ಶ್ರೀರಾಘವೇಂದ್ರ ಚಿತ್ರವಾಣಿಯಿಂದ ಅರ್ಜುನ್ ಜನ್ಯ, ಓಂ ಪ್ರಕಾಶ್ ರಾವ್, ಅನುರಾಧಾ ಭಟ್ಗೆ ಪ್ರಶಸ್ತಿ
ಶ್ರೀರಾಘವೇಂದ್ರ ಚಿತ್ರವಾಣಿ , ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರ ಸಂಸ್ಥೆ. ಈ ಸಂಸ್ಥೆ ಈಗ 50ನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ 24 ವರ್ಷಗಳಿಂದ ಈ ಸಂಸ್ಥೆ ಕನ್ನಡ ಚಿತ್ರರಂಗದ ಗಣ್ಯರಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಅದರಂತೆ ಈ ವರ್ಷ ಕೂಡ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಸಂಸ್ಥೆ 50ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಹಾಗೂ 24ನೇ ವರ್ಷದ ಪ್ರಶಸ್ತಿ ಸಮಾರಂಭದ ಹಿನ್ನೆಲೆಯಲ್ಲಿ ಅವಾರ್ಡ್ಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿತ್ತು.
ಎಂಎಂಬಿ ಲೆಗೆಸಿಯಲ್ಲಿ ನಡೆದ ಈ ಪ್ರಶಸ್ತಿ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕನ್ನಡದ ಹಿರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಅಂದ್ಹಾಗೆ, ಶ್ರೀರಾಘವೇಂದ್ರ ಚಿತ್ರವಾಣಿಯನ್ನು ದಿವಂಗತ ಡಿ.ವಿ.ಸುಧೀಂದ್ರ ಅವರು ಸ್ಥಾಪಿಸಿದ್ದರು. ಮುಂದಿನ ವರ್ಷಕ್ಕೆ ಈ ಪ್ರತಿಷ್ಠಿತ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ಆರಂಭವಾಗಿ 50ವರ್ಷಗಳನ್ನು ಪೂರೈಸಲಿದೆ. 'ಸೊಸೆ ತಂದ ಸೌಭಾಗ್ಯ' ಸಿನಿಮಾದಿಂದ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಪತ್ರಿಕಾ ಪ್ರಚಾರ ಕೆಲಸಕ್ಕೆ ಕಾಲಿಟ್ಟಿದೆ. ಈ ಪ್ರಶಸ್ತಿ ಸಮಾರಂಭದ ವೇಳೆ ಪಿಆರ್ಓಗಳನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ನಿರ್ದೇಶಕರನ್ನಾಗಿಸಲು ಮತ್ತು ಸರ್ಕಾರದ ಸಿನಿಮಾ ಪ್ರಶಸ್ತಿಗೆ ಪರಿಗಣಿಸುವ ಬಗ್ಗೆ ಚರ್ಚೆ ಮಾಡುವುದಾಗಿ ವಿಶೇಷ ಅತಿಥಿಯಾಗಿ ಬಂದಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಭರವಸೆ ನೀಡಿದ್ದಾರೆ.
ಇನ್ನು ಪ್ರಶಸ್ತಿಗಳ ಕಡೆಗೆ ಬರುವುದಾರೆ, ಹಿರಿಯ ನಿರ್ಮಾಪಕಿ ಶ್ರೀಮತಿ ಮೀನಾಕ್ಷಿ ಕೆ.ವಿ. ಜಯರಾಂ ಹಾಗೂ ಹಿರಿಯ ಪತ್ರಕರ್ತ ಶ್ರೀ ಕೆ.ಜೆ. ಕುಮಾರ್ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಲಭಿಸಿದೆ. ಗಾಯಕಿ ಕುಮಾರಿ ಅನುರಾಧಾ ಭಟ್ ಅವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನು ಅಣ್ಣಾವ್ರ ಕುಟುಂಬದಿಂದ ಕೊಡಲಾಗುವ ಡಾ.ರಾಜ್ಕುಮಾರ್ ಪ್ರಶಸ್ತಿಯನ್ನು ನೀಡಲಾಗಿದೆ. ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ಗೆ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ, ಹಿರಿಯ ನಟಿ ರೇಖಾರಾವ್ ಅವರಿಗೆ ನಟಿ ಡಾ||ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್ ಪ್ರೈ ಲಿ ಪ್ರಶಸ್ತಿ, ಶಿವಮ್ಮ ಚಿತ್ರದ ಕಥೆಗಾಗಿ ಜೈಶಂಕರ್ ಆರ್ಯರ್ ಅವರಿಗೆ ಕೆವಿ ಜಯರಾಂ ಪ್ರಶಸ್ತಿ, 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಸಂಭಾಷಣೆಗಾಗಿ ಚಂದ್ರಜಿತ್ ಬೆಳ್ಳಿಯಪ್ಪಗೆ ಖ್ಯಾತ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ, 'ಫೋಟೊ' ಚಿತ್ರದ ಚೊಚ್ಚಲ ನಿರ್ದೇಶನಕ್ಕೆ ಉತ್ಸವ್ ಗೋನ್ವಾರ್ಗೆ ಬಿ. ಸುರೇಶ ಅವರಿಂದ ಪ್ರಶಸ್ತಿ, ಡಾ||ವಿ.ನಾಗೇಂದ್ರ ಪ್ರಸಾದ್ ಅವರಿಗೆ ಹಿರಿಯ ಪತ್ರಕರ್ತರಾದ .ಪಿ.ಜಿ. ಶ್ರೀನಿವಾಸಮೂರ್ತಿ ಪ್ರಶಸ್ತಿ, ಸಮರ್ಜಿತ್ ಲಂಕೇಶ್ಗೆ ವಿಶೇಷ ಪ್ರಶಸ್ತಿ ಲಭಿಸಿದೆ.
ರಾಘವೇಂದ್ರ ಚಿತ್ರವಾಣಿಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಸುಧೀಂದ್ರ ವೆಂಕಟೇಶ್ ಅತಿಥಿಗಳಾಗಿ ಬಂದಿದ್ದ ಫಿಲ್ಮ್ ಚೇಂಬರ್ ಅಧ್ಯಕ್ಷ ಎಂ.ನರಸಿಂಹಲು ಸೇರಿದಂತೆ ಉಮೇಶ್ ಬಣಕಾರ್, ರಾಕ್ ಲೈನ್ ವೆಂಕಟೇಶ್, ವಿಜಯಮ್ಮ, ಸಂಜಯ್ ಗೌಡ, ರಾಗಿಣಿ ದ್ವಿವೇದಿ ಹಾಗೂ ಇಂದ್ರಜಿತ್ ಲಂಕೇಶ್ ಅವರ ಬೆಂಬಲಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications











