ಪುನೀತ್ 'ಗಂಧದಗುಡಿ' ಚಿತ್ರೀಕರಣ ಇನ್ನೂ ಮುಗಿದಿಲ್ಲ: ಕರ್ನಾಟಕ ಬಿಟ್ಟು ಚಿತ್ರತಂಡ ಕೇರಳಕ್ಕೆ ಹೊರಟಿದ್ದೇಕೆ?
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕನಸಿನ ಕೂಸು 'ಗಂಧದ ಗುಡಿ'. ಕರ್ನಾಟಕದ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಅಪ್ಪು ಮುಂದಾಗಿದ್ದರು. ವೈಲ್ಡ್ ಲೈಫ್ ಛಾಯಾಗ್ರಾಹಕ ಅಮೋಘವರ್ಷ ಜೊತೆ ಸೇರಿ ಡಾಕ್ಯೂಮೆಂಟರಿ ಮಾಡಲು ಮಾಡಲು ಮುಂದಾಗಿದ್ದರು. ಇನ್ನೇನು ಕಿರು ಚಿತ್ರವನ್ನು ಬಿಡುಗಡೆ ಮಾಡಬೇಕು ಅಂತ ಪುನೀತ್ ರಾಜ್ಕುಮಾರ್ ಕನಸು ಕಂಡಿದ್ದರು. ಆದರೆ, ಅಷ್ಟರೊಳಗೆ ಅಪ್ಪು ಅಪಾರ ಅಭಿಮಾನಿಗಳನ್ನು ಬಿಟ್ಟು ಹೊರಟು ಹೋದರು.
ಅಪ್ಪು ಕಂಡ ಈ ಕನಸನ್ನು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿಗೆ ತಲುಪಿಸಲು ಪುನೀತ್ ರಾಜ್ಕುಮಾರ್ ತಂಡ ಮುಂದಾಗಿದೆ. 'ಗಂಧದ ಗುಡಿ' ಕಿರುತೆರೆಯನ್ನು ಸಿನಿಮಾವಾಗಿಸಿ ತೆರೆಮೇಲೆ ತರಲು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಧರಿಸಿದ್ದಾರೆ. ಹೀಗಾಗಿ ನಿರ್ದೇಶಕ ಅಮೋಘ ವರ್ಷ ಮತ್ತೆ ಸಿನಿಮಾ ಚಿತ್ರೀಕರಣ ಮಾಡಲು ಮುಂದಾಗಿದ್ದು, ಕೇರಳದ ಕಡೆ ಪಯಣ ಬೆಳೆಸಲಿದ್ದಾರೆ.

'ಗಂಧದ ಗುಡಿ' ಸಿನಿಮಾ ಶೂಟಿಂಗ್ ಮುಗಿದಿಲ್ಲ
ಪುನೀತ್ ರಾಜ್ಕುಮಾರ್ 'ಗಂಧದ ಗುಡಿ'ಯನ್ನು ಒಂದು ವರ್ಷದಿಂದ ಚಿತ್ರೀಕರಣ ಮಾಡಲಾಗುತ್ತಿತ್ತು. ಅಮೋಘವರ್ಷ ಜೊತೆ ಸೇರಿಕೊಂಡು ಸ್ವತ: ಪುನೀತ್ ಕಾಡು ಮೇಡುಗಳನ್ನು ಅಲೆದಾಡಿದ್ದರು. ಸಮುದ್ರದ ಆಳಕ್ಕೆ ಇಳಿದಿದ್ದರು. ಬೆಟ್ಟ ಗುಡ್ಡಗಳನ್ನು ಹತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಅಪ್ಪು ಕಂಡ ಕನಸು 'ಗಂಧದ ಗುಡಿ'ಯ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು. ಆರಂಭದಲ್ಲಿ 'ಗಂಧದ ಗುಡಿ' ಕಿರುಚಿತ್ರವನ್ನಾಗಿ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಅಪ್ಪು ನಿಧನದ ಬಳಿಕ ಸಿನಿಮಾವನ್ನಾಗಿ ಮಾಡಿ ತೆರೆಮೇಲೆ ತರುತ್ತಿದ್ದಾರೆ. ಹೀಗಾಗಿ ಮತ್ತೆ ಚಿತ್ರೀಕರಣ ಮಾಡಲು ಅಮೋಘವರ್ಷ ಸಜ್ಜಾಗಿದ್ದಾರೆ.

