ಒಂದು ತಿಂಗಳಿಗೂ ಮುನ್ನವೇ ಅಪ್ಪು ಅಭಿಮಾನಿಗಳಿಂದ 'ಗಂಧದ ಗುಡಿ' ಸಂಭ್ರಮ!
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕೊನೆಯ ಸಿನಿಮಾ 'ಗಂಧದ ಗುಡಿ'. ಅಪ್ಪು ಕನಸು ಕಂಡಿದ್ದ ಈ ಸಿನಿಮಾದಲ್ಲಿ ವಿಶಿಷ್ಠವಾಗಿ ಬೆಳ್ಳಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕೊನೆಯ ಬಾರಿ ಅದೂ ವಿಭಿನ್ನವಾಗಿ ಪುನೀತ್ ರಾಜ್ಕುಮಾರ್ ಆಗಿಯೇ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಕರ್ನಾಟಕದ ಕಾಡು-ಮೇಡು, ಸಾಗರ, ಪ್ರಾಣಿ-ಪಕ್ಷಿ ಸಂಪತ್ತನ್ನು ಬಿಗ್ ಸ್ಕ್ರೀನ್ನಲ್ಲಿ ತೋರಿಸಬೇಕು ಅನ್ನೋದು ಪುನೀತ್ ರಾಜ್ಕುಮಾರ್ ಕನಸಾಗಿತ್ತು. ಅದಕ್ಕೆ ತಕ್ಕಂತೆ ಕಳೆದ ವರ್ಷ ಕನ್ನಡ ರಾಜ್ಯೋತ್ಸವಕ್ಕೆ ಟೀಸರ್ ಅನ್ನು ರಿಲೀಸ್ ಮಾಡಬೇಕು ಅಂತ ಆಸೆ ಪಟ್ಟಿದ್ದರು. ಅಷ್ಟರಲ್ಲೇ ಅಪ್ಪು ಬಾಳಲ್ಲಿ ವಿಧಿ ಆಟ ಆಡಿತ್ತು. ಅದೇ ಕನಸನ್ನು ಬೆಳ್ಳಿತೆರೆಮೇಲೆ ತರಲು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಪಣ ತೊಟ್ಟಿದ್ದರು. ಅಂತೇಯೇ ಅಕ್ಟೋಬರ್ 28ಕ್ಕೆ ಬಿಡುಗಡೆಯಾಗುತ್ತಿದೆ. ಈ ಬೆನ್ನಲ್ಲೇ ಅಪ್ಪು ಅಭಿಮಾನಿಗಳು ಬಿಡುಗಡೆ ಸಂಭ್ರಮಾಚರಣೆಯನ್ನು ಶುರು ಮಾಡಿದ್ದಾರೆ.
ಥಿಯೇಟರ್ ಮುಂದೆ ಅಪ್ಪು ಫ್ಯಾನ್ಸ್ ಸಂಭ್ರಮ
ಕೊನೆಯ ಕಮರ್ಷಿಯಲ್ ಸಿನಿಮಾ 'ಜೇಮ್ಸ್' ಬಿಡುಗಡೆಯಾದಾಗಲೂ ಪುನೀತ್ ಅಭಿಮಾನಿಗಳು ಥಿಯೇಟರ್ ಹಬ್ಬ ಮಾಡಿದ್ದರು. ಹಿಂದೆಂದೂ ಸಂಭ್ರಮಿಸದಷ್ಟು ಅದ್ಧೂರಿಯಾಗಿ ಸಿನಿಮಾ ರಿಲೀಸ್ ಮಾಡಿದ್ದರು. ತಮ್ಮದೇ ಖರ್ಚಿನಲ್ಲಿ ಥಿಯೇಟರ್ ಸಿಂಗರಿಸಿದ್ದರು. ಪೋಸ್ಟರ್ಗಳು ರಾರಾಜಿಸಿದ್ದವು. ಅದೇ ರೀತಿ ಅಪ್ಪು ಕರಿಯರ್ನ ಕೊನೆಯ ಸಿನಿಮಾ ರಿಲೀಸ್ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ ಸಂಭ್ರಮಾಚರಣೆ ಶುರು ಮಾಡಿದ್ದಾರೆ.
'ಗಂಧದಗುಡಿ' ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಬೇಕು. ಪುನೀತ್ ಅಭಿಮಾನಿಗಳು ಆ ದಿನ ಸಂಭ್ರಮಿಸಬೇಕು ಅಂತ ಪಣ ತೊಟ್ಟಿದ್ದಾರೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಇನ್ನು ಒಂದು ತಿಂಗಳು 10 ದಿನ ಬಾಕಿ ಇರುವಂತೆಯೇ ಥಿಯೇಟರ್ ಮುಂದೆ ಬ್ಯಾನರ್ ನಿಲ್ಲಿಸಿ, ಅದಕ್ಕೆ ಹೂವಿನ ಹಾರ ಹಾಕಿ ಸಂಭ್ರಮಾಚರಣೆಗೆ ಚಾಲನೆ ನೀಡಿದ್ದಾರೆ.

ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಸೆಲೆಬ್ರೇಷನ್
ಬೆಂಗಳೂರಿನ ಕಮಲಾನಗರದಲ್ಲಿರುವ ವೀರಭದ್ರೇಶ್ವರ ಚಿತ್ರಮಂದಿರಲ್ಲಿ ಅಖಿಲ ಕರ್ನಾಟಕ ಯುವರಾಜ್ ಕುಮಾರ್ ಸೇನೆ ಅಭಿಮಾನಿ ಸಂಘ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಪುನೀತ್ ರಾಜ್ಕುಮಾರ್ ಫೋಟೊಗೆ ಹೂವಿನ ಹಾರ ಹಾಕಿ, ಕುಂಬಳ ಕಾಯಿ ಒಡೆದು, ಪಟಾಕಿ ಸಿಡಿಸಿ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ.
ಇಂದಿನಿಂದ (ಸೆಪ್ಟೆಂಬರ್ 18) ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕಂಡ ಕನಸನ್ನು ಸಿನಿಪ್ರಿಯರಿಗೆ ಹಾಗೂ ಕರ್ನಾಟಕದ ಪ್ರತಿಯೊಬ್ಬರಿಗೂ ತಲುಪಿಸಲು ಅಪ್ಪು ಫ್ಯಾನ್ಸ್ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಚಿಕ್ಕದಾಗಿ ಆರಂಭಗೊಂಡಿರೋ ಈ ಸಂಭ್ರಮ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡದಾಗಿ ಸೆಲೆಬ್ರೇಷನ್ ಮಾಡುವ ಆಲೋಚನೆಯಿದೆ.

ಅಪ್ಪು ಮೊದಲ ಪುಣ್ಯ ತಿಥಿಗೂ ಮುನ್ನ ಸಿನಿಮಾ ರಿಲೀಸ್
ಕಳೆದ ವರ್ಷ ಅಕ್ಟೋಬರ್ 29ಕ್ಕೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿದ್ದರು. ಮುಂದಿನ ಅಕ್ಟೋಬರ್ಗೆ ಒಂದು ವರ್ಷ ಆಗಲಿದ್ದು, ಮೊದಲ ಪುಣ್ಯ ತಿಥಿಗೂ ಮುನ್ನ ಪವರ್ ಸ್ಟಾರ್ ಕನಸನ್ನು ಲೋಕಾರ್ಪಣೆ ಮಾಡಲಾಗುತ್ತಿದೆ.
ಕನ್ನಡ ರಾಜ್ಯೋತ್ಸವಕ್ಕೆ ಟೀಸರ್ ಬಿಡಬೇಕು ಅಪ್ಪು ಅಂದ್ಕೊಂಡಿದ್ದರಿಂದ ರಾಜ್ಯೋತ್ಸವಕ್ಕಾಗಿಯೇ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಅಮೋಘವರ್ಷ ನಿರ್ದೇಶಿಸಿದ ಈ ಸಿನಿಮಾ ಬಿಡುಗಡೆ ಯಾವ ಸ್ವರೂಪದಲ್ಲಿರುತ್ತೆ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ರಿವೀಲ್ ಆಗಲಿದೆ.


Click it and Unblock the Notifications











