಟಾಯಿತು. ಅದಕ್ಕಾಗಿ ಚಿನ್ನಪ್ಪ ಅವರ ಮಗ ಕೃಷ್ಣ ಚಲನಚಿತ್ರ ವಾಣಿಜ್ಯ ಮಂಡಳಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಪತ್ರ ಬರೆದರು. ಅನೇಕ ದೊಡ್ಡ ಜನರಿಗೆ ಸಹಾಯಕ್ಕಾಗಿ ಅಂಗಲಾಚಿದರು. ಆದರೆ ಸಿಕ್ಕಿದ್ದು ಮಾತ್ರ ನಿರಾಶೆ. 83ರ ಹರೆಯದ ಚಿನ್ನಪ್ಪ ಅವರಿಗೆ ಕಣ್ಣಿನ ಆಪರೇಷನ್ ಆಗಿದ್ದರೂ ಕೆಲಸ ಮಾಡುವ ಹುಮ್ಮಸ್ಸು ಕರಗಿಲ್ಲ. ಕೃಷ್ಣ ಅವರ ತಾಯಿ ವಯೋಸಹಜ ಅನಾರೋಗ್ಯಕ್ಕೆ ತುತ್ತಾದವರು. ಹೀಗಾಗಿ ಮನೆ ಮತ್ತು ತಮ್ಮನ್ನು ನೆಚ್ಚಿಕೊಂಡ ಕಂಪೆನಿಯ 11 ಕಲಾವಿದ ಸಿಬ್ಬಂದಿಯ ಹೊಟ್ಟೆಪಾಡು ನೋಡಿಕೊಳ್ಳುವ ಹೊಣೆ ಅವರ ಮೇಲಿದೆ.

ದೇವರಂತೆ ಬಂದರು ಪುನೀತ್

ದೇವರಂತೆ ಬಂದರು ಪುನೀತ್

ನಾನು ಹೀಗೆ ಸಹಾಯಕ್ಕಾಗಿ ಪತ್ರ ಬರೆದಿದ್ದು ಅಪ್ಪು ಸರ್‌ಗೆ ಹೇಗೆ ಗೊತ್ತಾಯೊತೋ. ಮಂಗಳವಾರ ರಾತ್ರಿ 9.30ಕ್ಕೆ ನನ್ನ ಅಕೌಂಟ್‌ಗೆ ದುಡ್ಡು ಬಂತು. ಅರೆ ಯಾರು ದುಡ್ಡು ಹಾಕಿದ್ದು ಎಂದು ನೋಡಿದಾಗ ಪುನೀತ್ ರಾಜ್‌ಕುಮಾರ್ ಎಂದು ಹೆಸರು ಕಾಣಿಸಿದೆ. ಅವರಿಗೆ ಯಾರು ಹೇಳಿರಬಹುದು? ನನಗೆ ತಿಳಿದ ಮಟ್ಟಿಗೆ ದೇವರು. ಆ ರಾತ್ರಿಯವರೆಗೂ ಹೇಗೋ ಇದ್ದ ಹಣದಲ್ಲೇ ಎಲ್ಲ ನಿಭಾಯಿಸಿದ್ದೆ. ನಾಳೆ ಏನು ಎನ್ನುವಾಗ ಖಾತೆಗೆ ಇದ್ದಕ್ಕಿದ್ದಂತೆ ಹಣ ಬಂತಲ್ಲ. ಪುನೀತ್ ಅವರಿಗೆ ಫೋನ್ ಮಾಡಿ ನನ್ನ ಪರಿಚಯ ಹೇಳಿಕೊಂಡೆ. ನಾನು ಕಳಿಸಿದ್ದು ಬಂತೇನಪ್ಪಾ? ಎಂದು ಕೇಳಿದರು. 11 ಜನ ಕೆಲಸದವರನ್ನು ಜತೆಗೆ ಇರಿಸಿಕೊಂಡು ಯಾಕೆ ಇಷ್ಟು ಕಷ್ಟಪಡುತ್ತೀಯಾ ಎಂದು ಕೇಳಿದರು. ನನ್ನ ಪರಿಸ್ಥಿತಿ ವಿವರಿಸಿದೆ. ಸರಿ, ಈ ಹಣ ಎಷ್ಟು ದಿನ ಬರುತ್ತದೆಯೋ ಅಲ್ಲಿವರೆಗೆ ಹುಷಾರಾಗಿ ಬಳಸು ಎಂದರು. ಈಗ ಅದನ್ನೇ ಮಾಡುತ್ತಿದ್ದೇನೆ ಎಂದು ಹೇಳಿದರು ಕೃಷ್ಣ.

