ಆರ್. ಅಶೋಕ್ಗೆ ಇನ್ಸ್ಪೆಕ್ಟರ್ ರೋಲ್ ಕೊಡಬೇಕು ಅಂದ್ಕೊಂಡಿದ್ರಂತೆ ಪಾರ್ವತಮ್ಮ ರಾಜ್ಕುಮಾರ್: ಅದ್ಯಾವಾಗ?
ಡಾ. ರಾಜ್ಕುಮಾರ್ ಅಭಿಮಾನಿಗಳು ಯಾರಿಲ್ಲ ಹೇಳಿ. ವಿಶ್ವದ ಮೂಲೆ ಮೂಲೆಯಲ್ಲೂ ಅಣ್ಣಾವ್ರಿಗೆ ಕೋಟ್ಯಾಂತರ ಫ್ಯಾನ್ಸ್ ಸಿಗುತ್ತಾರೆ. ಇವರಿಗೆ ಸಾಮಾನ್ಯ ಜನರಷ್ಟೇ ಅಲ್ಲ. ಸಿನಿಮಾ ಕಲಾವಿದರು, ಪರಭಾಷೆಯ ಸೂಪರ್ಸ್ಟಾರ್ಗಳು, ರಾಜಕಾರಣಿಗಳು ಕೂಡ ಇದ್ದಾರೆ.
ಇಂತಹ ಗಣ್ಯರಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೂಡ ಅಣ್ಣಾವ್ರ ಅಪ್ಪಟ ಅಭಿಮಾನಿ. ಅವರು ಇನ್ನೂ ಚಿಕ್ಕವರಾಗಿದ್ದಾಗಲೇ ಡಾ.ರಾಜ್ಕುಮಾರ್ ಸಂಘದಲ್ಲಿ ಗುರುತಿಸಿಕೊಂಡಿದ್ದರಂತೆ. ಅಣ್ಣಾವ್ರ ಅಭಿಮಾನಿ ಸಂಘದ ಅಧ್ಯಕ್ಷರೂ ಕೂಡ ಆಗಿದ್ದರಂತೆ.
ಆರ್ ಅಶೋಕ್ ಮನೆಗೆ ಒಮ್ಮೆ ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಬಂದು ಬೇರೆ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ನಮ್ಮ ಬ್ಯಾನರ್ನಲ್ಲಿ ನಿರ್ಮಾಣ ಆಗೋ ಸಿನಿಮಾದಲ್ಲಿ ಪೊಲೀಸ್ ಪಾತ್ರ ಕೊಡಬೇಕು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರಂತೆ. ಈ ಮಾತನ್ನು ಫಿಲ್ಮ್ ಚೇಂಬರ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ರಿವೀಲ್ ಮಾಡಿದ್ದಾರೆ. ಆ ಹೇಳಿಕೆಗಳ ಝಲಕ್ ಇಲ್ಲಿದೆ.

ರಾಜ್ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ
"ಸಣ್ಣ ಹುಡುಗನಿದ್ದಾಗ ರಾಜ್ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಕೂಡ ಆಗಿದ್ದೆ. ಆಮೇಲೆ ರಾಜ್ಕುಮಾರ್ ಅವರು ನಮ್ಮ ಮನೆ ಹತ್ರ ಬಂದಿದ್ದರು. ಪಂಚೆ ಹಾಕೊಂಡು ಬಿಳಿ ಜೆನ್ ಕಾರಿನಲ್ಲಿ ಬಂದಿದ್ದರು. ನಮ್ಮ ಮನೆ ಪಕ್ಕಾನೇ ಶಂಕರ್ ಗುರು ಡೈರೆಕ್ಟರ್ ಇದ್ರು. ಅವರಿಗೆ ಸೈಟ್ ಕೊಟ್ಟಿದ್ದು ನಾನೇ.. ಫ್ರಿಯಾಗಿ ಅಲ್ಲ. ಆಗ ರಾಜ್ಕುಮಾರ್ ಅವರು ಅಲ್ಲಿಗೆ ಬಂದಿದ್ದರು. ಆಗ ಅವರನ್ನು ನೋಡಿದ್ದೆ." ಎಂದು ಅಣ್ಣಾವ್ರನ್ನು ನೆನಪಿಸಿಕೊಂಡಿದ್ದಾರೆ.

