ಕಾರ್ಯಕ್ರಮಕ್ಕೆ ಹಾಜರಾಗಲು ರಾಘಣ್ಣ ಹಾಕಿದ ಕಂಡೀಷನ್!
ಇನ್ನು ಮುಂದೆ ರಾಘವೇಂದ್ರ ರಾಜಕುಮಾರ್ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಾದರೆ, ಅಭಿಮಾನಿಗಳು ಅವರು ಹಾಕುವ ಕಂಡೀಷನಿಗೆ ಓಕೆ ಅನ್ನಬೇಕು.
ಅಭಿಮಾನಿಗಳನ್ನೇ ದೇವರೆಂದು ಕೊಂಡಿದ್ದ ರಾಜಕುಮಾರ್ ಪುತ್ರ ರಾಘಣ್ಣ, ಅಭಿಮಾನಿಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಂಡೀಷನ್ ಹಾಕ್ತಾರಾ ಎನ್ನುವ ಪ್ರಶ್ನೆಗೆ ಉತ್ತರ, ಹೌದು.

ಆದರೆ, ರಾಘಣ್ಣ ಹಾಕಿರುವ ಕಂಡೀಷನ್ ಸಮಾಜಮುಖಿ ಕೆಲಸಕ್ಕಾಗಿ, ಪರಿಸರ ಕಾಳಜಿಗಾಗಿ. ತಾನು ಇನ್ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಾದರೆ ಅಭಿಮಾನಿಗಳು ಬೇವಿನ ಗಿಡವನ್ನು ನೆಡಬೇಕು ಎನ್ನುವುದು ರಾಘಣ್ಣ ಹಾಕಿರುವ ಕಂಡೀಷನ್. (ರಾಜ್ ಹುಟ್ಟುಹಬ್ಬಕ್ಕೆ ಮುನ್ನ ರಾಘಣ್ಣ ಹೊಸ ಅಭಿಯಾನ)
ವರನಟ ಡಾ. ರಾಜಕುಮಾರ್ ಅವರ ಕಟ್ಟಾ ಅಭಿಮಾನಿಯೊಬ್ಬರು ಬೆಂಗಳೂರು ಕೆಂಗೇರಿಯ ಬಾಬುಸಾಹೇಬ್ ಪಾಳ್ಯದ ತಮ್ಮ ಮನೆಯ ಆವರಣದಲ್ಲೇ ರಾಜ್ ಪ್ರತಿಮೆ ಸ್ಥಾಪಿಸಿದ್ದರು. ಅದರ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಘಣ್ಣ ಅಭಿಮಾನಿಗಳಲ್ಲಿ ಬೇವಿನ ಗಿಡ ನೆಡುವಂತೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಘಣ್ಣ, ಇನ್ಮುಂದೆ ನಾನು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕಾದರೆ ಗಿಡ ನೆಡಬೇಕು ಎನ್ನುವ ಕಂಡೀಷನ್ ಹಾಕುತ್ತೇನೆ. ಇದಕ್ಕೆ ಒಪ್ಪಿದರೆ ಮಾತ್ರ ನಾನು ಕಾರ್ಯಕ್ರಮಕ್ಕೆ ಬರುತ್ತೇನೆ ಎಂದಿದ್ದಾರೆ.
ನಗರದಲ್ಲಿ ಎಲ್ಲೆಲ್ಲಿ ಅಪ್ಪಾಜಿಯ ಪ್ರತಿಮೆ ಇದೆಯೋ ಅಲ್ಲೆಲ್ಲಾ ಗಿಡ ನೆಡುವ ಕೆಲಸ ಆರಂಭವಾಗ ಬೇಕಾಗಿದೆ. ಇದಕ್ಕೆ ಅಭಿಮಾನಿಗಳ ಸಹಕಾರ ಅಗತ್ಯ ಎಂದು ರಾಘಣ್ಣ ಅಭಿಮಾನಿ ದೇವರುಗಳಲ್ಲಿ ಮನವಿ ಮಾಡಿದ್ದಾರೆ.

ಕೆಂಗೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಸಂಸ್ಥಾನದ ಶ್ರೀ. ಚಂದ್ರಶೇಖರ ಸ್ವಾಮೀಜಿ, ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಸಾ ರಾ ಗೋವಿಂದು ಮುಂತಾದವರು ಭಾಗವಹಿಸಿದ್ದರು.
ಡಾ. ರಾಜ್ ಹುಟ್ಟುಹಬ್ಬಕ್ಕೆ ಮುನ್ನ (ಏಪ್ರಿಲ್ 24) ಕನಿಷ್ಠ ಹತ್ತು ಸಾವಿರ ಬೇವಿನ ಗಿಡವನ್ನು ನೆಡಲು ಪಣತೊಟ್ಟಿರುವ ರಾಘಣ್ಣ, ಮುಂದಿನ ವರ್ಷದ ಅಪ್ಪಾಜಿಯ ಹುಟ್ಟುಹಬ್ಬಕ್ಕೆ ಮುನ್ನ ಕನಿಷ್ಠ ಒಂದು ಲಕ್ಷ ಗಿಡವನ್ನು ನೆಡುವ ಉದ್ದೇಶವನ್ನು ಹೊಂದಿದ್ದಾರೆ.


Click it and Unblock the Notifications











