Gandada Gudi 100 Days: "ನಿಜವಾದ ನಾಯಕನ ಗಂಧದಗುಡಿ ಪಯಣ" – ಅಶ್ವಿನಿ ಪುನೀತ್ ರಾಜ್ಕುಮಾರ್
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿದ ಘಟನೆಯನ್ನು ಅಭಿಮಾನಿಗಳನ್ನು ಅರಗಿಸಿಕೊಂಡಿಲ್ಲ. ಆದರೂ, ಅಪ್ಪು ಬಿಟ್ಟು ಹೋದ ಸಿನಿಮಾಗಳನ್ನು ಹಬ್ಬದಂತೆ ಸಂಭ್ರಮಿಸಿದ್ದನ್ನು ನೋಡಿದ್ದೇವೆ. ಅದರಲ್ಲೂ ಕೊನೆಯ ಡಾಕ್ಯೂಮೆಂಟರಿ ಸಿನಿಮಾ 'ಗಂಧದ ಗುಡಿ'ಯನ್ನು ಥಿಯೇಟರ್ ಮುಂದೆ ಹಬ್ಬದಂತೆ ಆಚರಣೆ ಮಾಡಿದ್ದರು.
'ಗಂಧದ ಗುಡಿ' ಕೇವಲ ಡಾಕ್ಯೂಮೆಂಟರಿ ಆಗಿರಲಿಲ್ಲ. ಒಂದು ಸಿನಿಮಾವನ್ನೂ ಆಗಿರಲಿಲ್ಲ. ಇದು ಪವರ್ಸ್ಟಾರ್ ಅಲ್ಲದೆ, ಪುನೀತ್ ರಾಜ್ಕುಮಾರ್ ಆಗಿಯೇ ಕಾಣಿಸಿಕೊಂಡ ಸಿನಿಮಾ ಆಗಿತ್ತು. ಹೀಗಾಗಿ ಅಭಿಮಾನಿಗಳು ಭಾವುಕರಾಗಿಯೇ ಸಿನಿಮಾ ನೋಡಿದ್ದರು.
ಪವರ್ಸ್ಟಾರ್ ಕೊನೆಯ ಸಿನಿಮಾ ಬಿಡುಗಡೆಯಾಗಿ 100 ದಿನಗಳನ್ನು ಪೂರೈಸಿದೆ. ಇದೇ ಖುಷಿಯಲ್ಲಿ ಅಭಿಮಾನಿಗಳು ತೇಲಾಡುತ್ತಿದ್ದಾರೆ. ಈ ಸಂಬಂಧ ಪಿಆರ್ಕೆ ಸ್ಟುಡಿಯೋ ವಿಶೇಷವಾದ ವಿಡಿಯೋವೊಂದನ್ನು ರಿಲೀಸ್ ಮಾಡಿದೆ. ಆ ವಿಡಿಯೋದ ಹೈಲೈಟ್ ಇಲ್ಲಿದೆ.

ಅಪ್ಪು ಪ್ರಕೃತಿ ಕಾಳಜಿ
ಅದೂವರೆಗೂ ಪುನೀತ್ ರಾಜ್ಕುಮಾರ್ ಕೈಗೆತ್ತಿಕೊಳ್ಳದೇ ಇರುವಂತಹ ವಿಭಿನ್ನ ಸಿನಿಮಾ. ಕಮರ್ಷಿಯಲ್ ಸ್ಟಾರ್ ಆಗಿದ್ದರೂ, ವಿಭಿನ್ನ ಸಾಹಸಕ್ಕೆ ಕೈ ಹಾಕಿದ್ದನ್ನು ಕನ್ನಡಿಗರೆಲ್ಲರೂ ಮೆಚ್ಚಿಕೊಂಡಿದ್ದರು. ಅಲ್ಲದೆ 'ಗಂಧದ ಗುಡಿ' ಅಪ್ಪು ಇಷ್ಟಪಟ್ಟು ಮಾಡಿದ ಸಿನಿಮಾ. ಈ ಕಾರಣಕ್ಕೆ ವಿಶೇಷವಾಗಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ಆಸೆಪಟ್ಟಿದ್ದರು. ಅಷ್ಟರಲ್ಲೇ ಅವರ ಕನಸನ್ನು ಅವರೇ ನೋಡದ ಹಾಗೆ ಮಾಡಿತ್ತು ವಿಧಿ. ಈಗ ಇದೇ ಸಿನಿಮಾ ಬಿಡುಗಡೆಯಾಗಿ 100 ದಿನಗಳನ್ನು ಪೂರೈಸಿದೆ.

