ಬೆಂಕಿ ಕೆಂಡದ ಮೇಲೆ ನಡೆದು ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸಿದ ಅಭಿಮಾನಿಗಳು
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ಇಂದಿಗೆ (ನವೆಂಬರ್ -8) 11ನೇ ದಿನ. ಇಡೀ ದೊಡ್ಮನೆ ಕುಟುಂಬ ಪುನೀತ್ ರಾಜ್ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿ, 11ನೇ ದಿನದ ಪುಣ್ಯ ತಿಥಿಯಲ್ಲಿ ಭಾಗಿಯಾಗಿದೆ. ಬೆಳಗ್ಗೆಯಿಂದಲೇ ದೊಡ್ಮನೆ ಕುಟುಂಬದಲ್ಲಿ 11ನೇ ದಿನ ಕಾರ್ಯದಲ್ಲಿ ನಿರತವಾಗಿದೆ. ಮಧ್ಯಾಹ್ನದ ವೇಳೆಗೆ ಪುನೀತ್ ರಾಜ್ಕುಮಾರ್ ನಿವಾಸದಲ್ಲಿ ಸಂಬಂಧಿಕರಿಗೆ ಹಾಗೂ ಆತ್ಮೀಯರಿಗೆ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ.
Recommended Video
ಪುನೀತ್ ಸಮಾಧಿ ದರ್ಶನ ಮಾಡಲು ಮಧ್ಯಾಹ್ನ 12 ಗಂಟೆವರೆಗೂ ಅಭಿಮಾನಿಗಳಿಗೆ ಅವಕಾಶವಿರುವುದಿಲ್ಲ. ಬಳಿಕ ಅಭಿಮಾನಿಗಳೂ ಅಪ್ಪು ಸಮಾಧಿಗೆ ಬಂದು ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮಧ್ಯೆ ರಾಜ್ಯದ ಮೂಲೆ ಮೂಲೆಯಲ್ಲಿ ಅಭಿಮಾನಿಗಳು ತಮಗೆ ತೋಚಿದಂತೆ ಪುನೀತ್ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ಆದರೆ, ಇಲ್ಲೊಂದು ಕಡೆ ಇಡೀ ಊರಿಗೆ ಊರೇ ಪುನೀತ್ಗೆ ನಮನ ಸಲ್ಲಿಸಲು ಮುಂದಾಗಿದೆ. ಪುನೀತ್ ಫೋಟೊ ಹೊತ್ತು ಕೆಂಡದ ಮೇಲೆ ನಡೆದು ಅಭಿಮಾನ ಮೆರೆದಿದ್ದಾರೆ.

