Spandana Death: "ಮರೆತು ಬಿಡಪ್ಪ ಅಂತ ಹೇಗೆ ಹೇಳೋದು..ರಾಘುನ ನೋಡುವುದಕ್ಕೆ ತುಂಬಾನೇ ಕಷ್ಟ"-ರಾಘಣ್ಣ
ಸ್ಯಾಂಡಲ್ವುಡ್ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ವಿದೇಶದಲ್ಲಿ ಕೊನೆಯುಸಿರೆಳೆದಿದ್ದರಿಂದ ಮೃತದೇಹವನ್ನು ಬೆಂಗಳೂರಿಗೆ ತೆಗೆದುಕೊಂಡು ಬರಲು ಕೆಲವು ದಿನಗಳೇ ಹಿಡಿದಿವೆ. ಅಲ್ಲಿನ ಕಾನೂನು ಪ್ರತಿಕ್ರಿಯೆಯನ್ನು ಮುಗಿಸಿ, ನಿನ್ನೆ(ಆಗಸ್ಟ್ 8) ಸ್ಪಂದನಾ ಮೃತದೇಹ ಬೆಂಗಳೂರಿಗೆ ಬಂದಿದೆ.
ನಿನ್ನೆ (ಆಗಸ್ಟ್ 8) ರಾತ್ರಿಯಿಂದಲೇ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಅಂತಿಮ ನಮನವನ್ನು ಸಲ್ಲಿಸುತ್ತಿದ್ದಾರೆ. ಹಾಗೇ ರಾಘವೇಂದ್ರ ರಾಜ್ಕುಮಾರ್ ಕೂಡ ಅಂತಿಮ ದರ್ಶನ ಪಡೆದು ವಿಜಯ್ ರಾಘವೇಂದ್ರಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ.

ಸ್ಪಂದನಾ ವಿಜಯ್ ರಾಘವೇಂದ್ರ ಅವರ ಅಂತಿಮ ದರ್ಶನ ಪಡೆದ ಬಳಿಕ ರಾಘವೇಂದ್ರ ರಾಜ್ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಸ್ಪಂದನಾ ನಿಧನದ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ. ಅಲ್ಲದೆ, ವಿಜಯ್ ರಾಘವೇಂದ್ರಗೆ ಬಗ್ಗೆ ಎಮೋಷನಲ್ ಆಗಿದ್ದಾರೆ.
"ಹೇಗೆ ಪ್ರತಿಕ್ರಿಯೆ ನೀಡಬೇಕೋ ಗೊತ್ತಾಗುತ್ತಿಲ್ಲ"
ವಿಜಯ್ ರಾಘವೇಂದ್ರ, ಪುನೀತ್ ಎಲ್ಲರೂ ಅಣ್ಣಾವ್ರ ಮನೆಯಲ್ಲಿಯೇ ಬೆಳೆದವರು. ಹೀಗಾಗಿ ರಾಘವೇಂದ್ರ ರಾಜ್ಕುಮಾರ್ ಹಾಗೂ ವಿಜಯ್ ರಾಘವೇಂದ್ರಗೆ ಹತ್ತಿರದ ಒಡನಾಟವಿದೆ. ಹೀಗಾಗಿ ಈ ಘಟನೆಯಿಂದ ರಾಘಣ್ಣ ಕೂಡ ಭಾವುಕರಾಗಿದ್ದಾರೆ. "ಕೆಲವು ಸಮಯದಲ್ಲಿ ಸ್ತಬ್ಧ ಆಗಿಬಿಡುತ್ತೆ. ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು. ಹೇಗೆ ಮಾತಾಡಬೇಕು ಗೊತ್ತಾಗಲ್ಲ. ಹೋದವರು ಹೊರಟು ಹೋಗ್ತಾರೆ. ಇರೋರ ಕಷ್ಟ ನೋಡಿ. ಅವರ ತಂದೆಗೆ ಹೇಳೋದಾ? ಅವರ ಗಂಡನಿಗೆ ಹೇಳೋದಾ? ಇಲ್ಲ ಅವರ ಮಗನಿಗೆ ಹೇಳೋದಾ? ಏನು ಹೇಳುತ್ತೀರಾ? ಆಗಿದ್ದೆಲ್ಲ ಮರೆತು ಬಿಡು ಅಂತಾ ಹೇಳುವುದಕ್ಕೆ ಆಗುತ್ತಾ? ಇಲ್ಲ ದೇವರು ನಿಮಗೆ ಶಕ್ತಿ ಕೊಡಲಿ ಅಂತ ಹೇಳುವುದಕ್ಕೆ ಆಗುತ್ತಾ? ಇಂತಹ ಸಂದರ್ಭದಲ್ಲಿ ಏನು ಹೇಳಬೇಕು ಅನ್ನೋದೇ ಗೊತ್ತಾಗಲ್ಲ. ಅವರ ಮನೆಯವರಿಗೆ ಇದನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ ಅಂತ ಮಾತ್ರ ಹೇಳಬಹುದಷ್ಟೆ." ಎಂದು ರಾಘಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

