"ಯಶ್ ಮನೆ ಸಿನಿಮಾ ಅಲ್ಲ ಅಂತ ಅನಿಸಿರಬಹುದು"; 'ಕೊತ್ತಲವಾಡಿ' ಪ್ರತಿಕ್ರಿಯೆ ಬಗ್ಗೆ ರಾಕಿ ಮದರ್ ಓಪನ್ ಟಾಕ್
ಕಳೆದ 15 ದಿನಗಳ ಅಂತರದಲ್ಲಿ ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಒಂದು 'ಸು ಫ್ರಮ್ ಸೋ'. ಇನ್ನೊಂದು 'ಕೊತ್ತಲವಾಡಿ'. ಈ ಎರಡೂ ಸಿನಿಮಾಗಳು ಕೂಡ ಬಹುತೇಕ ಹೊಸಬರೇ ಸೇರಿ ಮಾಡಿದ ಸಿನಿಮಾ. 'ಸು ಫ್ರಮ್ ಸೋ' ಈಗಾಗಲೇ ಮೆಗಾ ಹಿಟ್ ಆಗಿದೆ. 'ಕೊತ್ತಲವಾಡಿ'ಗೂ ಅವರೇಜ್ ರೆಸ್ಪಾನ್ಸ್ ಸಿಕ್ಕಿದೆ. ಎರಡೂ ಬೇರೆ ಶೈಲಿಯ ಸಿನಿಮಾ ಆಗಿದ್ದರಿಂದ ನಿಧಾನವಾಗಿ 'ಕೊತ್ತಲವಾಡಿ' ಕಡೆಗೂ ಪ್ರೇಕ್ಷಕರು ವಾಲುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಅಮ್ಮ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾವಿದು. ಹೀಗಾಗಿ ಸಿನಿಮಾ ಬಗ್ಗೆ ನಿರೀಕ್ಷೆಗಳು ಹೆಚ್ಚಿತ್ತು. ಅಲ್ಲದೆ ಪೃಥ್ವಿ ಅಂಬಾರ್ ಮಾಸ್ ಸಿನಿಮಾದಲ್ಲಿ ನಟಿಸಿದ್ದರಿಂದ ಸಿನಿ ಪ್ರೇಮಿಗಳಲ್ಲಿ ಕುತೂಹಲವಿತ್ತು. ಕೆಲವರಿಗೆ ಈ ಸಿನಿಮಾ ಇಷ್ಟ ಆಗಿದೆ. ಕ್ಯಾಮರಾವರ್ಕ್, ಡೈಲಾಗ್ಗಳು ಕೆಲವು ಪಾತ್ರಗಳು ಕಿಕ್ ಕೊಟ್ಟಿವೆ. ಮತ್ತೆ ಕೆಲವರಿಗೆ ಅಷ್ಟು ಇಷ್ಟ ಆಗಿಲ್ಲ.

ಒಂದು ಸಿನಿಮ ಅಂದ್ಮೇಲೆ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಅಂಶಗಳು ಇದ್ದೇ ಇರುತ್ತೆ. 'ಕೊತ್ತಲವಾಡಿ' ಸಿನಿಮಾ ಕೂಡ ನಿರೀಕ್ಷೆ ಹುಟ್ಟಿಸಿದ ಮಟ್ಟಕ್ಕೆ ತಲುಪದೇ ಹೋದರೂ, ಸಿನಿಮಾ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ ಅಂದುಕೊಂಡಂತೆ ಆಗಿದೆ. ಇತ್ತೀಚೆಗೆ ಕನ್ನಡ ಪಿಚ್ಚರ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಯಶ್ ಅನ್ನು ತಲೆಯಲ್ಲಿಟ್ಟುಕೊಂಡು ಸಿನಿಮಾ ನೋಡಲು ಬಂದವರಿಗೆ ನಿರಾಸೆಯಾಗಿರಬಹುದು ಎಂದು ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.