ಅಪ್ಪು ಫೋಟೊ ಹಿಡಿದು ಕೆಂಡದ ಮೇಲೆ ನಡೆದ ತಮಿಳು ಅಭಿಮಾನಿಗಳು
ಕನ್ನಡದ ಹೃದಯವಂತ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ವಿಶ್ವದಾದ್ಯಂತ ಇದ್ದಾರೆ. ಪುನೀತ್ ಸಿನಿಮಾಗಳನ್ನು ಇಷ್ಟಪಡುವವರು ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಅಲ್ಲಿ ಸಿಕ್ಕೇ ಸಿಗುತ್ತಾರೆ. ಆದರೆ ಈಗ ನಾವು ಹೇಳ್ತಿರುವುದು ವಿದೇಶದಲ್ಲಿರುವ ಅಭಿಮಾನಿಗಳ ಬಗ್ಗೆ ಅಲ್ಲ. ತಮಿಳುನಾಡಿಗೆ ಸೇರಿದ ಕರ್ನಾಟಕದ ಗಡಿಯಲ್ಲಿರುವ ಪುಟ್ಟ ಗ್ರಾಮ ಗುಮಟಾಪುರದಲ್ಲಿ ಅಪ್ಪು ಫ್ಯಾನ್ಸ್ ಬೆಂಕಿ ಕೆಂಡದ ಮೇಲೆ ನಡೆದು ಅಭಿಮಾನ ಮೆರೆದಿದ್ದಾರೆ.
ತಮಿಳುನಾಡಿನ ಗುಮಟಾಪುರದಲ್ಲಿ ಇಡೀ ಊರಿನ ಯುವಕರು ಬೆಂಕಿ ಕೆಂಡದ ಮೇಲೆ ಪುನೀತ್ ರಾಜ್ಕುಮಾರ್ ಫೋಟೋ ಹಿಡಿದು ನಡೆದಿದ್ದಾರೆ. ಗುಮಟಾಪುರ ಗ್ರಾಮದ ಸುಮಾರು 200 ಮಂದಿ ಗ್ರಾಮದ ಯುವಕರು ಪುನೀತ್ ಆತ್ಮಕ್ಕೆ ತಮ್ಮದೇ ಶೈಲಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪ್ರತಿ ವರ್ಷ ಮಾಡುವ ವಿಶಿಷ್ಟ ದೇವರ ಹಬ್ಬದಲ್ಲಿ ಅಗಲಿದ ನೆಚ್ಚಿನ ನಟನಿಗೆ ತಮಗೆ ತೋಚಿದಂತೆ ಅಂತಿಮ ನಮನ ಸಲ್ಲಿಸಿದ್ದಾರೆ.
ಅಣ್ಣಾವ್ರ ಹುಟ್ಟೂರು ಗಾಜನೂರಿಗೆ ಸಮೀಪ ಈ ಗುಮಟಾಪುರ
ಕರ್ನಾಟಕದ ಚಾಮರಾಜನಗರದ ಗಡಿಯಲ್ಲಿರುವ ಪುಟ್ಟ ಗ್ರಾಮ ಗುಮಟಾಪುರ. ಡಾ. ರಾಜ್ಕುಮಾರ್ ಹುಟ್ಟೂರು ಗಾಜನೂರಿನ ಸಮೀಪವಿರುವ ಈ ಹಳ್ಳಿಯಲ್ಲಿ ಹಬ್ಬಗಳ ಆಚರಣೆಯಲ್ಲಿ ದೇಶಾದ್ಯಂತ ಗಮನ ಸೆಳೆದಿದೆ. ಈ ಗ್ರಾಮಸ್ಥರು ತಮಿಳಿನಂತೆ ಕನ್ನಡವನ್ನೂ ಮಾತಾಡುತ್ತಾರೆ. ಇಲ್ಲಿನ ಜನರು ತಮ್ಮ ಗ್ರಾಮದ ಸಮೀಪದ ಗಾಜನೂರಿನಲ್ಲಿ ಜನಿಸಿದ ಡಾ.ರಾಜ್ಕುಮಾರ್ ಹಾಗೂ ಅವರ ಕುಟುಂಬದ ಮೇಲೆ ಅಪಾರ ಅಭಿಮಾನವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ತಮ್ಮ ಮಣ್ಣಲ್ಲಿ ಜನಿಸಿದ ಮಗನ ಪುತ್ರ ಪುನೀತ್ಗೆ ತಮ್ಮದೇ ಶೈಲಿಯಲ್ಲಿ ಅಂತಿಮ ನಮನ ಸಲ್ಲಿಸಿದ್ದಾರೆ.

ಗುಮಟಾಪುರದ ವಿಶಿಷ್ಟ ಗೋರೆ ಹಬ್ಬದಲ್ಲಿ ಶ್ರದ್ಧಾಂಜಲಿ
ಗುಮಟಾಪುರ ಗ್ರಾಮದಲ್ಲಿ ಪ್ರತಿ ವರ್ಷ ದೀಪಾವಳಿಯ ಬಲಿಪಾಡ್ಯಮಿಯ ಮಾರನೇ ದಿನ 'ಗೊರೆ ಹಬ್ಬ' ನಡೆಯುತ್ತೆ. ಒಂದು ವಾರದಿಂದ ಕೊಟ್ಟಿಗೆ ಗೊಬ್ಬರ ಸಂಗ್ರಹಿಸಿ, ಅದನ್ನು ಕಲೆಸಿ, ಉಂಡೆ ಮಾಡಿ, ಹೋಳಿ ಹಬ್ಬದಂತೆ ಒಬ್ಬರಿಗೊಬ್ಬರು ಎರಚಿಕೊಳ್ಳುತ್ತಾರೆ. ಗ್ರಾಮದ ಜನರು ತಮ್ಮವರಿಗೆ ಮನ ಬಂದಂತೆ ಬೈದುಗೊಳ್ಳುವುದು ಈ ಹಬ್ಬದ ವಿಶೇಷ. ಈ ಹಬ್ಬದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಗ್ರಾಮ ಯುವಕರೆಲ್ಲರೂ ಭಾಗಿಯಾಗುತ್ತಾರೆ. ಇದೇ ಗೋರೆ ಹಬ್ಬ ಅಥವಾ ಸಗಣಿ ಹಬ್ಬವೆಂದು ಕರೆಯಲಾಗುವ ಹಬ್ಬದಲ್ಲಿ ಗ್ರಾಮದ ಜನರು ಪುನೀತ್ ರಾಜ್ಕುಮಾರ್ ನಿಧನದ ಹಿನ್ನೆಲೆ ಬೆಂಕಿ ಕೆಂಡದ ಮೇಲೆ ನಡೆದು ಗೌರವ ಸೂಚಿಸಿದ್ದಾರೆ.


Click it and Unblock the Notifications











