ಚಕ್ರವ್ಯೂಹ ಚಿತ್ರ ಬಿಡುಗಡೆ: ಸಿಡ್ನಿಯಿಂದ ಪುನೀತ್ ಮಾಡಿದ ಮನವಿ
ಇವತ್ತು, ನಾಳೆ, ನಾಡದ್ದು ಎಂದು ಕಾಯುತ್ತಿದ್ದ ಸಿನಿರಸಿಕರ ತಾಳ್ಮೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ಎರಡು ತಿಂಗಳಿನಿಂದ ಕಾಯುತ್ತಿದ್ದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ, ಕನ್ನಡ ಚಿತ್ರೋದ್ಯಮದ ಬಹು ನಿರೀಕ್ಷಿತ ಚಕ್ರವ್ಯೂಹ ಚಿತ್ರ ಕೊನೆಗೂ ಶುಭ ಶುಕ್ರವಾರ (ಏ 29) ರಿಲೀಸ್ ಆಗಿದೆ.
ಸ್ಯಾಂಡಲ್ ವುಡ್ ನಲ್ಲಿ ಪ್ರೀಮಿಯರ್ ಶೋ ಎನ್ನುವ ಕಾನ್ಸೆಪ್ಟ್ ಹೆಚ್ಚುಕಮ್ಮಿ ಇಲ್ಲ ಎನ್ನಬಹುದು. ಅದರಲ್ಲೂ ವಿದೇಶದ ನೆಲದಲ್ಲಿ ಪ್ರೀಮಿಯರ್ ಶೋ ಎಂದರೆ? ಸಿಡ್ನಿಯಲ್ಲಿ ಚಿತ್ರದ ಪ್ರೀಮಿಯರ್ ಶೋ ಗುರುವಾರ ನಡೆದಿದೆ. (ಚಕ್ರವ್ಯೂಹ ಬೇಧಿಸಲು ಸಜ್ಜಾದ ಪವರ್ ಸ್ಟಾರ್)
ತಮಿಳಿನ ಶರವಣನ್ ನಿರ್ದೇಶನದ ಚಕ್ರವ್ಯೂಹ ಚಿತ್ರ ಸುಮಾರು 350+ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶುಕ್ರವಾರ (ಏ 29) ದೇಶಾದ್ಯಂತ ಬಿಡುಗಡೆಯಾಗಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ಮೊದಲ ದಿನ 196ಶೋ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.
ಬೆಂಗಳೂರಿನ ನರ್ತಕಿ, ವೆಂಕಟೇಶ್ವರ, ಬಾಲಾಜಿ ಮುಂತಾದ ಚಿತ್ರಮಂದಿರಗಳಲ್ಲಿ ಬೆಳ್ಳಂಬೆಳಗ್ಗೆ ಮೊದಲನೇ ಆರಂಭಗೊಂಡಿದ್ದು, ನಿರೀಕ್ಷೆಯಂತೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಏನಂತಾರೆ? ನೋಡಿ ಈ ವಿಡಿಯೋದಲ್ಲಿ..
ರಾಜಕುಮಾರ್ ಚಿತ್ರದ ಶೂಟಿಂಗ್ ಗಾಗಿ ಆಸ್ಟ್ರೇಲಿಯಾದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಸಿಡ್ನಿಯಿಂದ ಸಿನಿಮಾ ರಸಿಕರಿಗೆ ಸಂದೇಶ ಮತ್ತು ಮನವಿಯನ್ನು ಮಾಡಿದ್ದಾರೆ.

ಸಿಡ್ನಿಯಲ್ಲಿ ಪ್ರೀಮಿಯರ್ ಶೋ
ಪವರ್ ಸ್ಟಾರ್ ಪುನೀತ್ ಅವರ 24ನೇ ಸಿನಿಮಾ ಇದಾಗಿದ್ದು, ತೆಲುಗಿನ ನಿರ್ಮಾಪಕ ಎನ್ ಕೆ ಲೋಹಿತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಪ್ಪು ಅಭಿಮಾನಿಗಳು ಸಿಡ್ನಿಯಲ್ಲಿ ಗುರುವಾರ (ಏ 28) ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ಪುನೀತ್ ಭಾಗವಹಿಸಿ, ಸಿನಿರಸಿಕರ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.

ಪ್ರೀಮಿಯರ್ ಶೋ ನೋಡಿದವರು ಹೇಳಿದ್ದು
Times to welcome new badshah of box office ಎಂದು ಪ್ರೀಮಿಯರ್ ಶೋ ನೋಡಿದ ಸಿನಿರಸಿಕರು ಅಭಿಪ್ರಾಯ ಪಟ್ಟಿದ್ದಾರೆ. ಆಕ್ಷನ್ ಪ್ರಧಾನವಾದ ಚಿತ್ರ ಇದಾಗಿದ್ದು, ಸಮಾಜಕ್ಕೆ ಮೆಸೇಜ್ ಕೂಡಾ ಇದ್ದು ಹಂಡ್ರೆಡ್ ಡೇಸ್ ಗ್ಯಾರಂಟಿ ಎಂದಿದ್ದಾರೆ.