ಇನ್ಸ್ಪೆಕ್ಟರ್ ರೋಲ್ ಕೊಡಬೇಕು
" ನಾನು ಎಂಎಲ್ಎ ಆದ್ಮೇಲೆ ಭೇಟಿ ಮಾಡಿದ್ದೆ. ನಮ್ಮ ಮನೆಗೇನೆ ಬಂದಿದ್ದರು. ಇದಾದ್ಮೇಲೆ ಒಂದು ಸಿನಿಮಾ ಥಿಯೇಟರ್ ಉದ್ಘಾಟನೆ ಹೋಗಿದ್ದೆ. ನಮ್ಮ ಕ್ಷೇತ್ರ ಉತ್ತರಹಳ್ಳಿಯಲ್ಲಿರೋ ಶ್ರೀನಿವಾಸ ಥಿಯೇಟರ್ ಉದ್ಘಾಟನೆ ಹೋಗಿದ್ದೆ. ಆಗ ಅಲ್ಲಿಗೆ ಪಾರ್ವತಮ್ಮ ರಾಜ್ಕುಮಾರ್ ಬಂದಿದ್ದರು. ಆಗ ಅವರು ಹೇಳಿದ್ರು. ಆ ನಾನು ಇನ್ನೂ ಯಂಗ್ಸ್ಟರ್ ಆಗಿದ್ದೆ. ಮೊದಲ ಬಾರಿ ಎಂಎಲ್ಎ ಆಗಿದ್ದೆ. ಆಗ ಉದ್ದ ಸಣ್ಣಗೆ ಇದ್ದೆ. ಅದನ್ನೆಲ್ಲ ನೋಡಿದ ಮೇಲೆ ಪಾರ್ವತಮ್ಮ ರಾಜ್ಕುಮಾರ್ ಅವರು ಭಾಷಣದಲ್ಲಿ ಹೇಳಿದ್ರಂತೆ,ನಮ್ಮ ಅಶೋಕ ಎಂಎಲ್ಎ ಅವನಿಗೆ ನಮ್ಮ ಯಾವುದಾದೂ ಸಿನಿಮಾದಲ್ಲಿ ಇನ್ಸ್ಪೆಕ್ಟರ್ ರೋಲ್ ಕೊಡಬೇಕು ಎಂದಿದ್ರಂತೆ. ಆ ಭಾಷಣದ ರೆಕಾರ್ಡ್ ಇದೆ." ಎಂದು ಆ ಗಳಿಕೆಯನ್ನು ಮೆಲುಕು ಹಾಕಿದ್ದಾರೆ.

ಅಣ್ಣಾವ್ರ ಸಿನಿಮಾದ ಮೊದಲ ಟಿಕೆಟ್ ಖರೀದಿ
"ನಾನು ರಾಜ್ಕುಮಾರ್ ಅವರ ಅಭಿಮಾನಿ. ಮೊದಲ ದಿನ ಎಲ್ಲೇ ಇದ್ದರೂ, ಆ ದಿನ ಇನ್ನೂ ಚೆನ್ನಾಗಿ ನೆನಪಿದೆ. ಗೀತಾಂಜಲಿ ಥಿಯೇಟರ್ನಲ್ಲಿ 'ಆಪರೇಷನ್ ಡೈಮಂಡ್ ರಾಕೆಟ್' ಹಾಕಿದ್ದರು. ಆ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಟಿಕೆಟ್ ತೆಗೆದುಕೊಂಡಿದ್ದೆ." ಎಂದು ರಾಜ್ಕುಮಾರ್ ಬಗ್ಗೆ ತಮ್ಮ ಅಭಿಮಾನ ಹೇಗಿತ್ತು ಅನ್ನೋದನ್ನು ವಿವರಿಸಿದ್ದಾರೆ.

ಅಪ್ಪು ರಸ್ತೆ ಉದ್ಘಾಟನೆಗೆ ಅಧ್ಯಕ್ಷತೆ
ಪವರ್ಸ್ಟಾರ್ ಪುನೀತ ರಾಜ್ಕುಮಾರ್ ರಸ್ತೆ ಉದ್ಗಾಟನೆ ಸಂಬಂಧ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹಾಗೂ ರಾಜ್ಕುಮಾರ್ ಅವರ ಅಭಿಮಾನದ ಬಗ್ಗೆ ಹೇಳಿದ್ದಾರೆ. ನಾಳೆ (ಫೆಬ್ರವರಿ 7)ರಂದು ವಾಜಪೇಯಿ ಗ್ರೌಂಡ್ನಲ್ಲಿ ಸಂಜೆ 6 ಗಂಟೆಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸಿ ಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಆಗಮಿಸಲಿದ್ದಾರೆ. ಅಲ್ಲದೆ ಸುಮಾರು 17ಕ್ಕೂ ಅಧಿಕ ಮಂದಿ ಗಾಯಕರು ಕಾರ್ಯಕ್ರಮ ನೀಡುತ್ತಿದ್ದಾರೆ.


Click it and Unblock the Notifications











