ರಾಘಣ್ಣನ ಮೊದಲ ಸಿನಿಮಾ ಸೋತಾಗ ಅಣ್ಣಾವ್ರು ತಲೆ ಸವರಿ ಏನಂದಿದ್ರು? 2ನೇ ಸಿನಿಮಾ ಗೆದ್ದಾಗ ಏನಂದಿದ್ರು?
ವರನಟ ಡಾ. ರಾಜ್ಕುಮಾರ್ ಸರಳತೆಗಷ್ಟೇ ಹೆಸರಾದವರಲ್ಲ. ಸಿನಿಮಾ ಮೂಲಕ ಆದರ್ಶಗಳನ್ನು ನಾಡಿಗೆ ಬಿತ್ತರಿಸಿದ ಕಲಾವಿದ. ಅದಕ್ಕೆ ಇಂದಿಗೂ ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತೇವೆ. ಕನ್ನಡಿಗರು ಮೆಚ್ಚುವ ಆರಾಧ್ಯ ದೈವ ಆಗಿದ್ದರೂ, ಅಹಂಕಾರ, ದರ್ಪ ಯಾವುದನ್ನೂ ತೋರಿಸಲಿಲ್ಲ. ಇಂದಿನ ಕಲಾವಿದರಿಗೆ ಅಣ್ಣಾವ್ರು ಮಾದರಿಯಾಗಿದ್ದಾರೆ.
ಡಾ.ರಾಜ್ಕುಮಾರ್ ಅದ್ಭುತ ನಟ ಅನ್ನೋದು ಒಂದು ಕಡೆಯಾದರೆ, ಅಷ್ಟೇ ಒಳ್ಳೆಯ ಫ್ಯಾಮಿಲಿ ಮ್ಯಾನ್. ತಾನೆಷ್ಟೇ ಬ್ಯುಸಿಯಾಗಿದ್ದರೂ, ತನ್ನ ಕುಟುಂಬಕ್ಕೆ ಸಮಯ ನೀಡುತ್ತಿದ್ದರು. ಮಕ್ಕಳು ಸೋತಾಗ, ಗೆದ್ದಾಗ ಜೊತೆಯಲ್ಲಿರುತ್ತಿದ್ದರು. ಒಬ್ಬ ನಟನಾಗಿ ಅಣ್ಣಾವ್ರ ಬಗ್ಗೆ ಅಭಿಮಾನಿಗಳಿ ಚೆನ್ನಾಗಿಯೇ ಗೊತ್ತಿದೆ. ಅದೇ ಮನೆಯೊಳಗೆ ಅವರು ಹೇಗಿರುತ್ತಿದ್ದರು? ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರು ಅನ್ನುವ ಸಂಗತಿ ಗೊತ್ತಿಲ್ಲ.

ರಾಘವೇಂದ್ರ ರಾಜ್ಕುಮಾರ್ ತನ್ನ ಮೊದಲ ಸಿನಿಮಾ 'ಚಿರಂಜೀವಿ ಸುಧಾಕರ್' ಸೋತಿತ್ತು. ಆ ವೇಳೆ ರಾಘಣ್ಣ ಮಾನಸಿಕವಾಗಿ ಕುಗ್ಗಿದ್ದರು. ಈ ವೇಳೆ ಅಣ್ಣಾವ್ರು ಮಗ ಬಳಿ ಬಂದು ತಲೆ ಸವರಿ ಧೈರ್ಯ ತುಂಬಿದ್ದರು. ಮುಂದಿನ ವರ್ಷ 'ನಂಜುಂಡಿ ಕಲ್ಯಾಣ' ಗೆದ್ದಿತ್ತು. ಆಗಲೂ ರಾಘಣ್ಣನಿಗೆ ಬುದ್ದಿ ಮಾತುಗಳನ್ನು ಹೇಳಿದ್ದರು. 'ಗಜಪತಿ ಗರ್ವಭಂಗ' ಗೆದ್ದಾಗಲೂ ರಾಘಣ್ಣನ ಜೊತೆ ಮಾತಾಡಿದ್ದರು. ಈ ವಿಷಯವನ್ನು ಇತ್ತೀಚೆಗೆ ನಡೆದ ಅಣ್ಣಾವ್ರ 96ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.
ರಾಘವೇಂದ್ರ ರಾಜ್ಕುಮಾರ್ ಅವರನ್ನು 1988ರಲ್ಲಿ ಚಿತ್ರರಂಗಕ್ಕೆ ಪರಿಚಯ ಮಾಡಲಾಗಿತ್ತು. ಇವರು ನಟಿಸಿದ ಮೊದಲ ಸಿನಿಮಾ 'ಚಿರಂಜೀವಿ ಸುಧಾಕರ'. ಈ ಸಿನಿಮಾ ಥಿಯೇಟರ್ನಲ್ಲಿ ಸದ್ದು ಮಾಡುವುದಿಲ್ಲ. ಅವರೇ ಹೇಳಿಕೊಂಡಿರುವಂತೆ 50 ದಿನಗಳು ಪ್ರದರ್ಶನ ಕಾಣುವುದಕ್ಕೂ ಪರದಾಡಿತ್ತು. ಮೊದಲ ಸಿನಿಮಾ ಸೋತಾಗ ರಾಘಣ್ಣ ಸಹಜವಾಗಿ ಬೇಸರದಲ್ಲಿ ಇದ್ದರು. ಮುಂದೇನು ಅನ್ನುವುದು ಕಾಡುತ್ತಿತ್ತು. ಆ ವೇಳೆ ಅಣ್ಣಾವ್ರು ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.

"1988ರಲ್ಲಿ ನನ್ನ ಮೊದಲನೇ ಸಿನಿಮಾ ಶುರುವಾಗುತ್ತೆ. ತುಂಬಾ ಜನ ನಂಜುಂಡಿ ಕಲ್ಯಾಣ ಅಂದುಕೊಂಡಿದ್ದಾರೆ. ಆದರೆ ಅದಲ್ಲ. ನನ್ನ ಮೊದಲನೇ ಚಿರಂಜೀವಿ ಸುಧಾಕರ. ಆ ಸಿನಿಮಾ ಚೆನ್ನಾಗಿ ಹೋಗಲ್ಲ. 50 ದಿನಗಳು ಓಡುವುದಕ್ಕೂ ಕಷ್ಟ ಆಗುತ್ತೆ. ಈ ಸಮಯದಲ್ಲಿ ನಾನು ಒಂದು ಕಡೆ ಸೋತು ಬಿಡುತ್ತೇನೆ. ಅದನ್ನು ನಮ್ಮ ತಂದೆ ಗಮನಿಸಿ ರೂಮಿಗೆ ಬಂದಿದರು. ಒಬ್ಬ ತಂದೆಯಾಗಿ ಏನು ಹೇಳಿರಬಹುದೆಂದು ಊಹೆ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲ. ಬೀಜ ಬಿತ್ತದೆ ಹಣ್ಣು ತಿನ್ನುವುದಕ್ಕೆ ಆಗುವುದಿಲ್ಲ ಕಂದ. ಬೀಜ ಕೆಳಗೆ ಬೇರು ಕಟ್ಟಬೇಕು. ಮೊಳಗೆ ಒಡೆಯಬೇಕು. ಗಿಡ ಆಗಬೇಕು. ಮರ ಆಗಬೇಕು. ಕಾಲ ಬಂದಾಗ ಫಲ ಕೊಡುತ್ತೆ. ಕಾಯಬೇಕು ಕಂದ ಅಂದಿದ್ರು. ನೋಡು ನಿಮ್ಮ ಅಮ್ಮ ಕೂತಿದ್ದಾಳೆ. ಸೋಲು ಗೆಲುವು ಎಲ್ಲ ಅವಳ ತಲೆಗೆ ಹಾಕು. ಕಲಾವಿದರು ಮುಂದಕ್ಕೆ ಹೋಗಬೇಕು" ಎಂದು ಅಣ್ಣಾವ್ರು ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.
