'ಬೆಳಕು ಕಾಣಬೇಕಿದ್ದ ಅಪ್ಪು ಕನಸಿಗೆ ಇದು ಅಲ್ಪವಿರಾಮವಷ್ಟೇ': ಪುನೀತ್ ಪತ್ನಿ ಮಹತ್ವದ ಘೋಷಣೆ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗುವುದಕ್ಕೂ ಕೆಲವೇ ದಿನಗಳ ಮುಂಚೆ ತಮ್ಮ ಕನಸಿನ ಪ್ರಾಜೆಕ್ಟ್ ಒಂದನ್ನು ಘೋಷಣೆ ಮಾಡಿದ್ದರು. ಇನ್ಸ್ಟಾಗ್ರಾಂನಲ್ಲಿ ಸ್ಕೂಬಾ ಡೈವ್ ಮಾಡುವ ಒಂದು ಫೋಟೊ ಶೇರ್ ಮಾಡಿದ್ದರು. ಇದು ಪ್ರಾಜೆಕ್ಟ್ ನವೆಂಬರ್ 01 ಕನ್ನಡ ರಾಜ್ಯೋತ್ಸವಕ್ಕೆ ಉಡುಗೊರೆಯಾಗಿ ನೀಡಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಅಷ್ಟರೊಳಗೆ ಪುನೀತ್ ರಾಜ್ ಕುಮಾರ್ ನಮ್ಮೆಲ್ಲರನ್ನೂ ಅಗಲಿ ಮರೆಯಾಗಿಬಿಟ್ಟರು. ಈ ಪ್ರಾಜೆಕ್ಟ್ಗೆ ಈಗ ಮತ್ತೆ ಜೀವ ಬಂದಿದೆ.
ಅಂದು ಪುನೀತ್ ಸ್ಕೂಬಾ ಡೈವ್ ಮಾಡಿದ ಫೋಟೊ ಜೊತೆ "ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ." ಎಂಬ ಸಾಲುಗಳನ್ನು ಬರೆದಿದ್ದರು. ಇದು ಕರ್ನಾಟಕದ ಸಮುದ್ರದಾಳವನ್ನು ಜಗತ್ತಿಗೆ ಪರಿಚಯಿಸುವ ಅಪ್ಪುವಿನ ಮಹದಾಸೆಯಾಗಿತ್ತು. ಈ ಆಸೆಗೆ ಬೆಳಕು ನೀಡಲು ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದಾಗಿದ್ದು, ಈ ಸಂಬಂಧ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

'ಅಪ್ಪು ಕನಸಿಗೆ ಇದು ಅಲ್ಪವಿರಾಮವಷ್ಟೇ'
ನವೆಂಬರ್ 01ರಂದು ರಿಲೀಸ್ ಆಗಬೇಕಿದ್ದ ಈ ವಿಡಿಯೋ ಸದ್ಯಕ್ಕೆ ಬಿಡುಗಡೆಯಾಗುತ್ತಿಲ್ಲ. ಆದರೆ, ಅಪ್ಪು ಕನಸಿನಂತೆಯೇ ಲೋಕಕ್ಕೆ ಅರ್ಪಣೆ ಮಾಡಲು ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದಾಗಿದ್ದು, ಅಭಿಮಾನಿಗಳಿಗೆ ಮಹತ್ವ ಘೋಷಣೆ ಮಾಡಿದ್ದಾರೆ. "ಅಪ್ಪು ಅವರ ಕನಸೊಂದು 01-11-2021 ರಂದು ಬೆಳಕು ಕಾಣಬೇಕಿತ್ತು. ಆದರೆ, ಆ ಕನಸಿಗಿದು ಅಲ್ಪವಿರಾಮವಷ್ಟೆ. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ." ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಪ್ಪು ಕನ್ನಡಿಗರಿಗೆ ತೋರಿಸಲು ಹೊರಟಿದ್ದೇನು?
ಪುನೀತ್ ಈ ಪ್ರಾಜೆಕ್ಟ್ ಅನೌನ್ಸ್ ಮಾಡಿದಾಗ, ಇದು ಹೊಸಾ ಸಿನಿಮಾದ ಘೋಷಣೆ ಎಂದೇ ಭಾವಿಸಿದ್ದರು. ಅಣ್ಣಾವ್ರು ನಟಿಸಿದ ಮುತ್ತಿನ ಕತೆ ಅಥವಾ ಗಂಧಗುಡಿಯ ಮುಂದುವರೆದ ಭಾಗವೆಂದು ತಿಳಿದಿದ್ದರು. ಆದರೆ, ಅಪ್ಪು ಕನ್ನಡದ ಮೊಟ್ಟಮೊದಲ ವೈಲ್ಡ್ ಲೈಫ್ ಡಾಕ್ಯುಮೆಂಟರಿಯನ್ನು ಕನ್ನಡಿಗರಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದರು. ವೈಲ್ಡ್ ಲೈಫ್ ಕರ್ನಾಟಕ ಎನ್ನುವ ಡಾಕ್ಯುಮೆಂಟರಿ ನಿರ್ಮಿಸಿದ್ದ ಅಮೋಘ ವರ್ಷ ಅವ್ರೊಂದಿಗೆ ಸೇರಿ ಈ ಪ್ರಾಜೆಕ್ಟ್ಗೆ ಕೈ ಹಾಕಿದ್ದರು. ಕರ್ನಾಟಕದ ಸಮುದ್ರದೊಳಗೆ ಇರುವ ಜೀವ ಜಗತ್ತನ್ನು ಡಾಕ್ಯುಮೆಂಟರಿ ಮಾಡಿ ಕನ್ನಡಿಗರಿಗೆ ತೋರಿಸುವುದಾಗಿತ್ತು.

