Puneeth Rajkumar: ಅಪ್ಪು ಅಗಲಿ 2 ವರ್ಷ.. "ಪ್ರೀತಿಯ ಅಪ್ಪು, ನೀವ್ಯಾಕಿಷ್ಟು ಒಳ್ಳೆಯವರಾದಿರಿ?" ಫ್ಯಾನ್ಸ್ ಭಾವುಕ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ (ಅಕ್ಟೋಬರ್ 29) ಎರಡು ವರ್ಷ. ಈ ದಿನ ಪವರ್ಸ್ಟಾರ್ ಅಭಿಮಾನಿಗಳಿಗಷ್ಟೇ ಅಲ್ಲ. ಕನ್ನಡಿಗರಿಗೆ ಕರಾಳ ದಿನ. ಎರಡು ವರ್ಷಗಳ ಹಿಂದೆ ಪುನೀತ್ ರಾಜ್ಕುಮಾರ್ ದಿಢೀರನೇ ಅಗಲಿದ್ದು ಇಂದಿಗೂ ನಂಬುವುದಕ್ಕೆ ಕಷ್ಟ.
ಇಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಎರಡನೇ ಪುಣ್ಯತಿಥಿ. ಹೀಗಾಗಿ ಅಪ್ಪು ಸಮಾಧಿ ಮುಂದೆ ಕುಟುಂಬಸ್ಥರಿಂದ ಪೂಜಾ ಕಾರ್ಯಗಳು ನಡೆಯುತ್ತಿವೆ. ಜೊತೆಗೆ ಅಪ್ಪು ನೆನಪಿನಲ್ಲಿಯೇ ರಕ್ತದಾನ, ಅನ್ನದಾನ ಶಿಬಿರಗಳು ನೆರವೇರಲಿವೆ.

ಅದರಲ್ಲೂ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗಂತೂ ಈ ದಿನ ಮರೆಯೋಕೆ ಸಾಧ್ಯವೇ ಇಲ್ಲ. ಪುನೀತ್ ರಾಜ್ಕುಮಾರ್ ಎರಡನೇ ಪುಣ್ಯತಿಥಿಯನ್ನು ನೆನೆದು ಅಭಿಮಾನಿಗಳು ಭಾವುಕರಾಗಿ ಎಕ್ಸ್ (ಟ್ವೀಟ್)ನಲ್ಲಿ ಬರೆದುಕೊಂಡಿದ್ದಾರೆ. ಯಾರು ಯಾರು ಏನೇನು ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಪ್ರೀತಿಯ ಅಪ್ಪು, ನೀವ್ಯಾಕಿಷ್ಟು ಒಳ್ಳೆಯವರಾದಿರಿ?"
ಪುನೀತ್ ರಾಜ್ಕುಮಾರ್ ನೆನೆದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಭಾವುಕರಾಗುತ್ತಿದ್ದಾರೆ. ಅಪ್ಪು ನೆನೆದು ಭಾವನಾತ್ಮಕವಾಗಿ ಸಾಲುಗಳನ್ನು ಬರೆದುಕೊಳ್ಳುತ್ತಿದ್ದಾರೆ. "ಪ್ರೀತಿಯ ಅಪ್ಪು, ನೀವ್ಯಾಕಿಷ್ಟು ಒಳ್ಳೆಯವರಾದಿರಿ? ಪ್ರಪಂಚ ಕಂಡ ಸರ್ವಶ್ರೇಷ್ಠ ಕಲಾವಿದ ಡಾ.ರಾಜಕುಮಾರ್ ಅವರ ಮುದ್ದಿನ ಮಗನಾದರೂ ನೀವ್ಯಾಕಿಷ್ಟು ಸರಳ? 'ನಾನು', 'ನನ್ನದು' ಎನ್ನುವ ಈ ಕಾಲದಲ್ಲಿ, ನೀವ್ಯಾಕಿಷ್ಟು ದಾನ, ಧರ್ಮ ಮಾಡಿದಿರಿ? ಏನೂ ಕೊಡದಿದ್ದರೂ ಸಾವಿರ ಮಾತನಾಡುವ ಈ ಕಾಲದಲ್ಲಿ, ನೀವು ಯಾಕೆ ಪರೋಪಕಾರಿಯಾದಿರಿ?" ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ.