'ಚಿರಂಜೀವಿ ಸುಧಾಕರ' ಸೋಲಿನ ಬಳಿಕ ಎರಡನೇ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದರು. 2ನೇ ಸಿನಿಮಾದಲ್ಲಿ ಗೆಲುವು ಸಿಗಲೇ ಬೇಕು ಅಂತ ಪಣತೊಟ್ಟಿದ್ದರು. ಅದುವೇ 'ನಂಜುಂಡಿ ಕಲ್ಯಾಣ'. ಈ ಸಿನಿಮಾ ಗೆದ್ದಾಗಲೂ ಅಣ್ಣಾವ್ರು ಮಗನ ಬಳಿ ಬಂದು ಬುದ್ದಿ ಮಾತು ಹೇಳಿದ್ದರು. "ಮುಂದಿನ ಸಿನಿಮಾ ನಂಜುಂಡಿ ಕಲ್ಯಾಣ. ಈ ಸಿನಿಮಾವನ್ನು ಹೇಗಾದರೂ ಮಾಡಿ ಗೆಲ್ಲಿಸಬೇಕು ಅಂತ ಒಂದು ಚರ್ಚೆ. ಮೊದಲನೇ ಸಲಹೆ ಕೊಡ್ತಾರೆ. ಅಣ್ಣ ನೀವೂ ಒಂದು ಪಾತ್ರ ಮಾಡಿಬಿಡಿ. ನಿಮ್ಮನ್ನು ನೋಡುವುದಕ್ಕೆ ಜನ ಬರುತ್ತಾರೆ. ಸಿನಿಮಾ ಗೆದ್ದು ಬಿಡುತ್ತೆ ಎಂದಿದ್ದರು. ಆಗ ನಮ್ಮ ತಂದೆ ಮೊದಲನೇ ಸಿನಿಮಾದಲ್ಲಿ ಸೋತಿದ್ದಾನೆ. ಈಗ ಅವನನ್ನೇ ಸೋಲಿಸುತ್ತಿದ್ದೀರಾ. ಹಾಗೆ ಮಾಡಬೇಡಿ. ಸಿನಿಮಾ ಅವನಿಂದಲೇ ಗೆಲ್ಲಬೇಕು ಹಾಗೆ ಮಾಡಿ ಅಂದಿದ್ರು. ಆ ಸಿನಿಮಾ ಚೆನ್ನಾಗಿ ಓಡುತ್ತೆ. ಆಗ ನನ್ನ ಬಳಿ ಬರುತ್ತಾರೆ. ಏನು ಹೇಳಿರಬಹುದು ಹೇಳಿ ನೋಡೋಣ? ಪಕ್ಕದಲ್ಲಿ ಕೂತುಕೊಂಡು, ಇದನ್ನು ತಲೆಗೆ ಹಾಕಿಕೊಳ್ಳಬೇಡ. ಮುಂದಕ್ಕೆ ಹೋಗುತ್ತಿರು. ಈ ಸೋಲು ಗೆಲುವು ಎಲ್ಲವನ್ನೂ ನಿಮ್ಮ ಅಮ್ಮನಿಗೆ ಹಾಕು" ಎಂದು ರಾಜ್ಕುಮಾರ್ ಹೇಳಿದ್ದರಂತೆ.
ಇನ್ನು ಮೂರನೇ ಸಿನಿಮಾ 'ಗಜಪತಿ ಗರ್ವಭಂಗ' ಈ ಸಿನಿಮಾ ಗೆದ್ದಾಗಲೂ ರಾಘಣ್ಣನಿಗೆ ಅಣ್ಣಾವ್ರು ಬುದ್ದಿಮಾತು ಹೇಳಿದ್ದರು. "ಮೂರನೇ ಸಿನಿಮಾ ಗಜಪತಿ ಗರ್ವಭಂಗ ಬರುತ್ತೆ. ಅದು ಇನ್ನೂ ದೊಡ್ಡ ಸಕ್ಸಸ್ ಆಗುತ್ತೆ. ಆಗ ಬಂದು ಹೇಳ್ತಾರೆ. ಇದನ್ನು ಹತ್ತಿರ ಸೇರಿಸಬೇಡ. ದೂರ ಇದ್ದರೆ ಕೆಲಸ ಸಿಗುತ್ತೆ. ಅದನ್ನು ತಲೆಗೆ ಹಾಕಿಕೊಂಡರೆ ಮುಂದಕ್ಕೆ ಹೋಗುವುದಕ್ಕೆ ಆಗುವುದೇ ಇಲ್ಲ. ಕೆಲಸ ಮಾಡುತ್ತಾ ಹೋಗು ಕಂದ ಅಂದರು." ಈ ಮೂರು ವರ್ಷ ನೆನೆಸಿಕೊಂಡು ಅಣ್ಣಾವ್ರು ಬುದ್ದಿ ಮಾತು ಹೇಳಿದ್ದನ್ನು ರಾಘಣ್ಣ ನೆನಪಿಸಿಕೊಂಡಿದ್ದಾರೆ.


Click it and Unblock the Notifications