ಎಲ್ಲೆಲ್ಲಿ ಸ್ಕೂಬಾ ಡೈವ್ ಮಾಡಿದ್ದರು ಅಪ್ಪು?
ಈ ಡಾಕ್ಯೂಮೆಂಟರಿಗಾಗಿ ಕರ್ನಾಟಕದ ಪ್ರಮುಖ ಸಮುದ್ರಗಳಿಗೆ ಪುನೀತ್ ರಾಜ್ಕುಮಾರ್ ಇಳಿದಿದ್ದರು. ಗೋಕರ್ಣ, ಮುರುಡೇಶ್ವರ, ನೇತ್ರಾಣಿ ಹಾಗೂ ಸುತ್ತಮುತ್ತಲಿನ ಸಮುದ್ರದಲ್ಲಿ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿದ್ದರು. ಕರ್ನಾಟಕದ ಕರಾವಳಿ ಭಾಗಗಳಲ್ಲಿ ಹಲವು ಭಾಗಗಳಲ್ಲಿ ಸಾಕಷ್ಟು ದಿನ ಸುತ್ತಾಡಿದ್ದರು. ಸ್ಕೂಬಾ ಡೈವಿಂಗ್ ಮಾಡಿ ಸಮುದ್ರದಾಳದ ದೃಶ್ಯಗಳನ್ನು ಕಂಡು ಅಚ್ಚರಿ ಪಟ್ಟಿದ್ದರು ಅಪ್ಪು.

ನವೆಂಬರ್ 01ಕ್ಕೆ ರಿಲೀಸ್ ಆಗಬೇಕಿತ್ತು ಟ್ರೈಲರ್
ಸಮುದ್ರದ ಆಳದಲ್ಲಿರುವ ಜೀವಿಗಳನ್ನು ಸೆರೆ ಹಿಡಿದಿದ್ದ ಈ ವಿಡಿಯೋ ಡಾಕ್ಯೂಮೆಂಟರಿ ರೂಪ ಪಡೆಯುತ್ತಿತ್ತು. ಕನ್ನಡ ರಾಜ್ಯೋತ್ಸವದಂದು ಈ ಅಪರೂಪದ ದೃಶ್ಯಗಳನ್ನು ಟ್ರೈಲರ್ ರೂಪದಲ್ಲಿ ರಾಜ್ಯದ ಜನತೆ ತೋರಿಸಲು ಮುಂದಾಗಿದ್ದರು. ಇದೇ ಸಂಬಂಧ ವಿತರಕ ಮಂಜುನಾಥ್ ಅವರ ಬಳಿ ಕೊನೆಯದಾಗಿ ಮಾತಾಡಿದ್ದರು. ಅಷ್ಟರಲ್ಲೇ ದುರಂತ ನಡೆದು ಹೋಗಿತ್ತು. ಈ ಡಾಕ್ಯೂಮೆಂಟರಿಗೆ 'ಗಂಧದಗುಡಿ' ಅಥವಾ 'ಒಂದು ಮುತ್ತಿನ ಕತೆ' ಇಟ್ಟು ಅಣ್ಣಾವ್ರ ಸಿನಿಮಾವನ್ನು ಮತ್ತೆ ನೆನಪಿಸಬೇಕಿತ್ತು.ಅಪ್ಪು ಕಂಡ ಈ ಕನಸು ನನಸು ಮಾಡುವ ಭರವಸೆಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ನೀಡಿದ್ದಾರೆ.


Click it and Unblock the Notifications