83ರ ಹರೆಯದಲ್ಲಿಯೂ ಸ್ವಾವಲಂಬಿ

83ರ ಹರೆಯದಲ್ಲಿಯೂ ಸ್ವಾವಲಂಬಿ

ನಾವು ಹುಟ್ಟಿ ಬೆಳೆದಿದ್ದು, ನಮ್ಮ ಶಿಕ್ಷಣ ಎಲ್ಲವೂ ಇದೇ. ಈಗಲೂ ಅವರು ದುಡಿಯುತ್ತಿದ್ದಾರೆ. ನಾನು ಯಾರ ಹಂಗಲ್ಲೂ ಬದುಕುವವನಲ್ಲ. ನನ್ನ ಹಂಗಲ್ಲೇ ಬದುಕಬೇಕು ಎಂದು. ನನ್ನ ಕಷ್ಟ ನನ್ನದು ಎಂದುಕೊಂಡೇ ಬದುಕುತ್ತಿದ್ದಾರೆ. ನಾನು ಅವರಿಗೆ ನಾಲ್ಕನೆಯ ಮಗ. ಅವರ ಜತೆಗಿದ್ದು ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ತಾಯಿಗೆ ನಡೆಯಲಾರದ ಪರಿಸ್ಥಿತಿ. ಎಲ್ಲವನ್ನೂ ನೋಡಿಕೊಳ್ಳಬೇಕು.

ಎಲ್ಲ ಕಂಪೆನಿಗಳೂ ಮುಚ್ಚಿದವು

ಎಲ್ಲ ಕಂಪೆನಿಗಳೂ ಮುಚ್ಚಿದವು

ಅಪ್ಪಾಜಿ ಐದೂವರೆ ಸಾವಿರ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಈಗ ಏಳೆಂಟು ವರ್ಷಗಳ ಹಿಂದೆ ವರಮಾನ ಚೆನ್ನಾಗಿತ್ತು. 2006-07ರ ಮುಂಚೆ ತುಂಬಾ ಚೆನ್ನಾಗಿತ್ತು. ಫ್ಲೆಕ್ಸ್ ಬ್ಯಾನರ್ ಶುರುವಾದಾಗ ಹತ್ತು ಕಂಪೆನಿ ಇದ್ದದ್ದು ಈಗ ಉಳಿದಿರುವು ಒಂದೇ ಕಂಪೆನಿ. ಅಪ್ಪ ರೆಡಿ ಮಾಡಿದ್ದ ಸುಮಾರು 60 ಜನ ಕಲಾವಿದರು, ಸಹಾಯಕರು ಈಗ ಏನಾಗಿದ್ದಾರೆಯೋ ಗೊತ್ತಿಲ್ಲ. ಇವರು ಮಾತ್ರ ಇದೇ ನನ್ನ ಕುಂಚ ಕಲೆ ಎಂದು ನಂಬಿಕೊಂಡು ಕುಳಿತರು.

ಕೈಯಲ್ಲಿ ಇದ್ದಿದ್ದನೆಲ್ಲಾ ಕಳೆದುಕೊಂಡೆವು

ಕೈಯಲ್ಲಿ ಇದ್ದಿದ್ದನೆಲ್ಲಾ ಕಳೆದುಕೊಂಡೆವು

ಸರಿ. ಈ ಕೆಲಸದಲ್ಲಿ ನಮಗೆ ಉಳಿಗಾಲವಿಲ್ಲ, ಬೇರೆ ಏನಾದರೂ ಮಾಡೋಣ ಎನಿಸಿತು. ಇದಕ್ಕೂ ಮುಂಚೆ ಸ್ವಲ್ಪ ದುಡಿದಿದ್ದೆವಲ್ಲ. ಆರು ತಿಂಗಳು ಪ್ರಯತ್ನಿಸಿದೆವು. ಆದರೆ ಅದರಿಂದ ಕಳೆದುಕೊಂಡೆವೇ ವಿನಾ....( ವಿಷಾದದ ನಗು). ಕಲೆಗಾರರ ಬದುಕು ಇದು. ದುಡ್ಡು ಸಂಪಾದನೆ ಮಾಡುತ್ತೇವೆ ಆದರೆ ಅದನ್ನು ಉಳಿಸಿಕೊಳ್ಳುವ ಕಲೆ ಗೊತ್ತಿಲ್ಲ. ಅಂತಹವರು ಬಿಜಿನೆಸ್ ಮಾಡಲು ಹೋದರೆ ಏನಾಗುತ್ತದೆ? ನೆಲೆ ಇಲ್ಲದಂತಾಗುತ್ತಾರೆ. ನಾವು ಹಾಗಿದ್ದು ಕೂಡ ಹಾಗೆಯೇ. ಏನೋ ಮಾಡಲು ಹೋಗಿ ಕೈಯಲ್ಲಿರುವುದೆಲ್ಲ ಕಳೆದುಕೊಂಡೆವು.

ಹನ್ನೊಂದು ಜನರ ಬದುಕು

ಹನ್ನೊಂದು ಜನರ ಬದುಕು

ಆರು ತಿಂಗಳು ಕಷ್ಟಪಟ್ಟೆವು. ಹೀಗೆಯೇ ಇದ್ದರೆ ಇನ್ನೂ ಕಷ್ಟ. ಬದುಕುವ ದಾರಿ ಕಂಡುಕೊಳ್ಳಬೇಕು. ಏಕೆಂದರೆ ನನಗೆ ಮೂರು ಮಕ್ಕಳು. ಅವರ ಜೀವನ ನೋಡಬೇಕು. ದೊಡ್ಡ ಮಗಳು 2D, 3D ಅನಿಮೇಷನ್ ವಿಷ್ಯುವಲ್ ಎಫೆಕ್ಟ್‌ನಲ್ಲಿ ಅಂತರಾರಾಷ್ಟ್ರೀಯ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲಿಸ್ಟ್. ಚಿಕ್ಕ ಮಗಳೂ ಅದನ್ನೇ ಕಲಿಯುತ್ತಿದ್ದಾಳೆ. ಅವರ ಎಜುಕೇಷನ್‌ಗೆ 8-10 ಲಕ್ಷ ಬೇಕು. ಈಗಿನ ಪರಿಸ್ಥಿತಿಯಲ್ಲಿ ಓದಿಸಲು ಆಗೊಲ್ಲ ಎಂದು ಓದು ಬಿಡಿಸಿದ್ದೇನೆ. ಮಗ ಬಿಬಿಎ ಓಸುತ್ತಿದ್ದಾನೆ. ಈಗ ನಮಗೆ ಊಟಕ್ಕೇನೋ ತೊಂದರೆ ಇಲ್ಲ. ಆದರೆ 11 ಜನರ ಜೀವನ ನೋಡಿಕೊಳ್ಳಬೇಕಲ್ಲ. ಈ ಕೊರೊನಾ ವೈರಸ್ ಬಂದಾಗಿನಿಂದ ಒಂದು ರೂಪಾಯಿ ಆದರೂ ಆದಾಯ ಬೇಡವಾ?

ಚಿತ್ರರಂಗದಲ್ಲಿ ನಮ್ಮದೂ ಸಂಘವಿತ್ತು...

ಚಿತ್ರರಂಗದಲ್ಲಿ ನಮ್ಮದೂ ಸಂಘವಿತ್ತು...

ಚಿತ್ರರಂಗದಲ್ಲಿನ ಕಾರ್ಮಿಕರ ಸಂಘಟಿತ ಸಂಘಗಳಂತೆ ನಮ್ಮದೂ ಸಂಘವಿತ್ತು. ಅದನ್ನು ಅಪ್ಪಾಜಿಯೇ ಕಟ್ಟಿ ಬೆಳೆಸಿದ್ದರು. ಆದರೆ ಫ್ಲೆಕ್ಸ್ ಕಾಲಿಟ್ಟಾಗ ನಮಗೆ ಆದಾಯವಿಲ್ಲದೆ ಎಲ್ಲವೂ ಬಿದ್ದು ಹೋದವು. ಕೊನೆಗೆ ಉಳಿದಿದ್ದು ನಮ್ಮದೊಂದೇ ಕಂಪೆನಿ. ನಾವು ಮಾತ್ರ ಹೇಗೆ ನಿರ್ವಹಿಸಲು ಸಾಧ್ಯ. ಅದರಲ್ಲಿಯೂ ಒಂದು ಪೊಸಿಷನ್ ಇದ್ದರೆ ಮಾಡಬಹುದು. ಎರಡು ತಿಂಗಳ ಹಿಂದೆ ಬೃಹತ್ ಕಲಾವಿದರ ತಂಡವಿರು ಒಬ್ಬರು ಬಂದಿದ್ದರು. ಕುಂಚ ಕಲಾವಿದರು ಕಡಿಮೆಯಾಗುತ್ತಿದ್ದಾರೆ. ಅದು ಉಳಿಯಲು ಸಂಘಟನೆ ಮಾಡಬೇಕು. ನೀವು ಮುನ್ನಡೆಸಬೇಕು ಎಂದು ಕೇಳಿದರು. ನಮ್ಮ ಬಳಿ ಹಣವೇ ಇಲ್ಲ. ನಾಳೆ ಏನು ಎಂದು ಯೋಚಿಸುವ ಸ್ಥಿತಿ ಇದೆ. ಈಗ ಹೇಗೆ ಕೈ ಹಾಕುವುದು ಎಂದು ಕೇಳಿದೆ.

ಮರ್ಯಾದೆ ಇದ್ದಲ್ಲಿ ಮಾತ್ರ ಇರುತ್ತೇವೆ

ಮರ್ಯಾದೆ ಇದ್ದಲ್ಲಿ ಮಾತ್ರ ಇರುತ್ತೇವೆ

ಹಾಗೆಂದು ನಾವು ಯಾರಿಗೂ ಗೊತ್ತಿಲ್ಲ ಎಂದಲ್ಲ. 74 ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿರುವುದು ಪ್ರತಯೊಬ್ಬರಿಗೂ ಗೊತ್ತು. ಕರ್ನಾಟಕ ಮಾತ್ರವಲ್ಲ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಹೀಗೆ ಹಲವು ರಾಜ್ಯದ ಸಿನಿಮಾದವರಿಗೂ ಚಿನ್ನಪ್ಪ ಗೊತ್ತು. ನಾವು ಮನುಷ್ಯನಿಗೆ ಮರ್ಯಾದೆ ಇದ್ದಲ್ಲಿ ಮಾತ್ರ ಇರುತ್ತೇವೆ. ಇದು ನಮ್ಮ ಅಪ್ಪಾಜಿಯ ನೀತಿ. ನಮಗೆ ಸ್ಥಾನ ಕಲ್ಪಿಸಿದವರು ಯಾರೂ ಇಲ್ಲ. ಇಂದು ಸ್ಥಾನ ನೀಡಿದವರು ಪುನೀತಣ್ಣ. ಕೃಷ್ಣ, ನಿನಗೆ ಕುಟುಂಬ ಇದೆ, ಕೆಲಸದವರಿದ್ದಾರೆ ಅವರನ್ನೆಲ್ಲ ಮೈಂಟೇನ್ ಮಾಡಬೇಕು ಎಂದು ಹೇಳಿದರು.

