'ಪುಷ್ಪಕ ವಿಮಾನ' ನಿರ್ದೇಶಕನ 'ಮ್ಯಾಡ್ನೆಸ್'; ವಿಲನ್ ಲುಕ್ ಕೊಟ್ಟಿದ್ದ ಶಿವಾಂಕ್ ಹೀರೋ
'ಪುಷ್ಪಕ ವಿಮಾನ', 'ಮನ್ಸೂನ್ ರಾಗ'ದಂತಹ ವಿಭಿನ್ನ ದೃಶ್ಯಕಾವ್ಯವನ್ನು ನೀಡಿದ್ದ ನಿರ್ದೇಶಕ ಎಸ್. ರವೀಂದ್ರನಾಥ್ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಎರಡು ಸಿನಿಮಾಗಳ ಬಳಿಕ ಗಮನ ಸೆಳೆದ ನಿರ್ದೇಶಕರು ಈ ಬಾರಿ ಯುವ ಪ್ರತಿಭೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರೇ ಶಿವಾಂಕ್. ತಮ್ಮ ಹೊಸ ಸಿನಿಮಾಗೆ ನಿರ್ದೇಶಕರು ಈಗಾಗಲೇ 'ಮ್ಯಾಡ್ನೆಸ್' ಎಂಬ ಟೈಟಲ್ ಕೂಡ ಕೊಟ್ಟಾಗಿದೆ. ಸಿನಿಮಾ ಫಸ್ಟ್ ಲುಕ್ನಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವುದಕ್ಕೆ ಚಿತ್ರತಂಡ ಮುಂದಾಗಿದೆ.
ನಿರ್ದೇಶಕ ಎಸ್. ರವೀಂದ್ರನಾಥ್ ಎರಡು ಸಿನಿಮಾಗಳ ಮೂಲಕ ತಮ್ಮ ಮೇಕಿಂಗ್ ಸ್ಟೈಲ್ ಅನ್ನು ಪರಿಚಯಿಸಿದ್ದಾರೆ. ರಮೇಶ್ ಅರವಿಂದ್ 100ನೇ ಸಿನಿಮಾ 'ಪುಷ್ಪಕ ವಿಮಾನ' ಇವರು ನಿರ್ದೇಶಿಸಿದ ಮೊದಲ ಸಿನಿಮಾ. ಚೊಚ್ಚಲ ಸಿನಿಮಾದಲ್ಲಿಯೇ ಪಕ್ಕಾ ಎಮೋಷನಲ್ ಸಿನಿಮಾವನ್ನು ನಿರ್ದೇಶನ ಮಾಡಿ ರವೀಂದ್ರನಾಥ್ ಅವರು ಗೆದ್ದಿದ್ದರು. 'ಪುಷ್ಪಕ ವಿಮಾನ' ಕನ್ನಡ ಸಿನಿಪ್ರಿಯರಿಗೆ ಹೊಸ ಅನುಭವವನ್ನೇ ಕೊಟ್ಟಿತ್ತು.

2017ರಲ್ಲಿ ತೆರೆಕಂಡಿದ್ದ 'ಪುಷ್ಪಕ ವಿಮಾನ' ಸಿನಿಮಾದಲ್ಲಿ ರಮೇಶ್ ಅರವಿಂದ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ನಟಿಸಿದ್ದರು. ಇದೇ ಯಶಸ್ಸಿನ ಬೆನ್ನಲ್ಲೇ 'ಮಾನ್ಸೂನ್ ರಾಗ' ಸಿನಿಮಾವನ್ನು ನಿರ್ದೇಶಿಸಿದ್ದರು. ಇದುವರ ಅವರ ಎರಡನೇ ಸಿನಿಮಾ. ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ, ಈ ಬಾರಿ ಯುವ ಪ್ರತಿಭೆಯನ್ನು ಆಯ್ಕೆ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿದೆ.
'ಮ್ಯಾಡ್ನೆಸ್' ಮೂಲಕ ರವೀಂದ್ರನಾಥ್ ಕನ್ನಡ ಚಿತ್ರರಂಗಕ್ಕೆ ಶಿವಾಂಕ್ ಅವರನ್ನು ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ಹಾಗಂತ ಶಿವಾಂಕ್ಗೆ ಸಿನಿಮಾರಂಗ ಹೊಸತೇನು ಅಲ್ಲ. ಆದರೆ, ನಾಯಕನಾಗಿ 'ಮ್ಯಾಡ್ನೆಸ್' ಚೊಚ್ಚಲ ಸಿನಿಮಾ. ರವೀಂದ್ರನಾಥ್ ಅವರೇ ನಿರ್ದೇಶಿಸಿದ್ದ 'ಪುಷ್ಪಕ ವಿಮಾನ' ಸಿನಿಮಾದಲ್ಲಿ ಶಿವಾಂಕ್ ವಿಲನ್ ಪಾತ್ರದಲ್ಲಿ ಖದರ್ ತೋರಿಸಿದ್ದರು. ಹಾಗೇ 'ಮಾನ್ಸೂನ್ ರಾಗ' ಸಿನಿಮಾದಲ್ಲಿಯೂ ಶಿವಾಂಕ್ ಪ್ರಮುಖ ಪಾತ್ರದಲ್ಲಿಯೇ ನಟಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು ನಿರಂತರವಾಗಿ ಸೋಲುತ್ತಿರುವ ಬೆನ್ನಲ್ಲೇ ಎಸ್. ರವೀಂದ್ರನಾಥ್ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ಯುವ ನಟನನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇತ್ತ ಶಿವಾಂಕ್ ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಸಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಕಮ್ ಥ್ರಿಲ್ಲರ್ ಸಿನಿಮಾ ಆಗಿದ್ದು, ನಿಧಿ ಫಿಲಂಸ್ ಬ್ಯಾನರ್ನಲ್ಲಿ ಯತೀಂದ್ರ ಬಿ ಬಂಡವಾಳ ಹೂಡುತ್ತಿದ್ದಾರೆ.
ಈಗಾಗಲೇ 'ಮ್ಯಾಡ್ನೆಸ್' ಸಿನಿಮಾದ ಮೊದಲನೇ ಹಂತದ ಶೂಟಿಂಗ್ ಮುಗಿದಿದೆ. ಶೇಕಡಾ 40ರಷ್ಟು ಭಾಗ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ. ಇನ್ನೇನು ಕೆಲವೇ ಹಂತಗಳಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭ ಆಗಲಿದೆ. ನಾಯಕ ಶಿವಾಂಕ್ಗೆ ಜೋಡಿಯಾಗಿ ರವೀಕ್ಷಾ ನಟಿಸುತ್ತಿದ್ದಾರೆ. ರವೀಂದ್ರನಾಥ್ ಸಿನಿಮಾದಲ್ಲಿ ಮ್ಯೂಸಿಕ್ಗೆ ಹೆಚ್ಚು ಪ್ರಾಮುಖ್ಯತೆ ಇರುತ್ತೆ. ಇಲ್ಲಿ ಜರೆದ್ ಹಾಗೂ ಜೂಡಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಪ್ರಜ್ವಲ್ ಗೌಡ ಕ್ಯಾಮರಾವರ್ಕ್ ಈ ಸಿನಿಮಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು, ಆಗುಂಬೆ ಹಾಗೂ ಕನಕಪುರ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.


Click it and Unblock the Notifications