"ಅಣ್ಣಾವ್ರ ಫ್ಯಾನ್ಸ್ ನಾನು"
"ನಾನು ಅಣ್ಣಾವ್ರ ಫ್ಯಾನ್. ಮುಂದೆ ಮಾಡೋ ಸಿನಿಮಾಗಳನ್ನೂ ಮೆಸೇಜ್ ಇಲ್ಲದೆ ಮಾಡೋದಿಲ್ಲ. ಪ್ರತಿಯೊಬ್ಬರು ವಾಪಾಸ್ ಮನೆಗೆ ಹೋದಾಗ ಕಾಡಬೇಕು. ನಮ್ಮ ಸಿನಿಮಾ ಎಲ್ಲರನ್ನೂ ಕಾಡುತ್ತೆ. ಗೋಪಾಲ ದೇಶಪಾಂಡೆ ಪಾತ್ರ ಇದೆಯಲ್ಲ. ಅದು ಅಮಾಯಕರನ್ನು ಬಳಸಿಕೊಳ್ಳುವ ಜನ ಇದ್ದಾರೆ ಅನ್ನೋದನ್ನು ತೋರಿಸಿಕೊಡುತ್ತೆ. ಈಗಲೂ ಇಂತಹ ಜನರು ನಮ್ಮ ಪಕ್ಕದಲ್ಲಿಯೇ ಇದ್ದಾರೆ." ಎಂದು ಪುಷ್ಪ ಅರುಣ್ ಕುಮಾರ್ ಹೇಳಿದ್ದಾರೆ.
"ನಾನು ದುಡ್ಡು ಮಾಡೋಕೆ ಬಂದಿಲ್ಲ"
"ನಾನು ದುಡ್ಡು ಮಾಡಬೇಕು ಅಂತ ಇಲ್ಲಿಗೆ ಬಂದಿಲ್ಲ. ನನಗೆ ದುಡ್ಡು ಮಾಡುವ ಅವಶ್ಯಕತೆ ಈ ವಯಸ್ಸಿನಲ್ಲಿ ಇಲ್ಲ. ನಾವು ಎಲ್ಲರ ಮನೆ ಬಾಗಿಲಿಗೆ ಹೋಗಿ ನಿಂತಿದ್ದು ಇದೆ. ಬೇರೆ ಕಡೆ ಯಾಕೆ ಮಾಡೋಣ. ಇಲ್ಲೇ ಸಿನಿಮಾ ಮಾಡೋಣ. ಏನೇ ಮಾಡಿದರೂ ಕಲಿತುಕೊಂಡು ಮಾಡೋಣ. ಯಶ್ ದೊಡ್ಡದಾಗಿ ಮಾಡುತ್ತಿದ್ದಾನೆ. ಅವನದ್ದು ಬೇರೆಯದ್ದೇ ಒಂದು ಪ್ರಪಂಚ ಇದೆ. ಯಶ್ ಇಂತಹ ಸಿನಿಮಾಗಳನ್ನು ಈಗ ಮಾಡುವುದಕ್ಕೆ ಆಗಲ್ಲ. ದೊಡ್ಡ ಸಿನಿಮಾ ಮಾಡಿಬಿಟ್ಟ. ಅಷ್ಟು ದೊಡ್ಡ ಸಿನಿಮಾ ಮಾಡಿ, ಮತ್ತೆ ವಾಪಾಸ್ ಬರುವುದಕ್ಕೆ ಆಗುವುದಿಲ್ಲ. ರಾಮಾಚಾರಿ ಬಳಿಕ ಕೆಜಿಎಫ್ ಮಾಡಿದ. ಅದಾದ್ಮೇಲೆ ಕೆಜಿಎಫ್ 2.. ಈಗ 'ಕೆಜಿಎಫ್ 3' ಮಾಡೋಕೆ ಇನ್ನೊಂದು 15 ವರ್ಷ ತೆಗೆದುಕೊಳ್ಳುವ ಬದಲು ಇನ್ನೊಂದು ಸಿನಿಮಾ ಮಾಡೋಣ ಅಂತ ಹೋದ. ಈ ವೇಳೆ ಮತ್ತೆ ಅವನು ಹಿಂದೆ ಬರೋಕೆ ಆಗಲ್ಲ. ಅದಕ್ಕೆ ನನಗೂ ನಮ್ಮ ಮನೆಯವರಿಗೂ ಒಂದು ಕೊರಗಿತ್ತು. ಹಾಗಾಗಿ ಸಣ್ಣಾದಾಗಿ ಈ ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ವಿ" ಎಂದು ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.

