ಅಪ್ಪು ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ರಚಿತಾ, ಪ್ರೇಮ್
'ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೇ..' ಜೋಗಿ ಪ್ರೇಮ್ ನಿರ್ದೇಶನದ ಈ ಹಾಡನ್ನು ರಿಲೀಸ್ ಮಾಡಲು ಹೋಗಿ ಏಕ್ ಲವ್ ಯಾ ಚಿತ್ರತಂಡ ಪೇಚಿಗೆ ಸಿಲುಕಿತ್ತು. ಈ ಹಾಡನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ನಮ್ಮನ್ನೆಲ್ಲಾ ಅಗಲಿದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಫೋಟೊಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಸಿನಿಮಾದ ಹಾಡಿನ ಬಗ್ಗೆ ಮಾತಾಡುತ್ತಾ, ವೇದಿಕೆ ಮೇಲೆ ರಕ್ಷಿತಾ, ರಚಿತಾ ಹಾಗೂ ಗಾಯಕಿ ಮಂಗ್ಲಿ ಸೇರಿದಂತೆ ನಟಿಯರು ಶಾಂಪೇನ್ ಬಾಟಲ್ ಓಪನ್ ಮಾಡಿದ್ದರು.
ಅಪ್ಪು ಫೋಟೊ ಮುಂದೆನೇ ಶಾಂಪೇನ್ ಬಾಟಲ್ ಓಪನ್ ಮಾಡಿದ್ದು, ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ಪುನೀತ್ ಅಭಿಮಾನಿಗಳು ಹಾಗೂ ಚಿತ್ರರಂಗದ ಟೀಕೆಗೆ ಗುರಿಯಾಗುತ್ತಿದ್ದಂತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನಿರ್ದೇಶಕ ಪ್ರೇಮ್ ಬಹಿರಂಗವಾಗಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ಕ್ಷಮೆ ಕೇಳಿದ ಡಿಂಪಲ್ ಕ್ವೀನ್ ರಚಿತಾ
ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ರಾಮ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ. ಬ್ರೇಕಪ್ ಆದ ಹುಡುಗಿ ಎಣ್ಣೆ ಬಾಟಲಿ ಹಿಡಿದು ಹಾಡುವ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಆಗಲೇ ನಟಿಯರೆಲ್ಲಾ ಸೇರಿ ಶಾಂಪೇನ್ ಬಾಟಲಿ ಓಪನ್ ಮಾಡಿದ್ದರು. ಅದು ಅಪ್ಪು ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗುತ್ತಿದ್ದಂತೆ ತನ್ನ ಟ್ವಿಟರ್ನಲ್ಲಿ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. 'ನಿನ್ನೆಯ ಏಕ್ ಲವ್ ಯಾ ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಶಾಂಪೇನ್ ಬಾಟಲ್ ಓಪನ್ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನ ಆಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ ಕ್ಷಮೆ ಕೇಳುತ್ತೇನೆ. ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಆದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ' ಎಂದು ಪೋಸ್ಟ್ ಮಾಡಿದ್ದಾರೆ.
ನಿರ್ದೇಶಕ ಜೋಗಿ ಪ್ರೇಮ್ರಿಂದಲೂ ಕ್ಷಮೆ
ಏಕ್ ಲವ್ ಯಾ ಸಿನಿಮಾದ ನಿರ್ದೇಶಕ ಜೋಗಿ ಪ್ರೇಮ್ ವಿರುದ್ಧವೂ ಪುನೀತ್ ಅಭಿಮಾನಿಗಳು ಕಿಡಿಕಾರಿದ್ದರು. ಸಿನಿಮಾ ಬಿಡುಗಡೆ ಆಗುವುದಕ್ಕೆ ಬಿಡುವುದಿಲ್ಲವೆಂದು ಆಕ್ರೋಶ ಹೊರ ಹಾಕಿದ್ದರು. ಅಪ್ಪು ಅಭಿಮಾನಿಗಳ ಕಿಡಿಕಾರುತ್ತಿದ್ದಂತೆ ಜೋಗಿ ಪ್ರೇಮ್ ತನ್ನ ಟ್ವಿಟರ್ ಖಾತೆಯಲ್ಲಿ ಕ್ಷಮೆಯಾಚಿಸಿದ್ದಾರೆ. " ಅಪ್ಪು ಅವರ ಅಗಲಿಕೆಯ ನೋವು ಇನ್ನೂ ನಮ್ಮ ಮನಸ್ಸಿನಲ್ಲಿ ಇದೆ. ಆ ಕಾರಣಕ್ಕೆ ನ.4 ಕ್ಕೆ ಬಿಡುಗಡೆಯಾಗಬೇಕಿದ್ದ ಏಕ್ ಲವ್ ಯಾ ಸಿನಿಮಾದ ಹಾಡನ್ನು ನವೆಂಬರ್ 12ಕ್ಕೆ ಬಿಡುಗಡೆ ಮಾಡಲಾಯಿತು. ಸಮಾರಂಭದ ಉದ್ಘಾಟನಯೇ ಅಪ್ಪು ಅವರನ್ನು ಸ್ಮರಿಸಿಕೊಂಡು ಆಯಿತು. ಶಾಂಪೇನ್ ಓಪನ್ ಮಾಡಿದ್ದು ಕೇವಲ ಹಾಡು ಬಿಡುಗಡೆಯ ಅಂಗವಾಗಿ. ಇದರಿಂದ ಅಪ್ಪು ಅವರ ಅಭಿಮಾನಿಗಳಿಗೆ ನೋವು ಆಗಿದ್ದಲ್ಲಿ ಏಕ್ ಲವ್ ಯಾ ಚಿತ್ರತಂಡದಿಂದ ಕ್ಷಮೆ ಕೇಳುತ್ತೇನೆ." ಎಂದು ಕ್ಷಮೆ ಕೇಳಿದ್ದಾರೆ.
ರಕ್ಷಿತಾರಿಂದಲೂ ಕ್ಷಮೆಯಾಚನೆ
ಏಕ್ ಲವ್ ಯಾ ಸಿನಿಮಾ ನಿರ್ಮಾಪಕಿ ರಕ್ಷಿತಾ ಪ್ರೇಮ್ ಕೂಡ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. 'ಅಪ್ಪು ಅಗಲಿಕೆಯಿಂದ ನಾನಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಹಲವಾರು ವಿಷಯಗಳು ನನ್ನನ್ನೂ ಇನ್ನೂ ಕಾಡುತ್ತಿವೆ. ಅಪ್ಪುಗೆ ಅವಮಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಮಾಡುವುದೂ ಇಲ್ಲ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿದ್ದು ಅಪ್ಪು ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಗಿದ್ದರೆ, ನನ್ನ ಮತ್ತು ನನ್ನ ತಂಡದ ಕಡೆಯಿಂದ ಕ್ಷಮೆಯಾಚಿಸುತ್ತೇವೆ. ಇದು ಉದ್ದೇಶಪೂರ್ವಕವಲ್ಲ. ಅಪ್ಪು ಇಂದಿಗೂ ಎಂದಿಗೂ ನಮ್ಮ ಮನಸ್ಸಲ್ಲಿದ್ದಾರೆ' ಎಂದು ರಕ್ಷಿತಾ ಪ್ರೇಮ್ ಈಗಾಗಲೇ ಕ್ಷಮೆ ಕೇಳಿದ್ದಾರೆ.


Click it and Unblock the Notifications