ದೇವರು ಸಹಾಯ ಮಾಡಿದ್ದಾರೆ

ದೇವರು ಸಹಾಯ ಮಾಡಿದ್ದಾರೆ

ದೇವರ ಥರ ಅವರು. ದೇವರು ನಂಬುವವನಿಗೆ ಯಾವತ್ತೂ ಕಮ್ಮಿ ಇಲ್ಲ. ಯಾವುದೋ ರೂಪದಲ್ಲಿ ಕಾಪಾಡುತ್ತಾನೆ. ಹೆತ್ತ ತಾಯಿ ತಂದೆ ದೇವರುಗಳು. ಆ ಸಮಯದಲ್ಲಿ ಯಾರು ಸಹಾಯ ಮಾಡಿದ್ದಾರೆ ಎಂದರೆ ಆ ಸ್ಥಾನದಲ್ಲಿ ಇರುವವರೂ ದೇವರು ತಾನೆ. ದೇವರು ಸಹಾಯ ಮಾಡಿದ್ದಾರೆ. ಉಳಿದರೂ ಅದರಲ್ಲೇ ಸತ್ತರೂ ಅದರಲ್ಲೇ. ನಮಗೆ ಉಳಿದುಕೊಂಡಿರುವ ಸ್ಥಾನ ಎಂದರೆ ಪ್ರಪಂಚಕ್ಕೆಲ್ಲ ಖ್ಯಾತಿ, ಜೇಬೆಲ್ಲ ಖಾಲಿ. ಈಗಲೂ ತಂದೆ ಬಿಡಿಸಿದಿ ಕ್ಯಾನ್ವಾಸ್ ಪೇಂಟಿಂಗ್ ಹೊರದೇಶಕ್ಕೆ ಹೋಗುತ್ತವೆ. ಆದರೆ ಏನು ಉಳಿಸಿಕೊಂಡಿದ್ದೇವೆ? ಪುನೀತಣ್ಣ ಆಡಿದ ಎರಡು ಮಾತು ನಮಗೆ ಸಾಕು, ತೃಪ್ತಿಯಾದೆವು. ಮನುಷ್ಯರು, ದೇವರು ಇದ್ದಾರೆ ಅಷ್ಟೇ ಎಂದು ಗದ್ಗದಿತರಾದರು ಕೃಷ್ಣ.

ಹುಬ್ಬಳ್ಳಿಯ ಅಜ್ಜಣ್ಣನ ಕಥೆ

ಹುಬ್ಬಳ್ಳಿಯ ಅಜ್ಜಣ್ಣನ ಕಥೆ

ಹುಬ್ಬಳ್ಳಿಯ ಅಜ್ಜಣ್ಣ ಲಾಕ್‌ಡೌನ್ ಕಾರಣದಿಂದ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ. ಅವರು ಕುಟುಂಬ ಹುಬ್ಬಳ್ಳಿಯಲ್ಲಿದೆ. ಇಲ್ಲಿ ಶೆಡ್‌ನಲ್ಲಿ ತಮ್ಮ ಸಹೊದ್ಯೋಗಿಗಳ ಜತೆಗೆ ವಾಸಿಸುತ್ತಿರುವ ಅವರಿಗೆ ಕೃಷ್ಣ ದಿನವೂ ಊಟ ನೀಡುತ್ತಿದ್ದಾರೆ. 'ನಮಗೆಲ್ಲ ಮೂರು ಹೊತ್ತೂ ಬಿಸಿ ಬಿಸಿ ಊಟ ತಂದು ಕೊಡುತ್ತಿದ್ದಾರೆ. ಮಕ್ಕಳ ಥರ ನೋಡಿಕೊಳ್ಳುತ್ತಿದ್ದಾರೆ. ಮನೆಗೆ ಕಳುಹಿಸಲು ದುಡ್ಡು ಕೊಟ್ಟಿದ್ದಾರೆ. ಮುಂದೆ ಸಮಯ ತಿಳಿಯಾದಾಗ ಊರಿಗೆ ಹೋಗುತ್ತೇನೆ. ಅಲ್ಲಿ ಹೇಗೂ ಊಟಕ್ಕೆ ಇದೆ. ಮತ್ತೆ ಇಲ್ಲಿ ಬಿಜಿನೆಸ್ ಶುರುವಾದಾಗ ಮರಳಿ ಬರುತ್ತೇನೆ' ಎನ್ನುತ್ತಾರೆ ಅಜ್ಜಣ್ಣ.