"ಯಶ್ ತಲೆಯಲ್ಲಿಟ್ಟುಕೊಂಡು ಬಂದವರಿಗೆ ನಿರಾಸೆ"
"ಯಶ್ ಅನ್ನು ತಲೆಯಲ್ಲಿ ಇಟ್ಟುಕೊಂಡು ಬಂದವರಿಗೆ ಎಲ್ಲೋ ಒಂದು ಕಡೆ ನಿರಾಸೆಯಾಗಿರಬಹುದು. ಮೊನ್ನೆ ಎಲ್ಲೋ ಒಂದು ಕಡೆ ನೋಡಿದೆ. ಯಾರೋ ಒಬ್ಬರು ಮಾತಾಡುತ್ತಿದ್ದರು. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಮಾಡಬೇಕಿತ್ತು ಅಂತ ಅಂದರು. ಇಂತಹದ್ದೊಂದು ಒಪಿನಿಯನ್ ಬಂದಿದೆ. ನಾವೂ ಹೀಗೆ ಎಷ್ಟೋ ಸಾರಿ ಮಾತಾಡಿರುತ್ತೇವೆ. ಅದು ಬಿಟ್ಟರೆ ಮತ್ತೆಲ್ಲೂ ನೆಗೆಟಿವ್ ಕಮೆಂಟ್ ಬಂದಿಲ್ಲ. ಸಿನಿಮಾ ಆವರೇಜ್ ಆಗಿದೆ. ಆದರೆ, ಯಶ್ ಮನೆ ಸಿನಿಮಾ ಅಲ್ಲ ಅಂತ ಅನಿಸಿರಬಹುದು." ಎಂದು ಪುಷ್ಪಾ ಅರುಣ್ ಕುಮಾರ್ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.
"ಯಶ್ ಕೂಡ ಕಷ್ಟಪಟ್ಟೇ ಬಂದಿದ್ದು"
"ರಾಮಾಚಾರಿ, ಗೂಗ್ಲಿಯಿಂದ ಯಶ್ ಸಿನಿಮಾಗಳ ಆಡಂಬರ ನೋಡುತ್ತಿದ್ದೀರ. ಅವನದ್ದೇ ಆದ ಕಥೆ ಆಯ್ಕೆ ಮಾಡಿಕೊಂಡು, ಅವನದ್ದೇ ಟೀಮ್ ಅನ್ನು ಸೆಲೆಕ್ಟ್ ಮಾಡಿಕೊಂಡು ಸಿನಿಮಾ ಮಾಡಿದ. ಅದಕ್ಕಿಂತ ಮುಂಚೆ ಯಶ್ ಕೂಡ ಹೀಗೆ ಕಷ್ಟ ಪಟ್ಟೇ ಬಂದಿದ್ದು. ಅಲ್ಲೂ ಕೆಲವು ಲೋಪಗಳನ್ನು ನೀವು ಹೇಳಿದ್ದೀರ. ಇನ್ನು ಮುಂದಿನ ದಿನಗಳಲ್ಲಿ ನಾನು ಅವನ್ನೆಲ್ಲ ಸರಿ ಮಾಡಿಕೊಳ್ಳುತ್ತೇನೆ." ಎನ್ನುತ್ತಾರೆ ಪುಷ್ಪಾ ಅರುಣ್ ಕುಮಾರ್.


Click it and Unblock the Notifications