ಪುನೀತ್ ಹೇಳಿದ್ದು
ಪ್ರತೀ ಚಿತ್ರವೂ ಹೊಸ ಪರೀಕ್ಷೆ ಇದ್ದಂತೇ, ರಿಲೀಸ್ ಹತ್ತಿರವಾಗುತ್ತಿದ್ದಂತೆಯೇ ನರ್ವಸ್ ಆಗುತ್ತೇನೆ. ಎಕ್ಸಾಂ ಬರೆದಾಗ ರಿಸಲ್ಟ್ ಕಾಯುವಂತೆ, ನಾನು ಹಾಗೇ. ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ ಎಂದು ಪುನೀತ್ ಹೇಳಿದಾಗ, ಸಿಲ್ವರ್ ಜ್ಯುಬಿಲಿ ಗ್ಯಾರಂಟಿ ಬಿಡಿ ಸರ್ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಅಪ್ಪಾಜಿ ಹುಟ್ಟುಹಬ್ಬ
ನನ್ನ ತಂದೆಯ ಹುಟ್ಟುಹಬ್ಬದ ಸಮಯದಲ್ಲಿ ನಾನು ಆಸ್ಟ್ರೇಲಿಯಾದಲ್ಲಿದ್ದೆ. ನನ್ನ ತಂದೆಯವರು ಯಾವಾಗಲೂ ಹೇಳುವವರು, ಮೊದಲು ಕೆಲಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡು ಎಂದು. ಕರ್ನಾಟಕದಲ್ಲಿ ಇದ್ದಾಗಲೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಿದ್ದೆ, ಇಲ್ಲೂ ಫ್ಯಾನ್ಸ್ ಜೊತೆ ಅಪ್ಪಾಜಿ ಹುಟ್ಟುಹಬ್ಬ ಆಚರಿಸಿಕೊಂಡೆ.

ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ
ಅಭಿಮಾನಿಗಳನ್ನು ಅಪ್ಪಾಜಿ ದೇವರೆಂದು ಕರೆದರು. ನಾನೂ ಹಾಗೇ ಕರೆಯುತ್ತೇನೆ. ಇದು ನಿಮ್ಮ ಚಪ್ಪಾಳೆಗಿಟ್ಟಿಸಿಕೊಳ್ಳಲು ಅಲ್ಲ. ಚಿತ್ರವನ್ನು ನೋಡಿ, ನಾವು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಅಭಿಮಾನಿಗಳ ಪ್ರೀತಿ ಕಾರಣ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಯಾವತ್ತೂ ಇರಲಿ.

ಪ್ರೀಮಿಯರ್ ಶೋ
ಈ ರೀತಿಯ ಪ್ರೀಮಿಯರ್ ಶೋ ನಡೆಸುವುದಕ್ಕೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ, ಎಲ್ಲಾ ಕನ್ನಡ ಸಿನಿಮಾಗಳನ್ನು ಇಲ್ಲೇ ಪ್ರೀಮಿಯರ್ ಶೋ ನಡೆಸಿ. ನಮ್ಮ ಸಂಪೂರ್ಣ ಬೆಂಬಲ ಚಿತ್ರೋದ್ಯಮಕ್ಕಿದೆ. ನಮ್ಮ ಸಿನಿಮಾಗಳೂ ಬೇರೆ ಭಾಷೆಯ ಚಿತ್ರಕ್ಕೆ ಸ್ಪರ್ಧಿಸಬೇಕು ಎಂದು ಪ್ರೀಮಿಯರ್ ಶೋಗೆ ಬಂದವರು ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರ ಕೊಂಚ ವಿಳಂಬವಾಯಿತು
ತುಂಬಾ ಶ್ರಮವಹಿಸಿ ಈ ಚಿತ್ರ ತೆರೆಗೆ ತಂದಿದ್ದೇವೆ. ಎಲ್ಲರೂ ನೋಡಿ ನಮ್ಮಂತಹ ಕಲಾವಿದರನ್ನು ಪ್ರೋತ್ಸಾಹಿಸಿ. ಚಿತ್ರ ಬಿಡುಗಡೆ ಸ್ವಲ್ಪ ತಡವಾಯಿತು, ಚಿತ್ರವನ್ನು ಇನ್ನಷ್ಟು ಟೆಕ್ನಿಕಲಿ ಚೆನ್ನಾಗಿ ತರುವ ನಿರ್ಮಾಪಕರ / ನಿರ್ದೇಶಕರ ಉದ್ದೇಶದಿಂದ ಚಿತ್ರ ವಿಳಂಬವಾಯಿತು. ಎಲ್ಲರೂ ಸಹಕರಿಸಿ ಎಂದು ಸಿಡ್ನಿಯಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಪುನೀತ್ ರಾಜಕುಮಾರ್ ಮನವಿ ಮಾಡಿದ್ದಾರೆ.


Click it and Unblock the Notifications