"ಯಾರಿಗೂ ಸರಿಸಾಟಿಯಿಲ್ಲ"
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಗುವಿನ ಫ್ಯಾನ್ ಆದವರು ಅದೆಷ್ಟೋ ಮಂದಿ. ನಿಶ್ಕಲ್ಮಶ ನಗುವಿಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಅದಕ್ಕೆ ಮತ್ತೊಬ್ಬ ಅಭಿಮಾನಿ "ಅರಳಿದ ಆ ನಿಮ್ಮ ನಗು.. ನೋಡ ಬಲು ಸೊಬಗು.. ಸರಿಸಾಟಿಯಿಲ್ಲ ಯಾರಿಗು.. ಕೇಳಿಸಿಕೊಳ್ಳಿ ಅಣ್ಣ ನಮ್ಮ ಕೂಗು.. ದೈವವೇ ಅತ್ತನು ಈ ದಿನ.. ಮರುಗು" ಎಂದು ಮತ್ತೊಬ್ಬ ಅಭಿಮಾನಿ ಬರೆದುಕೊಂಡಿದ್ದಾರೆ.
"ಜೊತೆಗಿರದ ಜೀವ ಎಂದಿಗೂ ಜೀವಂತ"
ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಒಂದೊಂದು ಸಾಲು ಅಪ್ಪು ಗುಣವನ್ನು ನೆನಪಿಸುತ್ತಿವೆ. "ಎಷ್ಟು ಜನರ ಮಧ್ಯೆ ಇರ್ತೀನಿ ಅನ್ನೋದು ಮುಖ್ಯ ಅಲ್ಲ, ಎಷ್ಟು ಜನರ ಮನಸ್ಸಿನಲ್ಲಿ ಇರ್ತೀವಿ ಅನ್ನೋದು ಮುಖ್ಯ. ಜೊತೆಗಿರದ ಜೀವ ಎಂದಿಗೂ ಜೀವಂತ." ಎಂದು ಮತ್ತೊಬ್ಬ ಅಭಿಮಾನಿ ಭಾವುಕರಾಗಿ ಬರೆದುಕೊಂಡಿದ್ದಾರೆ.
"ಅಪ್ಪು ನನ್ನ ಜೀವನದ ಒಂದು ಭಾಗ"
"ಟ್ವಿಟರ್ ಹಾಗೂ ಫೇಸ್ಬುಕ್ ಬಳಸುವುದನ್ನು ಅವರಿಗಾಗಿಯೇ ಶುರು ಮಾಡಿದೆ. ಅವರು ನನ್ನ ಬದುಕಿನ ಬಹುಮುಖ್ಯ ಅಂಗ. ನನ್ನ ಅರ್ಧ ಸಮಯವನ್ನು ಅವರಿಗೆ ಮೀಸಲಾಗಿರಿಸಿದ್ದೇನೆ. ಅವರು ನನ್ನ ಬದುಕಿನಲ್ಲಿ ನೋವೇ ಬಾರದಂತಹ ವೃತ್ತವನ್ನೇ ಸೃಷ್ಟಿಸಿದರು" ಎಂದು ಇನ್ನೊಬ್ಬ ಫ್ಯಾನ್ ಬರೆದುಕೊಂಡಿದ್ದಾರೆ.
"ನನ್ನ ಬಾಲ್ಯವನ್ನು ಶ್ರೀಮಂತಗೊಳಿಸಿದ್ರಿ"
"ನೀವು ನಮ್ಮ ಬಾಲ್ಯದ ದಿನಗಳನ್ನು ಶ್ರೀಮಂತಗೊಳಿಸಿದ್ರಿ. ಆ ದಿನಗಳಿಗೆ ಧನ್ಯವಾದಗಳು" ಎಂದು ಪುನೀತ್ ರಾಜ್ಕುಮಾರ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ 2ನೇ ಪುಣ್ಯತಿಥಿಯ ಹಿನ್ನೆಲೆ ದೊಡ್ಮನೆ ಕುಟುಂಬ ಸಮಾಧಿ ಪೂಜೆಯನ್ನು ಸಲ್ಲಿಸಲಿದೆ. ಇದರೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ಸಾಧ್ಯತೆ ಕೂಡ ಇದೆ. ಈಗಾಗಲೇ ಅಪ್ಪು ಪುಣ್ಯಭೂಮಿ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಅಭಿಮಾನಿಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಎರಡು ವರ್ಷಗಳ ಬಳಿಕವೂ ಅಭಿಮಾನಿಗಳು ಅದೇ ನೋವಿನಲ್ಲಿಯೇ ಸಮಾಜ ಮುಖಿ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.


Click it and Unblock the Notifications