ಮನೆಗೆ ಸಾಲುವಷ್ಟು ದುಡಿಮೆ ಇತ್ತು

ಮನೆಗೆ ಸಾಲುವಷ್ಟು ದುಡಿಮೆ ಇತ್ತು

ಈ ಕಾಯಕದಲ್ಲಿ ದುಡಿಮೆ ಇತ್ತು. ಮನೆ ಜೀವನಕ್ಕೆ ತೊಂದರೆ ಇರಲಿಲ್ಲ. ದುಡಿದಿದ್ದು ಮನೆಗೆ ಸಾಟಿ. ಗಂಟು ಮಾಡಿಟ್ಟುಕೊಳ್ಳುವಂತಹ ದುಡಿಮೆಯಲ್ಲ ಇದು. ಏಕೆಂದರೆ ಕಟೌಟ್ ಮಾಡುವ ಕಾರ್ಯದಲ್ಲಿ ಹತ್ತು ಹನ್ನೊಂದು ಮಂದಿಗೂ ಸಹಾಯ ಮಾಡಬೇಕು. ಕಟೌಟ್‌ನ ಖರ್ಚಲ್ಲಿ ಎಷ್ಟು ಉಳಿಯುತ್ತದೆ ಅದರಲ್ಲಿ ಎಲ್ಲರಿಗೂ ಹಂಚುತ್ತಾರೆ. ನಾನು ಹುಬ್ಬಳ್ಳಿಯಲ್ಲಿಯೂ ಈ ಕೆಲಸ ಮಾಡುತ್ತಿದ್ದೆ.

ಹುಬ್ಬಳ್ಳಿಯಲ್ಲಿ ಬದುಕಲು ಮಾರ್ಗವಿಲ್ಲ

ಹುಬ್ಬಳ್ಳಿಯಲ್ಲಿ ಬದುಕಲು ಮಾರ್ಗವಿಲ್ಲ

ಅಲ್ಲಿ ಪಿಕ್ಚರ್ ಕಟೌಟ್ ಬಂದ್ ಆಗಿ 20 ವರ್ಷ ಆಯ್ತು. ಅಲ್ಲಲ್ಲಿ ವಾಲ್ ಪೇಂಟಿಂಗ್, ಸೈನ್ ಬೋರ್ಡ್ ಮಾಡಿಕೊಳ್ಳುತ್ತಾ ಜೀವನ ನಡೆಸಿದ್ದೆ. ಆದರೆ ಎಲ್ಲಿಗೆ ನೆಲೆ ಹತ್ತಲಿಲ್ಲ. ಇಲ್ಲಿಗೆ ಬಂದು ಆರೇಳು ವರ್ಷ ಆಯ್ತು. ಮುಂಚಿನ ಥರ ಆದಾಯ ಇಲ್ಲ. ಮನೆ ಜೀವನ ನಡೀತಿದೆ ಅಷ್ಟೇ ಸಾಕು. ಅದೊಂದೇ ಕಾರಣಕ್ಕೆ ಬಂದು ದುಡೀತಿದ್ದೇನೆ. ಹುಬ್ಬಳ್ಳಿಯಲ್ಲಿ ನಯಾ ಪೈಸೆ ಕೆಲಸ ಇಲ್ಲ. ಯಾರೂ ಬೋರ್ಡ್ ಬರೆಯಲು ಕೊಡುತ್ತಿಲ್ಲ. ಬೋರ್ಡ್ ಬರೆಯೋದು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ಅಂಗಡಿ ಕೆಲಸಗಳು ತಿಳಿದಿಲ್ಲ.

ಶಾಲೆ ಬೇರೆ ಕಲಿತಿಲ್ಲ. ಈ ಕೆಲಸದಲ್ಲಿ ನಂಬಿಕೊಂಡೇ ಹೇಗೋ ಜೀವನ ಮಾಡುತ್ತಿದ್ದೇವೆ. ದೂರವಿದ್ದರೂ ಮಕ್ಕಳು ಮರಿ ಬದುಕುತ್ತಾರಲ್ಲ ಎಂದು ಇಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಎಂದು ಅಜ್ಜಣ್ಣ ತಮ್ಮ ಬದುಕಿನ ಸಂಕಟವನ್ನು ವಿವರಿಸಿದರು.

More from Filmibeat

English summary
Artists who depends on cut out and cinema posters are hit by coronavirus pandemic lockdown. Actor Puneeth Rajkumar helps them with financial aid.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X