"ಸಂಕಟ ತಡೆಯೋಕೆ ಆಗಲ್ಲ"
ಪ್ರಪಂಚದ ಎಲ್ಲಾ ಕಡೆಗಳಲ್ಲಿ ಪ್ರತಿದಿನ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ, ನಮ್ಮ ಹತ್ತಿರದವರಿಗೇ ಹೀಗಾದಾಗಾ ಏನು ಮಾಡಬೇಕೋ ಗೊತ್ತಾಗಲ್ಲ ಎಂದಿದ್ದಾರೆ ರಾಘಣ್ಣ. "ಪ್ರಪಂಚದಲ್ಲಿ ಈತರ ನಡೀತಾನೇ ಇರುತ್ತೆ. ನಮ್ಮ ಹತ್ತಿರದಲ್ಲಿದ್ದವರಿಗೆ ಹೀಗಾದಾಗ ನೋವಾಗುತ್ತೆ. ನಮ್ಮ ಜೊತೆಗಿದ್ದವರಿಗೆ ಹೀಗಾದಾಗ ಸಂಕಟ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ." ಎಂದು ಪ್ರತಿಕ್ರಿಯೆ ನೀಡಿದ್ದಾರೆ ರಾಘಣ್ಣ.
"ರಾಘುನ ಹೀಗೆ ನೋಡುವುದಕ್ಕೆ ತುಂಬಾನೇ ಕಷ್ಟ"
"ನಮ್ಮ ಜೊತೆಗೆ ಬೆಳೆದವರು ರಾಘು. ಅಪ್ಪು ರಾಘು ಎಲ್ಲ ಚಿಕ್ಕ ಮಕ್ಕಳು ನಮ್ಮ ಮನೆಯಲ್ಲೇ ಇದ್ದು ಬೆಳೆದವರು. ಆ ಮಕ್ಕಳಿಗೆ, ಅವರ ಹೆಂಡ್ತಿ ಇಷ್ಟು ಬೇಗ ಹೋಗ್ತಾರೆ ಅಂದ್ರೆ ಇದನ್ನು ತಡೆದುಕೊಳ್ಳುವುದಕ್ಕೆ ಆಗೋದಿಲ್ಲ. ರಾಘುನ ಹೀಗೆ ನೋಡುವುದಕ್ಕೆ ತುಂಬಾನೇ ಕಷ್ಟ. ನನ್ನ ಹೆಸರೇ ಇದೆ ಅವನಿಗೆ. ಮನೆಯಲ್ಲಿ ನನಗೆ ದೊಡ್ಡ ರಾಘು ಅವನಿಗೆ ಚಿಕ್ಕ ರಾಘು ಅಂತ ಕರೀತಾರೆ. ಅವನನ್ನು ನೋಡುವುದಕ್ಕೆ ಆಗುವುದೇ ಇಲ್ಲ. ಅವನನ್ನು ತಬ್ಬಿಕೊಂಡು ಹೆಂಗೆ ಹೇಳೋದು ನಾನು. ಆಗಿದ್ದಾಗಿದೆ ಮರೆತು ಬಿಡಪ್ಪ ಅಂತ ಹೇಗೆ ಹೇಳೋದು. ತೋಚಲೇ ಇಲ್ಲ. ತಬ್ಬಿಕೊಂಡು ಇನ್ನೊಂದಿಷ್ಟು ದು:ಖ ಪಡ್ಕೊಂಡು ಹೋಗುತ್ತಿದ್ದೇನಷ್ಟೇ." ಎಂದು ರಾಘಣ್ಣ ಭಾವುಕರಾಗಿದ್ದಾರೆ.


Click it and Unblock the Notifications











