ರಾಧಿಕಾ ಕುಮಾರಸ್ವಾಮಿಗೆ ದರ್ಶನ್ ಸಿನಿಮಾ ನಿರ್ಮಾಣ ಮಾಡುವ ಆಸೆ; 4 ವರ್ಷದ ಆಸೆ ಇನ್ನೂ ಈಡೇರಿಲ್ಲ ಯಾಕೆ?
ರಾಧಿಕಾ ಕುಮಾರಸ್ವಾಮಿ ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಮನೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಈ ಹಬ್ಬದ ಸಂಭ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷ ಆಗಿದ್ದಾರೆ. ಹಬ್ಬದ ಖುಷಿಯಲ್ಲಿಯೇ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ದರ್ಶನ್ ಸದ್ಯದ ಪರಿಸ್ಥಿತಿಯ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
ದರ್ಶನ್ ಜೊತೆ ರಾಧಿಕಾ ಕುಮಾರಸ್ವಾಮಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಅನಾಥರು' ಹಾಗೂ 'ಮಂಡ್ಯ' ಸಿನಿಮಾದಲ್ಲಿ ದರ್ಶನ್ ಜೊತೆ ಹೆಜ್ಜೆ ಹಾಕಿದ್ದರು. ಹೀಗಾಗಿ ದರ್ಶನ್ ಕೊಲೆ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದಕ್ಕೆ ರಾಧಿಕಾ ಕುಮಾರಸ್ವಾಮಿಗೆ ಬೇಸರ ಆಗಿದೆ. ದರ್ಶನ್ ತುಂಬಾನೇ ಒಳ್ಳೆಯ ವ್ಯಕ್ತಿ ಎಂದು ಸ್ಪೀಡ್ ನ್ಯೂಸ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ಚಿತ್ರರಂಗದಲ್ಲಿ ಅವರೊಬ್ಬ ದೊಡ್ಡ ನಟ. ಅಷ್ಟು ದೊಡ್ಡ ಹೆಸರು ಮಾಡಿರುವಂತಹ ನಟ. ಅದು ನಾನು ಅವರ ಜೊತೆ ಅನಾಥರು ಮತ್ತು ಮಂಡ್ಯ ಎರಡು ಸಿನಿಮಾದಲ್ಲಿ ನಟಿಸಿದ್ದೀನಿ. ತುಂಬಾ ಒಳ್ಳೆಯ ವ್ಯಕ್ತಿತ್ವ ಇರುವ ಮನುಷ್ಯ. ಎಲ್ಲರೊಂದಿಗೆ ತುಂಬಾನೇ ಚೆನ್ನಾಗಿ ಮಾತಾಡೋರು. ಈ ವಿಷಯವನ್ನು ಕೇಳಿ ನನಗೆ ಶಾಕ್ ಆಯ್ತು." ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ವೇಳೆ ರಾಧಿಕಾ ಕುಮಾರಸ್ವಾಮಿ 'ದಮಯಂತಿ' ಸಿನಿಮಾ ವೇಳೆ ದರ್ಶನ್ ಭೇಟಿ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. "ದಮಯಂತಿ ಆಡಿಯೋ ಲಾಂಚ್ ಸಮಯದಲ್ಲಿ ನಾನು ಅವರನ್ನು ಕೊನೆಯ ಸಲ ಭೇಟಿ ಮಾಡಿದ್ದೆ. ಅದೇ ಕೊನೆ. ಅದಾದ್ಮೇಲೆ ನಾನು ಯಾವತ್ತೂ ಅವರನ್ನು ಭೇಟಿ ಮಾಡಿರಲಿಲ್ಲ. ಯಾಕಂದ್ರೆ, ಅಂತಹ ಅವಕಾಶಗಳು ನನಗೆ ಸಿಕ್ಕಿರಲಿಲ್ಲ. ನನ್ನ ಮನಸ್ಸಿಗೆ ತುಂಬಾನೇ ನೋವಾಗುತ್ತೆ. ಯಾಕಂದ್ರೆ, ಅವರನ್ನು ಈ ರೀತಿ ನೋಡುವುದಕ್ಕೆ ಆಗುವುದಿಲ್ಲ. ನಮ್ಮ ಕನ್ನಡ ಚಿತ್ರರಂಗದಲ್ಲಿ ಅವರು ಒಳ್ಳೆಯ ನಟ." ಎಂದು ರಾಧಿಕಾ ಬೇಸರ ಹೊರಹಾಕಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ರಾಧಿಕಾ ಕುಮಾರಸ್ವಾಮಿ ನಟಿಸಿದ್ದ 'ದಮಯಂತಿ' ಸಿನಿಮಾದ ಆಡಿಯೋ ಲಾಂಚ್ಗೆ ಅತಿಥಿಯಾಗಿ ಬಂದಿದ್ದರು. ಆ ವೇಳೆ ದರ್ಶನ್ ವೇದಿಕೆ ಮೇಲೆ ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ತನಗಿಂತ ಮೊದಲೇ ಬಂದಿದ್ದಾರೆ ಎಂದು ಹೇಳಿದ್ದರು. ಆ ವೇಳೆ ರಾಧಿಕಾಗೆ ಈ ವಿಷಯ ಗೊತ್ತೇ ಇರಲಿಲ್ಲ. ಅದೇ ಕಾರ್ಯಕ್ರಮದಲ್ಲಿ ದರ್ಶನ್ಗಾಗಿ ಒಂದು ಸಿನಿಮಾ ಮಾಡಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸಿದ್ದರು.

ಈಗ ಸ್ಪೀಡ್ ನ್ಯೂಸ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಾಧಿಕಾ ಮತ್ತೆ ಅವರಿಗೆ ಸಿನಿಮಾ ಮಾಡಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸಿದ್ದಾರೆ. "ನಾನು ನಿರ್ಮಾಪಕಿಯಾಗಿ ಹೇಳುವುದಾದರೆ, ನಮ್ಮಂತಹ ನಿರ್ಮಾಪಕಿಯರಿಗೆ ಅಂತಹ ನಾಯಕ ನಟ ಬೇಕಾಗಿದ್ದಾರೆ. ನಮ್ಮ ಚಿತ್ರರಂಗದಲ್ಲಿ ಎಷ್ಟು ಜನ ಇದ್ದಾರೆ. ಆಮೇಲೆ ನಟಿಯರು ಅಂತ ಇರುವುದು ಕೆಲವೇ ಜನ. ಅದರಲ್ಲಿ ಈತರ ಆದಾಗ ಬೇಜಾರಾಗುತ್ತೆ. ನನಗೂ ಕೂಡ ನನ್ನ ಪ್ರೊಡಕ್ಷನ್ನಲ್ಲಿ ಅವರಿಗೆ ಸಿನಿಮಾ ಮಾಡಬೇಕು ಅನ್ನೋ ಆಸೆಯಿತ್ತು. ಆ ದೇವರಲ್ಲಿ ಆದಷ್ಟು ಬೇಗ ಇದೆಲ್ಲ ಸರಿ ಹೋಗಲಿ ಅಂತ ಬೇಡಿಕೊಳ್ಳುತ್ತೇನೆ." ಎಂದಿದ್ದಾರೆ.


Click it and Unblock the Notifications











