ಅಪ್ಪಾಜಿ ನಿಮ್ಮಲ್ಲಿ ಜೀವಂತ ಇದ್ದಾರೆ: 'ಅಭಿಮಾನಿ ದೇವರು'ಗಳಿಗೆ ಕೃತಜ್ಞತೆ ಸಲ್ಲಿಸಿದ ಪುನೀತ್
ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರು ವರನಟ ರಾಜ್ ಕುಮಾರ್. ಈಗ ಅದೇ ಅಭಿಮಾನಿಗಳಲ್ಲಿ ಅವರ ಮಗ, ನಟ ಪುನೀತ್ ರಾಜ್ ಕುಮಾರ್ ತಮ್ಮ ಅಪ್ಪಾಜಿಯನ್ನು ಕಾಣುತ್ತಿದ್ದಾರೆ.
Recommended Video
ಕೊರೊನಾ ವೈರಸ್ ಕಾರಣದಿಂದ ವಿಧಿಸಲಾಗಿರುವ ಲಾಕ್ ಡೌನ್ ಕಾರಣದಿಂದ ದೇಶದೆಲ್ಲೆಡೆ ಜನರು ಸಂಕಷ್ಟದಲ್ಲಿದ್ದಾರೆ. ಅನೇಕ ನಟ-ನಟಿಯರು, ಅವರ ಅಭಿಮಾನಿಗಳು, ಆಹಾರ ಮತ್ತು ದಿನಸಿ ಸಾಮಗ್ರಿಗಳನ್ನು ಬಡಜನರಿಗೆ ಒದಗಿಸುತ್ತಿದ್ದಾರೆ. ರಾಜ್ಯದಲ್ಲೆಡೆ ಸ್ಥಾಪನೆಯಾಗಿರುವ ಡಾ. ರಾಜ್ ಕುಮಾರ್ ಅವರ ಅಭಿಮಾನಿ ಸಂಗ್ರಹಗಳು ಇಂದಿಗೂ ಸಕ್ರಿಯವಾಗಿದ್ದು, ಜನರ ಕಷ್ಟಗಳಿಗೆ ಮಿಡಿದಿವೆ.
ದಿನಗೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಊಟ ಮತ್ತು ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ರಾಜ್ ಕುಮಾರ್ ಅವರನ್ನು ನೆನೆಸಿಕೊಳ್ಳುವ ಮತ್ತು ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರಿಗೆ ಪುನೀತ್ ರಾಜ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

ಅಪ್ಪಾಜಿ ಮಾತು ಸತ್ಯ
'ಅಪ್ಪಾಜಿ ಅಭಿಮಾನಿಗಳನ್ನು ದೇವರು ಎಂದರು. ಇಂದಿಗೂ ಅವರ ಅಭಿಮಾನಿಗಳು ಸ್ಪಂದಿಸುತ್ತಿರುವುದು, ಸಹಾಯ ಹಸ್ತ ಚಾಚುತ್ತಿರುವುದನ್ನು ನೋಡಿದರೆ ಅಪ್ಪಾಜಿ ಮಾತು ಅಕ್ಷರಶಃ ಸತ್ಯ' ಎಂದು ಪುನೀತ್ ರಾಜ್ ಕುಮಾರ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ನನ್ನ ನಮನಗಳು
ಕೋವಿಡ್ 19ನಿಂದ ಎಲ್ಲ ಚಟುವಟಿಕೆ ಜನಜೀವನ ಸ್ಥಗಿತವಾದಾಗ ನೀವು, ಅಪ್ಪಾಜಿ ಅಭಿಮಾನಿಗಳು ದೇವರಂತೆ ಎಷ್ಟೋ ಜನರ ಬದುಕಿಗೆ ನೆರವಾಗಿದ್ದೀರಿ. ನಾಡಿನ ಪ್ರಜೆಯಾಗಿ, ಅವರ ಮಗನಾಗಿ ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ನಮನಗಳು ಎಂದು ಪುನೀತ್ ಹೇಳಿದ್ದಾರೆ.

ನಿಮ್ಮ ಪ್ರೀತಿಯಲ್ಲಿ ಜೀವಂತ
ನಮ್ಮ ಕುಟುಂಬದ ಜತೆ ನೀವಿದ್ದೀರ. ನಿಮ್ಮ ಜತೆ ನಾವಿದ್ದೇವೆ. ನಾಡು ಕಷ್ಟದಲ್ಲಿರುವಾಗ ನಿಮ್ಮ ಸ್ಪಂದನೆಯಲ್ಲಿ, ನಿಮ್ಮ ಪ್ರೀತಿಯಲ್ಲಿ ಅಪ್ಪಾಜಿ ಇನ್ನೂ ಜೀವಂತ ಇದ್ದಾರೆ. ನಿಮಗೆ ಸದಾ ಋಣಿ ಈ ಪುನೀತ್ ರಾಜ್ ಕುಮಾರ್ ಎಂದು ಅವರು ಹೇಳಿದ್ದಾರೆ.
ಅಭಿಮಾನಿಗಳಿಗೆ ಪುನೀತ್ ಗೌರವ
ಪುನೀತ್ ಅವರ ಹಿನ್ನೆಲೆ ಧ್ವನಿ ಇರುವ ಈ ವಿಡಿಯೋದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ರಾಜ್ ಕುಮಾರ್ ಅಭಿಮಾನಿಗಳು ಕಷ್ಟದಲ್ಲಿರುವ ಜನರಿಗೆ ಆಹಾರ ಸಾಮಗ್ರಿಗಳನ್ನು ಹಂಚುತ್ತಿರುವ ಅನೇಕ ದೃಶ್ಯಗಳನ್ನು ಪ್ರದರ್ಶಿಸಲಾಗಿದೆ. ಈ ಮೂಲಕ ಪುನೀತ್ ಅಭಿಮಾನಿಗಳಿಗೆ ಗೌರವ ಅರ್ಪಿಸಿದ್ದಾರೆ.


Click it and Unblock the Notifications