'ಗಂಧದ ಗುಡಿ' 100 ಡೇಸ್
ಸ್ಯಾಂಡಲ್ವುಡ್ ಮಟ್ಟಿಗೆ 'ಗಂಧದ ಗುಡಿ' ವಿಶೇಷ ಸಿನಿಮಾ. ಇಂತಹದ್ದೊಂದು ಪ್ರಯತ್ನವನ್ನು ಬೇರೆ ಯಾವುದೇ ಭಾಷೆಯ ಸೂಪರ್ಸ್ಟಾರ್ಗಳು ಇಂತಹ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಆ ಪ್ರಯತ್ನವನ್ನು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮಾಡಿದ್ದರು. ಅಪ್ಪು ಅಗಲಿ ಒಂದು ವರ್ಷ ಆದ ಸಂದರ್ಭ ಹಾಗೂ ಕನ್ನಡ ರಾಜ್ಯೋತ್ಸವಕ್ಕೆ ಸರಿಯಾಗಿ ಸಿನಿಮಾ ರಿಲೀಸ್ ಮಾಡಲಾಗಿತ್ತು. ಶಾಲಾ ಮಕ್ಕಳಿಂದ ಹಿಡಿದು, ಕನ್ನಡಿಗರೆಲ್ಲರೂ ಈ ವಿಶೇಷ ಸಿನಿಮಾವನ್ನು ಕಣ್ತುಂಬಿಕೊಂಡಿದ್ದರು.

ಎಂದೆಂದಿಗೂ ಕನ್ನಡವಾಗಿರು
'ಗಂಧದ ಗುಡಿ' 100 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಪಿಆರ್ಕೆ ವಿಶೇಷವಾದ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಪ್ಪು ಪ್ರಕೃತಿ ಬಗ್ಗೆ ಆಡಿದ ಮಾತುಗಳು, ಪ್ರಕೃತಿ ಸೌಂದರ್ಯದ ದೃಶ್ಯಗಳನ್ನು ತೋರಿಸಲಾಗಿದೆ. ವಿಡಿಯೋ ಆರಂಭದಲ್ಲೇ "ಕಾಡಿನ ನಾವು ಹೊಸಬರೋ.. ನಾವು ಕಾಡಿಗೆ ಹೊಸಬರೋ ಗೊತ್ತಿಲ್ಲ" ಅನ್ನೋ ಡೈಲಾಗ್ನಿಂದ ವಿಡಿಯೋ ಆರಂಭ ಆಗುತ್ತೆ. ಅಲ್ಲದೆ ಅಪ್ಪು ಹಾಡಿದ ಕನ್ನಡವೇ ಸತ್ಯ ಹಾಡು ಕೂಡ ಕೇಳುವುದಕ್ಕೆ ಸಿಗುತ್ತೆ. ಇದರೊಂದಿಗೆ ವಿಡಿಯೋ ಕೊನೆಯಲ್ಲಿ ವಿಶ್ವಮಾನವ ಸಂದೇಶವನ್ನು ಸಾರಲಾಗಿದೆ.
ಕನ್ನಡಿಗರು ಧನ್ಯವಾದ
ಪಿಆರ್ಕೆ ಸ್ಟುಡಿಯೋ 'ಗಂಧದ ಗುಡಿ' 100 ದಿನಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಕನ್ನಡಿಗರಿಗೆ, ಅಭಿಮಾನಿಗಳಿಗೆ ಧನ್ಯವಾದಗಳನ್ನು ಪರಿಸಿದೆ ಚಿತ್ರತಂಡ. "100 ದಿನಗಳನ್ನು ಪೂರೈಸಿದ ನಿಜವಾದ ನಾಯಕನ ಗಂಧದಗುಡಿ ಪಯಣ!" ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪಿಆರ್ಕೆ ಸಂಸ್ಥೆ ಮುಂದಿನ ಪ್ರಾಜೆಕ್ಟ್ ಯಾವುದು ಅನ್ನೋದನ್ನು ಅಪ್ಪು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications











