ಪುನೀತ್ ದರ್ಶನಕ್ಕೆ ಅಭಿಮಾನಿಗಳ ಸುನಾಮಿ: ಅಂತ್ಯಕ್ರಿಯೆ ಮುಂದೂಡಲು 2 ಕಾರಣ
ಬೆಂಗಳೂರು, ಅ 30: ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಪಡೆಯಲು ರಾಜ್ಯದ ಮೂಲೆಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ರಾಜಕಾರಣಿಗಳು ಬರುತ್ತಿರುವುದು ಒಂದು ಕಡೆಯಾದರೆ, ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟೇಡಿಯಂನಲ್ಲಿ ಜಮಾಯಿಸುತ್ತಿದ್ದಾರೆ. 2006ರಲ್ಲಿ ವರನಟ ಡಾ. ರಾಜಕುಮಾರ್ ಅವರ ಅಂತಿಮ ಸಂಸ್ಕಾರದಂತೆ ಜನರು ಹರಿದು ಬರುತ್ತಿದ್ದಾರೆ.
ಪುನೀತ್ ರಾಜಕುಮಾರ್ ನಿಧನದ ವಾರ್ತೆ ಘೋಷಣೆಯಾದ ನಂತರದಿಂದ ಈಗಿನ ವರೆಗೂ ಅವರ ಅಂತಿಮ ಸಂಸ್ಕಾರದ ದಿನ/ಸಮಯದ ಬಗ್ಗೆ ಗೊಂದಲ ಮುಂದುವರಿದಿದೆ. ಮೊದಲು, ಭಾನುವಾರ ಎಂದೇ ಪ್ರಕಟಿಸಲಾಗಿತ್ತು, ಇದಾದ ನಂತರ ಶನಿವಾರ ಎಂದಾಯಿತು.
ಈಗ ಮತ್ತೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಅಂತಿಮ ಸಂಸ್ಕಾರ ಭಾನುವಾರದಂದು (ಅ 31) ನಡೆಯಲಿದೆ ಎಂದು ಹೇಳಿದ್ದಾರೆ. ಯಾವ ಸಮಯಕ್ಕೆ ಎನ್ನುವುದು ಇನ್ನೂ ನಿಗದಿಯಾಗಿಲ್ಲ. ಗೊಂದಲಕ್ಕೆ ಏನು ಕಾರಣ?

ಪುನೀತ್ ಪುತ್ರಿ ಈಗಾಗಲೇ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ
ಅಮೆರಿಕಾದಲ್ಲಿ ಓದುತ್ತಿರುವ ಪುನೀತ್ ಅವರ ಪುತ್ರಿ ಯಾವ ಸಮಯಕ್ಕೆ ಬೆಂಗಳೂರು ತಲುಪುತ್ತಾರೋ, ಅದರ ಆಧಾರದ ಮೇಲೆ ಸಮಯ ನಿಗದಿ ಮಾಡಲಾಗುವುದು ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ. ಪುನೀತ್ ಪುತ್ರಿ ಧೃತಿ ಈಗಾಗಲೇ ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣಕ್ಕೆ ತಲುಪಲಿದ್ದಾರೆ. ಅಲ್ಲಿಂದ ನೇರವಾಗಿ ಕಂಠೀರವ ಸ್ಟೇಡಿಯಂಗೆ ಅಪ್ಪು ಪುತ್ರಿ ಹೋಗಲಿದ್ದಾರೆ.