20 ದಿನ 'ಗಂಧದ ಗುಡಿ' ಶೂಟಿಂಗ್
ಫಸ್ಟ್ನ್ಯೂಸ್ ಪ್ರಕಾರ, 'ಗಂಧದ ಗುಡಿ' ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭ ಆಗಲಿದೆ. ನಿರ್ದೇಶಕ ಅಮೋಘವರ್ಷ ಮುಂದಿನ ವಾರ ಚಿತ್ರೀಕರಣಕ್ಕೆ ಕೇರಳಕ್ಕೆ ಹೋಗಲಿದ್ದಾರೆ. ಸುಮಾರು 20 ದಿನಗಳ ಕಾಲ ಕೇರಳದಲ್ಲಿ ಪುನೀತ್ ರಾಜ್ಕುಮಾರ್ ಅನುಪಸ್ಥಿತಿಯಲ್ಲಿ ಶೂಟಿಂಗ್ ನಡೆಯಲಿದೆ. ಕೇರಳದ ಕಾಡುಗಳಲ್ಲಿಯೇ 20 ದಿನ ಶೂಟಿಂಗ್ ನಡೆಯಲಿದ್ದು, ಸುಂದರ ಕ್ಷಣಗಳನ್ನು ಸೆರೆ ಹಿಡಿಯಲಿದ್ದಾರೆ .

2 ದಿನ ಚಿತ್ರೀಕರಣ ಬಾಕಿಯಿತ್ತು
ಅಪ್ಪು ಅಗಲುವುದಕ್ಕೂ ಮುನ್ನ 'ಗಂಧದ ಗುಡಿ' ಕಿರುಚಿತ್ರ ಒಂದೂ ಮುಕ್ಕಾಲು ಗಂಟೆ ಶೂಟ್ ಆಗಿತ್ತು. ಆದರೆ, ಸಿನಿಮಾದಲ್ಲೀಗ ಎರಡು ಗಂಟೆಗೂ ಅಧಿಕ ಕಾಲ ಪ್ರಕೃತಿ ಸೌಂದರ್ಯ ಅರಳಲಿದೆ. ಅಪ್ಪು ಅನುಪಸ್ಥಿತಿಯಲ್ಲಿ ಈ 20 ದಿನಗಳ ಕಾಲ ಅಮೋಘವರ್ಷ 'ಗಂಧದ ಗುಡಿ' ಶೂಟಿಂಗ್ ಮಾಡಲಿದ್ದಾರೆ. ಅಪ್ಪು ಕನಸನ್ನು ಈಡೇರಿಸುವ ಸಲುವಾಗಿಯೇ ಭಾರದ ಮನಸ್ಸಿನಲ್ಲಿ ಕ್ಯಾಮರಾ ಹಿಡಿದು ಕೇರಳದ ಕಾಡುಗಳಿಗೆ ಇಳಿಯಲಿದ್ದಾರೆ ಎಂದು ಫಸ್ಟ್ ನ್ಯೂಸ್ ವರದಿ ಮಾಡಿದೆ.

ಜೇಮ್ಸ್ ಬಳಿಕ 'ಗಂಧದ ಗುಡಿ' ರಿಲೀಸ್
ಪುನೀತ್ ರಾಜ್ಕುಮಾರ್ ಕನಸಿನ ಸಿನಿಮಾ 'ಗಂಧದ ಗುಡಿ' ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾಗೂ ಮುನ್ನ ಭರ್ಜರಿ ಚೇತನ್ ನಿರ್ದೇಶನದ 'ಜೇಮ್ಸ್' ಸಿನಿಮಾ ಬಿಡುಗಡೆಯಾಗಲಿದೆ. ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದೇ ಸಿನಿಮಾ ರಿಲೀಸ್ ಮಾಡಲು 'ಜೇಮ್ಸ್' ತಂಡ ಮುಂದಾಗುತ್ತಿದೆ. ಆದರೆ, ರಾಜ್ಯದಲ್ಲಿ ಕೊರೊನಾ ಈ ಕನಸನ್ನು ಈಡೇರಿಸಲು ಬಿಡುತ್ತಾ ಅನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.


Click it and Unblock the Notifications