ಅಂತ್ಯಕ್ರಿಯೆ ಮುಂದೂಡಲು ಕಾರಣ ಹೇಳಿದ ರಾಘವೇಂದ್ರ ರಾಜಕುಮಾರ್
"ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದ ಹೇಳುತ್ತೇನೆ, ಇದೇ ರೀತಿ ಅಂತಿಮ ಸಂಸ್ಕಾರ ಮುಗಿಯುವವರೆಗೆ ನೀವು ತಾಳ್ಮೆ, ಸಂಯಮದಿಂದ ಇರಿ. ಅಪ್ಪು ಮಗಳು ಬರಬೇಕು, ಅವಳನ್ನು ಸಮಾಧಾನ ಪಡಿಸಬೇಕು. ನನ್ನನ್ನು ಅಪ್ಪ ಅಂತಾ ಕರೀತಾ ಇದ್ದಳು, ಅವನನ್ನು ಪಪ್ಪ ಎಂದು ಕರೀತಾ ಇದ್ದಳು. ಅಪ್ಪ, ಪಪ್ಪ ಎಲ್ಲಿ ಎಂದು ಕೇಳಿದರೆ ನಾನು ಏನು ಹೇಳುವುದೋ ಗೊತ್ತಾಗುತ್ತಿಲ್ಲ. ಅಂತ್ಯಕ್ರಿಯೆಯನ್ನು ನಾಳೆ ನಡೆಸುತ್ತೇವೆ. ಯಾವ ಸಮಯ ಎನ್ನುವುದನ್ನು ಅವಳು ಬಂದ ಮೇಲೆ ತೀರ್ಮಾನ ಮಾಡುತ್ತೇವೆ"ಎಂದು ರಾಘವೇಂದ್ರ ರಾಜಕುಮಾರ್ ಅಂತ್ಯಕ್ರಿಯೆ ಮುಂದೂಡಲು ಕಾರಣ ಏನು ಎನ್ನುವುದನ್ನು ವಿವರಿಸಿದ್ದಾರೆ.

ಭಾರೀ ಸಂಖ್ಯೆಯಲ್ಲಿ ಜನರು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ
ಸರಕಾರ ಮತ್ತು ಪೊಲೀಸ್ ಮೂಲದ ಪ್ರಕಾರ, ಭಾರೀ ಸಂಖ್ಯೆಯಲ್ಲಿ ಜನರು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ. ಈಗಾಗಲೇ, ನಾಲ್ಕರಿಂದ ಐದು ಲಕ್ಷ ಅಭಿಮಾನಿಗಳು ಪುನೀತ್ ಅಂತಿಮ ದರ್ಶನವನ್ನು ಪಡೆದಿದ್ದಾರೆ. ಕಂಠೀರವ ಸ್ಟೇಡಿಯಂನತ್ತ ಬರುತ್ತಿರುವವರ ಸಂಖ್ಯೆ ಒಂದೇ ಸಮನೇ ಏರುತ್ತಿರುವುದರಿಂದ, ಈ ವೇಳೆ ಪಾರ್ಥಿವ ಶರೀರವನ್ನುಅಲ್ಲಿಂದ ತೆಗೆದರೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಬಹುದು ಎನ್ನುವ ಕಾರಣಕ್ಕಾಗಿ, ನಾಳೆ ಬೆಳಗ್ಗೆವರೆಗೆ ಅಂತಿಮ ದರ್ಶನ ಮುಂದುವರಿಸಲು ಸರಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ, ಅಂತ್ಯ ಸಂಸ್ಕಾರ ನಾಳೆ
"ಅಪ್ಪು ಅವರ ಅಂತ್ಯಕ್ರಿಯೆಯನ್ನು ನಾಳೆ, ಅಂದರೆ ಭಾನುವಾರ, ಅಕ್ಟೋಬರ್ 31ರಂದು ಮಾಡಲು ತೀರ್ಮಾನಿಸಲಾಗಿದೆ. ಅಭಿಮಾನಿಗಳಿಗೆ ನಾಳೆಯವರೆಗೆ ಅಂತಿಮ ದರ್ಶನಕ್ಕೆ ಸಮಯಾವಕಾಶವಿದೆ. ಎಲ್ಲರೂ ಸಂಯಮದಿಂದ ವರ್ತಿಸಿ, ಶಾಂತಿ ಸುವ್ಯವಸ್ಥೆಗೆ ಸಹಕರಿಸಬೇಕು. ರಾತ್ರಿ ವೇಳೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನಡೆಸುವುದೂ ಸವಾಲಿನ ಕೆಲಸ. ಹಾಗಾಗಿ, ರಾಜಕುಮಾರ್ ಕುಟುಂಬದ ಜೊತೆಗೆ ಚರ್ಚಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.


Click it and Unblock the Notifications











